Site icon Vistara News

BJP-JDS Alliance : ಬಿಜೆಪಿ ಮೈತ್ರಿ ಟೀಕಿಸಿದ ಕಾಂಗ್ರೆಸ್‌ಗೆ ಜೆಡಿಸ್‌ ತಿರುಗೇಟು; ನೀವು ಯಾರ‍್ಯಾರ ಬಾಗಿಲು ಕಾದಿದ್ದೀರಿ?

BJP JDS alliance JDS attacks Congess

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Parliament Election 2024) ಬಿಜೆಪಿ ಜತೆಗೆ ಮೈತ್ರಿಗೆ (BJP-JDS Alliance) ಅಣಿಯಾಗಿರುವ ಜಾತ್ಯತೀತ ಜನತಾದಳ ಇದೀಗ ತನ್ನನ್ನು ಅಣಕಿಸುತ್ತಿರುವ ಕಾಂಗ್ರೆಸ್‌ಗೆ (Attack on Cogress) ಅದರ ಇತಿಹಾಸ ಮತ್ತು ವರ್ತಮಾನವನ್ನು ನೆನಪಿಸಿ ಟ್ವೀಟ್‌ ದಾಳಿ ನಡೆಸಿದೆ. ನಿಮ್ಮ ಈಗಿನ ಇಂಡಿಯಾ ಕೂಟದಲ್ಲಿ ಇರುವವರು ಬಿಜೆಪಿ ಜತೆ ಸಖ್ಯ ಮಾಡಿದ್ದಾರೆ, ನೀವು ಯಾರ ಯಾರ ಮನೆ ಬಾಗಿಲು ಕಾದಿದ್ದೀರಿ ಎಂದು ನೆನಪಿಸಿಕೊಳ್ಳಿ ಎಂದು ಚಾಟಿ ಏಟು ನೀಡಿದೆ. ಜನತಾದಳ ಎಸ್‌ ಎಂಬ ಟ್ವಿಟರ್‌ ಹ್ಯಾಂಡಲ್‌ನಿಂದ ಮಾಡಿರುವ ಟ್ವೀಟ್‌ಗಳಿಗೆ ಕಾಮಾಲೆ ಕಾಂಗ್ರೆಸ್‌ ಎಂಬ ಹ್ಯಾಷ್‌ ಟ್ಯಾಗ್‌ (Kamale Congress) ನೀಡಿದೆ.

ಆತ್ಮವಂಚನೆಯೇ ಕಾಂಗ್ರೆಸ್‌ನ ಬಂಡವಾಳ ಎಂದ ಜೆಡಿಎಸ್‌

ʼಬಾಳೆಗೊಂದು ಏಟು, ಬಾಳಿಗೊಂದು ಮಾತುʼ ಎನ್ನುವ ಮಾತಿದೆ. ಸುಳ್ಳುಪೊಳ್ಳುಗಳ ಸೌಧದ ಮೇಲೆ ನಿಂತಿರುವ ಕಾಂಗ್ರೆಸ್‌ ಅಸತ್ಯವೇ ಕಾಂಗ್ರೆಸ್‌ ಅಷ್ಟೈಶ್ವರ್ಯ! ಆತ್ಮವಂಚನೆಯೇ ಅಧಿಕಾರದ ಮೂಲ ಬಂಡವಾಳ!!
ಮೂರ್ಖರಿಗೆ ಎಷ್ಟು ಹೇಳಿದರೂ ಅಷ್ಟೇ, ಅರ್ಥವೇ ಆಗುವುದಿಲ್ಲ. ಕಾಮಾಲೆ ಕಾಂಗ್ರೆಸ್‌ ಎಂದು ಮೂದಲಿಸಿದೆ ಜೆಡಿಎಸ್.

ಪಂಚರತ್ನ ಜಾರಿ ಮಾಡದಿದ್ದರೆ ಪಕ್ಷ ವಿಸರ್ಜನೆ ಎಂದು ಹೇಳಿದ್ದು

ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆಯಲ್ಲಿ ಪಕ್ಷ ವಿಸರ್ಜನೆ ಮಾತು ಹೇಳಿದ್ದು ನಿಜ. ನನಗೆ ಬಹುಮತದ ಸರಕಾರ ಕೊಟ್ಟರೆ 5 ವರ್ಷದಲ್ಲಿ ಪಂಚರತ್ನಗಳನ್ನು ಜಾರಿ ಮಾಡುವೆ. ಮಾತು ತಪ್ಪಿದರೆ ಮತ್ತೆಂದೂ ಮತ ಕೇಳಲು ಬರುವುದಿಲ್ಲ, ಪಕ್ಷವನ್ನೇ ವಿಸರ್ಜಿಸುತ್ತೇನೆ ಎಂದಿದ್ದರು ಈ ಹೇಳಿಕೆಯ ವಿಡಿಯೋ, ಸುದ್ದಿಗಳಿವೆ.. ಗಮನಿಸಬಹುದು.

ಎಲ್ಲ ಕಾಲದಲ್ಲೂ ಜನರಿಗೆ ಟೋಪಿ ಹಾಕಿದ ಕಾಂಗ್ರೆಸ್‌

ಕಾಂಗ್ರೆಸ್ ಪಕ್ಷಕ್ಕೆ ಈ ಪರಿಯ ಅಜ್ಞಾನವೇ? ಪರಮಾಶ್ಚರ್ಯ!! ವರ್ಷದ ಕೂಳಿನ ಪಂಚರತ್ನಗಳಿಗೂ, ಒಪ್ಪೊತ್ತಿನ ಹರುಷದ ನಕಲಿ ಗ್ಯಾರಂಟಿಗಳಿಗೂ ಹೋಲಿಕೆಯೇ? ಎಲ್ಲರಿಗೂ ಫ್ರೀ ಫ್ರೀ ಎಂದು ಹೇಳಿ ಪಂಗನಾಮ ಹಾಕಿದ್ದು ಗೊತ್ತಿಲ್ಲದ ಸಂಗತಿಯೇ? ಎಲ್ಲಾ ಕಾಲದಲ್ಲಿಯೂ ಟೋಪಿ ಹಾಕಬಹುದು ಎನ್ನುವ ಅಹಂಕಾರವೇ?

ಕೆಟ್ಟ ದಾರಿಯಲ್ಲಿ ಅಧಿಕಾರ ಹಿಡಿಯುವುದು ಕಾಂಗ್ರೆಸ್ ಚಾಳಿ

ಕೆಟ್ಟ ದಾರಿಯಲ್ಲಿ ಅಧಿಕಾರ ಹಿಡಿಯುವುದು ಕಾಂಗ್ರೆಸ್ ಚಾಳಿ. ಶೆಟ್ಟರ್, ಸವದಿಯಂಥ ಬಿಜೆಪಿಗರನ್ನು ಬಲೆಬೀಸಿ ಬಿಗಿದಪ್ಪಿಕೊಂಡ ಹಸ್ತಪಕ್ಷಕ್ಕೆ, ಮೈಯ್ಯೆಲ್ಲಾ ಉರಿ ಹತ್ತಿಕೊಂಡಿದೆ ಸ್ವಇಚ್ಛೆಯಿಂದಲೇ ಉರಿ ಇಟ್ಟುಕೊಂಡರೆ ಹೊಣೆ ಯಾರು? ಬಹುಶಃ, ಅಂಗೈಲಿ ಕೇಶವೇಕೆ ಬೆಳೆಯುತ್ತಿಲ್ಲವೆಂದು ಕೈಕೈ ಉಜ್ಜಿಕೊಳ್ಳುತ್ತಿದೆಯಾ ಕಾಂಗ್ರೆಸ್?

ನಿಮ್ಮ ಇಂಡಿಯಾ ನಾಯಕರು ಯಾರ್ಯಾರ ಮನೆ ಬಾಗಿಲಲ್ಲಿದ್ದರು?

ಜೆಡಿಎಸ್‌ ಬಿಜೆಪಿ ಬಾಗಿಲಿಗೆ ಪದೇಪದೆ ಹೋಗುತ್ತದೆಂದು ಹಲ್ಲು ಗಿಂಜುವ ಕಾಂಗ್ರೆಸ್ಸಿಗರು ಬಿಜೆಪಿ ಜತೆ ಅಧಿಕಾರ ಅನುಭವಿಸಿದ ನಿತೀಶ್‌ ಕುಮಾರ್‌, ಮಮತಾ ಬ್ಯಾನರ್ಜಿ, ಸ್ಟಾಲಿನ್, ಉದ್ಧವಠಾಕ್ರೆ ಮನೆಗಳ ಸುತ್ತ ಗಿರಕಿ ಹೊಡೆಯಲು ಸಂಕೋಚವಿಲ್ಲವೇ! ಗಂಗೆಯಲ್ಲಿ ಮಿಂದರೆ ಕಾಗೆ ಕೋಗಿಲೆ ಆಗುತ್ತದೆಯೇ ಕಾಮಾಲೆ ಕಣ್ಣಿನ ಕಾಂಗ್ರೆಸ್ಸಿಗರೇ?

ಇದನ್ನೂ ಓದಿ: BJP-JDS Alliance: ಮೈತ್ರಿ ಮಾತುಕತೆಗೆ ವೇದಿಕೆ ರೆಡಿ; ಆ ಆರು ಕ್ಷೇತ್ರ ಕೇಳಲು ಮುಂದಾದ ಜೆಡಿಎಸ್‌; ಬಿಜೆಪಿ ಒಪ್ಪುತ್ತಾ?

ಕಾಂಗ್ರೆಸ್‌ ಈಗ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿ

ಪ್ರಜಾಪ್ರಭುತ್ವದಲ್ಲಿ ಮೈತ್ರಿ, ಹೊಂದಾಣಿಕೆ ಸಾಮಾನ್ಯ ಆಯಾ ಸಂದರ್ಭಕ್ಕೆ ತಕ್ಕಂತೆ ಮೈತ್ರಿ ಆಗುತ್ತದೆ. ದೇಶ ವಿದೇಶದಲ್ಲೂ ಇದ್ದದ್ದೇ ನಮ್ಮ ಪಕ್ಷವನ್ನು ಬಿಜೆಪಿ ಬೀ ಟೀಂ ಎಂದು ಮೂದಲಿಸುವ ಕಾಂಗ್ರೆಸ್‌ ಸ್ವತಃ ತಾನೇ ಪ್ರಾದೇಶಿಕ ಪಕ್ಷಗಳ ಬಾಲಂಗೋಚಿ ಎನ್ನುವುದು ಮರೆತಿದೆ ದುರದೃಷ್ಟಕ್ಕೆ ಇಂಥ ಜಾಣರೋಗಕ್ಕೆ ಮದ್ದಿಲ್ಲ!!‌

Exit mobile version