Site icon Vistara News

HD Devegowda : ಕಾಂಗ್ರೆಸ್‌ ನಮ್ಮನ್ನು ದಬ್ಬಿದಾಗ ಮೋದಿ, ಶಾ ಕೈಹಿಡಿದರು ಎಂದ ದೇವೇಗೌಡ್ರು

Devegowda PM Narendra Modi

ಹಾಸನ: ಕಾಂಗ್ರೆಸ್‌ ನೇತೃತ್ವದಲ್ಲಿ ನಲವತ್ತಾರು ಪಕ್ಷಗಳು ಸೇರಿ I.N.D.I.A ಕೂಟ (INDIA BLOCK) ರಚನೆ ಮಾಡಿದಾಗ ನಮ್ಮನ್ನು ಹೊರದಬ್ಬಿದರು. ಈ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಅಮಿತ್‌ ಶಾ (Amit Shah) ನಮ್ಮನ್ನು ಕೈ ಹಿಡಿದರು ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ (HD Devegowda) ಅವರು ಬಿಜೆಪಿ ಮತ್ತು ಜೆಡಿಎಸ್‌ (BJP-JDS Coalition) ನಡುವಿನ ಮೈತ್ರಿ ಯಾಕಾಯಿತು ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಜೆಡಿಎಸ್‌ ಬಗ್ಗೆ, ನಮ್ಮ ಬಗ್ಗೆ ಅವಹೇಳನದ ಭಾವವನ್ನೇ ಹೊಂದಿದ್ದಾರೆ. ಅದೇ ಮೋದಿಯವರು ಪ್ರಧಾನ ಮಂತ್ರಿಯಾಗಿ. ವೈಯಕ್ತಿಕವಾಗಿ ನನ್ನ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ ಎಂದರು.

ʻʻಎನ್‌ಡಿಎಗೆ ಪರ್ಯಾಯವಾಗಿ INDIA ರಚನೆ ಆಗಿದೆ. ಸುಮಾರು 46 ಪ್ರಾದೇಶಿಕ ಪಕ್ಷಗಳ ಕೂಟಕ್ಕೆ ಕಾಂಗ್ರೆಸ್ ನೇತೃತ್ವ ವಹಿಸಿದೆ. ದೇಶವನ್ನು ಆಳಿದಂಥ ಒಂದು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಮುಂದಾಳತ್ವ ವಹಿಸಿದೆ. ಕುಮಾರಸ್ವಾಮಿ ಅವರು 2018ರಲ್ಲಿ ಮುಖ್ಯಮಂತ್ರಿ ಆದಾಗ ಬಿಜೆಪಿ ಬಿಟ್ಟು ರಾಷ್ಟ್ರದ ಸೆಕ್ಯೂಲರ್ ಪಾರ್ಟಿಗಳ ಎಲ್ಲಾ ಮುಖಂಡರು ಭಾಗಿಯಾಗಿದ್ದರು. ಆದರೆ, INDIA ಕೂಟ ರಚನೆಯಾದಾಗ ನಮ್ಮನ್ನು ಹೊರಗಿಡಲೇಬೇಕು ಎಂದು ತೀರ್ಮಾನ ಮಾಡಿದವರು ಯಾರು? ಕುಮಾರಸ್ವಾಮಿ ಸರ್ಕಾರ ತೆಗಿಲೇಬೇಕು ಎಂದು ತೀರ್ಮಾನ ಮಾಡಿದವರು ಯಾರು?ʼʼ ಎಂದು ಪ್ರಶ್ನಿಸಿದರು ದೇವೇಗೌಡರು.

ನಾವು ನಿತೀಶ್‌ ಕುಮಾರ್‌ ಅವರ ಮೂಲಕ I.N.D.I.A ಸೇರಬೇಕು ಎಂದು ಪ್ರಯತ್ನ ಮಾಡಿದಾಗ ಜೆಡಿಎಸ್‌ ಸೇರ್ಪಡೆಯನ್ನು ನಾವು ಖಂಡತುಂಡವಾಗಿ ವಿರೋಧಿಸುತ್ತೇವೆ ಎಂದು ಹೇಳಿದರು. ಹೀಗೆ ನಮ್ಮನ್ನು ದೂರ ಮಾಡಿದಾಗ ಮೋದಿಯವರು, ಅಮಿತ್ ಶಾ ಅವರು ನಮ್ಮನ್ನು ವೆಲ್ ಕಮ್ ಮಾಡಿದ್ರು ಎಂದು ದೇವೇಗೌಡರು ಹೇಳಿದರು. ಕಾಂಗ್ರೆಸ್ ನಡವಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಮೋದಿ ಮತ್ತು ಶಾ ಅವರು ನಮ್ಮನ್ನು ವೆಲ್ ಕಮ್ ಮಾಡಿದರು ಎಂದು ದೇವೇಗೌಡರು ಹೇಳಿದರು.

ಮುಂದಿನ ದಿನಗಳಲ್ಲಿ ಜೆಡಿಎಸ್‌ ಇರೋದೇ ಇಲ್ಲ. ಅದು‌ ಆಟಕ್ಕಿಲ್ಲ, ಲೆಕ್ಕಕ್ಕೂ ಇಲ್ಲ ಎಂದು ಈಗಲೂ ಬಹಳ ಲಘುವಾಗಿ ಮಾತನಾಡುತ್ತಿದ್ದಾರೆ. ಮುಂದೆ ಕರ್ನಾಟಕದಲ್ಲಿ ಬಿಜೆಪಿ, ಮೋದಿ, ಶಾ ಅವರ ಒಟ್ಟಿಗೆ ಹೋಗ್ತೇವೆ. ಬಿಜೆಪಿಯೊಂದಿಗೆ ಕೈ ಜೋಡಿಸಿ ಕಾಂಗ್ರೆಸ್ ಮುಕ್ತವನ್ನಾಗಿಸಲು ಹೋರಾಟ ಮಾಡೋದು ನಮ್ಮ ಗುರಿ ಎಂದು ಹೇಳಿದರು ದೇವೇಗೌಡರು.

ಮುಗಿಸಿಯೇ ತೀರುತ್ತೇವೆ ಎಂದಾಗ ಉಳಿಸಿಕೊಳ್ಳಬೇಕಲ್ಲ?

ನಮ್ಮ ಪಕ್ಷವನ್ನು ಮುಗಿಸಿಯೇ ತೀರುತ್ತೇವೆ ಎಂದು ಕೆಲವರು ಹಠ ತೊಟ್ಟಿರುವಾಗ ನಮಗೂ ನಮ್ಮ ಪಕ್ಷ ಉಳಿಯಬೇಕು ಎಂದು ಇರುತ್ತದೆ ಅಲ್ವಾ? ರೈತರ, ಬಡವರ, ಗ್ರಾಮೀಣ ಜನರ, ಹಿಂದುಳಿದವರ, ಅಲ್ಪಸಂಖ್ಯಾತರ ಪರವಾಗಿ ನಮ್ಮ ಪಕ್ಷ ನಿಂತಿದೆ. ಅವರೆಲ್ಲ ಸೇರಿ ಪಕ್ಷವನ್ನು ಮುಗಿಸಿಯೇ ಬಿಡುತ್ತೇವೆ ಅಂದಾಗ ಮೋದಿಯವರು ನಮಗೆ ಒಂದು ಅವಕಾಶ ಮಾಡಿಕೊಟ್ಟರು ಎಂದು ದೇವೇಗೌಡರು ಹೇಳಿದರು.

ಮುಂದಿನ ವಾರ ಚುನಾವಣಾ ಮೈತ್ರಿ ಮಾತುಕತೆ ಎಂದ ದೇವೇಗೌಡರು

ಲೋಕಸಭಾ ಚುನಾವಣೆಗೆ ಸಂಬಂಧಿಸಿ ಮುಂದಿನ ವಾರ ಮೈತ್ರಿ ಮಾತುಕತೆ ನಡೆಯಲಿದೆ. ಅಮಿತ್‌ ಶಾ ಅವರು ಲೋಕಸಭಾ ಚುನಾವಣೆ ಸಂಬಂಧ ಮಾತುಕತೆಗೆ ಕರೆಯಬಹುದು. ಕುಮಾರಸ್ವಾಮಿಯವರು ಹೋಗಿ ಮಾತನಾಡಿಕೊಂಡು ಬರ್ತಾರೆ. ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷರ ಜೊತೆಗೂ ಚರ್ಚೆ ಮಾಡುತ್ತಾರೆ. ಅಂತಿಮವಾಗಿ ಕಸಭಾ ಚುನಾವಣೆ ಬಗ್ಗೆ ನಿರ್ಣಯ ಮಾಡ್ತಾರೆ. ನಾವು 28 ಸ್ಥಾನ ಗಳಿಗೆ ಸ್ಪರ್ಧೆ ಮಾಡಲು ಐಕ್ಯತೆಯಿಂದ ಒಮ್ಮತದ ನಿರ್ಧಾರಕ್ಕೆ ಬರ್ತೇವೆ ಎಂದರು ದೇವೇಗೌಡರು ತಿಳಿಸಿದರು.

ಇದನ್ನೂ ಓದಿ: Bhavani Revanna : ಅದು ನಮ್ಮ ಕಾರಲ್ಲ ಫ್ರೆಂಡ್‌ದು ಎಂದ ರೇವಣ್ಣ; ಭವಾನಿ ತಪ್ಪಿಗೂ ಕ್ಷಮೆ ಕೇಳಿದ್ರು!

ತೆಲಂಗಾಣ ಚುನಾವಣೆಯಲ್ಲಿ ರಾಜ್ಯದ ಹಣ ಬಳಕೆಯಾಗಿದೆ ಎಂದು ಆರೋಪಿಸಿದ ಮಾಜಿ ಪ್ರದಾನಿ ದೇವೇಗೌಡರು, ʻʻತೆಲಂಗಾಣದಲ್ಲಿ ಚುನಾವಣೆ ಗೆಲ್ಲಲು ಎಷ್ಟು ಹಣ ಇಲ್ಲಿಂದ‌ ಹೋಗಿದೆ? ಚುನಾವಣಾ ಆಯೋಗ ಎಷ್ಟು ಹಣ ಸೀಝ್ ಮಾಡಿದೆ? ತೆಲಂಗಾಣದಲ್ಲಿ ಕಾಂಗ್ರೆಸ್ ಕರ್ನಾಟಕದ ಹಣ ಹಂಚಿ ಗೆದ್ದಿದೆʼʼ ಎಂದು ಪ್ರಶ್ನಿಸಿದರು.

ಭವಾನಿಗೆ ಆರೋಗ್ಯ ಸರಿಯಿಲ್ಲ ಏನೇನೋ ಮಾತನಾಡಬೇಡಿ

ಭವಾನಿ ರೇವಣ್ಣ ಅವರು ಕಾರಿಗೆ ಬೈಕ್‌ ಡಿಕ್ಕಿಯಾದ ಪ್ರಕರಣ ಮತ್ತು ಅವರ ರೌದ್ರಾವತಾರದ ಬಗ್ಗೆ ಕೇಳಿದಾಗ, ಪಾಪ ಅವರಿಗೆ ಅರೋಗ್ಯ ಸರಿಯಿಲ್ಲ. ಅವರಿಗೆ ಎರಡೂ ಮಂಡಿ ಆಪರೇಷನ್ ಆಗಿದೆ. ಅವರ ಬಗ್ಗೆ ಸುಮ್ಮನೆ ಏನೇನೊ ಮಾತಾಡುತ್ತಾರೆ ಎಂದರು ದೇವೇಗೌಡರು.

Exit mobile version