Site icon Vistara News

Budget 2024: ಭಾರತ ವಿಭಜನೆ; ಡಿ.ಕೆ. ಸುರೇಶ್‌ ಹೇಳಿಕೆಯನ್ನು ಸಮರ್ಥಿಸಿಕೊಂಡ ಡಿಕೆಶಿ!

DK Suresh and DK Shivakumar

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಂಡಿಸಿರುವ ಮಧ್ಯಂತರ ಬಜೆಟ್‌ (Budget 2024) ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಂಸದ ಡಿ.ಕೆ. ಸುರೇಶ್‌, ಭಾರತ ವಿಭಜನೆ ಬಗ್ಗೆ ಮಾತನಾಡಿದ್ದರು. ಇದಕ್ಕೀಗ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆದರೆ, ಈ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಹಾಗೂ ಸುರೇಶ್‌ ಸಹೋದರ ಡಿ.ಕೆ. ಶಿವಕುಮಾರ್‌ ಸಮರ್ಥನೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನಾನು ಅಖಂಡ ಭಾರತದವನು. ಡಿ.ಕೆ. ಸುರೇಶ್‌ ಅವರು ಜನರ ಅಭಿಪ್ರಾಯವನ್ನು ಹೇಳಿದ್ದಾರೆ ಅಷ್ಟೇ. ಜನರು ಆ ರೀತಿ ಯೋಚನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದವರು ನಮ್ಮನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂಬುದನ್ನು ಜನ ಹೇಳುತ್ತಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.

ನಾನು‌ ಭಾರತದವನು, ಒಂದೇ ಭಾರತದಲ್ಲಿದ್ದೇವೆ. ನಮಗೆ ಅನ್ಯಾಯ ಆಗಿದೆ ಎಂಬ ಜನರ ಭಾವನೆಯನ್ನು ಡಿ.ಕೆ. ಸುರೇಶ್ ತಿಳಿಸಿದ್ದಾರೆ‌‌. ಭಾರತದಲ್ಲಿ ಒಗ್ಗಟ್ಟು ಇರಬೇಕು, ನಾವೆಲ್ಲ ಭೂತಾಯಿ‌ ಮಕ್ಕಳು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಒಂದೇ ಇದ್ದೇವೆ. ಹಿಂದಿ ಬೆಲ್ಟ್‌ ಸೇರಿದಂತೆ ಯಾರಿಗೂ ಅನ್ಯಾಯ ಆಗಬಾರದು. ಉತ್ತರ ಭಾರತಕ್ಕೆ ಸಿಕ್ಕಿರುವುದು ನಮಗೂ ಸಿಗಬೇಕು ಎಂಬುದು ಜನರ ಭಾವನೆಯಾಗಿದೆ. 27 ಜನ ಸಂಸದರು ಏನು ತಂದಿದ್ದಾರೆ ನಮಗೆ? ಈ ಸಂಬಂಧ ನಮ್ಮ ಈ ಸಂಸದರು ಧರಣಿ ಮಾಡಿ ಅನ್ಯಾಯ ಸರಿಪಡಿಸಲಿ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ನಾವು ಕೇಂದ್ರದ ವಿತ್ತ ಸಚಿವರನ್ನು ಭೇಟಿ ಮಾಡಿ ಬೇಡಿಕೆ ಇಟ್ಟಿದ್ದೆವು. ರಾಜ್ಯಕ್ಕೆ ಎಲ್ಲ ತರದಲ್ಲೂ ಸಹಾಯ ಮಾಡಿ ಅಂತ ಮನವಿ ಮಾಡಿದ್ದೆವು. ಬೆಂಗಳೂರು ನಗರಕ್ಕೆ ಫೈನಾನ್ಸ್ ಕಮಿಷನ್‌ನಲ್ಲಿ ಹಣ ಬಂದಿಲ್ಲ. ಬೆಂಗಳೂರಿಗೂ ಹಣವಿಲ್ಲ. ದಕ್ಷಿಣ ಭಾರತಕ್ಕೂ ಹಣವಿಲ್ಲ. ಇಷ್ಟು ಕಳಪೆ ಬಜೆಟ್ ಅನ್ನು ಯಾವತ್ತೂ ನೋಡಿಲ್ಲ. ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ. ಬಹಳ ನಿರಾಸೆ ಆಗಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಡಿ.ಕೆ. ಸುರೇಶ್ ಹೇಳಿದ್ದೇನು?

ಸಂಸದ ಡಿ.ಕೆ. ಸುರೇಶ್‌‌ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡುವಾಗ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಬಜೆಟ್‌ ಅನ್ನು ಖಂಡಿಸಿದ್ದಾರೆ. ಅಲ್ಲದೆ, ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂಬುದಾಗಿ ತಾರತಮ್ಯ ಮಾಡುತ್ತಿದ್ದು, ಹೀಗೇ ಮುಂದುವರಿದರೆ ದೇಶವನ್ನು ವಿಭಜನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಈ ಬಗ್ಗೆ ನವ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಸುರೇಶ್‌, ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ಕೊಡುತ್ತಿದ್ದಾರೆ. ಇದರಿಂದ ನಮಗೆ ಆರ್ಥಿಕವಾಗಿ ತೊಂದರೆಯಾಗುತ್ತಿದೆ. ಹೀಗೆ ಮುಂದುವರಿದರೆ ದಕ್ಷಿಣ ಭಾರತ ಬೇರೆ ದೇಶ ಆಗಬೇಕು ಎಂಬ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದು ಡಿ.ಕೆ. ಸುರೇಶ್‌ ಎಚ್ಚರಿಕೆ ನೀಡಿದ್ದಾರೆ. ‌

ನಾಮಫಲಕ ಮಾತ್ರ ಬದಲಾಯಿಸಲಾಗಿದೆ: ಡಿ.ಕೆ. ಸುರೇಶ್

ಸಂಸದ ಡಿ.ಕೆ. ಸುರೇಶ್ ದೆಹಲಿಯಲ್ಲಿ‌ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಜೆಟ್‌ನಲ್ಲಿ ನಾಮಫಲಕವನ್ನು ಮಾತ್ರ ಬದಲಾಯಿಸಲಾಗಿದೆ. ಬೇರೆ ಬೇರೆ ದೇಸಿ ಹೆಸರುಗಳನ್ನು ಇಡಲಾಗಿದೆ. ಎಕನಾಮಿಕ್ ಸರ್ವೆಯವರು ಮುಂದಿಟ್ಟಿದ್ದಿದ್ದರೆ ಇವರ ಪರಿಸ್ಥಿತಿ ಏನಿದೆ? ಯಾವ ರೀತಿ ದೇಶ ಕಳೆದ ಸಾಲಿನಲ್ಲಿ ಸಾಧನೆಯನ್ನು ಸಾಧಿಸಿದೆ ಎಂಬುದು ತಿಳಿಯುತ್ತಿತ್ತು. ಈಗ ದೇಶದ ಸ್ಥಿತಿ ಬಗ್ಗೆ ಅನುಮಾನಗಳು ಪ್ರಾರಂಭವಾಗಿದೆ.

ಇದನ್ನೂ ಓದಿ: Budget 2024: ಪ್ರಗತಿನಿಷ್ಠ ಬಜೆಟ್’ ಎಂದ ಬಿಎಸ್‌ವೈ; ನಾಮಫಲಕವನ್ನು ಮಾತ್ರ ಬದಲಾಗಿದೆ ಎಂದ ಡಿ.ಕೆ. ಸುರೇಶ್

ಈ ಬಜೆಟ್ ಚುನಾವಣೆಗೆ ಸಂಬಂಧಪಟ್ಟಂತೆ ಒಂದಷ್ಟು ಘೋಷಣೆಗಳನ್ನು ನೀಡಿದೆ. ಆದರೆ, ಹೇಳಿಕೆಗಳಿಂದ ಕೂಡಿದ ಬಜೆಟ್‌ ಇದಾಗಿದೆ ಎಂದು ಹೇಳಬಹುದಾಗಿದೆ. ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಇವತ್ತು ನಮ್ಮ ಗ್ಯಾರಂಟಿಗಳನ್ನು ವಿರೋಧ ಮಾಡಿದಂಥವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ ಎಂದು ಡಿ.ಕೆ. ಸುರೇಶ್‌ ಆಕ್ರೋಶ ವ್ಯಕ್ತಪಡಿಸಿದರು.

Exit mobile version