Site icon Vistara News

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

CM Siddaramaiah and Tanveer

ಬೆಂಗಳೂರು: ಹುಬ್ಬಳ್ಳಿ‌ಯಲ್ಲಿ ಸೋಮವಾರ ನಡೆದಿದ್ದ‌ ಮುಸ್ಲಿಂ ಸಮಾವೇಶದಲ್ಲಿ (Muslim conference) ಸಿಎಂ‌ ಸಿದ್ದರಾಮಯ್ಯ ‌(CM Siddaramaiah) ಐಸಿಸ್‌ ಸಂಘಟನೆ (ISIS Terror) ಜತೆ ಸಂಪರ್ಕ ಹೊಂದಿರುವ ವ್ಯಕ್ತಿ ಜತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದ ಮಾಜಿ ಸಚಿವ, ‌ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ (MLA Basanagouda Patil Yatnal) ಈಗ ಸಂಬಂಧ ಸರಣಿ ಫೋಟೊಗಳನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ಇಂಥ ಭಯೋತ್ಪಾದನೆ ಪರ ಇರುವ ವ್ಯಕ್ತಿಯ ಹಿನ್ನೆಲೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿದಿದೆಯೇ? ತನ್ವೀರ್ ಪೀರಾ ಅವರ ಸೌದಿ ಮತ್ತು ಮಧ್ಯಪ್ರಾಚ್ಯ ಭೇಟಿ ಸೇರಿ ಎಲ್ಲವನ್ನೂ ನಾನು ಬಹಿರಂಗಪಡಿಸುತ್ತೇನೆ ಎಂದು ಟ್ವೀಟ್‌ ಮೂಲಕ ಕಿಡಿಕಾರಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಸರಣಿ ಟ್ವೀಟ್‌ ಮಾಡಿರುವ ಬಸನಗೌಡ ಪಾಟೀಲ್‌ ಯತ್ನಾಳ್‌, ತಾವು ಸಿಎಂ ಸಿದ್ದರಾಮಯ್ಯ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಜತೆಗೆ ಆ ವ್ಯಕ್ತಿ ಆಗಾಗ ಕಾಣಿಸಿಕೊಂಡಿರುವ ಫೋಟೊವನ್ನು ಟ್ವೀಟ್‌ ಮಾಡಿದ್ದಾರೆ. ಅದರಲ್ಲಿ ಸಂಶಯಾಸ್ಪದ ವ್ಯಕ್ತಿ ಚಿತ್ರಕ್ಕೆ ಮಾರ್ಕ್‌ ಮಾಡಿದ್ದಾರೆ.

ಯತ್ನಾಳ್‌ ಟ್ವೀಟ್‌ನಲ್ಲೇನಿದೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ಐಸಿಸ್ ಬೆಂಬಲಿಗರು ಮತ್ತು ಭಯೋತ್ಪಾದಕತೆಯ ಪರ ಇರುವವರೊಂದಿಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ.

ತನ್ವೀರ್ ಪೀರಾ ಎಂಬ ವ್ಯಕ್ತಿಯು ಮಧ್ಯಪ್ರಾಚ್ಯದಾದ್ಯಂತದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಭಯೋತ್ಪಾದಕತೆಯ ಪರ ಇರುವವನು.

ಇಲ್ಲಿ ಲಗತ್ತಿಸಲಾದ ಚಿತ್ರಗಳು ತನ್ವೀರ್ ಪೀರಾ ಇತ್ತೀಚೆಗೆ ಮಧ್ಯಪ್ರಾಚ್ಯಕ್ಕೆ ಭೇಟಿ ನೀಡಿದಾಗ ಭಯೋತ್ಪಾದಕತೆಯಲ್ಲಿ ಒಲವು ಹೊಂದಿರುವ ಮತ್ತು ತೀವ್ರಗಾಮಿ ಇಸ್ಲಾಮಿಕ್ ಕಾರ್ಯಕರ್ತರನ್ನು ಭೇಟಿಯಾಗಿರುವುದಾಗಿದೆ.

ತನ್ವೀರ್ ಪೀರಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದಾರೆ. ಭಯೋತ್ಪಾದಕತೆ ಚಿಂತನೆಯುಳ್ಳ ಈ ವ್ಯಕ್ತಿಯ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿದಿದೆಯೇ?

ತನ್ವೀರ್ ಪೀರಾ ಎಂಬ ವ್ಯಕ್ತಿಯ ಸೌದಿ ಮತ್ತು ಮಧ್ಯಪ್ರಾಚ್ಯ ಭೇಟು ಹಿಂದಿನ ಎಲ್ಲ ವಿವರಗಳನ್ನು ಬಹಿರಂಗಪಡಿಸುತ್ತೇನೆ.

ತನಿಖೆ ನಡೆಸಲು ಎನ್‌ಐಎಗೆ ಒತ್ತಾಯ

ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಯಲ್ಲಿ ಐಸಿಸ್ ಬೆಂಬಲಿಗರು ಮತ್ತು ಉಗ್ರರೊಂದಿಗೆ ಸಂವಾದ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದೆ. ಅದಕ್ಕೆ ಈ ದಾಖಲೆಗಳನ್ನು ಇಟ್ಟಿದ್ದೇನೆ. ತನ್ವೀರ್ ಪೀರಾ ಖಾತೆಗಳು ಮತ್ತು ಅವರ ಇತ್ತೀಚಿನ ಮಧ್ಯಪ್ರಾಚ್ಯ ಭೇಟಿಗಳ ಬಗ್ಗೆ ತನಿಖೆ ನಡೆಸುವಂತೆ ನಾನು ಗುಪ್ತಚರ ಸಂಸ್ಥೆಗಳು ಮತ್ತು ಎನ್‌ಐಎಗೆ ಈ ಮೂಲಕ ಒತ್ತಾಯಿಸುತ್ತೇನೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ಏನಿದು ವಿವಾದ?

ಹುಬ್ಬಳ್ಳಿ‌ಯಲ್ಲಿ ಸೋಮವಾರ (ಡಿ.4) ನಡೆದಿದ್ದ‌ ಮುಸ್ಲಿಂ ಸಮಾವೇಶದಲ್ಲಿ ಸಿಎಂ‌ ಸಿದ್ದರಾಮಯ್ಯ ಭಾಗವಹಿಸಿದ್ದರು. ಇಲ್ಲಿ ಅವರು ಮುಸ್ಲಿಂ ಸಮುದಾಯದ ಪರವಾಗಿ ಆಡಿದ ಮಾತುಗಳು ಸಾಕಷ್ಟು ವಿವಾದವನ್ನು ಹುಟ್ಟುಹಾಕಿತ್ತು. ಮುಸ್ಲಿಂ ಸಮುದಾಯದ ರಕ್ಷಣೆ ಮಾಡುವುದಾಗಿ ಘೋಷಿಸಿದ್ದಲ್ದದೆ, 10 ಸಾವಿರ ಕೋಟಿ ರೂಪಾಯಿಯನ್ನು ಅಲ್ಪಸಂಖ್ಯಾತರಿಗೆ ನೀಡಲು ಉದ್ದೇಶಸಲಾಗಿದೆ ಎಂಬ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಒಂದು ಸಮುದಾಯದ ಓಲೈಕೆಗೆ ಸಿಎಂ ಮುಂದಾಗಿದ್ದಾರೆ ಎಂದು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ ಕಿಡಿಕಾರಿತ್ತು. ಅಲ್ಲದೆ, ಸದನದಲ್ಲಿ ಸಹ ಈ ವಿಚಾರ ಪ್ರಸ್ತಾಪವಾಗಿದ್ದು, ಸಿಎಂ ಉತ್ತರಕ್ಕಾಗಿ ಬಿಜೆಪಿ ಪಟ್ಟು ಹಿಡಿದು ಕುಳಿತಿದೆ.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ರಾಜಕೀಯ ‌ಲಾಭಕ್ಕೆ ಕೆಲವರು ಧರ್ಮಗಳ ನಡುವೆ ಸಂಘರ್ಷ ಉಂಟು ಮಾಡುತ್ತಾರೆ. ಇದರಿಂದ ತಾತ್ಕಾಲಿಕ ಲಾಭ ಸಿಗಬಹುದು. ಪರಸ್ಪರ ಪ್ರೀತಿ ಇರಬೇಕಾದರೆ ನಾವು ಮನುಷ್ಯತ್ವದಿಂದ ಇರಬೇಕು. ಈ ವರ್ಷ ನಾಲ್ಕು ಸಾವಿರ ಕೋಟಿ ಅನುದಾನ ಅಲ್ಪಸಂಖ್ಯಾತರ ಇಲಾಖೆಗೆ ಕೊಟ್ಟಿದ್ದೇವೆ. 10 ಸಾವಿರ ಕೋಟಿ ಹಣ ಅಲ್ಪಸಂಖ್ಯಾತ ಇಲಾಖೆಗೆ ಖರ್ಚು ಮಾಡಬೇಕು ಅನ್ನೋದು ನಮ್ಮ ಉದ್ದೇಶ. ನಾನು ಕೊಟ್ಟಿದ್ದ ಹಣ ಬಿಜೆಪಿ ಸರ್ಕಾರ ಕಡಿಮೆ ಮಾಡಿತ್ತು. ನಿಮ್ಮ ಧಾರ್ಮಿಕ ಕೇಂದ್ರಗಳಿಗೆ ಅನುದಾನ ಬೇಕು. ದೇಶದ ಸಂಪತ್ತಲ್ಲಿ ನಿಮಗೆ ಪಾಲು ಸಿಗಬೇಕು. ದೇಶದ ಸಂಪತ್ತು ನಿಮಗೂ ಹಂಚುತ್ತೇನೆ. ನಿಮಗೆ ಅನ್ಯಾಯ ಮಾಡೋಕೆ ನಾನು ಬಿಡಲ್ಲ. ನಿಮ್ಮನ್ನು ನಾನು ರಕ್ಷಣೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಇದನ್ನೂ ಓದಿ: Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

ಗಂಭೀರ ಸ್ವರೂಪ ಪಡೆದ ಯತ್ನಾಳ್‌ ಆರೋಪ

ಈ ಕಾರ್ಯಕ್ರಮದಲ್ಲಿ ಮೌಲ್ವಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಅವರ ಪಕ್ಕದಲ್ಲಿ ಐಸಿಸ್‌ ಉಗ್ರ ಸಂಘಟನೆಗೆ ಸೇರಿದ ವ್ಯಕ್ತಿಯೊಬ್ಬ ಇದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನೇರ ಆರೋಪವನ್ನು ಮಾಡಿದ್ದಾರೆ. ಹೀಗಾಗಿ ಈ ವಿವಾದ ಈಗ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ.

Exit mobile version