Site icon Vistara News

Parliament Election : ಚಿಕ್ಕಬಳ್ಳಾಪುರದಿಂದ ಶರತ್‌ ಬಚ್ಚೇಗೌಡರ ಪತ್ನಿ ಪ್ರತಿಭಾ ಕಣಕ್ಕೆ?; ಕುಟುಂಬ ಹೇಳಿದ್ದೇನು?

Parliament Election chikkaballapura

ದೇವನಹಳ್ಳಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ (Parliament Election 2024) ಚಿಕ್ಕಬಳ್ಳಾಪುರ ಕ್ಷೇತ್ರದಿಂದ (Chikkaballapura Constituency) ಅಭ್ಯರ್ಥಿಯಾಗಿ ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ (Sharath Bacchegowda) ಅವರ ಪತ್ನಿ ಪ್ರತಿಭಾ ಶರತ್‌ (Prathibha Sharath Bacchegowda) ಅವರು ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಆದರೆ, ಅವರ ಕುಟುಂಬ ಮಾತ್ರ ಇದನ್ನು ಸ್ಪಷ್ಟವಾಗಿ ಅಲ್ಲಗಳೆದಿದೆ. ಸ್ವತಃ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್‌.ಬಚ್ಚೇಗೌಡ (BN Bacchegowda) ಅವರು ನನ್ನ ಸೊಸೆ ಪ್ರತಿಭಾ ಶರತ್‌ ಅವರು ಭಾನುವಾರ ದೇವನಹಳ್ಳಿಯಲ್ಲಿ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

ಬಿ.ಎನ್‌. ಬಚ್ಚೇಗೌಡ ಅವರು ಈಗ ಚಿಕ್ಕಬಳ್ಳಾಪುರ ಕ್ಷೇತ್ರದ ಹಾಲಿ ಸಂಸದರು. ಅವರು ತಮ್ಮ ಅಧಿಕಾರಾವಧಿಯಲ್ಲಿ ಅಷ್ಟೇನೂ ಸಕ್ರಿಯರಾಗಿರಲಿಲ್ಲ ಎಂಬ ದೂರಿತ್ತು. ಜತೆಗೆ ಅವರಿಗೆ ವಯಸ್ಸಾದ ಹಿನ್ನೆಲೆಯಲ್ಲಿ ಈ ಬಾರಿ ಟಿಕೆಟ್‌ ಇಲ್ಲ ಎಂದು ಸ್ವತಃ ಪಕ್ಷವೇ ತಿಳಿಸಿದೆ. ಬಚ್ಚೇಗೌಡರು ಕೂಡಾ ಒಪ್ಪಿಕೊಂಡಿದ್ದಾರೆ.

ಇತ್ತ ಅವರ ಪುತ್ರ ಶರತ್‌ ಬಚ್ಚೇಗೌಡ ಅವರು 2019ರಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿ ಈಗ ಎರಡನೇ ಬಾರಿ ಶಾಸಕರಾಗಿದ್ದಾರೆ. 2018ರ ಚುನಾವಣೆಯಲ್ಲಿ ಹೊಸಕೋಟೆಯಲ್ಲಿ ಕಾಂಗ್ರೆಸ್‌ನ ಎಂ.ಟಿ.ಬಿ ನಾಗರಾಜ್‌ ಅವರಿಗೂ ಬಿಜೆಪಿಯ ಶರತ್‌ ಬಚ್ಚೇಗೌಡ ಅವರಿಗೂ ಖಡಾಖಡಿ ಸಮರವಿತ್ತು. ಇದರಲ್ಲಿ ಗೆದ್ದ ಎಂ.ಟಿ.ಬಿ. ನಾಗರಾಜ್‌ ಅವರು ಗೆದ್ದಿದ್ದರು. ಆದರೆ, 2019ರಲ್ಲಿ ಆಪರೇಷನ್‌ ಕಮಲ ನಡೆದಾಗ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದ ಎಂ.ಟಿ.ಬಿ ನಾಗರಾಜ್‌ ಅವರು ಕಮಲದ ಚಿಹ್ನೆಯಿಂದ ಕಣಕ್ಕಿಳಿದರು. ಇದರಿಂದ ಸಿಟ್ಟಿಗೆದ್ದ ಶರತ್‌ ಬಚ್ಚೇಗೌಡ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿ ಕಣಕ್ಕಿಳಿದರು ಮತ್ತು ವಿಜಯಶಾಲಿಯೂ ಆದರು. ಮಗನನ್ನು ಬಿ.ಎನ್‌. ಬಚ್ಚೇಗೌಡರೂ ಬೆಂಬಲಿಸಿದ್ದರು.

ಈ ಬಾರಿ ಬಿಜೆಪಿಯಿಂದ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಯಾರು ಎಂಬ ಪ್ರಶ್ನೆ ಜೋರಾಗಿ ಚರ್ಚೆಯಲ್ಲಿದೆ. ಮಾಜಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಅವರಂತೂ ಹೈಕಮಾಂಡ್‌ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಂಸದ ವೀರಪ್ಪ ಮೊಯ್ಲಿ ಅವರೇ ಕಣಕ್ಕಿಳಿಯುವ ಹುಮ್ಮಸ್ಸಿನಲ್ಲಿದ್ದಾರೆ. ಜತೆಗೆ ಯುವ ಕಾಂಗ್ರೆಸ್‌ ಮುಖಂಡ ರಕ್ಷಾ ರಾಮಯ್ಯ ಅವರೂ ಸ್ಪರ್ಧೆಯಲ್ಲಿದ್ದಾರೆ.

ಅದೆಲ್ಲದರ ನಡುವೆ ಶರತ್‌ ಬಚ್ಚೇಗೌಡರ ಪತ್ನಿ ಪ್ರತಿಭಾ ಶರತ್‌ ಅವರು ಹೆಸರು ಜೋರಾಗಿ ಕೇಳಿಬರುತ್ತಿದೆ. ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿರುವುದು ಕಾಂಗ್ರೆಸ್‌ನಿಂದ. ಅದೇ ಹೊತ್ತಿಗೆ ಮನಸ್ಸು ಮಾಡಿದರೆ ಬಿಜೆಪಿಯೂ ಕೊಡಬಹುದು ಎಂಬ ಚರ್ಚೆ ಎದ್ದಿತ್ತು.

ವಿದ್ಯಾವಂತೆಯಾಗಿರುವ ಪ್ರತಿಭಾ ಸಾಕಷ್ಟು ಅಭಿಮಾನಿಗಳನ್ನೂ ಹೊಂದಿದ್ದಾರೆ. ಗಂಡ ಮತ್ತು ಮಾವನ ರಾಜಕೀಯ ಜೀವನವನ್ನು ನೋಡಿರುವ ಅವರಿಗೆ ತಕ್ಕ ಮಟ್ಟಿಗೆ ಅದರ ಅನುಭವವೂ ಇದೆ ಎಂಬ ಕಾರಣಕ್ಕೆ ಅವರ ಹೆಸರು ಜೋರಾಗಿ ಚರ್ಚೆಯಲ್ಲಿದೆ.

ಇದನ್ನೂ ಓದಿ : BN Bacchegowda : ನಿವೃತ್ತಿ ಘೋಷಣೆ ಮರುದಿನವೇ ಸಿದ್ದರಾಮಯ್ಯ ಭೇಟಿ ಮಾಡಿದ ಸಂಸದ ಬಚ್ಚೇಗೌಡ; ಮುಂದಿನ ನಡೆ ಏನು?

ಚುನಾವಣೆಗೆ ಸೊಸೆ ಪ್ರತಿಭಾ ಶರತ್ ನಿಲ್ಲಲ್ಲ ಎಂದ ಬಚ್ಚೇಗೌಡ

ಆದರೆ, ಯಾವ ಕಾರಣಕ್ಕೂ ಸೊಸೆ ಪ್ರತಿಭಾ ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಬಿ.ಎನ್‌. ಬಚ್ಚೇಗೌಡರು ಸ್ಪಷ್ಟಪಡಿಸಿದ್ದಾರೆ.

ನನ್ನ ಸೊಸೆ ಪ್ರತಿಭಾ ಶರತ್ ಗೌಡರನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿಯಾಗಲು ಕೇಳಿದ್ದಾರೆ. ಈ ಬಗ್ಗೆ ನಮ್ಮ‌ ಕುಟುಂಬದಲ್ಲಿ ಚರ್ಚೆ ಮಾಡಿಲ್ಲ. ಪ್ರತಿಭಾ ಶರತ್ ನಿಲ್ಲಲ್ಲ, ಅವರನ್ನು‌ ಚುನಾವಣೆಗೆ ನಿಲ್ಸಲ್ಲ ಎಂದು ಬಚ್ಚೇಗೌಡರು ಸ್ಪಷ್ಟಪಡಿಸಿದರು.

ʻʻನಾನು ಬಿಜೆಪಿ ಪಕ್ಷದಿಂದ ಚಿಕ್ಕಬಳ್ಳಾಪುರ ಸಂಸದನಾಗಿದ್ದೇನೆ. ಮಗ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷದಿಂದ ‌ಹೊಸಕೋಟೆಯ‌ ಶಾಸಕರಾಗಿದ್ದಾರೆ. ಸೊಸೆ ನನ್ನ ಮಗನಿಗಾಗಿ ಹೊಸಕೋಟೆ ನಗರ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದಾರೆʼʼ ಎಂದಿರುವ ಬಚ್ಚೇಗೌಡರು, ಮನೆಯ ಎಲ್ಲರೂ ರಾಜಕೀಯಕ್ಕೆ ಬರುವುದು ಬೇಡ. ಕುಟುಂಬ ರಾಜಕಾರಣ ಆಗಿಬಿಡುತ್ತದೆ. ಆದ್ದರಿಂದ ನನ್ನ ಸೊಸೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಿಲ್ಲಲ್ಲ ಎಂದು ತಿಳಿಸಿದರು.

ʻʻಕೆಲವರು ಸೊಸೆಯನ್ನು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ನಿಲ್ಲಿಸಿ ಎಂದು ಕೇಳಿರುವುದು ನಿಜ. ಪ್ರತಿಭಾರ ತಂದೆ ಪುಟ್ಟಸ್ವಾಮಿ ಅವರು ಗೌರಿಬಿದನೂರಿನ ಪಕ್ಷೇತರ ಶಾಸಕರಾಗಿದ್ದಾರೆ. ಪುಟ್ಟಸ್ವಾಮಿ ತಮ್ಮ ಮಂಜು ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಲ್ಲಲು ಕೆಲಸ ಮಾಡ್ತಿದ್ದಾರೆ. ಮಂಡ್ಯದ ಸಚಿವ ಚಲುವರಾಯಸ್ವಾಮಿ ಜೊತೆ ಮಂಡ್ಯದಲ್ಲಿ ಕೆಲಸ ಮಾಡ್ತಿದ್ದಾರೆ. ನಮ್ಮ ಕುಟುಂಬದಿಂದ ನನ್ನ ಮಗ ಶರತ್ ಹೊಸಕೋಟೆಯಲ್ಲಿ ಚನ್ನಾಗಿ ಕೆಲಸ ಮಾಡ್ತಿದ್ದಾನೆ. ನನ್ನ ಸೊಸೆ ರಾಜಕೀಯಕ್ಕೆ ಬರಲ್ಲ, ಚುನಾವಣೆಗೆ ನಿಲ್ಲಲ್ಲʼʼ ಎಂದು ಬಿ.ಎನ್‌. ಬಚ್ಚೇಗೌಡ ಸ್ಪಷ್ಟಪಡಿಸಿದ್ದಾರೆ.

Exit mobile version