Site icon Vistara News

Congress Guarantee: ನೀರು, ರೈತರ ಸಮಸ್ಯೆಗೆ ಸರ್ವೆ ಮಾಡದ ಸಿದ್ದರಾಮಯ್ಯ; ಮತ್ತೆ ಗ್ಯಾರಂಟಿ ಸಮೀಕ್ಷೆಗೆ ಅಶೋಕ್‌ ಕಿಡಿ

Congress Guarantee Ashok slams Siddaramaiah for conducting guarantee survey

ಬೆಂಗಳೂರು: ರಾಜ್ಯದಲ್ಲಿ ಭೀಕರ (Drought in Karnataka) ಬರಗಾಲವಿದೆ. ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ (Water Crisis) ಶುರುವಾಗಿದೆ. ಕಾವೇರಿಯಲ್ಲಿಯೂ (Cauvery Water) ನೀರಿಲ್ಲ. ಇಂಥ ಸಂದರ್ಭದಲ್ಲಿ ಜನರ ನೀರಿನ ಸಮಸ್ಯೆಗಳನ್ನು ನೀಗಿಸುವುದನ್ನು ಬಿಟ್ಟು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್‌ ಸರ್ಕಾರವು (Congress Government) ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಗ್ಯಾರಂಟಿಗಳ (Congress Guarantee Scheme) ಸಮೀಕ್ಷೆಯನ್ನು ಮೇಲಿಂದ ಮೇಲೆ ಮಾಡಿಸುತ್ತಿದೆ. ಸಿಎಂಗೆ ಯಾಕಿಷ್ಟು ಆಸಕ್ತಿ, ಆತುರ? ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿ ಮತ್ತೆ ಮೂರು ದಿನಗಳ ಸಮೀಕ್ಷೆ ಯಾವ ಪುರುಷಾರ್ಥಕ್ಕಾಗಿ? ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (R Ashok) ಕಿಡಿಕಾರಿದ್ದಾರೆ.

ಆರ್.‌ ಅಶೋಕ್‌ ತಮ್ಮ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ರೈತರ, ನೇಕಾರರ, ಮೀನುಗಾರರ ಸಮಸ್ಯೆಗಳಿಗೆ ಸಮೀಕ್ಷೆಗಳನ್ನು ನಡೆಸದ ಈ ಸರ್ಕಾರವು ಈಗ ಗ್ಯಾರಂಟಿ ಯೋಜನೆಗಳ ಸಮೀಕ್ಷೆ ಮಾಡಿ ದುಂದು ವೆಚ್ಚ ಮಾಡಲು ಹೊರಟಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

ಅಶೋಕ್‌ ಪೋಸ್ಟ್‌ನಲ್ಲೇನಿದೆ?

ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರು, ನೇಕಾರರು, ಮೀನುಗಾರರ ಸಮಸ್ಯೆ ಬಗ್ಗೆ ಸಮೀಕ್ಷೆ ನಡೆಸಲಿಲ್ಲ. ಹೊಟ್ಟೆಪಾಡಿಗಾಗಿ ಗುಳೆ ಹೋಗಿರುವ ಲಕ್ಷಾಂತರ ಕೃಷಿ ಕಾರ್ಮಿಕರ ಬಗ್ಗೆ ಸಮೀಕ್ಷೆ ನಡೆಸಲಿಲ್ಲ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಮೀಕ್ಷೆ ನಡೆಸಲಿಲ್ಲ. ಆದರೆ, ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಒಂದಲ್ಲ ಹತ್ತಾರು ಮೂಲಗಳಿಂದ ಗ್ಯಾರಂಟಿಗಳ ಬಗ್ಗೆ ಸಮೀಕ್ಷೆ ಮಾಡಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಎಲ್ಲಿಲ್ಲದ ಆಸಕ್ತಿ, ಆತುರ.

ಕಳೆದ 9 ತಿಂಗಳಿಂದ ರಾಜ್ಯವನ್ನು ಅಭಿವೃದ್ಧಿ ಶೂನ್ಯ ಮಾಡಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ, ಲೋಕಸಭಾ ಚುನಾವಣೆಯಲ್ಲಿ ಜನರಿಗೆ ಮುಖ ತೋರಿಸಲು ಹೇಗಾದರೂ ಮಾಡಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸರ್ಟಿಫಿಕೇಟ್ ಪಡೆಯಬೇಕೆಂದು ಹಠಕ್ಕೆ ಬಿದ್ದಿದೆ.

ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಗ್ಯಾರಂಟಿ ಯೋಜನೆಗಳು ನಿಜವಾಗಿಯೂ ಜನರಿಗೆ ತಲುಪಿದ್ದರೆ, ಅದನ್ನು ಜನ ಮೆಚ್ಚಿದ್ದರೆ ಈ ಸಮೀಕ್ಷೆ ನಡೆಸುವ ಅಗತ್ಯ ಏನಿದೆ?

ವೈಜ್ಞಾನಿಕ ಅಧ್ಯಯನಕ್ಕೆ 6 ತಿಂಗಳು ಬೇಕು

ಯಾವುದೇ ಯೋಜನೆ ಜನರ ಬದುಕಿನ ಮೇಲೆ ಬೀರಿರುವ ಪರಿಣಾಮ, ಯೋಜನೆಯ ಪೂರ್ವದಲ್ಲಿ, ಯೋಜನೆಯ ನಂತರದಲ್ಲಿ ಅದು ಜನರ ಬದುಕಿನಲ್ಲಿ ತಂದಿರುವ ಬದಲಾವಣೆ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡಬೇಕಾದರೆ ಅದಕ್ಕೆ ಕನಿಷ್ಠ 6 ತಿಂಗಳಾದರೂ ಸಮಯ ಬೇಕು. ಎಲ್ಲಕ್ಕಿಂತ ಮಿಗಿಲಾಗಿ ಯೋಜನೆ ಜಾರಿಯಾಗಿ ಒಂದು ವರ್ಷವಾದರೂ ಕಳೆದಿರಬೇಕು. ಅದು ಬಿಟ್ಟು ಹೀಗೆ ತರಾತುರಿಯಲ್ಲಿ ಮೂರು ದಿನಗಳಲ್ಲಿ ಸಮೀಕ್ಷೆ ಮಾಡಲು ಹೇಗೆ ಸಾಧ್ಯ?

ಇದನ್ನೂ ಓದಿ: Lok Sabha Election 2024: ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ; ಸಿ.ಟಿ. ರವಿ ವಿರುದ್ಧ ಶೋಭಾ ಪರೋಕ್ಷ ವಾಗ್ದಾಳಿ

ಯಾವ ಪುರಷಾರ್ಥಕ್ಕೆ?

ಗ್ಯಾರಂಟಿ ಜಾರಿ ಬಗ್ಗೆ ಖಾಸಗಿ ಸಂಸ್ಥೆಯಿಂದ ಸಮೀಕ್ಷೆ ಮಾಡಿಸಲು ಈಗಾಗಲೇ 1 ಕೋಟಿ ರೂಪಾಯಿ ಪೋಲು ಮಾಡಿದ್ದಾಯ್ತು. ಗ್ಯಾರಂಟಿ ಅನುಷ್ಠಾನಕ್ಕೆ ಸಮಿತಿ ರಚಿಸಿ, ಸಿಕ್ಕಸಿಕ್ಕವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ 16 ಕೋಟಿ ರೂಪಾಯಿ ದುಂದು ವೆಚ್ಚ ಮಾಡಿದ್ದಾಯ್ತು. 1.2 ಲಕ್ಷ ‘ಗ್ಯಾರೆಂಟಿ ಸ್ವಯಂ ಸೇವಕರ’ ಹುದ್ದೆ ಸೃಷ್ಟಿಸುವ ಮೂಲಕ 12 ಕೋಟಿ ರೂಪಾಯಿ ವ್ಯರ್ಥ ಮಾಡಿದ್ದಾಯ್ತು. ಈಗ ಮತ್ತೆ ಈ ಮೂರು ದಿನಗಳ ಸಮೀಕ್ಷೆ ಯಾವ ಪುರುಷಾರ್ಥಕ್ಕಾಗಿ? ಇದರಿಂದ ಸಾಧಿಸಲು ಹೊರಟಿರುವುದಾದರೂ ಏನು?” ಎಂದು ಆರ್.‌ ಅಶೋಕ್‌ ಪ್ರಶ್ನೆ ಮಾಡಿದ್ದಾರೆ.

Exit mobile version