ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ (Congress Politics) ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ನಡೆದ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ 120 ಹೆಸರುಗಳನ್ನು ಆಯ್ಕೆ ಮಾಡಲಾಗಿದೆ. ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ಅನೇಕ ಹೊತ್ತು ಚರ್ಚೆ ನಡೆಸಲಾಗಿದ್ದು, ಶೀಘ್ರವಾಗಿ ಪಟ್ಟಿ ಬಿಡುಗಡೆ ಮಾಡದ ಧೋರಣೆಗೆ ಅನೇಕರು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿ ಅನೇಕ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಸದಸ್ಯರಿಂದ ಅಭಿಪ್ರಾಯ ಪಡೆಯಲಾಯಿತು. ಸಭೆಯಲ್ಲಿ 120 ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಆದರೆ ಘೋಷಣೆ ಮಾಡಲು ಮೀನಮೇಷ ಎಣಿಸಿದ್ದಾರೆ ಎನ್ನಲಾಗಿದೆ.
ಬಹುತೇಕ ಹಾಲಿ ಶಾಸಕರು ಹಾಗೂ ಕಳೆದ ಕಡಿಮೆ ಅಂತರದಲ್ಲಿ ಪರಾಭವಗೊಂಡ ಅಭ್ಯರ್ಥಿಗಳಿಗೆ ಟಿಕೆಟ್ ನಿಗದಿ ಮಾಡಲಾಗಿದೆ. ಫೆಬ್ರವರಿ 15 ರೊಳಗೆ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಿ ಎಂದು ಸದಸ್ಯರು ಪಟ್ಟು ಹಿಡಿದಿದ್ದಾರೆ. ಅಷ್ಟರಲ್ಲಿ ಘೋಷಣೆ ಮಾಡಲು ಆಘುವುದಿಲ್ಲ. ಫೆಬ್ರವರಿ ಕೊನೆ ವಾರ ಅಥವಾ ಮಾರ್ಚ್ ಮೊದಲ ವಾರ ಆಗಬಹುದು. ಇನ್ನೂ ಸ್ಕ್ರೀನಿಂಗ್ ಕಮಿಟಿ ರಚನೆ ಆಗಬೇಕು. ಆ ಕಮಿಟಿಯಲ್ಲಿ ಚರ್ಚೆ ಮಾಡಬೇಕು, ಬಳಿಕ ಘೋಷಣೆ ಮಾಡಬೇಕು ಎಂದು ತಿಳಿಸಿದ್ದಾರೆ.
ಇದಕ್ಕೆ ಕೆಲ ಸದಸ್ಯರಿಂದ ಅಸಮಾಧಾನ ವ್ಯಕ್ತವಾಗಿದೆ. ನಿಮ್ಮ ಅಭಿಪ್ರಾಯಗಳನ್ನು ರೈಟಿಂಗ್ ನಲ್ಲಿ ಕೊಡಿ ಎಂದು ವರಿಷ್ಠರು ಕೇಳಿದ್ದಾರೆ. ಇದಕ್ಕೆ ಮತ್ತಷ್ಟು ವ್ಯಘ್ರವಾದ ಸದಸ್ಯರು, ರೈಟಿಂಗ್ ನಲ್ಲಿ ಕೊಡುವುದಾದರೆ ನಾವು ಯಾಕೆ ಸಭೆಗೆ ಬರಬೇಕಿತ್ತು? ಎಲ್ಲವೂ ಮೊದಲೇ ನಿರ್ಧಾರ ಆಗಿರುವಂತೆ ಎಂದು ಕಾಣುತ್ತಿದೆ, ಸುಮ್ಮನೆ ಸಭೆಗೆ ನಮ್ಮನ್ನು ಕರೆಸಿದ್ದೀರ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : Ramesh Jarkiholi : ಡಿ.ಕೆ. ಶಿವಕುಮಾರ್ ಪ್ರಕರಣ ಸಿಬಿಐಗೆ ಕೊಡಲೇಬೇಕೆಂದು ಪಟ್ಟು: ದೆಹಲಿಯಲ್ಲಿ ಬೀಡುಬಿಟ್ಟ ʼಸಾಹುಕಾರ್ʼ
ಈ ಸಭೆಯ ನಂತರ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜತೆಗೆ ಸುರ್ಜೇವಾಲ ರಹಸ್ಯ ಸಭೆ ನಡೆಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ನಿರ್ಧಾರ ಮಾಡಲಾಗಿದೆ. ಇಬ್ಬರಲ್ಲೂ ಸಹಮತ ಮೂಡಿದರೆ ಅಭ್ಯರ್ಥಿಗಳನ್ನು, ಟಿಕೆಟ್ ಕೈತಪ್ಪಿದವರನ್ನು ನಿಭಾಯಿಸುವುದು ಸರಿಯಾಗುತ್ತದೆ ಎಂಬ ತೀರ್ಮಾನಕ್ಕೆ ಬರಲಾಗಿದೆ. 120ರ ನಂತರ 30 ಕ್ಷೇತ್ರಗಳಲ್ಲಿ ಅತ್ಯಂತ ಪ್ರಬಲ ಪೈಪೋಟಿಯಿದ್ದು, ಈ ಕುರಿತೂ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.