Site icon Vistara News

MP Pratap Simha : ಯದುವೀರ್‌ ಆ್ಯಕ್ಟಿವ್‌ ಆಗುತ್ತಿದ್ದಂತೆಯೇ ಸಿಂಹ ಸೈಲೆಂಟ್‌?; ಭೇಟಿಗೂ ಮಿಸ್‌!

MP Pratap Simha Yaduveer

ಮೈಸೂರು: ಮೈಸೂರು ಲೋಕಸಭಾ ಕ್ಷೇತ್ರದ (Lok Sabha Election 2024) ಟಿಕೆಟ್‌ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ (Yaduveer Odeyar) ಪಾಲಾಗುತ್ತಿದ್ದಂತೆಯೇ ʻನಾಳೆಯಿಂದಲೇ ಪ್ರಚಾರ ಆರಂಭಿಸೋಣʼ ಎಂದಿದ್ದ ಹಾಲಿ ಸಂಸದ ಪ್ರತಾಪ್‌ ಸಿಂಹ (MP Pratap Simha) ಅವರು ನಾಪತ್ತೆಯಾಗಿದ್ದಾರಾ? ಹೌದು ಎನ್ನುತ್ತವೆ ಬೆಳವಣಿಗೆಗಳು. ಯದುವೀರ್‌ ಅವರು ಟಿಕೆಟ್‌ ಸಿಕ್ಕಿದ ಬಳಿಕ ಚಾಮುಂಡೇಶ್ವರಿ ದರ್ಶನ ಮಾಡಿ, ಬೆಂಗಳೂರಿನ ಬಿಜೆಪಿ ಕಚೇರಿಗೆ ಹೋಗಿ, ಮರಳಿ ಮೈಸೂರಿನ ಬಿಜೆಪಿ ಕಚೇರಿಗೂ ತೆರಳಿ ತಮ್ಮ ಚಟುವಟಿಕೆಯನ್ನು ತೀವ್ರಗೊಳಿಸಿದ್ದಾರೆ. ಆದರೆ, ಯದುವೀರ್‌ ಅವರು ಆ್ಯಕ್ಟಿವ್‌ ಆಗುತ್ತಿದ್ದಂತೆಯೇ ಪಕ್ಷ‌ ಕಟ್ಟೋಣ ಎಂದಿದ್ದ ಪ್ರತಾಪ್ ಸಿಂಹ ಸೈಲೆಂಟ್‌ (Pratap Simha Silent) ಆದಂತೆ ಕಾಣುತ್ತಿದೆ.

ಮೈಸೂರು ರಾಜ ವಂಶಸ್ಥರಾದ ಯದುವೀರ್‌ ಅವರು ಬೀದಿಗೆ ಇಳೀತಾರಾ? ಎಲ್ಲರ ಜತೆ ಬೆರೆಯುತ್ತಾರಾ ಎಂಬ ಪ್ರಶ್ನೆಗಳನ್ನು ಸ್ವತಃ ಪ್ರತಾಪ್‌ ಸಿಂಹ ಕೇಳಿದ್ದರು. ಆದರೆ, ಎಲ್ಲರ ನಿರೀಕ್ಷೆಗಳನ್ನು ಮೀರಿ ಯದುವೀರ್‌ ಮೊದಲ ದಿನವೇ ಮೈಸೂರಿನ ಬಿಜೆಪಿ ಕಚೇರಿಗೆ ಬಂದಿದ್ದಾರೆ. ಎಲ್ಲ ನಾಯಕರ ಜತೆ ಮಾತನಾಡಿದ್ದಾರೆ. ಮಾತ್ರವಲ್ಲ, ಬೀದಿಗೆ ಬಂದು ಮಾರ್ಗದ ಬದಿಯ ಚಹಾ ಅಂಗಡಿಯಲ್ಲಿ ಚಹಾ ಕುಡಿದಿದ್ದಾರೆ.

ಇಷ್ಟೆಲ್ಲ ಆದರೂ ಸಂಸದ ಪ್ರತಾಪ್‌ ಸಿಂಹ ಒಬ್ಬರು ಯದುವೀರ್‌ ಅವರ ಕೈಗೆ ಸಿಗದೆ ಕಣ್ಣಾಮುಚ್ಚಾಲೆ ಆಟವಾಡಿದಂತೆ ಕಾಣುತ್ತಿದೆ. ಎಲ್ಲಿಯೂ ಕಾಣಿಸಿಕೊಳ್ಳದೆ, ಯಾರ ಕೈಗೂ ಸಿಗದ ಪ್ರತಾಪ್ ಸಿಂಹ ಅವರು ಗುರುವಾರ ಖುದ್ದು ಯದುವೀರ್ ಭೇಟಿಗೂ ಸಮಯ ನೀಡಿಲ್ಲ.

ನಿಜವೆಂದರೆ ಯದುವೀರ್‌ ಅವರು ಪ್ರತಾಪ್ ಸಿಂಹ ಮನೆಗೆ ಭೇಟಿ ನೀಡುವ ಪ್ರೊಗ್ರಾಂ ಇತ್ತು. ಆದರೆ, ಪ್ರತಾಪ್‌ ಸಿಂಹ ಸಮಯ ಕೊಟ್ಟಿರಲಿಲ್ಲ. ಜಿಲ್ಲೆಯ ಎಲ್ಲಾ ನಾಯಕರು ಯದುವೀರ್ ಗೆ ಸ್ವಾಗತ ಕೋರಿದ್ದರೂ ಪ್ರತಾಪ್‌ಸಿಂಹ ಬಂದಿರಲಿಲ್ಲ.

ಪಕ್ಷದ ಕಚೇರಿ, ನಾಯಕರ ಮನೆಗಳಿಗೆ ಯದುವೀರ್ ಭೇಟಿ ನೀಡಿದ್ದರು. ರಸ್ತೆ ಬದಿ ಕುಳಿತು ಮುಖಂಡರ ಜೊತೆ ಟೀ ಕುಡಿದರು. ಆಗೆಲ್ಲೂ ಸಂಸದ ಪ್ರತಾಪ್ ಸಿಂಹ ಕಾಣಿಸಿಕೊಂಡಿಲ್ಲ. ಅವರು ಸೋಷಿಯಲ್‌ ಮೀಡಿಯಾದಲ್ಲಿ ಮಾತ್ರ ಬೆಂಬಲ ನೀಡಿದ್ದಾ ಎಂಬ ಸಂಶಯ ಕಾಡಿದೆ.

ಇದನ್ನೂ ಓದಿ : ‌Lok Sabha Election 2024: ಮೆಣಸಿನಕಾಯಿಯನ್ನು ಜೀರ್ಣಿಸಿಕೊಳ್ತೇನೆ; ನನ್ನ ಮೇಲೆ ರಾಜಸ್ಥಾನದ ಪ್ರಭಾವ ಇಲ್ಲ: ಯದುವೀರ್

ರಾಜಕೀಯ ಪ್ರವೇಶ ನಂದೇ ತೀರ್ಮಾನ ಎಂದ ಯದುವೀರ್‌

ಈ ನಡುವೆ ಮೈಸೂರಿನಲ್ಲಿ ಗುರುವಾರ ಸಂಜೆ ಮಾತನಾಡಿದ ಯದುವೀರ್‌ ಒಡೆಯರ್‌ ಅವರು, ಕಳೆದ ಒಂದು ವರ್ಷದಿಂದಲೇ ರಾಜಕೀಯಕ್ಕೆ ಬರುವ ಬಗ್ಗೆ ತೀರ್ಮಾನ ಮಾಡಿದ್ದೆ. ರಾಜಸ್ಥಾನದ ಮೂಲ, ರಾಜಸ್ಥಾನದ ಪ್ರಭಾವ ಇದ್ಯಾವುದು ಇಲ್ಲ. ನನ್ನ ತಾಯಿಯ ಅನುಮತಿ ಹಾಗೂ ಆಶೀರ್ವಾದ ಪಡೆದು ಚುನಾವಣೆಗೆ ಬಂದಿದ್ದೇನೆ ಎಂದು ರಾಜಕೀಯ ಪ್ರವೇಶದ ಬಗ್ಗೆ ವಿವರಣೆ ನೀಡಿದರು.

ಎಸಿ ರೂಮಿನಿಂದ ಜನರ ಮಧ್ಯೆ ಬರುವುದು ಏನೂ ಕಷ್ಟ ಅಲ್ಲ. ನಾನು ಈಗಾಗಲೇ ಜನರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಶೈಕ್ಷಣಿಕ ಸಾಮಾಜಿಕ ಹಾಗೂ ಸೈಬರ್ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ರಾಜಕೀಯದಲ್ಲಿರುವ ಸವಾಲುಗಳನ್ನು ಅರಿತೇ ಬಂದಿದ್ದೇನೆ. ಕೇವಲ ಅವಕಾಶ ಸಿಕ್ಕಿದೆ ಅಂತ ನಾನು ಬಂದಿಲ್ಲ. ಪ್ರತಾಪಸಿಂಹ ಸೇರಿದಂತೆ ಹಲವರು ಉತ್ತಮ ಅಡಿಪಾಯ ಹಾಕಿದ್ದಾರೆ. ಅದನ್ನು ಮುಂದುವರಿಸುತ್ತೇನೆ ಎಂದು ಯದುವೀರ್‌ ಹೇಳಿದ್ದಾರೆ.

Exit mobile version