Site icon Vistara News

Karnataka Politics : ಗೋಕಾಕ್‌ ಚಳವಳಿ ಮರೆತಿರೇ ಸಿದ್ದರಾಮಯ್ಯ? ಸಿಎಂಗೆ ಬಿ.ವೈ. ವಿಜಯೇಂದ್ರ ಸರಣಿ ಪ್ರಶ್ನೆ

BY Vijayendra and cm siddaramaiah

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ (BJP state vice president and MLA BY Vijayendra) ಟ್ವೀಟ್ ವಾರ್ ನಡೆಸಿದ್ದಾರೆ. ಕರ್ನಾಟಕಕ್ಕೆ 50 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಹಲವು ಪ್ರಶ್ನೆಗಳನ್ನು ತೂರಿಬಿಟ್ಟಿದ್ದಾರೆ. ದೇವರಾಜ ಅರಸರನ್ನು (Devaraj Urs) ಮರೆತಿರಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಕನ್ನಡ ಅಂಕಿ-ಅಂಶಗಳನ್ನು ಮರೆತಿದ್ದೀರಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ‌ (CM Siddaramaiah) ಅವರು ಪ್ರಧಾನಿ ನರೇಂದ್ರ ಮೋದಿ (PM Narenrdra Modi) ಅವರಿಗೆ ಮಾಡುತ್ತಿರುವ ಪ್ರಶ್ನೆಗಳಿಗೆ ಪ್ರತಿಯಾಗಿ ತಿರುಗೇಟು ನೀಡಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Karnataka Politics) ರಾಜಕೀಯ ವಾಕ್ಸಮರಗಳು ಪ್ರಾರಂಭವಾಗಿವೆ.

ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಮಾಡಿರುವ ಬಿ.ವೈ. ವಿಜಯೇಂದ್ರ, ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ ಸಿಎಂಗೆ ಗೋಕಾಕ್ ಚಳವಳಿಯನ್ನು ನೆನಪು ಮಾಡಿ ಎದುರೇಟು ಕೊಟ್ಟಿದ್ದಾರೆ. ಗೋಕಾಕ್ ವರದಿ ಮೂಲೆಗೆ ಸೇರಿಸಲು ಮುಂದಾದ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ.

ಗೋಕಾಕ್ ವರದಿ ಅನುಷ್ಠಾನಕ್ಕೆ ರಾಷ್ಟ್ರಕವಿ ಕುವೆಂಪು, ವರ ನಟ ಡಾ. ರಾಜ್‌ಕುಮಾರ್ ನೇತೃತ್ವದಲ್ಲಿ ಹೋರಾಟ ಮಾಡಲಾಗಿತ್ತು. ಲಕ್ಷಾಂತರ ಕನ್ನಡಿಗರ ಆಕ್ರೋಶವು ಆಗ ಮುಗಿಲು ಮುಟ್ಟಿತ್ತು ಎಂದಿರುವ ಅವರು, ರೈತರನ್ನು ಜೈಲಿಗೆ ಕಳುಹಿಸಿದ ಸರ್ಕಾರ ನಿಮ್ಮದು ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

ವಿಜಯೇಂದ್ರ ಅವರ ಟ್ವೀಟ್‌ ಸಾರಾಂಶ ಇಲ್ಲಿದೆ

ಕಾಂಗ್ರೆಸ್ ಸರ್ಕಾರಕ್ಕೆ ಕೆಲವು ನೆನಪುಗಳು ಹಾಗೂ ಪ್ರಶ್ನೆಗಳು?

• ಕನ್ನಡ, ಕನ್ನಡಿಗ, ಕರ್ನಾಟಕದ ಬಗ್ಗೆ ದಿಢೀರ್ ಕಾಳಜಿ ಪ್ರದರ್ಶಿಸುತ್ತ ಕೇಂದ್ರ ಸರ್ಕಾರಕ್ಕೆ ಸರಣಿ ಪ್ರಶ್ನೆಯನ್ನಿಡುತ್ತಿರುವ ನೀವು ಎಂಬತ್ತರ ದಶಕದ ಐತಿಹಾಸಿಕ ಗೋಕಾಕ್ ಚಳವಳಿಯ ಹುಟ್ಟಿಗೆ ಕಾರಣರಾದವರಾರು ಎಂಬುದನ್ನು ಮರೆತಂತಿದೆ?

• ಕನ್ನಡ ಭಾಷೆಯ ಅಸ್ತಿತ್ವಕ್ಕೆ ಕೊಡಲಿ ಹಾಕಲು ಹೊರಟಿದ್ದ ಅಂದಿನ ಕಾಂಗ್ರೆಸ್ ಸರ್ಕಾರ ಗೋಕಾಕ್ ವರದಿಯನ್ನು ಮೂಲೆಗೆ ಸರಿಸಲು ಹೊರಟಾಗ ಇಂದಿರಾ ಓಲೈಕೆಯ ಕಾಂಗ್ರೆಸ್ಸಿಗರು ಏನು ಮಾಡುತ್ತಿದ್ದರು?

• ಗೋಕಾಕ್ ವರದಿ ಅನುಷ್ಠಾನಕ್ಕಾಗಿ ರಾಷ್ಟ್ರಕವಿ ಕುವೆಂಪು ಅವರು ದನಿ ಎತ್ತಿದರು, ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಅವರ ನೇತೃತ್ವದಲ್ಲಿ ಸಾಹಿತಿ-ಕಲಾವಿದರು ಬೀದಿಗಿಳಿದರು, ಲಕ್ಷಾಂತರ ಕನ್ನಡಿಗರ ಆಕ್ರೋಶ ಮುಗಿಲು ಮುಟ್ಟಿತ್ತು. ಇಂಥ ಕನ್ನಡ ವಿರೋಧಿ ಪರಿಸ್ಥಿತಿ ನಿರ್ಮಿಸಿದ ಕುಖ್ಯಾತಿ ಯಾರಿಗೆ ಸಲ್ಲಬೇಕು?

• ಕನ್ನಡ, ರೈತ, ದಲಿತ ಚಳವಳಿಗಳನ್ನು ದಮನ ಮಾಡಲು ಅಂದು ಹೋರಾಟಗಾರರ ಮೇಲೆ ಲಾಟಿ ಬೀಸಿದ್ದು, ಜೈಲಿಗೆ ತಳ್ಳಿದ್ದು, ಗುಂಡು ಹಾರಿಸಿದ್ದು ಅಮಾಯಕರ ಪ್ರಾಣ ತೆಗೆದದ್ದು ಇದಕ್ಕೆ ಉತ್ತರವೆಂಬಂತೆ 83ರ ಚುನಾವಣೆಯಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕಿದ್ದು, ಬಿಜೆಪಿಗೆ ಕನ್ನಡ ಜನತೆ ಹೃದಯದ ಬಾಗಿಲು ತೆರೆದು ಕೊಟ್ಟಿದ್ದು ಇತಿಹಾಸ, ಇದು ಮರೆಯಲು ಹೇಗೆ ಸಾಧ್ಯ?

• ಸುಮಾರು ಆರು ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ‘ಕರ್ನಾಟಕದ ರೈಲ್ವೆ’ ಯನ್ನು ಮದರಾಸಿನ ಕೈಗೆ ಕೊಟ್ಟು ಕನ್ನಡಿಗರ ಉದ್ಯೋಗಾವಕಾಶ ಕಸಿದು ಅನ್ಯ ರಾಜ್ಯದವರ ಪಾಲಾಗಿಸುತ್ತಿದ್ದ ಇತಿಹಾಸ ಕನ್ನಡಿಗರು ಮರೆಯಲಾದೀತೆ?

• ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಎಂದು ಹೆಸರು ಬದಲಿಸಲು ಹಾಗೂ ಆ ಭಾಗದಲ್ಲಿ ಅಭಿವೃದ್ಧಿಯ ಕ್ರಾಂತಿಯಾಗಲು ಕೇಂದ್ರ-ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಬೇಕಾದ ಸಂದರ್ಭ ನೀವು ಮರೆತದ್ದಾದರೂ ಹೇಗೆ?

• ಉಪಕಾರ ಸ್ಮರಣೆ ಇಲ್ಲದ, ಕೊಡುಗೆ ಕೊಟ್ಟವರ ನೆನೆಯದ ಗುಣ ಕಾಂಗ್ರೆಸ್ ಸಂಸ್ಕೃತಿ. ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸರು ನಿಮ್ಮ ಪಕ್ಷದ ಬೆನ್ನಲುಬಾಗಿದ್ದವರು, ತಮ್ಮ ಮೈಸೂರು ಪ್ರೇಮವನ್ನು ಬದಿಗೊತ್ತಿ ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡುವ ದಿಟ್ಟತನ ತೋರಿದವರು. ಇದರ ಪ್ರತಿಫಲವಾಗಿ ನೀವಿಂದು 50ರ ಸಂಭ್ರಮಾರಣೆಯಲ್ಲಿ ಮುಳುಗಿದ್ದೀರಿ, ಆದರೆ ಅರಸರನ್ನೇ ಮರೆತು ಉಪೇಕ್ಷಿಸಿದ್ದೀರಿ?

ಇದನ್ನೂ ಓದಿ: Karnataka Rajyotsava: ಬ್ಯಾಂಕ್​ ಜನಾರ್ದನ್​, ಡಿಂಗ್ರಿ ನಾಗರಾಜ್​ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗರಿ

• ಕನ್ನಡ ಅಂಕಿಗಳಿಗೆ ನಿಮ್ಮ ಸರ್ಕಾರ ತಿಲಾಂಜಲಿ ನೀಡಿದ್ದು ಯಾವಾಗ? ಎಂದು ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ. ಕರ್ನಾಟಕಕ್ಕೆ ಕಾಂಗ್ರೆಸ್ ಎಸಗಿರುವ ಅನ್ಯಾಯಗಳು ಸಾಲು ಸಾಲು ಇವೆ. ಹೇಳಲು ಇನ್ನೂ ಸಮಯವಿದೆ ಎಂದು ಗುಡುಗಿದ್ದಾರೆ.

Exit mobile version