Site icon Vistara News

Rajya Sabha Election: ಸಿಎಂ, ಡಿಸಿಎಂ ಭೇಟಿ ಮಾಡಿದ ಜನಾರ್ದನ ರೆಡ್ಡಿ; ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ?

Janardhana Reddy meets CM Siddaramaiah and DCM DK Shivakumar

ಬೆಂಗಳೂರು: ರಾಜ್ಯಸಭಾ ಚುನಾವಣೆ (Rajya Sabha Election) ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ತಂತ್ರಗಾರಿಕೆ ಜೋರಾಗಿದೆ. ಬಹುಮತ ಇರುವ ಕಾಂಗ್ರೆಸ್‌ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣ ತೊಟ್ಟಿದೆ. ಈ ನಡುವೆ ಭಾನುವಾರ ತಮ್ಮ ಪಕ್ಷದ ಶಾಸಕ ರಾಜವೆಂಕಟಪ್ಪ ನಾಯಕ (Raja Venkatappa Nayaka) ಅವರ ನಿಧನ ಕೈಪಡೆಗೆ ತಲೆಬಿಸಿ ತಂದೊಡ್ಡಿದೆ. ಹೀಗಾಗಿ ಗೆಲ್ಲಲು ಇನ್ನೊಂದು ಮತದ ಅವಶ್ಯಕತೆ ಇದೆ. ಈ ನಡುವೆ ಅಡ್ಡ ಮತದಾನದ ಭೀತಿ ಇರುವುದರಿಂದ ಪಕ್ಷೇತರ ಶಾಸಕರತ್ತ ಕೈಪಡೆ ಕಣ್ಣಿಟ್ಟಿದೆ. ಇದರ ಭಾಗವಾಗಿ ಈ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಅವರನ್ನು ತನ್ನತ್ತ ಸೆಳೆದುಕೊಂಡಿತೇ ಎಂಬ ಅನುಮಾನ ಮೂಡಿದೆ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರನ್ನು ರೆಡ್ಡಿ ಅವರು ಸಿಎಂ ನಿವಾಸ ಕಾವೇರಿಯಲ್ಲಿ ಸೋಮವಾರ ಭೇಟಿ ಮಾಡಿರುವುದು ಇದನ್ನು ಪುಷ್ಟೀಕರಿಸುತ್ತದೆ.

ಸಿಎಂ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿದ ಜನಾರ್ದನ ರೆಡ್ಡಿ ಕೆಲಕಾಲ ಸಮಾಲೋಚನೆ ನಡೆಸಿದರು. ಈ ವೇಳೆ ಸಚಿವ ಶಿವರಾಜ್ ತಂಗಡಗಿ ಜತೆಗಿದ್ದರು.

ಈ ವರೆಗೂ ಜನಾರ್ದನ ರೆಡ್ಡಿ ಅವರು ಬಿಜೆಪಿ ಪರವಾಗಿಯೇ ಮಾತನಾಡುತ್ತಿದ್ದರು. ಅವರು ಬಿಜೆಪಿಗೆ ಇಲ್ಲವೇ ಬಿಜೆಪಿ – ಜೆಡಿಎಸ್‌ ಮೈತ್ರಿ ಅಭ್ಯರ್ಥಿಗೆ ಮತ ಹಾಕುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈಗ ಅವರು ಕಾಂಗ್ರೆಸ್‌ ಪಾಳೆಯದಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಕರೆತರುವಲ್ಲಿ, ಅವರ ಬೆಂಬಲ ಪಡೆಯುವಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ನಮಗೆ ನೀವು-ನಿಮಗೆ ನಾವು

ರೆಡ್ಡಿ ಪಕ್ಷೇತರ ಶಾಸಕರಾಗಿರುವ ಕಾರಣ ಅವರಿಗೆ ಇಂಥದ್ದೇ ಪಕ್ಷವನ್ನು ಬೆಂಬಲಿಸಬೇಕು ಎನ್ನುವ ನಿಯಮ ಇಲ್ಲ. ಅಲ್ಲದೆ, ಅವರು ಪಕ್ಷೇತರರಾಗಿರುವುದರಿಂದ ಆಡಳಿತ ಪಕ್ಷದವರನ್ನು ಚೆನ್ನಾಗಿ ಇಟ್ಟುಕೊಂಡರೆ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಅದಕ್ಕೆ ಹೆಚ್ಚಿನ ಅನುದಾನವನ್ನು ತರಬಹುದಾಗಿದೆ. ಇದನ್ನೇ ದಾಳವಾಗಿ ಬಳಸಿಕೊಂಡ ಡಿಸಿಎಂ ಡಿ.ಕೆ. ಶಿವಕುಮಾರ್‌ ಶುಕ್ರವಾರ ವಿಧಾನಸಭೆಯಲ್ಲಿ ರೆಡ್ಡಿ ಅವರ ಕೆಲಸವನ್ನು ಮಾಡಿಕೊಟ್ಟಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಾನು ಸಹಕಾರ ಕೊಡುವೆ, ಪಕ್ಷಕ್ಕೆ ನಿಮ್ಮ ಸಹಕಾರ ಇರಲಿ ಎಂದು ಹೇಳಿದ್ದಾರೆನ್ನಲಾಗಿದೆ.

ಕೆಲಸ ಮಾಡಿಕೊಟ್ಟಿರುವ ಡಿಕೆಶಿ!

ಒಟ್ಟು ನಾಲ್ಕೂ ಪಕ್ಷೇತರರ ಮತಗಳನ್ನು ಸಹ ಕಾಂಗ್ರೆಸ್‌ಗೆ ಹಾಕಿಸಿಕೊಳ್ಳಲು ಡಿ.ಕೆ. ಶಿವಕುಮಾರ್ ತಂತ್ರಗಾರಿಕೆ ನಡೆಸಿದ್ದಾರೆ. ‌ಇದರ ಭಾಗವಾಗಿ ಶುಕ್ರವಾರ ವಿಧಾನಸಭೆಯಲ್ಲಿ ಜನಾರ್ದನ ರೆಡ್ಡಿಗೆ ನಗರಾಭಿವೃದ್ಧಿ ಇಲಾಖೆಯ ಕೆಲಸ ಮಾಡಿಕೊಟ್ಟು ಚುನಾವಣೆಯಲ್ಲಿ ತಮ್ಮ ಪರ ಇರುವಂತೆ ಡಿಕೆಶಿ ಹೇಳಿದ್ದಾರೆನ್ನಲಾಗಿದೆ. ಈಗ ಸೋಮವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ರೆಡ್ಡಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಬಿಜೆಪಿ- ಜೆಡಿಎಸ್‌ ಮೈತ್ರಿ ಅಭ್ಯರ್ಥಿಗೆ ಪರೋಕ್ಷ ಸಂದೇಶವನ್ನು ರವಾನೆ ಮಾಡಲಾಗಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: Rajya Sabha Election: ನಾಳೆ ರಾಜ್ಯಸಭಾ ಕದನ; ಅಡ್ಡಮತದಾನ ಭೀತಿ, ಕೈಗೆ ಫಜೀತಿ! ಲೆಕ್ಕಾಚಾರ ಹೇಗೆ?

ಯಾರು ಕೈಕೊಡುತ್ತಾರೆ? ಯಾರು ಕೈ ಹಿಡಿಯುತ್ತಾರೆ?

ಅಡ್ಡ ಮತದಾನದ ಭೀತಿಯೂ ಇರುವುದರಿಂದ ಕಾಂಗ್ರೆಸ್‌ ತನ್ನ ಶಾಸಕರನ್ನು ರೆಸಾರ್ಟ್‌ಗೆ ಶಿಫ್ಟ್‌ ಮಾಡಲು ನಿರ್ಧಾರ ಮಾಡಿದೆ. ಅಲ್ಲಿಂದಲೇ ನೇರವಾಗಿ ಕರೆತಂದು ಮತದಾನವನ್ನು ಮಾಡಿಸಲಿದೆ. ಇತ್ತ ಜೆಡಿಎಸ್ – ಬಿಜೆಪಿ ಅಭ್ಯರ್ಥಿಗಳಿಂದಲೂ ಪಕ್ಷೇತರ ಅಭ್ಯರ್ಥಿಗಳನ್ನು ಸಂಪರ್ಕ ಮಾಡಲಾಗುತ್ತಿದೆ. ಜೆಡಿಎಸ್ ಅಭ್ಯರ್ಥಿಗೆ ಇನ್ನೂ ಐದು ಮತಗಳ ಕೊರತೆ ಇದೆ. ಹೀಗಾಗಿ ಪಕ್ಷೇತರ ಮತ ಸೆಳೆಯಲು ಮೈತ್ರಿ ಪಕ್ಷಗಳ ನಾಯಕರು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಕೊನೇ ಘಳಿಗೆಯಲ್ಲಿ ಯಾರು ಯಾರಿಗೆ ಕೈಕೊಡಲಿದ್ದಾರೆ? ಕೈ ಹಿಡಿಯಲಿದ್ದಾರೆ ಎಂಬುದು ಮಾತ್ರ ನಿಗೂಢವಾಗಿದೆ.

ಇನ್ನೂ ತೀರ್ಮಾನ ಮಾಡಿಲ್ಲ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ, ಐತಿಹಾಸಿಕ ಆನೆಗೊಂದಿ ಉತ್ಸವವನ್ನ ವೈಭವದಿಂದ ಆಚರಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಮಾರ್ಚ್ ತಿಂಗಳಲ್ಲಿ ವೈಭವದಿಂದ ಆಚರಿಸಲಾಗುತ್ತದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ‌ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಆಹ್ವಾನ ನೀಡಲು ಹೋಗಿದ್ದೆ. ರಾಜ್ಯಸಭಾ ಚುನಾವಣೆಗೆ ಮತ ನೀಡುವಂತೆ ಎಲ್ಲರೂ ಮನವಿ ಮಾಡಿದ್ದಾರೆ. ಸಿಎಂ, ಡಿಸಿಎಂ ಆದಿಯಾಗಿ ಎಲ್ಲ ಪಕ್ಷದವರೂ ಮನವಿ ಮಾಡಿದ್ದಾರೆ. ನಾನು ಇನ್ನೂ ಈ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.

Exit mobile version