Site icon Vistara News

Karnataka Bandh : ನಾಳೆ ಬಂದ್‌ ಮಾಡಿದ್ರೆ ಹುಷಾರ್‌ ಎಂದ ಪರಮೇಶ್ವರ್; ಹೋರಾಟ ಹತ್ತಿಕ್ಕಲು ಮುಂದಾಯಿತಾ ಸರ್ಕಾರ?

Karnataka Bandh Parameshwara warns of bandh tomorrow

ಬೆಂಗಳೂರು: ಶುಕ್ರವಾರ (ಸೆಪ್ಟೆಂಬರ್‌ 28) ಕರ್ನಾಟಕ ಬಂದ್ (Karnataka Bandh) ಮಾಡುವವರಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr G Parameshwara) ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ. ಪ್ರತಿಭಟನೆ ಮಾಡುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಬಂದ್‌ಗೆ ಅವಕಾಶ ಇಲ್ಲ. ಯಾವ ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿದೆಯೋ ಅವರಿಗೆ ತಿಳಿಸುತ್ತಿದ್ದೇನೆ ಎಂದು ವಾರ್ನಿಂಗ್‌ ನೀಡಿದ್ದಾರೆ. ಈ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಜನರ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಇದು ಸರ್ವಾಧಿಕಾರಿ ಧೋರಣೆ (Authoritarian attitude) ಎಂಬ ಆಕ್ಷೇಪಗಳು ವ್ಯಕ್ತವಾಗಿವೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಯನ್ನು ಪ್ರತಿಭಟಿಸಿ (Cauvery Water dispute) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery water Management Authority) ಹಾಗೂ ಸುಪ್ರೀಂಕೋರ್ಟ್‌ (Supreme court) ಮುಂದೆ ನ್ಯಾಯದ ಹಕ್ಕೊತ್ತಾಯ ಮಂಡಿಸಿ ನಡೆಯಲಿರುವ ಸೆ. 29ರ ಕರ್ನಾಟಕ ಬಂದ್‌ಗೆ (Karnataka Bandh) ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಈ ಸಂಬಂಧ ಕರ್ನಾಟಕದಾದ್ಯಂತ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆಗಳು ಸಿದ್ಧವಾಗಿವೆ.

ಇದನ್ನೂ ಓದಿ: Bangalore Traffic : ಬೆಂಗಳೂರಿನಲ್ಲಿ ಬುಧವಾರ ಸಂಜೆ ಭಯಾನಕ ಟ್ರಾಫಿಕ್‌ ಜಾಮ್‌ ಉಂಟಾಗಿದ್ದೇಕೆ?

ವಾಟಾಳ್‌ ನಾಗರಾಜ್‌ ನೇತೃತ್ವದ ಕನ್ನಡ ಸಂಘಟನೆಗಳ ಒಕ್ಕೂಟ ರಾಜ್ಯದಲ್ಲಿ ಪ್ರಮುಖ ಹೆದ್ದಾರಿಗಳನ್ನು ಬಂದ್‌ ಮಾಡಲು ಪ್ಲ್ಯಾನ್‌ ಮಾಡುತ್ತಿದೆ. ರಾಜ್ಯಾದ್ಯಂತ ರಸ್ತೆಗಳನ್ನು ಪ್ರಧಾನವಾಗಿ ಟಾರ್ಗೆಟ್‌ ಮಾಡಲು ಒಕ್ಕೂಟದ ಸಂಘಟನೆಗಳು ಯೋಚಿಸಿವೆ. ಒಂದು ವೇಳೆ ಇದು ಸಕ್ಸಸ್‌ ಆದರೆ, ಹೆದ್ದಾರಿಗಳು ದಿನದ ಬಹುಕಾಲ ಬಂದ್‌ ಆಗಲಿವೆ. ಜತೆಗೆ ಅಂಗಡಿ-ಮುಂಗಟ್ಟುಗಳನ್ನು ಬಂದ್‌ ಮಾಡಿಸುವ ಚಿಂತನೆಯಲ್ಲಿ ಸಂಘಟನೆಗಳು ಇವೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗ ಪ್ರತಿಭಟನಾಕಾರರು ಹಾಗೂ ಸಂಘಟನೆಗಳ ಪ್ರಮುಖರಿಗೆ ಖಡಕ್‌ ವಾರ್ನಿಂಗ್‌ ನೀಡಿದೆ.

ಏನು ಕ್ರಮ ಕೈಗೊಳ್ಳಬೇಕೆಂದು ಸರ್ಕಾರ

ಯಾವುದೇ ಬಂದ್ ಮಾಡುವಂತಿಲ್ಲ ಎಂದು ಕೋರ್ಟ್ ಕೂಡ ಹೇಳಿದೆ. ಇದನ್ನು ಮೀರಿ ಬಂದ್ ಮಾಡಿದರೆ ಕಾನೂನಾತ್ಮಕ ಕ್ರಮವನ್ನು ತೆಗೆದುಕೊಳ್ಳಬೇಕಾಗಬಹುದು. ಯಾವ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ನಿರ್ದೇಶನ ಕೊಡುವ ಅಗತ್ಯ ಇಲ್ಲ. ಪೊಲೀಸರಿಗೆ ಯಾವ ಕಾನೂನಾತ್ಮಕ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬುದು ಚೆನ್ನಾಗಿ ಗೊತ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಖಡಕ್‌ ಎಚ್ಚರಿಕೆಯನ್ನು ನೀಡಿದ್ದಾರೆ.

ಮೊನ್ನೆಯಷ್ಟೇ ಬಂದ್ ಮಾಡಿ 1500ರಿಂದ 2000 ಕೋಟಿ ರೂಪಾಯಿ ನಷ್ಟ ಆಗಿದೆ. ಈಗ ಮತ್ತೆ ಬಂದ್ ಮಾಡಿದರೆ ಆರ್ಥಿಕ ಸಮಸ್ಯೆ ಆಗಲಿದೆ. ಮೊದಲೇ ಮಳೆ ಇಲ್ಲದ ಕಾರಣ ಸಮಸ್ಯೆ ಉಂಟಾಗಿದೆ. ಇದರ ನಡುವೆ ಬಂದ್ ಮಾಡಿದರೆ ಇನ್ನಷ್ಟು ಸಮಸ್ಯೆ ಆಗಲಿದೆ. ಇದನ್ನೆಲ್ಲ ಸಂಘಟನೆಯವರು ನೋಡಬೇಕಲ್ಲವೇ? ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು, ಪ್ರತಿಭಟನೆ ಮಾಡಲಿ. ಆದರೆ ಬಂದ್ ಮಾಡಿದರೆ ಕಾನೂನು ಕ್ರಮ ಆಗಲಿದೆ ಎಂದು ಹೋರಾಟಗಾರರಿಗೆ ಗೃಹ ಸಚಿವ ಪರಮೇಶ್ವರ್ ಗುಡುಗಿದ್ದಾರೆ.

ಇದನ್ನೂ ಓದಿ: Bengaluru Power Cut : ಇಂದಿನಿಂದ ಇಲ್ಲೆಲ್ಲ ‌3 ದಿನ ಇರಲ್ಲ ಕರೆಂಟ್‌; ಮಾಸಾಂತ್ಯಕ್ಕೆ ಬೆಂಗಳೂರಲ್ಲಿ ಪವರ್‌ ಕಟ್!

ಸರ್ಕಾರ ದಬ್ಬಾಳಿಕೆ ಮಾಡಬಾರದು

ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ವಾಟಾಳ್‌ ನಾಗರಾಜ್‌, ನಾವು ಬೆಂಗಳೂರಿನಲ್ಲಿ ನಾಳೆ ಮೆರವಣಿಗೆ ನಡೆಸಲಿದ್ದೇವೆ. ಆದರೆ, ಯಾವುದೇ ಕಾರಣಕ್ಕೂ ಮೆರವಣಿಗೆಯನ್ನು ತಡೆಯುವ ಕೆಲಸವನ್ನು ಪೊಲೀಸರು ಮಾಡಬಾರದು. ಪೊಲೀಸರಿಗೆ ಹೇಳಿ ತೊಂದರೆ ಕೊಡುವ ಕೆಲಸವನ್ನು ಮಾಡಬೇಡಿ. ಹೀಗೆ ಮಾಡಿದಲ್ಲಿ ಗದ್ದಲ, ಗೊಂದಲಗಳು ಆಗಬಹುದಾಗಿದೆ. ಹೀಗಾಗಿ ಈ ಬಗ್ಗೆ ಸರ್ಕಾರದವರು ಎಚ್ಚರಿಕೆಯ ಹೆಜ್ಜೆಯನ್ನಿಡಬೇಕು ಎಂದು ಪ್ರತಿಯಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

Exit mobile version