Site icon Vistara News

Yathindra Siddaramaiah : ʼಹಲೋ ಅಪ್ಪಾʼ ಆ್ಯಪ್ ಡೌನ್‌ಲೋಡ್ ಮಾಡಿ ಪೇಮೆಂಟ್ ಮಾಡಿ!

BJP Poster campaign

ಚಿಕ್ಕಮಗಳೂರು: ಯತೀಂದ್ರ ಸಿದ್ದರಾಮಯ್ಯ (‌Yathindra Siddaramaiah) ಅವರ “ಲಿಸ್ಟ್‌” ರಾಜಕೀಯದ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಪ್ರತಿಪಕ್ಷಗಳು ಈಗ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಈ ವೇಳೆ ಪೋಸ್ಟರ್‌ ಅಭಿಯಾನಗಳು ಆರಂಭವಾಗಿದ್ದು, ಬಿಜೆಪಿಯು ಒಂದೊಂದೇ ಪೋಸ್ಟರ್‌ಗಳನ್ನು ಹರಿಬಿಡುತ್ತಿದೆ. ಈಗ ಕಾಂಗ್ರೆಸ್ ವಿರುದ್ಧ ಕಾಫಿನಾಡಲ್ಲಿ ಪೋಸ್ಟರ್ ಅಭಿಯಾನ (Poster Campaign) ಪ್ರಾರಂಭವಾಗಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಯತೀಂದ್ರ ಸಿದ್ದರಾಮಯ್ಯ ವಿರುದ್ಧ “ಹಲೋ ಅಪ್ಪಾ, ಆ್ಯಪ್ ಡೌನ್‌ಲೋಡ್ ಮಾಡಿ ಪೇಮೆಂಟ್ ಮಾಡಿ” ಪೋಸ್ಟರ್‌, “ಶ್ಯಾಡೋ ಸಿಎಂ” ಪೋಸ್ಟರ್ (Shadow CM), ಇಂಧನ ಸಚಿವ ಕೆ.ಜೆ. ಜಾರ್ಜ್‌, ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಕೆಲವರ ಮೇಲೆ ಪೋಸ್ಟರ್‌ಗಳನ್ನು ರಚಿಸಿ ಸರ್ಕಾರಿ ಕಚೇರಿಗಳ ಸಹಿತ ಅಲ್ಲಲ್ಲಿ ಅಂಟಿಸಲಾಗುತ್ತಿದೆ.

ತಾಲೂಕು ಕಚೇರಿ, ಮೆಸ್ಕಾಂ ಕಚೇರಿ, ತಾಲೂಕು ಪಂಚಾಯಿತಿ, ಪ್ರವಾಸಿ ಮಂದಿರದಲ್ಲಿ ಪೋಸ್ಟರ್ ಅಭಿಯಾನವನ್ನು ಬಿಜೆಪಿ ಪ್ರಾರಂಭ ಮಾಡಿದೆ. ಚಿಕ್ಕಮಗಳೂರು ನಗರದಲ್ಲಿ ಅಲ್ಲಲ್ಲಿ ಈಗ ಈ ಪೋಸ್ಟರ್‌ಗಳೇ ಕಾಣುತ್ತಿವೆ. ವ್ಯಂಗ್ಯ ಚಿತ್ರದ ಮೂಲಕ ಸರ್ಕಾರದ ವಿರುದ್ಧ ಬಿಜೆಪಿ ವ್ಯಂಗ್ಯವಾಗಿದೆ.

“ರಾಜ್ಯವನ್ನು ಕತ್ತಲೆಗೆ ದೂಡಿ ಇಂಧನ ಸಚಿವರು ನಾಪತ್ತೆ”, “ಕೆ.ಜೆ.ಜಾರ್ಜ್ ಇಂಧನ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಈ ತಿಂಗಳ ಕಪ್ಪ ಎಲ್ಲಿ ಎಂದು ಪ್ರಶ್ನೆ ಕೇಳುತ್ತಿರುವ ಸೋನಿಯಾ ಗಾಂಧಿ”, ಈಗ ತಾನೇ ವಿದ್ಯುತ್ ಬಿಲ್ ಹೆಚ್ಚಳವಾಗಿದೆ… ಇರೀ ಮೇಮ್ ಎನ್ನುತ್ತಿರುವ ಇಂಧನ ಸಚಿವ”, “It’s not sunstroke it is it is electricity shock”, ಸರ್ಕಾರದ ಪಂಚ ಗ್ಯಾರಂಟಿಗಳ ಸಹಿತ ವಿವಿಧ ವಿಷಯಗಳ ಮೇಲೆ ಕಾಂಗ್ರೆಸ್‌ ಸರ್ಕಾರ ಹಾಗೂ ನಾಯಕರ ವಿರುದ್ಧ ಪೋಸ್ಟರ್‌ಗಳನ್ನು ಮಾಡಿ ಅಂಟಿಸಲಾಗಿದೆ.

ಸೋನಿಯಾ ಗಾಂಧಿ, ಸಿಎಂ‌ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ‌‌. ಶಿವಕುಮಾರ್, ಯತೀಂದ್ರ ಸಿದ್ದರಾಮಯ್ಯ, ಕೆ.ಜೆ. ಜಾರ್ಜ್ ವಿರುದ್ಧ ಪೋಸ್ಟರ್ ವಾರ್ ನಡೆದಿದೆ. ಕಾಂಗ್ರೆಸ್ ಗ್ಯಾರಂಟಿಗಳ ಕುರಿತು ವ್ಯಂಗ್ಯಭರಿತ ಪೋಸ್ಟರ್ ರಚಿಸಲಾಗಿದೆ.

ಏನೆಲ್ಲ ಪೋಸ್ಟರ್‌ ಇದೆ?

ಈ ರೀತಿಯಾಗಿ ಕಾಂಗ್ರೆಸ್‌ ಸರ್ಕಾರ ಹಾಗೂ ಸಿಎಂ, ಡಿಸಿಎಂ ಆದಿಯಾಗಿ ಎಲ್ಲರ ವಿರುದ್ಧವೂ ಪೋಸ್ಟರ್‌ ಮಾಡಿ ರಾತ್ರೋರಾತ್ರಿ ಸರ್ಕಾರಿ ಕಚೇರಿ, ಕಟ್ಟಡಗಳಲ್ಲಿ ಅಂಟಿಸಲಾಗಿದೆ ಎನ್ನಲಾಗಿದೆ.

ಅಪ್ಪಾ ಜಿ ಪೋಸ್ಟರ್‌ ಬಿಟ್ಟಿರುವ ಬಿಜೆಪಿ

ಇನ್ನು ಸೋಷಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ರಾಜ್ಯ ಬಿಜೆಪಿ ಘಟಕವು, “ಅಪ್ಪಾ ಜಿ” ಎಂಬ ಪೋಸ್ಟರ್‌ ಮೂಲಕ ಕಾಂಗ್ರೆಸ್‌ ಸರ್ಕಾರವನ್ನು ಟೀಕೆ ಮಾಡಿದೆ. ಇದರಲ್ಲಿ “ಒಬ್ಬರು ಕಲೆಕ್ಷನ್‌ ಮಾಸ್ಟರ್. ಇನ್ನೊಬ್ಬರು ಡೀಲ್‌ ಮಾಸ್ಟರ್. ಇದೇ #‌ATMSarkara ದ ಮ್ಯಾಟರ್!” ಎಂದು ಸಹ ಬರೆದುಕೊಂಡಿದೆ. ಜತೆಗೆ #ShadowCM, #CongressFailsKarnataka ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಹಾಕಲಾಗಿದೆ.

ವೈರಲ್‌ ಆಗಿದ್ದ ಶ್ಯಾಡೋ ಸಿಎಂ ಪೋಸ್ಟ್‌

ಬಿಜೆಪಿ ಹರಿಬಿಟ್ಟಿದ್ದ ಶ್ಯಾಡೋ ಸಿಎಂ ಪೋಸ್ಟ್‌ ಸಖತ್‌ ವೈರಲ್‌ ಆಗಿತ್ತು. ಶ್ಯಾಡೋ ಸಿಎಂ ಪೋಸ್ಟರ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಫೋಟೊವನ್ನು ಚಿಕ್ಕದಾಗಿ ಹಾಕಿ ಅವರ ನೆರಳನ್ನು ದೊಡ್ಡದು ಮಾಡಿ ಅದರಲ್ಲಿ ಯತೀಂದ್ರ ಸಿದ್ದರಾಮಯ್ಯ ಮೂಡುವಂತೆ ಮಾಡಿದ್ದಾರೆ. ಜತೆಗೆ ಆ ಫೋಟೊ ಒಳಗೆ ಸಿಎಂ ಸಿದ್ದರಾಮಯ್ಯ ಅವರ ಲೆಟರ್‌ ಹೆಡ್‌ ಇರುವ ಪತ್ರಗಳನ್ನು ಮಸುಕು ಮಸುಕಾಗಿ ಹಾಕಲಾಗಿದೆ. ಜತೆಗೆ “Shadow CM The Yathindra” ಎಂಬುದಾಗಿ ಬರೆಯಲಾಗಿದೆ. ಈ ಮೂಲಕ ಬಿಜೆಪಿಯು ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಕಾಲೆಳೆದಿತ್ತು. ಈಗ ಅಪ್ಪಾ ಜಿ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: Yathindra siddaramaiah : ಪರಿಷತ್‌ ಸ್ಥಾನವನ್ನೂ ಬಿಟ್ಟಿರುವ ಯತೀಂದ್ರ ಬಗ್ಗೆ ಮಾತನಾಡಬೇಡಿ ಎಂದ ಡಿಕೆಶಿ

ಏನಿದು ಪ್ರಕರಣ?

ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿದ್ದ ವೇಳೆ ಸಿದ್ದರಾಮಯ್ಯ ಅವರಿಂದ ಬಂದ ಫೋನ್‌ ಕರೆಗೆ ಉತ್ತರಿಸುವ ವೇಳೆ ಯತೀಂದ್ರ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಮುಂದೆಯೇ ತಾನು ನೀಡಿದ ಲಿಸ್ಟ್ ಬಗ್ಗೆ ಅವರು ತಂದೆಯ ಜತೆ ಮಾತುಕತೆ ನಡೆಸಿದ್ದರು. ಫೋನ್‌ ಮಾಡಿ ಮಾತನಾಡಿದ ಯತೀಂದ್ರ, ತಾನು ನೀಡಿದ ಲಿಸ್ಟ್​ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ವಿವೇಕಾನಂದರ ಹೆಸರು ಎತ್ತಿದ್ದು, ಇದಕ್ಕೆ ಯಾರು ಎಂದು ಯತೀಂದ್ರ ಅವರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಬೇರೊಂದು ಲಿಸ್ಟ್​ ನೀಡಿದ ಬಗ್ಗೆ ಅಸಮಾಧಾನಗೊಂಡ ಯತೀಂದ್ರ, ನಾನು ಕೊಟ್ಟಿರುವುದೇ ಐದು ಅಂತ ಹೇಳಿ ಮಹದೇವರಿಗೆ‌ ಫೋನ್ ನೀಡುವಂತೆ ಸಿದ್ದರಾಮಯ್ಯಗೆ ಸೂಚಿಸಿದ್ದರು. ಬಳಿಕ ಮಹದೇವ್ ಜತೆ ಮಾತನಾಡಿದ ಯತೀಂದ್ರ, ʼಮಹದೇವ್​ ಯಾಕೆ ಯಾವುದ್ಯಾವುದನ್ನೋ ಕೊಡುತ್ತಾ ಇದ್ದೀರಿ? ಮತ್ತೆ ಇದೆಲ್ಲ ಯಾರು ಕೊಡುತ್ತಿರೋದುʼ ಅಂತ ಪ್ರಶ್ನೆ ಮಾಡಿದ್ದಾರೆ. ʼಅದೆಲ್ಲ ಬೇಡ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟು ಮಾತ್ರ ಮಾಡಿʼ ಅಂತ ಯತೀಂದ್ರ ಅವರು ಮಹದೇವ ಅವರಿಗೆ ಸೂಚಿಸಿದ್ದರು. ಈ ವಿಡಿಯೊ ಈಗ ಪ್ರತಿಪಕ್ಷಗಳಿಗೆ ದೊಡ್ಡ ಅಸ್ತ್ರವಾಗಿದೆ.

ಈಗ ಸದ್ದು ಮಾಡುತ್ತಿದೆ ಇನ್ಸ್‌ಪೆಕ್ಟರ್‌ ವರ್ಗಾವಣೆ

ಪೊಲೀಸ್ ಇಲಾಖೆಯಲ್ಲಿ ಮತ್ತೆ 71 ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ (transfer) ಮಾಡಲಾಗಿದ್ದು, ಇದರಲ್ಲಿ ವಿವೇಕಾನಂದ ಎಂಬವರನ್ನು ಮೈಸೂರು ನಗರದ ವಿವಿ ಪುರಂ ಪೊಲೀಸ್‌ ಠಾಣೆಗೆ ವರ್ಗಾಯಿಸಿ ಆದೇಶ ನೀಡಲಾಗಿದೆ. ಇದು ಈಗ ಯತೀಂದ್ರ ವಿಡಿಯೊ ವಿವಾದಕ್ಕೆ ಮತ್ತಷ್ಟು ಪುಷ್ಟೀಕರಿಸುವಂತೆ ಮಾಡಿದೆ. ಆರೋಪ-ಪ್ರತ್ಯಾರೋಪಕ್ಕೂ ಕಾರಣವಾಗಿದೆ.

ವೀಡಿಯೊ ಸಂಭಾಷಣೆಯಲ್ಲಿ ವಿವೇಕಾನಂದ ಎಂಬ ಹೆಸರನ್ನು ಯತೀಂದ್ರ (yathindra siddaramiah) ಪ್ರಸ್ತಾಪ ಮಾಡಿದ್ದಕ್ಕೂ ಇದೀಗ ಅದೇ ವಿವೇಕಾನಂದ ಅನ್ನೋ ಹೆಸರಿನ ಇನ್ಸ್‌ಪೆಕ್ಟರ್‌ ವರ್ಗಾವಣೆಯಾದದ್ದಕ್ಕೂ ತಾಳೆಯಾಗಿದೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ವರ್ಗಾವಣೆ ದಂಧೆ ಆರೋಪ, ಪಾರದರ್ಶಕ ತನಿಖೆ ಅಗತ್ಯ

ರಾಜ್ಯ ಗುಪ್ತಚರ ಇಲಾಖೆಯ ಆದೇಶದಲ್ಲಿದ್ದ ವಿವೇಕಾನಂದ ಮೈಸೂರಿಗೆ ವರ್ಗಾವಣೆಯಾಗಿದ್ದಾರೆ. ಜತೆಗೆ, ಮೈಸೂರು ಜಿಲ್ಲೆಯಲ್ಲಿ ನಾಲ್ಕು ಮಂದಿ ಇನ್ಸ್‌ಪೆಕ್ಟರ್‌ಗಳ ವರ್ಗವಾಗಿದೆ. ಅದರಲ್ಲಿ ವಿವೇಕಾನಂದ ಅವರೂ ಒಬ್ಬರು. ʼʼನಾನು ಹೇಳಿರೋ ನಾಲ್ಕು ಮಾತ್ರ ಮಾಡಿʼʼ ಎಂದು ಮಹದೇವ್‌ಗೆ ಯತೀಂದ್ರ ಫೋನ್‌ನಲ್ಲಿ ಆದೇಶಿಸಿದ್ದರು. ಇದೀಗ ನಾಲ್ಕು ಮಂದಿಯ ವರ್ಗವಾಗಿರುವುದು, ಈ ಮಾತಿಗೆ ಇನ್ನಷ್ಟು ಪುಷ್ಟಿ ತುಂಬುವಂತಿದೆ. ಯತೀಂದ್ರ ಮಾತನಾಡಿರೋ ವಿವೇಕಾನಂದ ಇವರೇನಾ, ಆ ʼನಾಲ್ಕುʼ ಈ ನಾಲ್ಕೇನಾ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದ್ದು, ಸರ್ಕಾರದ ವಿರುದ್ಧದ ಆರೋಪಪಟ್ಟಿಯನ್ನು ಇನ್ನಷ್ಟು ಬಿಗಿ ಮಾಡಲು ಪ್ರತಿಪಕ್ಷಗಳ ನಾಯಕರು ಮುಂದಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಜತೆಗೆ ಬಿಜೆಪಿ ಸೋಷಿಯಲ್‌ ಮೀಡಿಯಾ ಘಟಕವು ಒಂದೊಂದೇ ಪೋಸ್ಟ್‌ಗಳನ್ನು ಅಪ್ಲೋಡ್‌ ಮಾಡುತ್ತಾ ಬರುತ್ತಿದೆ.

Exit mobile version