Site icon Vistara News

BJP Karnataka: ನನ್ನ ಬಾಯಿ ಮುಚ್ಚಿಸಲು ಆಗಲ್ಲ; ಉಪ ನಾಯಕನಿಗೆ ಪವರ್‌ ಇಲ್ಲ: ಬಿಜೆಪಿ ವಿರುದ್ಧ ಯತ್ನಾಳ್‌ ಕಿಡಿ

MLA Basanagouda Patil Yatnal

ಬೆಳಗಾವಿ: ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ವಿರೋಧ ಪಕ್ಷದ ಉಪ ನಾಯಕನಿಗೆ ಏನೂ ಪವರ್ ಇರಲ್ಲ. ಏನೋ ಕೊಡಬೇಕೆಂದು ಕೊಡುತ್ತಿರಬೇಕು ಅಷ್ಟೇ. ಎಲ್ಲ ತೀರ್ಮಾನಗಳನ್ನು ಪ್ರತಿಪಕ್ಷ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರು ತೆಗೆದುಕೊಳ್ತಾರೆ. ಉಪನಾಯಕ ಅಂದ್ರೆ ಪ್ರತಿಪಕ್ಷ ನಾಯಕನ ಪಕ್ಕದಲ್ಲಿ ಕೂರಬೇಕು ಅಷ್ಟೇ. ಈಗ ಡೆಪ್ಯೂಟಿ ಸ್ಪೀಕರ್ (Deputy Speaker) ಇಲ್ವಾ..? ಅದೇ ರೀತಿ ಸುಮ್ನೆ ಕೂರಬೇಕು ಅಷ್ಟೇ ಎಂದು ಮಾಜಿ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (MLA Basanagouda Patil Yatnal) ಅವರು ಶಾಸಕ ಅರವಿಂದ್‌ ಬೆಲ್ಲದ್‌ (MLA Arvind Bellad) ಅವರನ್ನು ಉಪ ನಾಯಕ ಮಾಡುವ ಪ್ರಸ್ತಾಪದ ಬಗ್ಗೆ ಈ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿ (BJP Karnataka) ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಪ್ರತಿ ಪಕ್ಷ ಉಪ ನಾಯಕನಿಗೆ ಯಾವುದೇ ರೀತಿಯಾದಂತಹ ಅಧಿಕಾರ ಇಲ್ಲ. ಈಗ ಸ್ಪೀಕರ್‌ ಇದ್ದಾಗ ಉಪ ಸಭಾಧ್ಯಕ್ಷರಿಗೆ ಪೀಠದಲ್ಲಿ ಕೂರಲು ಬಿಡುತ್ತಾರೆಯೇ? ಇದು ಕೂಡಾ ಹಾಗೇ. ನಿನ್ನೆ ಅರ್ಧ ಗಂಟೆ ಡೆಪ್ಯುಟಿ ಸ್ಪೀಕರ್‌ಗೆ ಮೇಲೆ ಕೂರಲು ಅವಕಾಶ ಕೊಟ್ರು ಅಷ್ಟೇ ಎಂದು ಹೇಳಿದರು.

ನಾನಾಗಿಯೇ ದೆಹಲಿಗೆ ಹೋಗುವುದಿಲ್ಲ

ನಾನಾಗಿಯೇ ದೆಹಲಿಗೆ ಹೋಗುವುದಿಲ್ಲ. ದೆಹಲಿಯಿಂದ ಕರೆ ಬಂದ ಮೇಲೆ ಹೋಗುತ್ತೇನೆ. ನಿನ್ನೆ ಸೂಚನೆ ಕೊಟ್ಟಿದ್ದಾರೆ. ಯಾವಾಗ ಕರೆ ಬರುತ್ತದೆಯೋ ಆಗ ಹೋಗುತ್ತೇನೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಅವರಿಗೂ ಹೇಳಿರಬಹುದು ಎಂದು ಬಸವನಗೌಡ ಪಾಟೀಲ್ ಯತ್ನಾಳ ಹೇಳಿದರು.

ದೆಹಲಿಗೆ ಹೋಗುವುದು ನಿಶ್ಚಿತ, ಖಚಿತ. ಆದರೆ, ಉಚಿತ ಮಾತ್ರ ಅಲ್ಲ. ವಿಮಾನಯಾನಕ್ಕೆ ಹಣ ಕೊಟ್ಟು, ಟಿಕೆಟ್ ಪಡೆದು ಹೋಗಬೇಕು. ಕರ್ನಾಟಕದಲ್ಲಿ ಇಬ್ಬರು ಮಹಾನುಭಾವರು ಇದ್ದಾರೆ. ಅವರಿಂದ ಕರ್ನಾಟಕದಲ್ಲಿ ಈ ಪರಿಸ್ಥಿತಿ ಬಂದಿದೆ. ಇಬ್ಬರು ಸಿಂಗ್‌ಗಳಿಂದ ಈ ನಿರ್ಧಾರ ಮಾಡಿದ್ದೇನೆ. ದೆಹಲಿಯ ಒಬ್ಬರು, ಕರ್ನಾಟಕ ಒಬ್ಬರು ಇದ್ದಾರೆ ಎಂದು ಸ್ವಪಕ್ಷೀಯರ ವಿರುದ್ಧ ಬಸನಗೌಡ ಪಾಟೀಲ್‌ ಯತ್ನಾಳ್‌ ಪರೋಕ್ಷ ಸಂದೇಶವನ್ನು ನೀಡಿದ್ದಾರೆ.

ದೆಹಲಿಗೆ ಹೋಗುವರೇ ಬಿಜೆಪಿ ಅತೃಪ್ತ ನಾಯಕರು?

ಸಿದ್ಧಗಂಗಾ ಮಠದಲ್ಲಿ ಬುಧವಾರ ಗುರುಭವನ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಮಾಜಿ ಸಚಿವ ವಿ. ಸೋಮಣ್ಣ ಅವರು ಕೆಲವು ಅಸಮಾಧಾನಿತ ಶಾಸಕರೊಂದಿಗೆ ದೆಹಲಿಗೆ ತೆರಳಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿತ್ತು. ಈ ಬಗ್ಗೆ ಮಾಜಿ ಸಚಿವ ಬಸನಗೌಡ ಪಾಟೀಲ್‌ ಅವರನ್ನು ಪ್ರಶ್ನೆ ಮಾಡಿದಾಗ, ತಾವು ದೆಹಲಿಗೆ ಹೋಗುವುದು ಖಚಿತ. ಆದರೆ, ಯಾವಾಗ ಎಂಬುದು ಇನ್ನೂ ನಿಗದಿಯಾಗಿಲ್ಲ. ಅಲ್ಲದೆ, ಹೈಕಮಾಂಡ್‌ನವರು ಕರೆಯಬೇಕು. ನಾನು ಹೋಗುವುದಂತೂ ಖಚಿತ ಎಂದು ಹೇಳಿದ್ದಾರೆ. ಹೀಗಾಗಿ ಬಿಜೆಪಿ ಹೈಕಮಾಂಡ್‌ ನಾಯಕರನ್ನು ಭೇಟಿ ಮಾಡಿ ಅವರಿಗೆ ರಾಜ್ಯ ಬಿಜೆಪಿಯಲ್ಲಿ ತಮಗಿರುವ ಅಸಮಾಧಾನದ ಬಗ್ಗೆ ಇಂಚಿಂಚು ಮಾಹಿತಿಯನ್ನು ನೀಡಲು ಮುಂದಾಗಿದ್ದಾರೆನ್ನಲಾಗಿದೆ.

ಇದನ್ನೂ ಓದಿ: CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

ಇನ್ನು ಈ ನಡುವೆ ವಿ ಸೋಮಣ್ಣ, ರಮೇಶ್ ಜಾರಕಿಹೊಳಿ ಹಾಗೂ ಅರವಿಂದ್ ಬೆಲ್ಲದ್ ಅವರು ದೆಹಲಿಗೆ ಹೋಗುತ್ತಾರೆಂದು ಹೇಳಲಾಗಿದೆ. ಸೋಮಣ್ಣ ಹೋಗುವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೆ, ಉಳಿದವರ ಬಗ್ಗೆ ಮಾತ್ರ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

Exit mobile version