Site icon Vistara News

Brahmin CM: ಪ್ರಲ್ಹಾದ ಜೋಶಿ ಸಿಎಂ ಸ್ಥಾನಕ್ಕೆ ಅರ್ಹ ಅಭ್ಯರ್ಥಿ: ಜಾತಿ ಆಧಾರದಲ್ಲಿ ಟೀಕೆ ಸರಿಯಲ್ಲ ಎಂದ ಬ್ರಾಹ್ಮಣ ಮಹಾಸಭಾ

ಆಶೋಕ್‌ ಹಾರ್ನಹಳ್ಳಿ Brahmana mahasabha reacted to HD Kumaraswamy statement over brahmin-cm-

ಬೆಂಗಳೂರು: ಬ್ರಾಹ್ಮಣರನ್ನು ಕರ್ನಾಟಕದ ಸಿಎಂ (Brahmin CM) ಮಾಡಲು ಆರ್‌ಎಸ್‌ಎಸ್‌ ಸಂಚು ರೂಪಿಸುತ್ತಿದೆ ಎನ್ನುವುದರ ಜತೆಗೆ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕುರಿತು ಹೇಳಿಕೆ ನೀಡಿದ್ದ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿಯವರ ಮಾತಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪ್ರತಿಕ್ರಿಯೆ ನೀಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಹಾಸಭಾ ಅಧ್ಯಕ್ಷ ಅಶೋಕ್‌ ಹಾರನಹಳ್ಳಿ, ಪ್ರಲ್ಹಾದ ಜೋಶಿಯವರು ಸಿಎಂ ಸ್ಥಾನಕ್ಕೆ ಅರ್ಹ ಅಭ್ಯರ್ಥಿ ಎಂದಿದ್ದಾರೆ. ಜತೆಗೆ, ಕುಮಾರಸ್ವಾಮಿಯವರು ತಿಳಿಸಿದಂತೆ ಜೋಶಿ ಅವರು ದೇಶಸ್ಥ ಬ್ರಾಹ್ಮಣರಲ್ಲ, ಮಾಧ್ವ ಸಂಪ್ರದಾಯದವರು ಎಂದೂ ಸ್ಪಷ್ಟಪಡಿಸಿದ್ದಾರೆ. ಅಶೋಕ್‌ ಹಾರನಹಳ್ಳಿಯವರ ಪತ್ರಿಕಾ ಹೇಳಿಕೆ ಈ ಕೆಳಕಂಡಂತಿದೆ.

ಇತ್ತೀಚಿಗೆ ಮಾನ್ಯ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು ಮಾನ್ಯ ಕೇಂದ್ರ ಮಂತ್ರಿಗಳಾದ ಶ್ರೀ ಪ್ರಹ್ಲಾದ ಜೋಶಿ ಅವರನ್ನು ಟೀಕೆ ಮಾಡುವ ಸಂಧರ್ಭದಲ್ಲಿ ಅವರು ಗಾಂಧೀಜಿ ಅವರನ್ನು ಕೊಂದ ಸಮುದಾಯದವರೆಂದು ಹಾಗು ಮಹಾರಾಷ್ಟ್ರ ಮೂಲದ ಪೇಶ್ವೇಗಳಾಗಿ ಸೇವೆ ಸಲ್ಲಿಸಿದ ದೇಶಸ್ಥ ಬ್ರಾಹ್ಮಣರೆಂದು ಉಲ್ಲೇಖಿಸಿದ್ದಾರೆ.

ಪ್ರಹ್ಲಾದ ಜೋಶಿ ಅವರು ಎಲ್ಲರಿಗೂ ತಿಳಿದಿರುವ ಹಾಗೆ ದೇಶಸ್ಥರಲ್ಲ ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದ ಉತ್ತರಾಧಿಮಠದ ಅನುಯಾಯಯಿಗಳು. ಇವರು ಉತ್ತರ ಕರ್ನಾಟಕದ ಮೂಲದವರೇ ಆಗಿದ್ದು ಮಹಾರಾಷ್ಟ್ರಕ್ಕೆ ಸೇರಿದವರಲ್ಲ. ಜೋಶಿ ಅವರು ರಾಜಕೀಯದಲ್ಲಿ ತಮ್ಮದೇ ಆದ ಗೌರವವನ್ನು ಸಂಪಾದಿಸಿದ್ದಾರೆ, ಅರ್ಹತೆಯೇ ಮಾನದಂಡವಾದಲ್ಲಿ ಜೋಶಿ ಅವರು ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ. ಕೇವಲ ಜಾತಿಯ ಆಧಾರದ ಮೇಲೆ ವೈಯಕ್ತಿಕ ಟೀಕೆ ಸೂಕ್ತವಲ್ಲ ಅವರ ಹಾಗೂ ಅವರ ಪಕ್ಷದ ರಾಜಕೀಯ ನಿಲುವುಗಳನ್ನು ಪ್ರಶ್ನಿಸಬಹುದು ಆದರೆ ಜಾತಿ ಆದರದ ಮೇಲೆ ವೈಯಕ್ತಿಕ ಟೀಕೆ ಸರಿಯಲ್ಲ.

ಹಿಂದೆ ನಡೆದು ಹೋದ ಗಾಂಧಿ ಹತ್ಯೆಯನ್ನೇ ಗುರಿಯಾಗಿಟ್ಟುಕೊಂಡು ಇಂದಿಗೂ ಚಿತ್ಪಾವನ ಬ್ರಾಹ್ಮಣ ಸಮುದಾಯವನ್ನು ದೂಷಿಸುವುದು ಎಷ್ಟು ಸರಿ? ನೂರಾರು ವರುಷಗಳ ಹಿಂದೆಯೇ ಕರ್ನಾಟದ ನಾನಾ ಭಾಗಗಳಲ್ಲಿ ಬಂದು ನೆಲೆಸಿರುವ ಚಿತ್ಪಾವನ ಹಾಗು ದೇಶಸ್ಥ ಬ್ರಾಹ್ಮಣರು ನಮ್ಮ ನಾಡು ನುಡಿಯೊಂದಿಗೆ ಬೆರೆತು ಕನ್ನಡಿಗರೇ ಆಗಿ ಹೋಗಿದ್ದಾರೆ , ಉದಾಹರಣೆಗೆ ಚಿತ್ಪಾವನರಾದ ವರ ಕವಿ ಬೇಂದ್ರೆ ಅವರು ಕನ್ನಡ ಸಾಹಿತ್ಯಕ್ಕೆ ಕೊಟ್ಟಿರುವ ಕೊಡುಗೆಯನ್ನು ನಾವು ಎಂದಿಗೂ ಮರೆಯಲಾರೆವು .ಅಷ್ಟೇ ಅಲ್ಲ ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ಕರ್ನಾಟಕದ ಏಕೀಕರಣಕ್ಕೆ ಆಲೂರ ವೆಂಕಟರಾಯರು ಸಂಕಲ್ಪಿಸಿದಾಗ ಅವರ ಈ ಸಂಕಲ್ಪಕ್ಕೆ ಅಂದು ಸಂಸತ್ತಿನಲ್ಲೇ ಸಂಪೂರ್ಣ ಬೆಂಬಲ ಘೋಷಿಸಿದವರು ಚಿತ್ಪಾವನ ಮುಖಂಡರೇ. ಭೂದಾನದಂತ ಮಹಾ ಯಜ್ನ್ಯ ವನ್ನು ಕೈಗೊಂಡ ವಿನೋಬಾ ಭಾವೆ ಅವರು ಕೂಡ ಚಿತ್ಪಾವನರೇ. ನಾಥುರಾಂ ಗೋಡ್ಸೆ ಎಂಬ ದಾರಿ ತಪ್ಪಿದ ದೇಶ ಭಕ್ತನೊಬ್ಬ ಗಾಂಧಿಯನ್ನು ಕೊಂದನೆಂದು ಆ ಸಮುದಾಯಕ್ಕೆ ಸೇರಿದ ಎಲ್ಲರನ್ನು ದೋಷಿಗಳಂತೆ ನೋಡುವುದು ಸಮಂಜಸವಲ್ಲ. ಹಾಗೆ ಮಾಡಿದರೆ ಚಿತ್ಪಾವನ ಬ್ರಾಹ್ಮಣ ಸಮಾಜದ ಸ್ವತಂತ್ರ ಹೋರಾಟಗಾರರಾದ ಚಾಪೇಕರ ಸಹೋದರರು , ಬಲವಂತ ಫಡಕೆ , ಸಾವರ್ಕರ್, ಜಸ್ಟಿಸ್ ರಾನಡೆ , ಅಚ್ಚುತ ಪಟವರ್ಧನ್,ಕಾಕಾಸಾಹೇಬ್ ಗಾಡ್ಗಿಳ್, ರಾವ್ ಸಾಹೇಬ್ ಪಟವರ್ಧನ್, ಲಿಮಯೆ, ಸೇನಾಪತಿ ಬಾಪಟ್, ಅನಂತ್ ಕಾನ್ಹೆರೆ, ತಾತ್ಯಾ ಟೋಪೆ, ಮಹದೇವ್ ರಾನಡೆ ಹಾಗು ಗಾಂಧೀಜಿಯವರ ಗುರುಗಳಾದ ಗೋಖಲೆ , ಸ್ವರಾಜ್ಯದ ಕಲ್ಪನೆಯನ್ನು ಬಿತ್ತಿದ ತಿಲಕರು ಇವರೆಲ್ಲರ ರಾಷ್ಟ್ರ ಭಕ್ತಿಯನ್ನೇ ಪ್ರಶ್ನಿಸದ ಹಾಗಾಗುತ್ತದೆ.

ಇದನ್ನೂ ಓದಿ: HD Kumaraswamy : ಬ್ರಾಹ್ಮಣ ಸಿಎಂಗೆ ವಿರೋಧವಿಲ್ಲ, ಪೇಶ್ವೆಗಳ ಡಿಎನ್‌ಎ ಹೊತ್ತವರು ಬೇಕಾ ಎನ್ನುವುದಷ್ಟೇ ನನ್ನ ಪ್ರಶ್ನೆ ಎಂದ ಕುಮಾರಸ್ವಾಮಿ

ಪ್ರಸ್ಥಾನತ್ರಯವನ್ನು ಅರ್ಥೈಸಿಕೊಳ್ಳುವ ಮಾರ್ಗದಲ್ಲಿ ಸ್ಮಾರ್ತರಲ್ಲಿ , ವೈಷ್ಣವರಲ್ಲಿ , ಶ್ರೀ ವೈಷ್ಣವರಲ್ಲಿ ಕೆಲವು ಭಿನ್ನ ಭಿನ್ನ ಅಭಿಪ್ರಾಯಗಳಿರಬಹುದು. ಆದರೂ ಎಲ್ಲಾ ತ್ರಿಮತಸ್ಥ ಆಚಾರ್ಯರು ಸನಾತನ ಧರ್ಮದ ರಕ್ಷಣೆ ಹಾಗು ಪೋಷಣೆಗೆ ಕಾರಣೀಭೂತರಾಗಿದ್ದಾರೆ , ಎಲ್ಲಾ ಆಚಾರ್ಯರು ಸಹ ಸಮಸ್ತ ಮನುಕುಲದ ಶ್ರೇಯಸ್ಸನ್ನೇ ಆಶಿಸಿದ್ದಾರೆ.

ಕುಮಾರಸ್ವಾಮಿ ಅವರು ಅದರಲ್ಲೂ ದೇವೇಗೌಡರ ಕುಟುಂಬದವರು ಸನಾತನ ಧರ್ಮವನ್ನು ಗೌರವಿಸುವವರಾಗಿದ್ದಾರೆ . ಶೃಂಗೇರಿ ಮಠದ ಪರಂಪರೆಯಲ್ಲಿ ಅತ್ಯಂತ ಭಕ್ತಿ ಹಾಗು ಶ್ರದ್ದೆಯನ್ನು ಹೊಂದಿದವರಾಗಿದ್ದಾರೆ . ಈ ಹಿಂದೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೆ ನಗರದ ಮಧ್ಯ ಭಾಗದಲ್ಲಿ ನಿವೇಶನ ಮಂಜೂರು ಮಾಡುವ ವಿಷಯದಲ್ಲಿ ಹಾಗು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಚನೆಯಲ್ಲಿ ಕುಮಾರಸ್ವಾಮಿ ಅವರ ಪಾತ್ರ ಮಹತ್ವವಾದದ್ದು ಆದ್ದರಿಂದ ವಿಪ್ರ ಸಮುದಾಯ ಇಂದಿಗೂ ದೇವೇಗೌಡರ ಕುಟುಂಬದ ಬಗ್ಗೆ ಸದಾಶಯವನ್ನು ಹೊಂದಿದೆ. ಆದರೆ ಶ್ರೀ ಕುಮಾರಸ್ವಾಮಿ ಅವರ ಸಮುದಾಯದ ಬಗೆಗಿನ ಟೀಕೆಗಳು ವಿಪ್ರ ಸಮುದಾಯದಲ್ಲಿ ಅಸಮಾಧಾನವನ್ನುಂಟು ಮಾಡಿದೆ. ರಾಜಕೀಯ ವಿರೋಧಿಗಳ ಟೀಕೆ ಮಾಡುವ ಭರದಲ್ಲಿ ಸಮುದಾಯದ ಹೆಸರನ್ನು ಎಳೆದು ತಂದಿದ್ದು ಅವರ ವ್ಯಕ್ತಿತ್ವಕ್ಕೆ ಗೌರವ ತರುವ ವಿಷಯವಲ್ಲ.

ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನವನ್ನುಅಲಂಕರಿಸುವ ಆಕಾಂಕ್ಷೆ ಹೊಂದಿರುವ ಶ್ರೀ ಕುಮಾರಸ್ವಾಮಿ ಅವರು ಎಲ್ಲಾಸಮುದಾಯಗಳನ್ನು ಒಟ್ಟಿಗೆ ತೆಗೆದು ಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿದೆ ಎಂದು ಮರೆಯಬಾರದು ಎಂದು ಅಶೋಕ್‌ ಹಾರನಹಳ್ಳಿ ಹೇಳಿದ್ದಾರೆ.

Exit mobile version