Site icon Vistara News

Karnataka Politics : ಸರ್ವಾಧಿಕಾರಿ ಮರ್ಜಿ ಮುಂದೆ ಬೀದಿಪಾಲಾದ ಬಿಜೆಪಿ ನಾಯಕರು; ವ್ಯಂಗ್ಯವಾಡಿದ ಕಾಂಗ್ರೆಸ್‌

BJP Karnataka

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶನಿವಾರ ಚಂದ್ರಯಾನ 3 (Chandrayaan 3) ಯಶಸ್ಸಿನ ರೂವಾರಿಗಳಾದ ಇಸ್ರೋ ವಿಜ್ಞಾನಿಗಳನ್ನು (ISRO Scientists) ಭೇಟಿಯಾಗಿ ಅಭಿನಂದಿಸಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಯಾವ ಬಿಜೆಪಿ ನಾಯಕರಿಗೂ (Karnataka BJP Leaders) ಅವರನ್ನು ಭೇಟಿಯಾಗುವ ಅವಕಾಶವಿರಲಿಲ್ಲ. ಮಾತ್ರವಲ್ಲ ಅವರಿಗೆ ಪ್ರತ್ಯೇಕವಾಗಿ ನಿಲ್ಲುವ ಅವಕಾಶವೂ ಇರಲಿಲ್ಲ. ಅವರೆಲ್ಲರೂ ಜನ ಸಾಮಾನ್ಯರಂತೆ ಬ್ಯಾರಿಕೇಡ್‌ಗಳ ಆಚೆ ನಿಂತಿದ್ದರು. ಮೊದಲೆಲ್ಲ ನರೇಂದ್ರ ಮೋದಿ ಅವರು ಬಂದಾಗ ಹತ್ತಿರವೇ ಸುಳಿದಾಡುತ್ತಿದ್ದ ನಾಯಕರಿಗೆ ಈ ಬಾರಿ ಅವರನ್ನು ದೂರದಿಂದಲೇ ನೋಡುವ ಭಾಗ್ಯ. ಅದರಲ್ಲೂ ಬ್ಯಾರಿಕೇಡ್‌ನಿಂದ ಹೊರಗೆ ಬರಲಾಗದಷ್ಟು ಬಿಗಿ ಬಂದೋಬಸ್ತ್‌ (Karnataka Politics).

ಪ್ರಧಾನಿ ಮೋದಿ ಅವರು ಇದೊಂದು ಪಕ್ಕಾ ಇಸ್ರೋ ಕಾರ್ಯಕ್ರಮ. ಎಲ್ಲೂ ಬಿಜೆಪಿ ಧ್ವಜ ಕಾಣಿಸಬಾರದು, ಕೇವಲ ತಿರಂಗಾ ಮಾತ್ರ ಹಾರಾಡಬೇಕು ಎಂದು ಕಟ್ಟಾಜ್ಞೆ ವಿಧಿಸಿದ್ದರು. ಹೀಗಾಗಿ ಬಿಜೆಪಿ ಧ್ವಜ ಮಾತ್ರವಲ್ಲ, ಬಿಜೆಪಿ ನಾಯಕರಿಗೂ ಬ್ಯಾನ್‌ ಹಾಕಿದಂತೆಯೇ ಆಗಿತ್ತು. ಪ್ರಧಾನಿಯವರ ಉದ್ದೇಶ ಏನಿತ್ತೋ ಗೊತ್ತಿಲ್ಲ. ಆದರೆ, ಬಿಜೆಪಿ ನಾಯಕರು ಮಾತ್ರ ಅಸಹಾಯಕರಂತೆ ಕಂಡುಬಂದಿದ್ದು ನಿಜ.

ಇದೇ ವಿಷಯವನ್ನು ಕಾಂಗ್ರೆಸ್‌ ಚೆನ್ನಾಗಿ ನಗದೀಕರಿಸಿಕೊಂಡು ಬಿಜೆಪಿಯ ಕಾಲೆಳೆದಿದಿದೆ.(Congress chides BJP Leader) ಇದು ಸರ್ವಾಧಿಕಾರಿಯ ವರ್ತನೆಯ (Autocratic behaviour) ಒಂದು ಝಲಕ್‌ ಅಷ್ಟೆ. ದುರಂತವೆಂದರೆ ಅದರ ಮೊದಲ ಬಲಿಪಶುಗಳು ಅವರೇ ಆಗಿದ್ದಾರೆ ಎಂದು ಕಾಂಗ್ರೆಸ್‌ ತನ್ನ ಅಧಿಕೃತ ಖಾತೆಯ ಮೂಲಕ ಕಾಲೆಳೆದಿದೆ. ಹಿರಿಯ ಸಚಿವ ದಿನೇಶ್‌ ಗುಂಡೂ ರಾವ್‌, ಕೆಪಿಸಿಸಿಯ ರಮೇಶ್‌ ಬಾಬು ಅವರೂ ಮಾತನಾಡಿದ್ದಾರೆ. ರಮೇಶ್‌ ಬಾಬು ಅವರಂತೂ ಇದೊಂಥರಾ ನಾಯಿಪಾಡು ಅಂದಿದ್ದಾರೆ!

ಸರ್ವಾಧಿಕಾರಿಯ ಮೊದಲ ಬಲಿಪಶುಗಳು ಎಂದ ಕಾಂಗ್ರೆಸ್‌

ಬಿಜೆಪಿಯ ರಾಜ್ಯಾಧ್ಯಕ್ಷ, ಮಾಜಿ ಸಚಿವರುಗಳು, ಹಾಲಿ ಶಾಸಕರುಗಳು, ಹೀಗೆ ಬೀದಿಪಾಲಾಗಿದ್ದಾರೆ ಎಂದರೆ “ಸರ್ವಾಧಿಕಾರಿ”ಯ ಮೊದಲ ಬಲಿಪಶುಗಳು ಬಿಜೆಪಿಗರಿಗೇ ಅಲ್ಲವೇ? ಆತ್ಮ ಗೌರವ, ಸ್ವಾಭಿಮಾನವಿಲ್ಲದೆ ಕೈಬೀಸುತ್ತಿದ್ದಾರೆ ಎಂದರೆ ಗುಲಾಮಗಿರಿಯ ಪರಮಾವಧಿಗೆ ತಲುಪಿದ್ದಾರೆ ಎಂದರ್ಥವಲ್ಲವೇ ಬಿಜೆಪಿ ಕರ್ನಾಟಕ?

ಬಿಜೆಪಿ ನಾಯಕರಿಗೆ ಇದಕ್ಕಿಂತ ಅಪಮಾನವುಂಟೇ?: ದಿನೇಶ್ ಗುಂಡೂರಾವ್‌

1.ISRO ವಿಜ್ಞಾನಿಗಳನ್ನು ಅಭಿನಂದಿಸಲು ಆಗಮಿಸಿದ್ದ ಮೋದಿಯವರನ್ನು ಸ್ವಾಗತಿಸಲು ಸ್ವತಃ ರಾಜ್ಯ BJP ನಾಯಕರಿಗೂ ಅವಕಾಶ ಕೊಟ್ಟಿಲ್ಲ. ರಾಜ್ಯಾಧ್ಯಕ್ಷ ⁦ನಳಿನ್‌ ಕುಮಾರ್‌ ಕಟೀಲ್‌ (@nalinkateel)⁩, ಬೊಮ್ಮಾಯಿಯವರನ್ನು ಕೂಡ ಹತ್ತಿರಕ್ಕೆ ಬಿಟ್ಟು ಕೊಳ್ಳಲಿಲ್ಲ. ರಾಜ್ಯ BJP ನಾಯಕರಿಗೆ ಇದಕ್ಕಿಂತ ಅಪಮಾನವುಂಟೆ? BJP ನಾಯಕರಿಗೆ ಕಿಂಚಿತ್ತಾದರೂ ಆತ್ಮಗೌರವ ಬೇಡವೆ?

2. ರಾಜ್ಯ BJP ನಾಯಕರನ್ನು ಅವರ ಪಕ್ಷದ ವರಿಷ್ಟರು ಕಾಲಕಸಕ್ಕಿಂತ ಕಡೆಯಾಗಿ ನೋಡುತ್ತಾರೆ ಎಂಬುದಕ್ಕೆ‌ ಮೋದಿಯವರ ಇಂದಿನ ವರ್ತನೆಯೇ ಸಾಕ್ಷಿ. ಕರ್ನಾಟಕದ ಬಿಜೆಪಿ ನಾಯಕರು ಇಂದು ಮೋದಿಯವರ ಮುಂದೆ ಹಲ್ಲುಗಿಂಜಿ ಜೀ ಹುಜೂರು ಎಂದು ಮಂಡಿಯೂರಿ ನಿಂತರೂ, ಮೋದಿಯವರು ಕಣ್ಣೆತ್ತಿಯೂ ನೋಡಿಲ್ಲ.

3.ಮೋದಿಯವರ ಸರ್ವಾಧಿಕಾರಿ ‌ಮನಃಸ್ಥಿತಿಯ ಬಗ್ಗೆ ಸತ್ಯ ಹೇಳಿದಾಗಲೆಲ್ಲಾ ಕರ್ನಾಟಕ ಬಿಜೆಪಿಯವರು (@BJP4Karnataka) ಎಗರೆಗರಿ ಬೀಳುತ್ತಿದ್ದರು. ಬಹುಶಃ ರಾಜ್ಯ BJP ನಾಯಕರಿಗೆ ಇಂದು ಮೋದಿಯವರ ಸರ್ವಾಧಿಕಾರಿ ಮನೋಭಾವದ ಸತ್ಯದರ್ಶನವಾಗಿರಬಹುದು‌. BJP ನಾಯಕರೆ, ಇನ್ನೆಷ್ಟು ದಿನ ಆತ್ಮಗೌರವ, ಸ್ವಾಭಿಮಾನ ಕಳೆದುಕೊಂಡು ಇರುತ್ತೀರಿ? ಆತ್ಮವಿಮರ್ಶೆ ಮಾಡಿಕೊಳ್ಳಿ

ನಾಯಿಗಿಂತಲೂ ಕಡೆಯಾದ ಬಿಜೆಪಿ ನಾಯಕರು ಎಂದ ರಮೇಶ್‌ ಬಾಬು

ಮೋದಿ ಭೇಟಿ ವೇಳೆ ಬ್ಯಾರಿಕೇಡ್ ಹಿಂದೆ ನಿಂತ ಬಿಜೆಪಿ ನಾಯಕರನ್ನು ಗಮನಿಸಿ ಟ್ವೀಟ್ ಮಾಡಿದ್ದಾರೆ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ಮಾಜಿ ಎಂಎಲ್ಸಿ ರಮೇಶ್ ಬಾಬು.

ʻʻಇಂಥ ದುರಂತವನ್ನು ನೀವು ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ ನೋಡಲು ಸಾಧ್ಯ. ಮೋದಿ ಭೇಟಿ ವೇಳೆ ರಾಜ್ಯ ಬಿಜೆಪಿ ನಾಯಕರನ್ನು ನಾಯಿಗಿಂತ ಕಡೆಯಾಗಿ ನೋಡಲಾಗಿದೆ. ಬಿಜೆಪಿ ಆರ್ ಎಸ್ ಎಸ್ ನಲ್ಲಿ ಆತ್ಮಾಭಿಮಾನ ಸಂಸ್ಕೃತಿ ಕಳೆದು ಹೋಗಿದೆ ಜೈ ಮೋದಿʼʼ ಎಂದು ಟ್ವೀಟ್ ಮಾಡಿದ್ದಾರೆ ರಮೇಶ್ ಬಾಬು.

ಇದನ್ನೂ ಓದಿ : Chandrayaan 3: ಚಂದ್ರಯಾನ 3 ತಲುಪಿದ ಜಾಗ ಶಿವಶಕ್ತಿ ಪಾಯಿಂಟ್‌! ಚಂದ್ರಯಾನ 2 ತಿರಂಗಾ ಪಾಯಿಂಟ್!‌ ಆ.23 ರಾಷ್ಟ್ರೀಯ ಬಾಹ್ಯಾಕಾಶ ದಿನ! ಮೋದಿ ಘೋಷಣೆ

Exit mobile version