Site icon Vistara News

Congress Protest : ದಯವಿಟ್ಟು ಪ್ರತಿಭಟನೆಗೆ ಬನ್ನಿ; ಬಿಜೆಪಿ ಸೇರಿ ಎಲ್ಲ ಸಂಸದರಿಗೆ ಸಿಎಂ ಪತ್ರ

Congress protest Letter to MPS1

ಬೆಂಗಳೂರು: ಕೇಂದ್ರ ಸರ್ಕಾರವು (Central Government) ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನದಲ್ಲಿ ಅನ್ಯಾಯ ಮಾಡುತ್ತಿರುವುದನ್ನು ಖಂಡಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ (Jantar Mantar protest) ಫೆಬ್ರವರಿ 7ರಂದು (ಬುಧವಾರ) ರಾಜ್ಯ ಸರ್ಕಾರದ ವತಿಯಿಂದ ಪ್ರತಿಭಟನೆ (Congress Protest) ಆಯೋಜಿಸಲಾಗಿದೆ. ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ರಾಜ್ಯದ ಎಲ್ಲ ಸಂಸದರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ವೈಯಕ್ತಿಕ ಪತ್ರ (Letter to MPs) ಬರೆದಿದ್ದಾರೆ.

ಸಿದ್ದರಾಮಯ್ಯ ಅವರು ಸಂಸದರಿಗೆ ಬರೆದ ಪತ್ರದಲ್ಲಿ ಏನಿದೆ?

ಮಾನ್ಯರೆ, ಒಂದು ವಿಶೇಷ ಸಂದರ್ಭದಲ್ಲಿ ಈ ಪತ್ರವನ್ನು ತಮಗೆ ಬರೆಯುತ್ತಿದ್ದೇನೆ.

ಕೇಂದ್ರ ಸರ್ಕಾರದಿಂದ ಆಗುತ್ತಿರುವ ನಿರಂತರ ಅನ್ಯಾಯ ಮತ್ತು ಕರ್ನಾಟಕದ ವಿಚಾರವಾಗಿ ಕೇಂದ್ರ ಸರ್ಕಾರವು ತೋರುತ್ತಿರುವ ಮಲತಾಯಿ ಧೋರಣೆಯು ತಮಗೆ ಈಗಾಗಲೇ ತಿಳಿದ ವಿಷಯವಾಗಿರುತ್ತದೆ. ಇದರ ವಿರುದ್ಧ ಪ್ರತಿಭಟಿಸಲು ಮತ್ತು ದೇಶದ ಗಮನ ಸೆಳೆಯಲು ತೀರ್ಮಾನಿಸಲಾಗಿದೆ. ರಾಜ್ಯದ ಉಪ ಮುಖ್ಯಮಂತ್ರಿಗಳು, ಎಲ್ಲ ಸಚಿವರು, ಶಾಸಕರು ಮತ್ತು ಸಂಸದರು ಸೇರಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಫೆಬ್ರವರಿ, 07 ರಂದು ಒಂದು ದಿನದ ಧರಣಿ ಸತ್ಯಾಗ್ರಹವನ್ನು ನಡೆಸಲು ತೀರ್ಮಾನಿಸಿದ್ದೇವೆ.

ಕರ್ನಾಟಕಕ್ಕೆ ತೆರಿಗೆ ಪಾಲಿನ ಹಂಚಿಕೆಯಲ್ಲಿ ಆಗುತ್ತಿರುವ ಭಾರೀ ಅನ್ಯಾಯ, ಬರಪರಿಹಾರ ನೀಡದಿರುವುದು, ವಿವಿಧ ಯೋಜನೆಗಳಿಗೆ ಅನುಮತಿ ಮತ್ತು ನೆರವು ನೀಡುವಲ್ಲಿ ತೋರುತ್ತಿರುವ ನಿರ್ಲಕ್ಷ್ಯ ಮತ್ತು ವಿಳಂಬ ಇತ್ಯಾದಿಗಳು ರಾಜ್ಯದಲ್ಲಿ ಜನಜೀವನವನ್ನು ವಿಪರೀತವಾಗಿ ಬಾಧಿಸುತ್ತಿವೆ. ಈ ವಿಚಾರವನ್ನು ಜವಾಬ್ದಾರಿಯುತ ಚುನಾಯಿತ ಪ್ರತಿನಿಧಿಗಳಾದ ತಾವು ಅರಿತೇ ಇರುತ್ತೀರಿ. ಆದುದರಿಂದ, ಈ ಧರಣಿ ಸತ್ಯಾಗ್ರಹದಲ್ಲಿ ತಾವು ಕೂಡಾ ಪಾಲ್ಗೊಂಡು ಅದರ ಯಶಸ್ಸಿಗೆ ನೆರವಾಗಬೇಕು ಎಂದು ತಮ್ಮಲ್ಲಿ ಕರ್ನಾಟಕದ ಸಮಸ್ತ ಜನತೆಯ ಪರವಾಗಿ ವಿನಂತಿಸುತ್ತೇನೆ.

ಎಲ್ಲ 28 ಲೋಕಸಭಾ ಸದಸ್ಯರಿಗೆ ಪತ್ರ

ಪ್ರಹ್ಲಾದ್‌ ಜೋಶಿ, ಜಿಎಂ ಸಿದ್ದೇಶ್ವರ್‌, ಶಿವಕುಮಾರ್‌ ಉದಾಸಿ, ಅಣ್ಣಾ ಸಾಹೇಬ ಜೊಲ್ಲೆ, ರಮೇಶ್‌ ಜಿಗಜಿಣಗಿ, ಬಿ.ಎನ್‌. ಬಚ್ಚೇಗೌಡ, ನಳಿನ್‌ ಕುಮಾರ್‌ ಕಟೀಲ್‌, ಪ್ರಜ್ವಲ್‌ ರೇವಣ್ಣ, ಬಿ.ವೈ ರಾಘವೇಂದ್ರ, ಶ್ರೀನಿವಾಸ್‌ ಪ್ರಸಾದ್‌, ಡಾ. ಉಮೇಶ್‌ ಜಾಧವ್‌, ಎಸ್‌. ಮುನಿಸ್ವಾಮಿ, ಕರಡಿ ಸಂಗಣ್ಣ, ಸುಮಲತಾ ಅಂಬರೀಷ್‌, ಪ್ರತಾಪ್‌ ಸಿಂಹ, ರಾಜಾ ಅಮರೇಶ್ವರ್‌ ನಾಯಕ್‌, ಅನಂತ ಕುಮಾರ್‌ ಹೆಗಡೆ, ಜಿ.ಎಸ್‌. ಬಸವರಾಜ್‌, ಎ. ನಾರಾಯಣ ಸ್ವಾಮಿ, ಭಗವಂತ್‌ ಖೂಬಾ, ಶೋಭಾ ಕರಂದ್ಲಾಜೆ, ಡಿ.ಕೆ. ಸುರೇಶ್‌, ಡಿ.ವಿ ಸದಾನಂದ ಗೌಡ, ಪಿ.ಸಿ. ಮೋಹನ್‌, ಪಿ.ಸಿ. ಗದ್ದಿಗೌಡರ್‌, ತೇಜಸ್ವಿ ಸೂರ್ಯ, ಮಂಗಲಾ ಸುರೇಶ್‌ ಅಂಗಡಿ, ವೈ ದೇವೇಂದ್ರಪ್ಪ ಅವರಿಗೆ ಪತ್ರ ಬರೆಯಲಾಗಿದೆ.

ಇದನ್ನೂ ಓದಿ: Congress Protest : ಸತ್ಯ ಮುಚ್ಚಿಟ್ಟು ಸುಳ್ಳು ಹೇಳುತ್ತಿರುವ ಸಿದ್ದರಾಮಯ್ಯ; ಬೊಮ್ಮಾಯಿ ಆಕ್ರೋಶ

ಪತ್ರ ಬರೆಯಲಾದ ರಾಜ್ಯಸಭಾ ಸದಸ್ಯರು

ಎಚ್.ಡಿ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಡಾ. ವೀರೇಂದ್ರ ಹೆಗ್ಗಡೆ, ನಾಸಿರ್‌ ಹುಸೇನ್‌, ರಾಜೀವ್‌ ಚಂದ್ರಶೇಖರ್‌, ನಿರ್ಮಲಾ ಸೀತಾರಾಮನ್‌, ಎಲ್‌. ಹನುಮಂತಯ್ಯ, ಜಗ್ಗೇಶ್‌, ಜೈರಾಮ್‌ ರಮೇಶ್‌, ಈರಣ್ಣ ಕಡಾಡಿ, ಕೆ. ನಾರಾಯಣ್‌, ಲೆಹರ್‌ ಸಿಂಗ್‌, ಜಿ.ಸಿ. ಚಂದ್ರಶೇಖರ್‌.

ದೆಹಲಿಯ ಜಂತರ್‌ ಮಂತರ್‌ನಲ್ಲಿ ಬುಧವಾರ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಇದರಲ್ಲಿ ರಾಜ್ಯದ ಎಲ್ಲ ಕಾಂಗ್ರೆಸ್‌ ಶಾಸಕರು ಹಾಗೂ ಸಚಿವರು ಭಾಗಿಯಾಗುತ್ತಿದ್ದಾರೆ. ಇದು ರಾಜಕೀಯೇತರ ಹೋರಾಟ. ರಾಜ್ಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹೀಗಾಗಿ ಬಿಜೆಪಿಯ ಸಂಸದರೂ ಸೇರಿದಂತೆ ಎಲ್ಲರೂ ಜತೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ. ಅದರಂತೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಡಾ ಡಿ. ವೀರೇಂದ್ರ ಹೆಗ್ಗಡೆ ಸೇರಿದಂತೆ ಎಲ್ಲ‌ ರಾಜ್ಯಸಭಾ ಸದಸ್ಯರಿಗೂ ಆಹ್ವಾನ ನೀಡಲಾಗಿದೆ.

Exit mobile version