Site icon Vistara News

Karnataka Budget Session 2024: 110 ಹಳ್ಳಿಗಳಿಗೆ ಮೇಯೊಳಗೆ ಕುಡಿಯಲು ಕಾವೇರಿ ನೀರು: ಡಿ.ಕೆ.ಶಿವಕುಮಾರ್

DK Shivakumar on Budget Session

ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಬೆಂಗಳೂರಿನ ಹೊರ ವಲಯಕ್ಕೆ ಕಾವೇರಿ ನೀರನ್ನು ತರುವ ಬಗ್ಗೆ ಚರ್ಚೆಯಾಗಿದೆ. ಬೆಂಗಳೂರು ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಮತ್ತಷ್ಟು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಮುಂದೆ ಸಾಗುತ್ತಿದೆ. ಹೀಗಾಗಿ ಇಲ್ಲಿ ಕೆಲವು ಕಡೆ ಮೂಲಭೂತ ಸೌಕರ್ಯಗಳು ಆಗಬೇಕಿದೆ. ಬಹುಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಹ ಕಾರ್ಯೋನ್ಮುಖವಾಗಿದೆ. ಬೆಂಗಳೂರು ಹೊರವಲಯದ 110 ಹಳ್ಳಿಗಳಿಗೆ ಮೇ ವೇಳೆಗೆ ಕುಡಿಯಲು ಕಾವೇರಿ ನೀರು ಪೂರೈಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಹೇಳಿದ್ದಾರೆ.

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಅವರ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, “ಕುಡಿಯುವ ನೀರನ್ನು ಮುಂದಿನ ಮೇ ತಿಂಗಳಲ್ಲಿ ಪೂರೈಸಲಾಗುವುದು. ಆದರೆ‌, ಸೀವೇಜ್ ಪ್ಲಾಂಟ್ ಸೇರಿದಂತೆ ಇತರೆ ಕಾಮಗಾರಿಗಳು ಪೂರ್ಣಗೊಳ್ಳಲು 2 ವರ್ಷಗಳು ಬೇಕಾಗಬಹುದು” ಎಂದು ತಿಳಿಸಿದರು.

ಎಸ್‌.ಟಿ. ಸೋಮಶೇಖರ್‌ ಕ್ಷೇತ್ರದ ಸಮಸ್ಯೆಯನ್ನು ನಾನೇ ಖುದ್ದು ಬಗೆಹರಿಸುವೆ

ಯಶವಂತಪುರ ಕ್ಷೇತ್ರದಲ್ಲಿ ಅರಣ್ಯ ಭೂಮಿಯ ಪಕ್ಕದಲ್ಲಿ ಇರುವ ಬಿಡಿಎ ಬಡಾವಣೆಗಳಿಗೆ ನೀರು ಹರಿಸಲು ಇದ್ದಂತಹ ತೊಡಕುಗಳನ್ನು ನಿವಾರಿಸಲಾಗುವುದು. ಈಗಾಗಲೇ ಅರಣ್ಯ ಇಲಾಖೆಯವರ ಜತೆಗೆ ಚರ್ಚೆ ನಡೆಸಲಾಗಿದೆ. ಯಶವಂತಪುರ ಕ್ಷೇತ್ರ ದೊಡ್ಡದಾಗಿದ್ದು, ನಗರ ಭಾಗದಷ್ಟೇ ವಿಸ್ತೀರ್ಣವನ್ನು ಗ್ರಾಮೀಣ ಭಾಗ ಸಹ ಹೊಂದಿದೆ. ಎಲ್ಲ ಸಮಸ್ಯೆಗಳನ್ನು ನಾನೇ ಖುದ್ದಾಗಿ ಬಗೆಹರಿಸುತ್ತೇನೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರು ವ್ಯಾಪ್ತಿಯ ಪ್ರತಿ ಶಾಸಕರಿಗೆ 10 ಕೋಟಿ ರೂ. ಅನುದಾನ: 11 ಸಾವಿರ ಕೊಳವೆ ಬಾವಿ ಕೊರೆಯಲು ಆದೇಶ

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕೊಳವೆಬಾವಿಗಳನ್ನು ಕೊರೆಸುವ ಸಂಬಂಧ ಬಿಜೆಪಿ ಶಾಸಕರಾದ ಮುನಿರತ್ನ ಮತ್ತು ಬೈರತಿ ಬಸವರಾಜು ಅವರ ಪ್ರಶ್ನೆಗಳಿಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, “ಬೆಂಗಳೂರಿನ ಎಲ್ಲ ಶಾಸಕರಿಗೂ 10 ಕೋಟಿ ರೂ. ಅನುದಾನ ನೀಡಿದ್ದು, ಇದನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳಬಹುದು. ಇತರೆ ಕಾಮಗಾರಿಗಳಿಗಿಂತ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗುವುದು. ಬಿಡಬ್ಲ್ಯೂಎಸ್ಎಸ್‌ಬಿ ವ್ಯಾಪ್ತಿಯಲ್ಲಿ 11 ಸಾವಿರ ಕೊಳವೆ ಬಾವಿಗಳನ್ನು ಮತ್ತೆ ಕೊರೆಯಲು ಆದೇಶ ನೀಡಲಾಗಿದೆ ಎಂದು ಹೇಳಿದರು.

ಕೋವಿಡ್ ಕಾರಣದಿಂದ ಕಾವೇರಿ ನೀರು ಸರಬರಾಜು ಕಾಮಗಾರಿ ತಡವಾಗಿತ್ತು. ಅಲ್ಲಿಯವರೆಗೆ ರೀ- ಬೋರ್ವೆಲ್, ಪಂಪ್ ದುರಸ್ತಿ ಸೇರಿದಂತೆ ಇತರೇ ಕೆಲಸಗಳಿಗೆ ಟೆಂಡರ್ ಕರೆಯಲಾಗಿದೆ. ಕೂಡಲೇ ಮುಂದಿನ ವಾರದೊಳಗೆ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇಲಾಖೆ ವ್ಯಾಪ್ತಿಯಲ್ಲಿ 68 ಟ್ಯಾಂಕರ್ ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ನೀರು ಪೂರೈಕೆ ಕಾಮಗಾರಿ ನಡೆಸುತ್ತೇವೆ

ದಾಸರಹಳ್ಳಿಗೆ ಈಗಾಗಲೇ 5.24 ಲಕ್ಷ ಅನುದಾನವನ್ನು ನೀಡಲಾಗಿದೆ. ಲಕ್ಷ್ಮೀಪುರ ಸೇರಿದಂತೆ ದಾಸರಹಳ್ಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕಾವೇರಿ ನೀರು ಪೂರೈಕೆ ಕಾಮಗಾರಿಯನ್ನು ನಡೆಸಲಾಗುವುದು. ದಾಸರಹಳ್ಳಿ ಕ್ಷೇತ್ರದಲ್ಲಿ ಕಾರ್ಖಾನೆಗಳು ಹೆಚ್ಚು ಇರುವ ಕಾರಣ ನೀರು ಹೆಚ್ಚು ಬಳಕೆಯಾಗುತ್ತಿದೆ. ಆದ ಕಾರಣ ವಸತಿ ಪ್ರದೇಶಗಳಿಗೆ ತೊಂದರೆಯಾಗುತ್ತಿದೆ. ಬೋರ್ವೆಲ್ ನೀರು ಬಳಕೆಯ ಬಗ್ಗೆ ಈಗಾಗಲೇ ಕಾನೂನು ಇದ್ದು. ಈ ಬಗ್ಗೆಯೂ ಸದನದಲ್ಲಿ ಚರ್ಚೆ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಖಾಸಗಿ ನೀರಿನ ಟ್ಯಾಂಕರ್‌ ದರ ಇಳಿಸುತ್ತೇವೆ

ಕೆ.ಆರ್ ಪುರಂ ಕ್ಷೇತ್ರದಲ್ಲಿ ನಾರಾಯಣಪುರ ಸೇರಿದಂತೆ ಕೆಲವೆಡೆ ನೀರನ್ನು ತುಂಬುವ ಕೆಲಸ ಮಾಡಬೇಕಿದೆ ಟ್ಯಾಂಕರ್‌ಗಳು ರೂ. 1,500 ವಸೂಲಿ ಮಾಡುತ್ತಿದ್ದು ಇದನ್ನು ರೂ. 500ಕ್ಕೆ ಇಳಿಸಬೇಕು ಎಂದು ಬೈರತಿ ಬಸವರಾಜು ಮನವಿ ಮಾಡಿದ್ದು, ಖಾಸಗಿ ನೀರು ಟ್ಯಾಂಕರ್ ದರ ಇಳಿಸಲು ಕಾನೂನು ತರಬಹುದು. ಇಲ್ಲಿ ಎಲ್ಲರೂ ಒಮ್ಮತಕ್ಕೆ ಬಂದರೆ ಇದನ್ನು ಜಾರಿಗೆ ತರಲು ಸಿದ್ಧ. ಈ ವಿಚಾರವಾಗಿ ವಿರೋಧ ಪಕ್ಷದ ನಾಯಕರಿಂದ ಒಂದು ಪತ್ರ ಬರೆಸಿ ಕೊಟ್ಟರೆ ಸಲಹೆಯನ್ನು ಪರಿಗಣಿಸುತ್ತೇವೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಇದನ್ನೂ ಓದಿ: MLC Election: ಬೆಂಗಳೂರು ಶಿಕ್ಷಕರ ಕ್ಷೇತ್ರ; ಕಾಂಗ್ರೆಸ್‌ನ ಪುಟ್ಟಣ್ಣ ಗೆಲುವು; ಮೈತ್ರಿ ಅಭ್ಯರ್ಥಿಗೆ ಸೋಲು

ಇನ್ನೂ ಆಳಕ್ಕೆ ಬೋರ್ವೆಲ್‌ ಕೊರೆಯಲು ಸೂಚನೆ

ಇದರ ಜತೆಗೆ ಅಂತರ್ಜಲ ನೀರಿನ ಅತಿ ಹೆಚ್ಚಿನ ಬಳಕೆ, ಶೋಷಣೆ ತಪ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಈ ವಿಚಾರವಾಗಿ ಕಂದಾಯ ಇಲಾಖೆಯ ಬಳಿಯೂ ಚರ್ಚೆ ನಡೆಸಲಾಗುವುದು. ಬೆಂಗಳೂರಿಗೆ ಈಗ 1,450 ಎಂಎಲ್‌ಡಿ ನೀರು ಸರಬರಾಜಾಗುತ್ತಿದೆ. ಈ ವರ್ಷ ಬರಗಾಲ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಈ ವಿಚಾರವಾಗಿ ಮೊನ್ನೆ ಬಿಜೆಪಿ ಶಾಸಕರಾದ ಸೋಮಶೇಖರ್ ಹಾಗೂ ಮುನಿರತ್ನ ಅವರು ಪ್ರಸ್ತುತ ಇರುವ ಕೊಳವೆ ಬಾವಿಗಳನ್ನು ಇನ್ನೂ 500 ಅಡಿ ಹೆಚ್ಚು ಕೊರೆಯಲು ಅವಕಾಶ ನೀಡಬೇಕು ಎಂಬ ಸಲಹೆ ನೀಡಿದ್ದಾರೆ. ಈ ವಿಚಾರವಾಗಿ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

Exit mobile version