Site icon Vistara News

Caste Census : ಜಾತಿ ಗಣತಿ ಮೂಲ ವರದಿ ಇಲ್ಲ, ಸಹಿಯನ್ನೂ ಹಾಕಿಲ್ಲ; ಸರ್ಕಾರಕ್ಕೆ ಜಯಪ್ರಕಾಶ್‌ ಹೆಗ್ಡೆ ಪತ್ರ

Jayaprakash hegde letter for Caste Census

ಬೆಂಗಳೂರು: ಎಚ್‌. ಕಾಂತರಾಜು ನೇತೃತ್ವದ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015’ ವರದಿಯ (ಜಾತಿ ಗಣತಿ – Caste Census) ಮೂಲ ಅಥವಾ ಹಸ್ತ ಪ್ರತಿ ಲಭ್ಯವಿಲ್ಲ. ಅಲ್ಲದೆ, ಮುದ್ರಿತ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲ. ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಸ್ಪಷ್ಟನೆಯನ್ನು ಕೋರಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ (Backward Classes Commission) ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (Backward Classes Welfare Department) ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕೋರಿದ್ದಾರೆ. ಈ ಬಗ್ಗೆ ವಿಸ್ತಾರ ನ್ಯೂಸ್‌, “ಜಾತಿ ಗಣತಿ ಮೂಲ ವರದಿಯೇ ನಾಪತ್ತೆ!?” ಎಂದು ಈ ಮೊದಲೇ ವರದಿಯನ್ನು ಮಾಡಿತ್ತು. ಈಗ ಜಯಪ್ರಕಾಶ್‌ ಹೆಗ್ಡೆ (Jayaprakash Hegde) ಅವರೂ ಸಹ ಪತ್ರ ಬರೆದು ಈ ಬಗ್ಗೆ ಉಲ್ಲೇಖಿಸಿದ್ದಾರೆ.

ಹಿಂದುಳಿದ ವರ್ಗಗಳ ಆಯೋಗದ ಮುಖ್ಯಸ್ಥ ಕಾಂತರಾಜು ಅವರು ನೀಡಿದ್ದ ಜಾತಿ ಗಣತಿ ವರದಿ ಇದಾಗಿತ್ತು. ಇದರ ಮೂಲ ಪ್ರತಿ ನಾಪತ್ತೆಯಾಗಿದೆ ಎಂದು ಪತ್ರ ಬರೆದು ಎರಡು ವರ್ಷ ಕಳೆದರೂ ಸರ್ಕಾರದಿಂದ ಯಾವುದೇ ಉತ್ತರ ಇಲ್ಲ. ಜಾತಿಗಣತಿಯ ಮೂಲ ಪ್ರತಿ ಸರ್ಕಾರದ ಖಜಾನೆಯಿಂದಲೇ ನಾಪತ್ತೆಯಾಗಿದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ ಎಂದು ವಿಸ್ತಾರ ನ್ಯೂಸ್‌ ವರದಿಯಲ್ಲಿ ಪ್ರಸ್ತಾಪಿಸಿತ್ತು.

ಮುದ್ರಿತ ಮುಖ್ಯವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲದೆ ಇರುವುದು ಆಯೋಗವು ಗಮನಿಸಿರುತ್ತದೆ. ಮುಖ್ಯ ವರದಿಯ ಮೂಲ ಅಥವಾ ಹಸ್ತಪ್ರತಿ ಸೀಲ್ಸ್ ಬಾಕ್ಸಿನಲ್ಲಿ ಲಭ್ಯವಿಲ್ಲದಿರುವುದರಿಂದ ಸದರಿ ಹಸ್ತಪ್ರತಿಯನ್ನು ಕೂಡಲೇ ಆಯೋಗದ ಕಛೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿತ್ತು. ಸದರಿಯವರು ಸೂಚನೆಗೆ ಉತ್ತರವನ್ನು ನೀಡಿದ್ದು, ಅದರ ಪ್ರತಿಯನ್ನು ಲಗತ್ತಿಸಿದೆ ಎಂದು ಜಯಪ್ರಕಾಶ್ ಹೆಗ್ಡೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜಯಪ್ರಕಾಶ್‌ ಹೆಗ್ಡೆ ಪತ್ರದಲ್ಲಿ ಏನಿದೆ?

ದಿನಾಂಕ: 26.08.2021 ರಂದು ಆಯೋಗದ ಕಛೇರಿಯಲ್ಲಿರಿಸಲಾಗಿದ್ದ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರಲ್ಲಿ ಸಂಗ್ರಹಿಸಿದ ಅಂಕಿ ಅಂಶಗಳು ಹಾಗೂ ಇತರ ವಿವರಗಳನ್ನೊಳಗೊಂಡ ಸೀಲ್ಡ್ ಬಾಕ್ಸ್‌ಗಳನ್ನು ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಮಹಜರ್ ನಡೆಸಿ ತೆರೆಯಲಾಗಿರುತ್ತದೆ. ಮುದ್ರಿತ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲದೆ ಇರುವುದು ಆಯೋಗವು ಗಮನಿಸಿರುತ್ತದೆ. ಇದರೊಂದಿಗೆ ಇದಕ್ಕೆ ಸಂಬಂಧಿಸಿದ ಮುಖ್ಯ ವರದಿಯ ಮೂಲ ಅಥವಾ ಹಸ್ತಪ್ರತಿ ಸೀಲ್ಸ್ ಬಾಕ್ಸಿನಲ್ಲಿ ಲಭ್ಯವಿಲ್ಲದಿರುವುದರಿಂದ ಸದರಿ ಹಸ್ತಪ್ರತಿಯನ್ನು ಕೂಡಲೇ ಆಯೋಗದ ಕಛೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿತ್ತು.

ಸದರಿಯವರು ಸೂಚನೆಗೆ ಉತ್ತರವನ್ನು ನೀಡಿದ್ದು, ಅದರ ಪ್ರತಿಯನ್ನು ಲಗತ್ತಿಸಿದೆ. ಸದರಿ ವಿಷಯವನ್ನು ಸರ್ಕಾರದ ಗಮನಕ್ಕೆ ತರಬಯಸುತ್ತಾ, ಮುಂದೆ ಈ ವಿಷಯಕ್ಕೆ ಸಂಬಂಧಪಟ್ಟಂತೆ. ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಹಂತದಲ್ಲಿ ಸ್ಪಷ್ಟ ಪಡಿಸುವಂತೆ ಕೋರುತ್ತೇನೆ” ಎಂದು ಜಯಪ್ರಕಾಶ್‌ ಹೆಗ್ಡೆ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Fish Delivery : ಬೆಂಗಳೂರಿನ ಮನೆ ಬಾಗಿಲಿಗೆ ಬರುತ್ತೆ ಮತ್ಸ್ಯ ವಾಹಿನಿ; ಸಿಗಲಿದೆ ತಾಜಾ ಮೀನು, ಖಾದ್ಯ!

ಇದು ಸರ್ಕಾರದ ನಾಟಕ ಎಂದ ಯತ್ನಾಳ್‌

ಈ ಬಗ್ಗೆ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಟ್ವೀಟ್‌ ಮಾಡಿದ್ದು, ಸರ್ಕಾರ ವಿರುದ್ಧ ತರಾಟೆಗೆ ತೆಗೆದುಕೊಂಡಿದ್ದಾರೆ. ಜಾತಿ ಜಾತಿ ಗಣತಿಗೆ ಸಂಬಂಧಿಸಿ ಮೂಲ ವರದಿಯೇ ಅಲಭ್ಯವಾಗಿದೆ. ಸೀಲ್ಡ್ ಬಾಕ್ಸ್‌ನಲ್ಲಿ ಕಾಣೆಯಾಗಿರುವ ಮೂಲ ಪ್ರತಿ ಅಥವಾ ಹಸ್ತಪ್ರತಿ ಲಭ್ಯವಾಗಿದೆ. ಮೂಲ ಪ್ರತಿಯೇ ಲಭ್ಯ ಇಲ್ಲದ ಬಗ್ಗೆ ಸರ್ಕಾರಕ್ಕೆ ಜಯಪ್ರಕಾಶ್ ಹೆಗ್ಡೆ ಪತ್ರ ಬರೆದಿದ್ದಾರೆ. ಇಂತಹ ಬೆಳವಣಿಗೆಗಳ ಬಗ್ಗೆ ಗೌಪ್ಯವಾಗಿದ್ದರೂ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದು ಸರ್ಕಾರ ಉದ್ದೇಶಪೂರ್ವಕವಾಗಿ ಮಾಡಿದ ನಾಟಕ ಎಂದು ತೋರುತ್ತದೆ ಎಂದು ಹೇಳಿದ್ದಾರೆ.

Exit mobile version