Site icon Vistara News

Satish Jarkiholi: ʼಹಿಂದುʼ ಅಶ್ಲೀಲ ಎಂದಿದ್ದ ಸತೀಶ್‌ ಜಾರಕಿಹೊಳಿಗೆ ಸಂಕಷ್ಟ; ಕ್ರಿಮಿನಲ್‌ ಕೇಸ್‌ಗೆ ಕೋರ್ಟ್‌ ಒಪ್ಪಿಗೆ

Satish Jarkiholi

ಬೆಂಗಳೂರು: ಹಿಂದು ಪದಕ್ಕೆ ಅಶ್ಲೀಲ ಎಂಬ ಅರ್ಥವಿದೆ (word Hindu means obscene) ಎಂಬ ಹೇಳಿಕೆ ನೀಡಿದ್ದ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ವಿರುದ್ಧ ಕ್ರಿಮಿನಲ್ ಮೊಕದ್ದಮೆ (Criminal Case) ದಾಖಲು ಮಾಡಲು ಜನಪ್ರತಿನಿಧಿಗಳ ನ್ಯಾಯಾಲಯ (Court of Representatives) ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ 2022ರ ನವೆಂಬರ್ 6ರಂದು ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸತೀಶ್ ಜಾರಕಿಹೊಳಿ ಅವರು, ಹಿಂದು ಹಾಗೂ ಹಿಂದುತ್ವದ ಪದದ ಬಗ್ಗೆ ಮಾತನಾಡಿದ್ದರು. ಹಿಂದು ಪದಕ್ಕೆ ಅಶ್ಲೀಲ ಎಂಬ ಅರ್ಥವಿದೆ ಎಂದು ಹೇಳಿದ್ದರು. ಇದರ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಟೀಕೆ, ಆಕ್ರೋಶಗಳು ವ್ಯಕ್ತವಾಗಿದ್ದವು. ಈ ಸಂಬಂಧ ಬಿಜೆಪಿ ನಾಯಕರು, ಹಿಂದು ಕಾರ್ಯಕರ್ತರು, ರಾಜ್ಯದ ಹಲವು ಕಡೆ ಸತೀಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದರು. ವಕೀಲ ದಿಲೀಪ್‌ ಕುಮಾರ್ ಅವರು ಕೋರ್ಟ್‌ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯವು ಈಗ ಸತೀಶ್‌ ಜಾರಕಿಹೊಳಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆದೇಶ ನೀಡಿದೆ.

ನ್ಯಾಯಾದೀಶೆ ಜೆ ಪ್ರೀತ್ ಅವರಿಂದ ಆದೇಶ ನೀಡಲಾಗಿದೆ. ಹೀಗಾಗಿ ಸತೀಶ್‌ ಜಾರಕಿಹೊಳಿಗೆ ಈಗ ಸಂಕಷ್ಟ ಎದುರಾಗಿದೆ.

ಸಮರ್ಥನೆ ಮಾಡಿಕೊಂಡಿದ್ದ ಸತೀಶ್‌ ಜಾರಕಿಹೊಳಿ

ಹಿಂದು ಪದಕ್ಕೆ ಪರ್ಷಿಯನ್‌ ಡಿಕ್ಷ್‌ನರಿಯಲ್ಲಿ ನೀಡಿರುವ ಕೀಳು ಅರ್ಥವನ್ನು ಹುಡುಕಿಕೊಟ್ಟಿದ್ದಕ್ಕೆ ಬಿಜೆಪಿಯವರು ನನಗೆ ಕೃತಜ್ಞರಾಗಿರಬೇಕು ಎಂದಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ, ತಮ್ಮ ಹೇಳಿಕೆಯನ್ನು ಬಲವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ಹಿಂದು ಪದದ ಕುರಿತು ಭಾಷಣದ ವಿಡಿಯೋ ಎಲ್ಲೆಡೆ ಹರಿದಾಡಿದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಆಕ್ಷೇಪ ವ್ಯಕ್ತಪಡಿಸಿದ್ದರು. ದೇಶಾದ್ಯಂತ ವಿವಾದ ಹೆಚ್ಚಾಗುತ್ತಿರುವುದರಿಂದ ಒಂದು ಸ್ಪಷ್ಟನೆ ನೀಡುವಂತೆ ಸುರ್ಜೆವಾಲ ದೂರವಾಣಿ ಕರೆ ಮಾಡಿ ಹೇಳಿದ್ದರಿಂದ ಸತೀಶ್‌ ಜಾರಕಿಹೊಳಿ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Foreign Currency Transfer: ಧರ್ಮಸ್ಥಳದಲ್ಲಿ ಐವರ ಬಳಿ 42 ಸಿಮ್! ವಿದೇಶಿ ಕರೆನ್ಸಿ ವರ್ಗಾವಣೆ ದಂಧೆ?

ಪುಸ್ತಕದಲ್ಲಿದ್ದದ್ದನ್ನು ನಾನು ಹೇಳಿದ್ದೇನೆ. ತಮಗೆ ಬೈದಿದ್ದನ್ನು ಬಿಜೆಪಿಯವರು ನೋಡಿಲ್ಲ. ಇಂತಹದ್ದನ್ನು ಹುಡುಕಿ ಹೇಳಿದ್ದಕ್ಕೆ ನನಗೆ ಅವರು ಕೃತಜ್ಞತೆ ಸಲ್ಲಿಸಬೇಕು. ನಿಮ್ಮ ಬಗ್ಗೆ ಹೀಗೆ ಹೇಳಿದ್ದಾರೆ ಹುಡುಕಿ ಎಂದಿದ್ದೇನೆ. ನೀವು ಹಿಂದುವೋ ಅಥವಾ ಬೇರಾವುದೋ ಧರ್ಮದವರೋ ಎಂಬ ಪ್ರಶ್ನೆಗೆ, ನಾನು ಭಾರತೀಯ, ಇಂಡಿಯನ್‌ ಎಂದು ಉತ್ತರಿಸಿದ ಜಾರಕಿಹೊಳಿ, ಡಿಕ್ಷ್‌ನರಿಯಲ್ಲಿ ಹಿಂದು ಪದಕ್ಕೆ ಏನು ಬಳಕೆ ಮಾಡಿದ್ದಾರೆ ಎಂದು ತೆಗೆದುನೋಡಿ. ಹಿಂದು ಪದಕ್ಕೆ ಕೆಟ್ಟ ಶಬ್ದ ಬಳಸಿದ್ದಾರೆ ನೋಡಿ ಎಂದಿದ್ದೇನೆ. ಡಿಕ್ಷ್‌ನರಿಯಲ್ಲಿ ಹಿಂದು ಪದಕ್ಕೆ ಅಶ್ಲೀಲ ಅರ್ಥ ಇದೆ. ಇದರ ಬಗ್ಗೆ ವಾಜಪೇಯಿ ಅವರೂ ಸೇರಿ ಅನೇಕರು ಮಾತನಾಡಿದ್ದಾರೆ. ನಾನು ಯಾರ ಪರವಾಗಿಯೂ, ವಿರೋಧವಾಗಿಯೂ ಇಲ್ಲ. ನಾವು ಮನುಷ್ಯರ ಪರವಾಗಿದ್ದೇವೆ, ಅದರ ನ್ಯೂನತೆಗಳನ್ನು ನಾನು ಹೇಳಿದ್ದೇನೆ ಎಂದು ತಮ್ಮ ಮಾತನ್ನು ಸಮರ್ಥನೆ ಮಾಡಿಕೊಂಡಿದ್ದರು.

Exit mobile version