Site icon Vistara News

Siddaramaiah: ಸದನದಲ್ಲಿ ನಾನಿಲ್ಲದಿರುವಾಗ ಸಿಎಂ ಆರೋಪ ಮಾಡಿದ್ದಾರೆ: ಸುದೀರ್ಘ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ

Former CM Siddaramaiah

Former CM Siddaramaiah

ಬೆಂಗಳೂರು: ನಾನು ಸದನದಲ್ಲಿ ಇಲ್ಲದಿರುವಾಗ ವೀರಾವೇಶದಿಂದ ಕೂಗಾಡಿದ್ದು ನೋಡಿದರೆ ಏನೋ ದೊಡ್ಡ ಹಗರಣ ನಡೆದಿದೆ, ಎಕರೆಗೆ 10 ಕೋಟಿ ಯಂತೆ 8000 ಕೋಟಿ ರೂಪಾಯಿ ಹಗರಣ ನಡೆದಿದೆ ಎನ್ನುವ ರೀತಿಯಲ್ಲಿ ಜನರ ಮುಂದೆ ತಪ್ಪು ಅಭಿಪ್ರಾಯ ಮೂಡಿಸಲು ಪ್ರಯತ್ನ ಪಟ್ಟಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಬಜೆಟ್‌ ಮೇಲಿನ ಉತ್ತರದ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾಡಿದ ಆರೋಪಗಳ ಕುರಿತು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿದರು.

ಬಸವರಾಜ ಬೊಮ್ಮಾಯಿ ಅವರು ಜವಾಬ್ದಾರಿಯುತ ಮುಖ್ಯಮಂತ್ರಿ ಹುದ್ದೆಯಲ್ಲಿದ್ದುಕೊಂಡು ಹಿಂದಿನ ಕಾಂಗ್ರೆಸ್‌ ಸರ್ಕಾರ ತನ್ನ ಮೇಲಿನ ಭ್ರಷ್ಟಾಚಾರದ ಆರೋಪಗಳನ್ನು ಮುಚ್ಚಿಕೊಳ್ಳಲು ಎಸಿಬಿ ರಚನೆ ಮಾಡಿತ್ತು ಎಂದು ಸುಳ್ಳು ಹೇಳಿರುವುದು ಖಂಡನೀಯ. ಬಿಜೆಪಿ ಸರ್ಕಾರ ಅಡ್ವೊಕೇಟ್‌ ಜನರಲ್‌ ಅವರ ಮೂಲಕ ಎಸಿಬಿ ರಚನೆ ಮಾಡಿರುವುದು ಸರಿಯಿದೆ, ಎಸಿಬಿಯು ಲೋಕಾಯುಕ್ತ ಕಾಯ್ದೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಕೋರ್ಟಿನಲ್ಲಿ ಹೇಳಿಸಿದ್ದಾರೆ. ಆದರೆ ಹೊರಗಡೆ ತಮ್ಮ ನಿಲುವಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಇಂಥಾ ದ್ವಂದ್ವ ಯಾಕೆ?

ಎಸಿಬಿ ರಚನೆ ಆದ ನಂತರ ಲೋಕಾಯುಕ್ತವನ್ನು ಮುಚ್ಚಿರಲಿಲ್ಲ, ಲೋಕಾಯುಕ್ತ ರಚನೆಯಾದದ್ದು 1984ರ ಲೋಕಾಯುಕ್ತ ಕಾಯ್ದೆಯ ಪ್ರಕಾರ. ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿರುವಾಗ ಮಾಡಿದ್ದು, 14-3-2016ರಲ್ಲಿ ಲೋಕಾಯುಕ್ತರಾಗಿದ್ದ ಭಾಸ್ಕರ್‌ ರಾವ್‌ ಅವರ ಮಗ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು, ಬೇರೆ ರಾಜ್ಯಗಳಲ್ಲಿ ಕೂಡ ಎಸಿಬಿ ರಚನೆ ಮಾಡಿದ್ದರಿಂದ ನಾವು ರಾಜ್ಯದಲ್ಲೂ ಪ್ರತ್ಯೇಕ ಸಂಸ್ಥೆಯನ್ನು ರಚನೆ ಮಾಡಿದ್ದೆವು. ನಾವು ಲೋಕಾಯುಕ್ತ ಮುಚ್ಚಲೂ ಇಲ್ಲ, ಲೋಕಾಯುಕ್ತರನ್ನು ತೆಗೆದುಹಾಕುವುದಾಗಲೀ ಮಾಡಿಲ್ಲ.

2003ರಲ್ಲಿ ಅರ್ಕಾವತಿ ಲೇಔಟ್‌ ಆದದ್ದು. ನಾವು ಅಧಿಕಾರಕ್ಕೆ ಬರುವ ಮೊದಲೇ ಇವೆಲ್ಲ ನಡೆದು ನೋಟಿಫಿಕೇಷನ್‌ ಆಗಿತ್ತು, 2750 ಎಕರೆಗೆ ನೋಟಿಫಿಕೇಷನ್‌ ಆಯ್ತು. ನಂತರ 1919 ಎಕರೆ 13 ಗುಂಟೆಗೆ ಅಂತಿಮವಾಗಿ ನೋಟಿಫಿಕೇಷನ್‌ ಆಯ್ತು. ಇದನ್ನು ಹೈಕೋರ್ಟ್‌ ನಲ್ಲಿ ಚಾಲೆಂಜ್‌ ಮಾಡಿದ್ರು. ಹೈಕೋರ್ಟ್‌ ನ ಏಕಸದಸ್ಯ ಪೀಠ ಈ ಮನವಿಯನ್ನು ತಿರಸ್ಕಾರ ಮಾಡಿತು. ನಂತರ ವಿಭಾಗೀಯ ಪೀಠಕ್ಕೆ ಹೋದರು, ಅಲ್ಲಿ ಬಿಡಿಎ ಅವರ ಮಾಡಿದ್ದ ನೋಟಿಫಿಕೇಷನ್‌ ಅನ್ನು ಎತ್ತಿಹಿಡಿಯಲಾಯಿತು.

ಅದರ ವಿರುದ್ಧ ಸೊಂಡೂರು ರಾಮಸ್ವಾಮಿ ಮತ್ತು ಇನ್ನಿತರರು ಸುಪ್ರೀಂ ಕೋರ್ಟ್‌ ಗೆ ಹೋದರು, ಅಲ್ಲಿ ಕೂಡ ವಿಭಾಗೀಯ ಪೀಠ ಹೇಳಿದ್ದನ್ನು ಪುನರುಚ್ಚಾರ ಮಾಡಿ ಕೆಲವು ನಿರ್ದೇಶನಗಳನ್ನು ನೀಡಿದರು. ಇನ್ನು ಕೆಲವು ಅರ್ಜಿಗಳು ಇದ್ದಾವೆ, ನಮ್ಮ ಜಮೀನನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಭೂಮಾಲೀಕರು ಹೇಳುತ್ತಿದ್ದಾರೆ, ಇವುಗಳನ್ನು ಪರಿಶೀಲನೆ ಮಾಡಿ ಎಂದು ಕೆಲವು ಮಾನದಂಡಗಳನ್ನು ನಿಗದಿ ಮಾಡಿದರು. ಆ ಮಾನದಂಡಗಳ ಪ್ರಕಾರ 5 ಟೀಮ್‌ ಗಳನ್ನು ಮಾಡಿದ್ದರು, 5 ಟೀಮ್‌ ಗಳಿಗೆ ಕೆಎಎಸ್‌ ಅಧಿಕಾರಿಗಳನ್ನು ಮುಖ್ಯಸ್ಥರನ್ನಾಗಿ ಮಾಡಿದ್ರು. ಇದು ಆದದ್ದು ಯಡಿಯೂರಪ್ಪ ಅವರ ಕಾಲದಲ್ಲಿ. ಇದಾದ ನಂತರ ಈ ಟೀಮ್‌ ಗಳು ಪರೀಕ್ಷೆ ಮಾಡಿ ಕೆಲವೆಲ್ಲ ಭೂಮಿಗಳನ್ನು ಡಿಲೀಟ್‌ ಮಾಡಿ ಬಿಡಿಎ ಗೆ ಒಂದು ವರದಿ ನೀಡಿದ್ರು. ಬಿಡಿಎ ನವ್ರು ಈ ವರದಿಯಲ್ಲಿ ಪರೀಕ್ಷಿಸಿ ಅನುಮೋದನೆ ನೀಡಿದ್ರು. ಇವೆಲ್ಲ ನಡೆದದ್ದು ನಾವು ಅಧಿಕಾರಕ್ಕೆ ಬರುವ ಮುಂಚಿತವಾಗಿ. ಈ ಫೈಲ್‌ ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿಯಾಗಿರುವಾಗ ಅವರ ಬಳಿ ಹೋಗಿತ್ತು, ಚುನಾವಣಾ ನೀತಿಸಂಹಿತೆ ಇದೆ ಎಂದು ಫೈಲ್‌ ಅನ್ನು ಅವರು ವಾಪಸು ಕಳಿಸಿದ್ದರು.

ನಾನು ಈ ಹಿಂದೆಯೇ ಬಿಜೆಪಿಯವರಿಗೆ ಹೇಳಿದ್ದೇನೆ, ನೀವು ನಿಮ್ಮ ಮೇಲಿನ ಭ್ರಷ್ಟಾಚಾರದ ಆರೋಪಗಳಿಂದ ತಪ್ಪಿಸಿಕೊಳ್ಳಲು ನಮ್ಮ ವಿರುದ್ಧ ಈಗ ಆರೋಪ ಮಾಡುತ್ತಿದ್ದೀರಿ, ನಾವು ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷವಾಗಿದ್ದ ನೀವು ಯಾಕೆ ಅಂದು ಈ ಎಲ್ಲಾ ವಿಚಾರಗಳನ್ನು ಮಾತನಾಡಿರಲಿಲ್ಲ? ಎಂದಿದ್ದೆ.

ಬಿಟ್‌ ಕಾಯಿನ್‌ ಹಗರಣ ಮುಚ್ಚಿಹಾಕಿದ್ರು, ಪಿಎಸ್‌ಐ ನೇಮಕಾತಿ ಹಗರಣ ಮುಚ್ಚಿ ಹಾಕಿದ್ರು, 40% ಕಮಿಷನ್‌ ಹಗರಣ ಮುಚ್ಚಿಹಾಕಲು ಹೊರಟಿದ್ದಾರೆ, ಕೊರೊನಾ ಕಾಲದಲ್ಲಿ ವೈದ್ಯಕೀಯ ಉಪರಕಣಗಳ ಖರೀದಿಯಲ್ಲಿ ನಡೆದಿದ್ದ ಅವ್ಯವಹಾರವನ್ನು ಮುಚ್ಚಿ ಹಾಕಲಾಗಿದೆ. ಹೀಗೆ ಅನೇಕ ಹಗರಣಗಳನ್ನು ಮುಚ್ಚಿಹಾಕಲಾಗಿದೆ. ನಾನು ಮುಖ್ಯಮಂತ್ರಿಯಾಗಿರುವಾಗ ನಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ತನಿಖೆಗೆ ವಹಿಸಿದ್ದೆ. 8 ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆ, ಬಹುತೇಕ ಪ್ರಕರಣಗಳಲ್ಲಿ ಬಿ ರಿಪೋರ್ಟ್‌ ಬಂದಿದೆ. ಈ ಸರ್ಕಾರ ಒಂದು ಪ್ರಕರಣವನ್ನಾದ್ರೂ ತನಿಖೆಗೆ ನೀಡಿದ್ಯಾ? ಈ ಪಿಎಎಸ್‌ಐ ನೇಮಕಾತಿ ಹಗರಣದಲ್ಲಿ ನಿತ್ಯ ಪತ್ರಿಕೆಗಳಲ್ಲಿ ವರದಿ ಬರಲು ಆರಂಭವಾಗಿ, ತನಿಖೆ ಅದಾಗಿ ಅದೇ ಆರಂಭವಾಯಿತು, ಸರ್ಕಾರ ತನಿಖೆ ಮಾಡಿಸಿದ್ದಲ್ಲ. ಡಿ.ಸಿ ಮತ್ತು ಐ.ಜಿ.ಪಿ ಅಧಿಕಾರಿಗಳ ಬಂಧನವಾಯಿತು. ಈ ಸರ್ಕಾರ ಎಲ್ಲದಕ್ಕೂ ದಾಖಲಾತಿ ಕೇಳುತ್ತೆ. ಅದಕ್ಕೆ ನಾನು ಹೇಳುವುದು, ಸುಪ್ರೀಂ ಕೋರ್ಟ್‌ ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡಿ ನಮ್ಮ ಸರ್ಕಾರದ ವಿರುದ್ಧ ಹಾಗೂ ಈ ಬಿಜೆಪಿ ಸರ್ಕಾರದ ವಿರುದ್ಧ ಬಂದಿರುವ ಎಲ್ಲಾ ಆರೋಪಗಳ ತನಿಖೆಯನ್ನು ಮಾಡಿಸಲಿ. ಯಾರು ತಪ್ಪಿತಸ್ಥರಿದ್ದಾರೆ ಅವರಿಗೆ ಶಿಕ್ಷೆಯಾಗಲಿ. ಇದಕ್ಕೆ ಬೊಮ್ಮಾಯಿ ಮಾತನಾಡಲ್ಲ.

ಇದನ್ನೂ ಓದಿ: Siddaramaiah : ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧಿಸಬೇಕೆಂದು ಆಗ್ರಹಿಸಿ ನಡೆಯಲಿದೆ ದೆಹಲಿ ಚಲೋ

59 ಪ್ರಕರಣಗಳು ಎಸಿಬಿ ಗೆ ಹೋಗಿದ್ದವು, ಅವೆಲ್ಲವಕ್ಕೂ ಬಿ ರಿಪೋರ್ಟ್‌ ಬಂದಿದೆ. ಇದರ ವಿರುದ್ಧ ಮೇಲ್ಮನವಿ ಹಾಕಿ ನೀವು. ಮೇಲ್ಮನವಿ ಹಾಕಬಾರದು ಎಂದು ಕಾನೂನಿನಲ್ಲಿ ಇದೆಯಾ? ಎಫ್‌,ಐ, ಆರ್‌ ಮಾಡೇ ಇಲ್ಲ. ಈ ಬಿಜೆಪಿಯವರದ್ದು ಬರೀ ಸುಳ್ಳು, ಒಂದೇ ಒಂದು ಕೇಸ್‌ ನಲ್ಲಿ ಎಫ್‌,ಐ, ಆರ್‌ ಆಗಿದ್ದು. ಉಳಿದವು ಎಫ್‌,ಐ,ಆರ್‌ ಆಗದೆಯೇ ತಿರಸ್ಕೃತಗೊಂಡಿದ್ದವು. ನಿಮಗೆ ಎಸಿಬಿ ಆದೇಶದ ಬಗ್ಗೆ ತಕರಾರು ಇದ್ದರೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬೇಕಿತ್ತು, ಅದನ್ನು ಮಾಡದೆ ಈಗ ಎಲ್ಲರನ್ನು ಜೈಲಿಗೆ ಕಳಿಸ್ತೀವಿ ಎಂದು ಬಡಾಯಿ ಬಿಡುವುದನ್ನು ಜನ ನಂಬಲ್ಲ.

ಕೆಂಪಣ್ಣ ಆಯೋಗದ ವರದಿಯನ್ನು ಸದನದ ಮುಂದೆ ಮಂಡಿಸದೆ, ತಮಗೆ ಅನುಕೂಲವಾಗುವ ಯಾವುದೋ ಒಂದೆರಡು ಸಾಲುಗಳನ್ನು ಓದುವುದು ಇದೆಯಲ್ಲ ಅದನ್ನು ನಾವು ಒಪ್ಪುವುದಿಲ್ಲ. ಬಸವರಾಜ ಬೊಮ್ಮಾಯಿ ಅವರು ಪ್ರಾಮಾಣಿಕರಾಗಿದ್ದರೆ ಎರಡೂ ಸರ್ಕಾರಗಳ ಮೇಲಿರುವ ಆರೋಪಗಳನ್ನು ನ್ಯಾಯಾಂಗ ತನಿಖೆಗೆ ಕೊಡಲಿ. ಈ ಸರ್ಕಾರ ಒಂದು ಪ್ರಕರಣವನ್ನಾದ್ರು ತನಿಖೆ ಮಾಡಿದಿದೆಯಾ?

ನಾನು ಅರ್ಕಾವತಿ ಲೇಔಟ್‌ ನಲ್ಲಿ ಒಂದು ಗುಂಟೆ ಜಮೀನನ್ನು ಕೂಡ ಡಿ ನೋಟಿಫೈ ಮಾಡಿಲ್ಲ, ಇದನ್ನೇ ಕೆಂಪಣ್ಣನವರ ಸಮಿತಿ ಹೇಳಿದೆ. ಬೊಮ್ಮಾಯಿ ಹೇಳುತ್ತಿರುವುದು ಶುದ್ಧ ಸುಳ್ಳು. ನೋಡೋಣ ಕೇಶವ ನಾರಾಯಣ ಅವರ ಸಮಿತಿಯ ವರದಿ ಬರಲಿ.
ಟೇಬಲ್‌ ಮಾಡದೆ ಸದನದಲ್ಲಿ ಈ ವಿಚಾರ ಮಾತಾಡಿದ್ದಾರೆ, ಆ ಮೂಲಕ ಬಿಜೆಪಿ ಪಕ್ಷ, ಮುಖ್ಯಮಂತ್ರಿಗಳು ಸದನಕ್ಕೆ ಅಗೌರವ ತೋರಿದ್ದಾರೆ. ಈ ರೀತಿ ಜನರಿಗೆ ತಪ್ಪು ಮಾಹಿತಿ ಕೊಡುವ ಪ್ರಯತ್ನ ಮಾಡಬಾರದು.
ಈಗ ಸುಳ್ಳು ಹೇಳಿಕೆಗಳು ಸದನದ ಪುಸ್ತಕದಲ್ಲಿ ದಾಖಲಾಗಿ ಆಗಿದೆ, ಅದನ್ನು ತೆಗೆಸಲು ಈಗ ಅವಕಾಶ ಇಲ್ಲ, ಇಂದು ಸದನವನ್ನು ಮುಕ್ತಾಯ ಮಾಡುತ್ತಾರೆ. ಮುಂದೆ ಅವಕಾಶ ಸಿಕ್ಕಾಗ ಈ ಕೆಲಸ ಮಾಡುತ್ತೇವೆ ಎಂದಿದ್ದಾರೆ.

Exit mobile version