Site icon Vistara News

Karnataka Election: ವೀರೇಂದ್ರ ಪಾಟೀಲ್‌, ನಿಜಲಿಂಗಪ್ಪಗೆ ಕಾಂಗ್ರೆಸ್‌ ಅವಮಾನ ಮಾಡಿಲ್ಲ: ಮೋದಿ ಮಾತಿಗೆ ಡಿ.ಕೆ. ಶಿವಕುಮಾರ್‌ ಉತ್ತರ

tipu sultan DK Shivakumar alleges bjp for spreading false history

ಬೆಂಗಳೂರು: ಕಾಂಗ್ರೆಸ್‌ ಪಕ್ಷವು ವೀರೇಂದ್ರ ಪಾಟೀಲರು ಹಾಗೂ ಎಸ್‌. ನಿಜಲಿಂಗಪ್ಪ ಅವರಿಗೆ ಅವಮಾನ ಮಾಡಿದೆ, ಇದೀಗ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಅವಮಾನಿಸುತ್ತಿದೆ ಎಂದು ಚುನಾವಣೆ ಹೊಸ್ತಿಲಲ್ಲಿ (Karnataka Election) ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಖಂಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಡಿಯೂರಪ್ಪರನ್ನ ಮೋದಿ ಹೊಗಳಿದ ವಿಚಾರದಲ್ಲಿ ಪ್ರತಿಕ್ರಿಯಿಸಿ, ಮೋದಿ ಅವರು ಕಲಾವಿದರು. ಯಡಿಯೂರಪ್ಪರಿಗೆ ಕೊಟ್ಟ ನೋವು,ಕಣ್ಣೀರಿನ‌ ಬಗ್ಗೆ ಮೋದಿಯವರು ಹೇಳಬೇಕು. ವಿಧಾನಸೌಧದಿಂದ ರಾಜಭವನಕ್ಕೆ ಹೋಗೋವಾಗ ಕಣ್ಣೀರು ಇಟ್ಟರು ಅದರ ಬಗ್ಗೆ ಉತ್ತರ ಕೊಡಲಿ. ಅವರ ಕುಟುಂಬದವರಿಗೆ, ಸ್ನೇಹಿತರಿಗೆ ಐಟಿ ರೇಡ್ ಆಯ್ತು. ಇಡಿ ಸಮನ್ಸ್ ಆಯ್ತಲ್ಲ. ಅದೆಲ್ಲ ಏನದು ಹೇಳಬೇಕು. ರಾಜ್ಯದ, ರಾಷ್ಟ್ರದ ಜನತೆಗೆ ಇದರ ಬಗ್ಗೆ ಹೇಳಬೇಕು.

ಇದರ ಹಿನ್ನೆಲೆ ಏನು? ಎಷ್ಟು ಬಾರಿ ಅವರನ್ನ ಅಧಿಕಾರಿಗಳು ಕರೆಸಿಕೊಂಡಿದ್ರು? ಎಲ್ಲವೂ ಏನೇನಾಯ್ತು ಜನರ ಮುಂದೆ ಇಡಿ. ಯಾಕೆ ಕಣ್ಣೀರು ಹಾಕಿದ್ರು? ಯಡಿಯೂರಪ್ಪರನ್ನ ಯಾಕೆ ಸಿಎಂ ಸ್ಥಾನದಿಂದ ಇಳಿಸಿದ್ರು. ಯಾಕೆ ಇಳಿಸಿದ್ರಿ ಹೇಳಿ. 104 ಸ್ಥಾನ ಪಡೆದು ಅವರ ನಾಯಕತ್ವದಲ್ಲಿ ಸರ್ಕಾರ ಮಾಡಿದ್ರು ಯಾಕೆ ಅವರನ್ನ ಇಳಿಸಿದ್ರಿ ಜನತೆಗೆ ಹೇಳಬೇಕು. ಆಪರೇಷನ್ ಮಾಡಲು ಅವರು ಬೇಕಿತ್ತು. ಸರ್ಕಾರ ಮಾಡಿದ್ರು‌ ಯಾಕೆ ಅವರನ್ನ ವಜಾ ಮಾಡಿದ್ರು ಉತ್ತರ ಕೊಡಿ.

ಈಗ ಸರ್ಕಾರಕ್ಕೆ ಅಭದ್ರತೆ ಇದೆ ಅಂತ ಮೋದಿ ಬಂದು ಯಡಿಯೂರಪ್ಪನ್ನ ಹೊಗಳುತ್ತಿದ್ದಾರೆ. ಈಗಲೂ ಹೇಳ್ತೀನಿ, ಯಡಿಯೂರಪ್ಪ ನಾಯಕತ್ವದಲ್ಲಿ ಚುನಾವಣೆ ‌ಮಾಡ್ತೀವಿ ಅಂತ ಹೇಳಿ. ಬೊಮ್ಮಾಯಿ ತೆಗೆದು ಯಡಿಯೂರಪ್ಪ ಸಿಎಂ ಮಾಡಿದ್ರೆ ಗೌರವ ಇರುತ್ತೆ. ಯಡಿಯೂರಪ್ಪ ನಾಯಕತ್ವದಲ್ಲಿ ಹೋಗಿ ನೋಡೋಣ. ಕೇವಲ ಲಿಪ್ ಸಿಂಪತಿ ಮೋದಿ ಮಾಡೋದು ಬೇಡ ಎಂದು ಸವಾಲೆಸೆದರು.

ವಿರೇಂದ್ರ ಪಾಟೀಲ್, ನಿಜಲಿಂಗಪ್ಪಕ್ಕೆ ಕಾಂಗ್ರೆಸ್ ಅಪಮಾನ ಮಾಡಿದೆ ಎಂಬ ಮೋದಿ ಆರೋಪ ವಿಚಾರದಲ್ಲಿ ಪ್ರತಿಕ್ರಿಯಿಸಿ, ವೀರೇಂದ್ರ ಪಾಟೀಲ್ ಪರಿಸ್ಥಿತಿ ಏನು ಇತ್ತು ಅಂತ ನನಗೆ ಗೊತ್ತು. ಮೋದಿ ಅವರಿಗೆ ಅವರ ರಾಜಕೀಯ ಏನು ಗೊತ್ತಿಲ್ಲ. ನಾನು ವಿರೇಂದ್ರ ಪಾಟೀಲ್ ಜೊತೆ ಶಾಸಕ ಆಗಿದ್ದವನು. ಆರೋಗ್ಯ ಪರಿಸ್ಥಿತಿ ಸರಿ ಇರಲಿಲ್ಲ. ವೀರೇಂದ್ರ ‌ಪಾಟೀಲ್ ಆರೋಗ್ಯ ಚೇತರಿಸಿಕೊಳ್ಳದ ಸ್ಥಿತಿಯಲ್ಲಿ ಇದ್ದರು. ಅದನ್ನ ಮಧ್ಯರಾತ್ರಿ ಎಲ್ಲರ ಬಳಿ ಕೂತು ಚರ್ಚೆ ಮಾಡಿದ್ರು. ಡಾಕ್ಟರ್ ಆರೋಗ್ಯ ಸರಿ ಇಲ್ಲ ಅಂತ ಹೇಳಿದ್ದಕ್ಕೆ ರಾಜೀವ್ ಗಾಂಧಿ ಕೆಳಗೆ ಇಳಿಸಿದ್ರು ಅಷ್ಟೆ. ಇಂದಿರಾಗಾಂಧಿ ಮೇಲೆ ಸ್ಪರ್ಧೆ ಮಾಡಿದವರನ್ನ ಮತ್ತೆ ಲೋಕಸಭೆಗೆ ನಿಲ್ಲಿಸಿ ಮತ್ತೆ ಕೇಂದ್ರದಲ್ಲಿ ಮಂತ್ರಿ ಮಾಡಿದ್ದು ಕಾಂಗ್ರೆಸ್ ‌ಪಕ್ಷ. ಅವರನ್ನ ಕೇಂದ್ರದಲ್ಲಿ ಮಂತ್ರಿ ಮಾಡಿದ ಹೃದಯ ಶ್ರೀಮಂತಿಗೆ ಗಾಂಧಿ ಕುಟುಂಬಕ್ಕೆ ಇತ್ತು. ಇದನ್ನ ಯಾರು ಮರೆಯೋದಕ್ಕೆ ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ: Modi at Belagavi: ಬಿಸಿಲಲ್ಲಿ ನಿಲ್ಲಿಸಿ ಖರ್ಗೆಗೆ ಅವಮಾನ; ಕರ್ನಾಟಕವನ್ನು ಕಾಂಗ್ರೆಸ್‌ ದ್ವೇಷಿಸುತ್ತದೆ: ʼಅವಮಾನದ ಇತಿಹಾಸʼ ಕೆದಕಿದ ಪ್ರಧಾನಿ ಮೋದಿ

ಎಸ್‌. ನಿಜಲಿಂಗಪ್ಪ ಕುರಿತು ಪ್ರತಿಕ್ರಿಯಿಸಿ, ನಿಜಲಿಂಗಪ್ಪ ಭೇಟಿಗೆ ಎಸ್.ಎಂ. ಕೃಷ್ಣ ಸೋನಿಯಾಗಾಂಧಿ ಅವರನ್ನ ಕರೆದುಕೊಂಡು ಹೋಗಿದ್ರು. ನಿಜಲಿಂಗಪ್ಪ ಅವರಿಗೆ ಗೌರವ ಕೊಡೊಕೆ ಅವರ ಅಳಿಯಗೆ ಎಂಎಲ್ಸಿ ಮಾಡಿ, ಕೇಂದ್ರದಲ್ಲಿ ಮಂತ್ರಿ ಮಾಡಿ, ರಾಜ್ಯಸಭೆ ಮೆಂಬರ್ ಮಾಡಿದ ಇತಿಹಾಸ ಕಾಂಗ್ರೆಸ್ ‌ನದ್ದು. ಮೋದಿ ಅವರ ಲಿಪ್ ಸಿಂಪತಿ ನಮಗೆ ಬೇಡ ಎಂದು ಹೇಳಿದರು.

ಬಿಜೆಪಿಗೆ ಲಿಂಗಾಯತ ಮತ ತಪ್ಪುತ್ತಿದೆ ಅಂತ ನಾನು ಜಾತಿ ಮೇಲೆ ಹೇಳೊಲ್ಲ. ಜನರು ದಡ್ಡನಲ್ಲ. ತನ್ನದೇ ಆದ ತೀರ್ಮಾನ ತೆಗೆದುಕೊಳ್ತಾರೆ. ಬಿಜೆಪಿ ಹೇಗೆ ಜನರನ್ನ ಮೋಸ ಮಾಡಿದೆ ಅಂತ ಗೊತ್ತಿದೆ. 40% ಭ್ರಷ್ಟಾಚಾರದ ಬಗ್ಗೆ ಯಾಕೆ ಉತ್ತರ ಇಲ್ಲ. ಸ್ಕಿಲ್ ಇಂಡಿಯಾ, ಕಿಲ್ ಇಂಡಿಯಾ ಆಗಿದೆ. ಎಲ್ಲಾ ರಿಸರ್ಚ್ ನಡೆಯುತ್ತಿದೆ. ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಹೋಗೋ ಹಣ ಯಾರಿಗೋ ಸೇರುತ್ತಿದೆ. ಭ್ರಷ್ಟಾಚಾರದ ಕೂಪ ಕರ್ನಾಟಕ ಆಗಿದೆ. ಬಂಡವಾಳ ಹೂಡಿಕೆ ಸಮಾವೇಶ ಮಾಡಿದವರು ಮಂಗಳೂರು, ಶಿವಮೊಗ್ಗಕ್ಕೆ ಯಾಕೆ ಹೋಗಿಲ್ಲ? ಆಯನೂರು ಮಂಜುನಾಥ್ ರಾಮ ಮಂದಿರ ಬೇಡ ಅಂತ ಹೇಳ್ತಾರೆ. ಬೊಮ್ಮಾಯಿ ಇದಕ್ಕೆ ಉತ್ತರ ಕೊಡಿ. ಕರ್ನಾಟಕ ಬಿಜೆಪಿ ಮುಕ್ತ ಆಗೋ ಕಾಲ ಬರ್ತಿದೆ ಎಂದರು.

Exit mobile version