ನವದೆಹಲಿ: ಇಂಡಿಯನ್ ಮುಜಾಹಿದ್ದೀನ್ (Indian Mujahideen) ಉಗ್ರ ಯಾಸೀನ್ ಭಟ್ಕಳ್ (Yasin Bhatkal) ಮತ್ತು ಇತರ 10 ಜನರ ವಿರುದ್ಧ ದಿಲ್ಲಿಯ ಪಟಿಯಾಲ ಹೌಸ್ ಕೋರ್ಟ್, ಯುಎಪಿಎ (UAPA) ಅಡಿ ಭಾರತದ ವಿರುದ್ಧ ಯುದ್ಧ ಸಾರಲು ಭಯೋತ್ಪಾದಕ ಸಂಚು ರೂಪಿಸಿ ಮತ್ತು ಕಾರ್ಯಗತಗೊಳಿಸಿದ ಆರೋಪಗಳನ್ನು ಹೊರಿಸಿದೆ. ಯಾಸೀನ್ ಮತ್ತು ಆತನ ಸಹಚರರು, ಪರಮಾಣು ಬಾಂಬ್ ಪ್ಲಾಂಟ್ ಮಾಡುವುದಕ್ಕಿಂತಲೂ ಮುಂಚೆ ಸೂರತ್ನಿಂದ ಮುಸ್ಲಿಮರನ್ನು ಸ್ಥಳಾಂತರ ಮಾಡುವ ಪ್ಲ್ಯಾನ್ ಮಾಡಿಕೊಂಡಿದ್ದರು ಎನ್ನಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಎನ್ಐಎ ಜಡ್ಜ್ ಶೈಲೇಂದ್ರ ಮಲಿಕ್, ಈ ಪ್ರಕರಣ ಸಂಬಂಧ ಮೂವರನ್ನು ಖುಲಾಸೆ ಮಾಡಿದ್ದಾರೆ. ಆದರೆ, ಯಾಸೀನ್ ಭಟ್ಕಳ್ ಭಾರತದ ವಿರುದ್ಧ ಸಮರ ಸಾರಲು ನಿರಂತರವಾಗಿ ಭಯೋತ್ಪಾದನ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆಂದು ಹೇಳಿದ್ದಾರೆ.
ಸಿಇಆರ್ಟಿ-ಇನ್(CERT-In) ವರದಿಯ ಪ್ರಕಾರ A-6 ಆರೋಪಿಯಿಂದ ವಶಪಡಿಸಿಕೊಂಡ ಡಿಜಿಟಲ್ ಸಾಧನಗಳಲ್ಲಿ ಬಹಳಷ್ಟು ಮಾಹಿತಿ ದೊರೆತಿದೆ. ಜಿಹಾದಿಯ ಹೆಸರಿನಲ್ಲಿ ಮುಸ್ಲಿಮೇತರರನ್ನು ಕೊಲ್ಲುವುದನ್ನು ಸಮರ್ಥಿಸುವ ಬರಹಗಳು ಸೇರಿದಂತೆ ಜಿಹಾದಿ ಸಾಹಿತ್ಯದ ವೀಡಿಯೊ ಕ್ಲಿಪ್ಗಳನ್ನು ಹೊಂದಿರುವ ಅನೇಕ ಫೋಲ್ಡರ್ಗಳಿವೆ. ಹಿಂಸಾತ್ಮಕ ಜಿಹಾದ್ನ ಅಗತ್ಯತೆಯ ಕುರಿತು ತಾಲಿಬ್ ಮತ್ತು ಅಲ್ ಖೈದಾ ವೀಡಿಯೊಗಳು ಕೂಡ ಕಂಡು ಬಂದಿವೆ ಎಂದು ಎಂಬುದನ್ನು ನ್ಯಾಯಾಲಯವು ಗಮನಿಸಿದೆ.
ಇದನ್ನೂ ಓದಿ: Bomb Blast Conspiracy: ಬಾಂಬ್ ಸ್ಫೋಟಕ್ಕೆ ಸಂಚು; ಭಟ್ಕಳದ ಅಬ್ದುಲ್ ವಾಹಿದ್ ಸಿದ್ಧಿಬಾಪಾ ದೋಷಮುಕ್ತ
ಎಲೆಕ್ಟ್ರಾನಿಕ್ಸ್ ಮತ್ತು ಡಿಜಿಟಲ್ ಸಾಧನಗಳನ್ನು ಪರಿಶೀಲಿಸಿದ ನಂತರ, ಯಾಸೀನ್ ಭಟ್ಕಳ್ ಕೇವಲ ಭಯೋತ್ಪಾದನಾ ಕೃತ್ಯಗಳ ಸಂಚು ರೂಪಿಸಿದ್ದು ಮಾತ್ರವಲ್ಲದೇ, ಐಇಡಿಗಳು ಮತ್ತು ಸ್ಪೋಟಕಗಳ ತಯಾರಿಯ ರೂವಾರಿಯೂ ಎಂಬುದು ಸಾಬೀತಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ. ಯಾಸೀನ್ ಭಟ್ಕಳ್ ಮತ್ತು ಮೊಹಮ್ಮದ್ ಸಾಜೀದ್(ಬಾಬಾ ಸಾಜೀದ್) ನಡುವಿನ ಚಾಟ್ಗಳನ್ನು ಗಮನಿಸಿದರೆ, ಸೂರತ್ನಲ್ಲಿ ಪರಮಾಣು ಬಾಂಬ್ ಪ್ಲಾಂಟ್ ಮಾಡುವ ಮುಂಚೆ ಅಲ್ಲಿನ ಮುಸ್ಲಿಮರನ್ನು ಬೇರೇಡೆಗೆ ಸ್ಥಳಾಂತರಿಸಲು ಪ್ಲ್ಯಾನ್ ಹಾಕಿಕೊಂಡಿದ್ದರು ಎಂಬುದು ಖಚಿತವಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ.