Site icon Vistara News

JDS Politics : ಬಿಜೆಪಿ-ಜೆಡಿಎಸ್‌ ಮೈತ್ರಿ ನಿಜ; ಸೀಟು ಹಂಚಿಕೆಯನ್ನು ಮೋದಿ-ಎಚ್‌ಡಿಕೆ ಡಿಸೈಡ್‌ ಮಾಡ್ತಾರೆ: ಎಚ್.ಡಿ. ದೇವೇಗೌಡ

PM Narendra Modi and HD Devegowda

ಬೆಂಗಳೂರು: ಲೋಕಸಭಾ ಚುನಾವಣೆ 2024 (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ (BJP JDS alliance) ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister HD Deve Gowda) ಒಪ್ಪಿಕೊಂಡಿದ್ದಾರೆ. ಮಾತುಕತೆ ಆಗಿರುವುದು ನಿಜ. ಆದರೆ, ಸೀಟಿನ ಬಗ್ಗೆ ನಿರ್ಧಾರ ಆಗಿಲ್ಲ. ನಾವು ಅದರ ಬಗ್ಗೆ ಏನೂ ಕೇಳಿಲ್ಲ. ಅದನ್ನು ಎಚ್.ಡಿ. ಕುಮಾರಸ್ವಾಮಿ (HD Kumaraswamy) ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು. ಜತೆಗೆ ಜೆಡಿಎಸ್‌ಗೆ ನಾಲ್ಕು ಸೀಟಿನ ಹಂಚಿಕೆಯಾಗಿದೆ ಎಂಬ ಮಾತಿಗೆ ತೀಕ್ಷ್ಣ ಸಂದೇಶವನ್ನು ರವಾನೆ ಮಾಡಿದ್ದು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಕೋಲಾರದಲ್ಲಿ ಬಿಜೆಪಿ ಮತಗಳು ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ಜೆಡಿಎಸ್‌ ತಂತ್ರಗಾರಿಕೆ (JDS Politics) ಪ್ರಾರಂಭವಾಗಿದೆ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿದ ಎಚ್‌.ಡಿ. ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ (PM Narendra Modi), ಕೇಂದ್ರ ಗೃಹ ಸಚಿವ ಅಮಿತ್ ಶಾ ನನಗೆ ಗೌರವ ಕೊಡುತ್ತಾರೆ. ಅವರಿಗೆ ನನ್ನ ನಡವಳಿಕೆ ಗೊತ್ತಿದೆ. ನನಗೆ ಇಷ್ಟು ಸೀಟು ಕೊಡಿ ಅಂತ ಕೇಳಿಲ್ಲ. ಪ್ರತಿ ಕ್ಷೇತ್ರದ ಬಗ್ಗೆ ವಿವರಿಸಿದ್ದೇನೆ. ಸೀಟು ಬಗ್ಗೆ ಕುಮಾರಸ್ವಾಮಿ ಕುಳಿತು ಮಾತನಾಡುತ್ತಾರೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Lok Sabha Election 2024 : ಸೀಟು ಹಂಚಿಕೆ ಚರ್ಚೆ ಆಗಿಲ್ಲ; ಸುಮಲತಾ ʼಅತಂತ್ರʼದ ಬಗ್ಗೆ ಎಚ್‌ಡಿಕೆ ಹೇಳಿದ್ದೇನು?

ಬಿಜೆಪಿಯವರು ಎಷ್ಟು ಕ್ಷೇತ್ರ ಕೊಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ ಸೀಟು ಫೈನಲ್ ಮಾಡುತ್ತಾರೆ. ಸೀಟು ಅಂತಿಮವಾದ ಬಳಿಕ‌ ಎಲ್ಲ ಕ್ಷೇತ್ರಕ್ಕೂ ಹೋಗಿ ಪ್ರಚಾರ ಮಾಡುತ್ತೇನೆ. ವೀಲ್‌ಚೇರ್‌ನಲ್ಲಿ ಹೋಗಿ ‌ಪ್ರಚಾರ ಮಾಡುತ್ತೇನೆ ಎಂದು ಎಚ್.ಡಿ. ದೇವೇಗೌಡ ಅವರು ಹೇಳುವ ಮೂಲಕ ಲೋಕಸಭೆ ಚುನಾವಣಾ ಪ್ರಚಾರಕ್ಕೆ ಧುಮುಕುವುದಾಗಿ ಘೋಷಣೆ ಮಾಡಿದರು.

ಬಿಜೆಪಿಗೆ ತೀಕ್ಷ್ಣ ತಿವಿತ

ಹಾಸನದಲ್ಲಿ, ಮಂಡ್ಯದಲ್ಲಿ, ರಾಮನಗರದಲ್ಲಿ, ಕೋಲಾರದಲ್ಲಿ, ತುಮಕೂರಿನಲ್ಲಿ ಬಿಜೆಪಿ ಮತಗಳು ಇಲ್ಲವಾ? ಅದೇ ರೀತಿ ಜೆಡಿಎಸ್ ಏನೂ ಇಲ್ಲ ಅಂತ ಬಿಜೆಪಿ ಅವರು ಭಾವಿಸಬಾರದು. ಇದನ್ನು ಬಿಜೆಪಿ ಮೀಟಿಂಗ್‌ನಲ್ಲಿ ಹೇಳಿದ್ದೇನೆ. ರಾಯಚೂರು, ಬೀದರ್, ವಿಜಯಪುರದಲ್ಲಿ ನಮ್ಮ ಬೆಂಬಲ ಇದ್ದರೆ ಮಾತ್ರ ಬಿಜೆಪಿ‌‌ ಗೆಲ್ಲುತ್ತದೆ ಅಂತ ಹೇಳಿದ್ದೇನೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 2.5 ಲಕ್ಷ ಮತಗಳು ನಮಗೆ ಇವೆ. ಈ ವಿಷಯವನ್ನು ಕುಮಾರಸ್ವಾಮಿ ಅಂತಿಮವಾಗಿ ಚರ್ಚೆ ಮಾಡ್ತಾರೆ. ಎಷ್ಟು ಸೀಟು ಅಂತ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಕದ್ದು ಮುಚ್ಚಿ ಏನೂ ಮಾಡುವುದಿಲ್ಲ ಎಂದು ಎಚ್.ಡಿ. ದೇವೇಗೌಡ ಹೇಳಿದರು.

ಇದನ್ನೂ ಓದಿ: ‌CM Siddaramaiah : ಸಿದ್ದರಾಮಯ್ಯ ವಿರುದ್ಧ ಅಹಿಂದ ಪಾಲಿಟಿಕ್ಸ್; ಸೆಡ್ಡು ಹೊಡೆದ ಬಿ.ಕೆ. ಹರಿಪ್ರಸಾದ್!

ಪಕ್ಷ ಉಳಿಸಿ; ದೇವೇಗೌಡ ಭಾವುಕ

ನಾವ್ಯಾರೂ ದೇವರನ್ನು ಕಣ್ಣಿಂದ ನೋಡಿಲ್ಲ. ಆದರೆ, ಈ ಚುನಾವಣೆಯಲ್ಲಿ ಜೆಡಿಎಸ್ ಉಳಿಯುತ್ತದೆ, ಬೆಳೆಯುತ್ತದೆ. ಕುಮಾರಸ್ವಾಮಿ ನಾಯಕತ್ವದಲ್ಲಿ ಮತ್ತೆ ಪಕ್ಷ ಬೆಳೆಯುತ್ತದೆ. ನೀವು ಕಾರ್ಯಕರ್ತರು ನಮ್ಮ ಪಕ್ಷದ ಶಕ್ತಿ. ನೀವು ಪಕ್ಷ ಉಳಿಸಬೇಕು ಎಂದು ಭಾವುಕರಾಗಿ ಎಚ್.ಡಿ. ದೇವೇಗೌಡ ಮಾತನಾಡಿದರು.

Exit mobile version