Site icon Vistara News

Power Point with HPK : ಸಿದ್ದರಾಮಯ್ಯ ಬಗ್ಗೆ ಬಿ.ಕೆ. ಹರಿಪ್ರಸಾದ್‌ ಮಾತನಾಡಿದ್ದು ತಪ್ಪು ಎಂದ ಚಲುವರಾಯಸ್ವಾಮಿ

Chaluvarayaswamy in powerpoint with HPK

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಬಗ್ಗೆ ಪಕ್ಷದ ಹಿರಿಯ ನಾಯಕ, ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ (MLC BK Hariprasad) ಅವರು ಅನಾವಶ್ಯಕವಾಗಿ ಮಾತನಾಡಿದ್ದಾರೆ. ಅವರು ಆ ರೀತಿಯಲ್ಲಿ ಮಾತನಾಡಿದ್ದು ತಪ್ಪು ಎಂದು ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ (Agriculture Minister N Chaluvarayaswamy) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ, ಬಿ.ಕೆ. ಹರಿಪ್ರಸಾದ್‌ ಅವರಿಗೆ ನೋಟಿಸ್‌ ಸಹ ನೀಡಲಾಗಿದೆ. ಇನ್ನು ಅವರೂ ಸಹ ತಾವು ಇನ್ನು ಮುಂದೆ ಮಾತನಾಡುವುದನ್ನು ನಿಲ್ಲಿಸುತ್ತೇನೆಂಬುದಾಗಿ ಹೇಳಿದ್ದಾರೆ ಎಂದು ಹೇಳಿದರು.

ಬಿ.ಕೆ. ಹರಿಪ್ರಸಾದ್‌ ಅವರು ಮಾತನಾಡುವ ಅವಶ್ಯಕತೆಯೂ ಇರಲಿಲ್ಲ. ಅವರು ಹಾಗೆ ಮಾತನಾಡಬಾರದಾಗಿತ್ತು. ಇದರಿಂದ ಸಿದ್ದರಾಮಯ್ಯ ಅವರಿಗೂ ಮುಜುಗರ ಹಾಗೂ ಪಕ್ಷಕ್ಕೂ ನಷ್ಟವಾಗುತ್ತದೆ. ಇದರ ಜತೆಗೆ ಹರಿಪ್ರಸಾದ್‌ ಅವರಿಗೂ ಡ್ಯಾಮೇಜ್‌ ಆಗಿದೆ. ಅವರು ಮಾತನಾಡಿದ್ದನ್ನು ನಾನು ಒಪ್ಪಲ್ಲ ಎಂದು ಸಚಿವ ಎನ್.‌ ಚಲುವರಾಯಸ್ವಾಮಿ ಹೇಳಿದರು.

ರಾಹುಲ್‌ ಗಾಂಧಿ ಸಮರ್ಥ ನಾಯಕ

ರಾಹುಲ್‌ ಗಾಂಧಿ ಅವರ ಬಗ್ಗೆ ಸುಮ್ಮನೇ ಟೀಕೆ ಮಾಡುತ್ತಾರೆ. ಒಬ್ಬ 40-50 ವರ್ಷದ ಯುವಕರು 3,500 ಕಿ.ಮೀ. ಪಾದಯಾತ್ರೆ ಮಾಡುತ್ತಾರೆ. ದೇಶಕ್ಕಾಗಿ ಅವರಿಗೆ ಇರುವ ಬದ್ಧತೆ ಯಾರಿಗೆ ಇದೆ? ಭಾರತ್‌ ಜೋಡೋ ಆದ ಮೇಲೆ ರಾಹುಲ್‌ ಗಾಂಧಿಯವರ ಬದ್ಧತೆ ಬಗ್ಗೆ ದೇಶದ ಜನರಿಗೆ ಅರ್ಥ ಆಗಿದೆ. ಅವರು ದೇಶದ ಒಬ್ಬ ಸಮರ್ಥ ನಾಯಕರು. ಅವರ ತಂದೆ ರಾಜೀವ್‌ ಗಾಂಧಿ ಅವರಿಗಿಂತಲೂ ಒಂದು ಹೆಜ್ಜೆ ಮೀರಿ ಆಡಳಿತ ಕೊಡುವಷ್ಟು ಸಮರ್ಥರಿದ್ದಾರೆ ಎಂದು ಎನ್.‌ ಚಲುವರಾಯಸ್ವಾಮಿ ಹೇಳಿದರು.

ಲೋಕಸಭೆಗೆ ಸ್ವತಂತ್ರ ಸ್ಪರ್ಧೆ ಸಾಧ್ಯವಿಲ್ಲದ್ದಕ್ಕೆ ಬಿಜೆಪಿ ಆಶ್ರಯ ಪಡೆದ ಜೆಡಿಎಸ್‌!

ಮುಂದಿನ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಮೈತ್ರಿ ಮಾಡಿಕೊಳ್ಳುವುದು ಬಿಜೆಪಿ – ಜೆಡಿಎಸ್‌ (BJP JDS alliance) ಪಕ್ಷಗಳಿಗೆ ಅನಿವಾರ್ಯವಾಗಿದೆ. ಅದರಲ್ಲೂ ಜೆಡಿಎಸ್‌ಗೆ ತಮ್ಮ ಪಕ್ಷವನ್ನು ಉಳಿಸಿಕೊಳ್ಳುವ ಸಲುವಾಗಿ ಹೋಗಿದ್ದಾರೆ. ಅವರ ಕೈಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಲು ಸಾಧ್ಯ ಇಲ್ಲದ ಕಾರಣಕ್ಕೆ ಬಿಜೆಪಿ ಆಶ್ರಯವನ್ನು ಪಡೆದಿದ್ದಾರೆ. ಈ ಮೊದಲು ರಾಜ್ಯದ ಜನರ ಹಿತದೃಷ್ಟಿಯಿಂದ ಕೋಮುವಾದಿ ಪಕ್ಷವನ್ನು ದೂರ ಇಡುತ್ತೇವೆ. ಬಿಜೆಪಿಯೇತರ ಸರ್ಕಾರ ನಮ್ಮ ಗುರಿ ಎಂದು ಹೇಳಿಕೆ ನೀಡುತ್ತಿದ್ದ ಜೆಡಿಎಸ್‌ ನಾಯಕರಿಗೆ ಈಗ ಪಕ್ಷದ ಉಳಿವಿನ ಪ್ರಶ್ನೆಯಾಗಿದೆ. ಹೀಗಾಗಿ ಅವರು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂದು ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ ಹೇಳಿದರು.

ರಾಜ್ಯ ಬಿಜೆಪಿ ಅಸಮರ್ಥತೆಯಿಂದಲೇ ಮೈತ್ರಿ

ಇನ್ನು ಬಿಜೆಪಿಯವರ ಕಥೆ ಏನೂ ಭಿನ್ನವಾಗಿಲ್ಲ. 80, 90,120, 150 ಸೀಟನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದ ಬಿಜೆಪಿಯವರ ಸ್ಥಿತಿ ಏನಾಗಿದೆ? ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದಾಗ ಪಕ್ಷದ ರಾಜ್ಯಾಧ್ಯಕ್ಷರು ಸೇರಿದಂತೆ ಇತರ 10 ನಾಯಕರನ್ನು ಲೈನ್‌ಅಪ್‌ ಮಾಡಲೂ ಅವಕಾಶ ನೀಡಲಿಲ್ಲ ಎಂದರೆ ಇವರನ್ನು ಯಾವ ರೀತಿಯಲ್ಲಿ ಕೇಂದ್ರ ಬಿಜೆಪಿಯವರು ನೋಡುತ್ತಿರಬೇಕು ಎಂಬುದನ್ನು ಜನರೇ ಊಹಿಸಲಿ. ರಾಜ್ಯ ಬಿಜೆಪಿಯವರಿಗೆ ಯಾವುದೇ ರೀತಿಯಲ್ಲೂ ಗೆಲ್ಲಲು ಆಗದು ಎಂಬ ಕಾರಣಕ್ಕಾಗಿ ಆ ಪಕ್ಷದ ವರಿಷ್ಠರು ಮೈತ್ರಿಗೆ ತೀರ್ಮಾನ ಮಾಡಿದ್ದಾರೆ ಎಂದು ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ ಹೇಳಿದರು.

ಇದನ್ನೂ ಓದಿ: Power Point with HPK : ಕಾವೇರಿ ಸಭೆಗೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅಧಿಕಾರಿಗಳು ಭಾಗಿಯಾಗೋದೇ ಸರಿ!

ಕುಮಾರಸ್ವಾಮಿ ಅಲ್ಲ, ಯಾರೇ ಆದರೂ ಸ್ಪರ್ಧೆ ಮಾಡಲಿ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಎದುರಿಸಲು ಕಾಂಗ್ರೆಸ್‌ನಲ್ಲಿ ಸಮರ್ಥ ಅಭ್ಯರ್ಥಿಗಳು ಇದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ ಅಥವಾ ಬಿಜೆಪಿಯಿಂದ ಯಾರು ಬೇಕಾದರೂ ಸ್ಪರ್ಧೆ ಮಾಡಲಿ, ಅದರ ಬಗ್ಗೆ ನಮ್ಮ ಅಭ್ಯಂತರ ಇಲ್ಲ. ನಮ್ಮ ಪಕ್ಷ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎದುರಿಸುತ್ತದೆ. ನಮ್ಮ ಕ್ಯಾಂಡಿಡೇಟ್‌ ಅನ್ನು ಗೆಲ್ಲಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಚಿವ ಎನ್.‌ ಚಲುವರಾಯಸ್ವಾಮಿ ಹೇಳಿದರು.

Exit mobile version