Site icon Vistara News

Sedition case: ಭಾರತದಲ್ಲಿ ಪಾ’ಕೈ’ಸ್ತಾನ ಬೆಂಬಲಿಸುವವರ ‘ಕೈಗಳ ಹೆಡೆಮುರಿ ಕಟ್ಟಿ; ಕಾಂಗ್ರೆಸ್‌ ಮೇಲೆ ಬಿಜೆಪಿ ಕಿಡಿ

ಬೆಂಗಳೂರು: ರಾಜ್ಯಸಭಾ ಚುನಾವಣೆಯ (Rajya Sabha Election) ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ನೂತನ ಸದಸ್ಯ ನಾಸಿರ್ ಹುಸೇನ್ (Nasir Hussain) ಬೆಂಬಲಿಗರು ವಿಧಾನಸೌಧದೊಳಗೇ ಶತ್ರು ರಾಷ್ಟ್ರ ಪಾಕಿಸ್ತಾನದ ಪರ ಜೈಕಾರ ಕೂಗಲಾಗಿದೆ ಎನ್ನಲಾದ ಪ್ರಕರಣ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. “ದೇಶದ್ರೋಹ”ದ (Sedition case) ಹೇಳಿಕೆಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಸದನದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಇತ್ತ ಬಿಜೆಪಿ ಸಹ ಉಗ್ರ ಹೋರಾಟಕ್ಕೆ ಮುಂದಾಗಿದೆ. ಈ ನಡುವೆ ಕಾಂಗ್ರೆಸ್‌ ಸರ್ಕಾರವನ್ನು ಲೇವಡಿ ಮಾಡಿ ಬಿಜೆಪಿ ಟ್ವೀಟ್‌ ಮಾಡಿದೆ. ಭಾರತದಲ್ಲಿ ಪಾಕಿಸ್ತಾನವನ್ನು ಕಾಂಗ್ರೆಸ್‌ ಬೆಂಬಲ ನೀಡುತ್ತಿದೆ. ಇದಕ್ಕೆ ಹೆಡೆಮುರಿ ಕಟ್ಟಿ ಎಂಬರ್ಥದಲ್ಲಿ ಸಂದೇಶವನ್ನು ಹಾಕಿದೆ. ಅಲ್ಲದೆ, ಕಾಂಗ್ರೆಸ್‌ ಪಕ್ಷದ ಚಿಹ್ನೆ ಹಸ್ತಕ್ಕೆ ಹಸಿರು ಬಣ್ಣ ಹಾಗೂ ಪಾಕ್‌ ಬಾವುಟವನ್ನು ಚಿತ್ರಿಸಿ ಹರಿಬಿಡಲಾಗಿದೆ.

ವಿಧಾನಸೌಧದಲ್ಲಿ ಕಾಂಗ್ರೆಸ್‌ನ ನೂತನ ಸದಸ್ಯ ನಾಸಿರ್‌ ಹುಸೇನ್ ರಾಜ್ಯಸಭೆಗೆ ಪ್ರವೇಶ ಮಾಡುತ್ತಿದ್ದಂತೆ ಅವರ ಬೆಂಬಲಿಗನೊಬ್ಬ ಘೋಷಣೆ ಕೂಗಿರುವುದು ಈಗ ವಿವಾದಕ್ಕೆ ಎಡೆಯಾಗಿದೆ. ಆತ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ. ಆದರೆ, ಕಾಂಗ್ರೆಸ್‌ ಇದನ್ನು ಒಪ್ಪುತ್ತಿಲ್ಲ. ವಿಡಿಯೊವನ್ನು ಎಫ್‌ಎಸ್‌ಎಲ್‌ ವರದಿಗೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ಬಳಿಕವಷ್ಟೇ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

ಒಂದು ವೇಳೆ ಎಫ್‌ಎಸ್‌ಎಲ್‌ ಪರೀಕ್ಷೆಯಲ್ಲಿ ಆರೋಪಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದೇ ಆದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮವನ್ನು ತೆಗೆದುಕೊಳ್ಳುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದ್ದಾರೆ. ಆದರೆ, ವರದಿ ಬರುವವರೆಗೆ ಯಾವುದೇ ಕ್ರಮವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದ್ದು, ತಪ್ಪಿತಸ್ಥರನ್ನು ಬಂಧನ ಮಾಡುವವರೆಗೆ ಹೋರಾಟ ನಡೆಸಲಾಗುವುದು ಎಂದು ಹೇಳಲಾಗಿದೆ.

ಕಾಂಗ್ರೆಸ್‌ ವಿರುದ್ಧ ಪೋಸ್ಟರ್‌ ಬಿಟ್ಟ ಬಿಜೆಪಿ

ಈಗ ಕಾಂಗ್ರೆಸ್‌ ಸರ್ಕಾರದ ನಡೆಯನ್ನು ಖಂಡಿಸಿರುವ ಬಿಜೆಪಿಯು ಪೋಸ್ಟರ್‌ವೊಂದನ್ನು ಹರಿಬಿಟ್ಟಿದೆ. ಭಾರತದಲ್ಲಿ ಪಾ”ಕೈ”ಸ್ತಾನವನ್ನು ಬೆಂಬಲಿಸುವವರ “ಕೈ”ಗಳನ್ನು ಹೆಡೆಮುರಿ ಕಟ್ಟಿ ಎಂದು ಕರೆ ನೀಡಿದೆ.

ಸಚಿವ ಪ್ರಿಯಾಂಕ್‌ ಖರ್ಗೆ ಅವರ ವಾದವೇನು?

ಈ ಬಗ್ಗೆ ಹಿರಿಯ ಕಾಂಗ್ರೆಸ್‌ ನಾಯಕ, ರಾಜ್ಯದ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಟ್ವೀಟ್‌ ಪೋಸ್ಟ್‌ ಮಾಡಿ ಅಲ್ಲಿ ತಮ್ಮ ವಾದದ ವಿಚಾರವನ್ನು ಮುಂದಿಟ್ಟಿದ್ದಾರೆ. ಇದೊಂದು ವ್ಯವಸ್ಥಿತವಾದ ಷಡ್ಯಂತ್ರ ಎಂದಿದ್ದಾರೆ. ಮಾಧ್ಯಮಗಳಿಗೂ ಹಲವು ಪ್ರಶ್ನೆ ಕೇಳಿದ್ದಾರೆ. ಅಂತಿಮವಾಗಿ ಅಲ್ಲಿ ಏನೂ ನಡೆದಿಲ್ಲ. ಏನೋ ನಡೆದಿದೆ ಎಂಬಂತೆ ಬಿಂಬಿಸಲಾಗಿದೆ ಎಂದು ಅವರು ಹೇಳಿದ್ದಾರೆ.

  1. ದೇಶದಲ್ಲಿ ಬಿಜೆಪಿ ಸವಾಲುಗಳನ್ನು ಎದುರಿಸುವ ಸಂದರ್ಭ ಬಂದಾಗಲೆಲ್ಲ ಈ “ಪಾಕಿಸ್ತಾನ್ ಜಿಂದಾಬಾದ್” ಎನ್ನುವ ಶಬ್ದ ಸದ್ದು ಮಾಡುತ್ತದೆ!
  2. ಮಾಧ್ಯಮ ಸ್ನೇಹಿತರಲ್ಲಿ ಕೇಳಬೇಕು ಎನಿಸುವ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ,
    -ವಿಜಯೋತ್ಸವ ಆಚರಣೆಯ ವೇಳೆ ಅಲ್ಲಿ ಉಪಸ್ಥಿತರಿದ್ದ ಒಂದಷ್ಟು ಮಾಧ್ಯಮ ಸ್ನೇಹಿತರು ಅಲ್ಲಿ “ನಾಸಿರ್ ಸಾಬ್ ಜಿಂದಾಬಾದ್” ಎಂದು ಕೂಗಿರುವುದಾಗಿ ಹೇಳಿದ್ದಾರೆ.
    -ಅಕಸ್ಮಾತ್ ಅಲ್ಲಿ “ಪಾಕಿಸ್ತಾನ್” ಎಂದೇ ಕೂಗಿದ್ದರೆ ಎಲ್ಲರಿಗೂ ಒಂದೇ ರೀತಿ ಕೇಳಿಸಿರಬೇಕಲ್ಲವೇ?
    – ಅಕಸ್ಮಾತ್ ಆತ ನಿಜಕ್ಕೂ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರೆ ಸಹಜವಾಗಿ ಪತ್ರಕರ್ತರ ಪ್ರಜ್ಞೆ ಜಾಗೃತವಾಗಿ ಆತನತ್ತ ಗಮನ ಹರಿಸುತ್ತಿದ್ದರು, ಆತನತ್ತ ಕ್ಯಾಮರಾ ತಿರುಗಿಸುತ್ತಿದ್ದರು, ಆತನ ಮೇಲೆ ಮುಗಿಬೀಳುತ್ತಿದ್ದರು, ಆದರೆ ಇಲ್ಲಿ ಪತ್ರಕರ್ತರು ಆತನತ್ತ ಕಿಂಚಿತ್ತೂ ಗಮನಿಸುವುದಿಲ್ಲ,
    -ಆತ ಹಾಗೆ ಕೂಗಿದ್ದೇ ಆಗಿದ್ದರೆ ಅಲ್ಲಿ ನೆರೆದಿದ್ದವರು ಖಂಡಿತಾ ಸುಮ್ಮನಿರುತ್ತಿರಲಿಲ್ಲ, ಕೂಡಲೇ ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಿದ್ದರು.
    – ಪತ್ರಕರ್ತರೂ ಸೇರಿದಂತೆ ಅಲ್ಲಿ ನೆರೆದಿದ್ದವರ ಮ್ಯಾನರಿಸಂನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ,
    – ಅಕಸ್ಮಾತ್ ಆ ವ್ಯಕ್ತಿ ಹಾಗೆ ಘೋಷಣೆ ಕೂಗಿದ್ದಿದ್ದರೆ ಅಲ್ಲಿನ ಪತ್ರಕರ್ತರ “ದೇಶಭಕ್ತಿ“ ಜಾಗೃತವಾಗದೆ ಸಹಜವಾಗಿದ್ದಿದ್ದೇಕೆ? ಏನೂ ನಡೆದೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದೇಕೆ? ಪತ್ರಕರ್ತ ಸ್ನೇಹಿತರೇ ಉತ್ತರಿಸಬೇಕು.
    ಮಾಧ್ಯಮ ಜಾಗೃತವಾಗಲಿ. ಜಾಗೃತ ಮಾಧ್ಯಮ ಜನಕಲ್ಯಾಣಕ್ಕೆ ಕಾರಣವಾಗಲಿ. ಈ ರೀತಿ ಭಜನೆಗಲ್ಲಾ.- ಎಂದಿದ್ದಾರೆ ಪ್ರಿಯಾಂಕ್‌ ಖರ್ಗೆ.
  3. ಇದರ ಜತೆಗೆ ಪ್ರಿಯಾಂಕ್‌ ಖರ್ಗೆ ಅವರು ಕೆಲವೊಂದು ಮಾಧ್ಯಮದ ತುಣುಕುಗಳನ್ನು ಟ್ಯಾಗ್‌ ಮಾಡಿದ್ದಾರೆ.

ಇದನ್ನೂ ಓದಿ : Sedition Case: ಪಾಕ್‌ ಪರ ಘೋಷಣೆಗೆ ಆಕ್ರೋಶ; ರಾಜ್ಯದ ವಿವಿಧೆಡೆ ಬಿಜೆಪಿ, ಹಿಂದು ಪರ ಕಾರ್ಯಕರ್ತರ ಪ್ರತಿಭಟನೆ

sedition Case : ಮೊಹಮ್ಮದ್‌ ಜುಬೇರ್‌ ಫ್ಯಾಕ್ಟ್‌ ಚೆಕ್‌ ಹೇಳೋದೇನು?

ಈ ನಡುವೆ, ವಿವಾದಿತ ಫ್ಯಾಕ್ಟ್‌ ಚೆಕರ್‌ ಮೊಹಮ್ಮದ್‌ ಜುಬೇರ್‌ ವಿಡಿಯೊದಲ್ಲಿರುವುದು ಪಾಕಿಸ್ತಾನ್‌ ಜಿಂದಾಬಾದ್‌ ಅಲ್ಲ, ನಾಸಿರ್‌ ಜಿಂದಾಬಾದ್‌ ಎಂದು- ಎಂದಿದ್ದಾರೆ. ಕಾಂಗ್ರೆಸ್‌ ನಾಯಕರು ಮತ್ತು ಬೆಂಬಲಿಗರು ತಮ್ಮ ವಾದಕ್ಕೆ ಪೂರಕವಾಗಿ ಈ ಟ್ವೀಟನ್ನು ಬಳಸಿಕೊಳ್ಳುತ್ತಿದ್ದಾರೆ.

ಈ ನಡುವೆ ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದಿರುವ ನಾಸಿರ್‌ ಹುಸೇನ್‌ ಅವರು ಕೂಡಾ ಸ್ಪಷ್ಟನೆ ನೀಡಿದ್ದು, ಅಲ್ಲಿ ಯಾರೂ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿಲ್ಲ. ಒಂದು ವೇಳೆ ಕೂಗಿದ್ದೇ ಹೌದಾದರೆ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ.

Exit mobile version