ಕಲಬುರಗಿ: ರಾಜ್ಯ ರಾಜಕಾರಣದಲ್ಲಿ ಸದ್ಯ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಭಾರಿ ಸಂಚಲನ ಮೂಡಿಸುತ್ತಿವೆ. ಈ ಕುರಿತು ಕಲಬುರಗಿಯಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಹಲವು ಪ್ರಶ್ನೆಗಳಿಗೆ ಮಾರ್ಮಿಕವಾಗಿ ಉತ್ತರಿಸುವ ಮೂಲಕ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ವಿಶೇಷವಾಗಿ, “ಸಿದ್ದರಾಮಯ್ಯನವರೇ ಐದು ವರ್ಷಗಳ ಕಾಲ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುತ್ತಾರೆಯೇ?” ಎಂಬ ನೇರ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದು, ರಾಜಕೀಯ ವಲಯದಲ್ಲಿ ಹಲವು ವ್ಯಾಖ್ಯಾನಗಳಿಗೆ ಎಡೆಮಾಡಿಕೊಟ್ಟಿದೆ.
ರಾಜ್ಯದಲ್ಲಿ ಕೇಳಿಬರುತ್ತಿರುವ ‘ದಲಿತ ಮುಖ್ಯಮಂತ್ರಿ’ ಕೂಗಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಅದು ಜನರ ಅಭಿಪ್ರಾಯ ಮತ್ತು ಪ್ರೀತಿಯಿಂದ ಆಡುತ್ತಿರುವ ಮಾತುಗಳು. ಪಕ್ಷದಲ್ಲಿ ಹೈಕಮಾಂಡ್ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಮಯ ಬಂದಾಗ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ” ಎಂದು ಹೇಳಿದ್ದಾರೆ. ಅಲ್ಲಿಗೆ, ಸಿಎಂ ಬದಲಾವಣೆ ಅಥವಾ ದಲಿತ ಸಿಎಂ ಆಯ್ಕೆಯ ವಿಚಾರವನ್ನು ಅವರು ಸಂಪೂರ್ಣವಾಗಿ ಅಲ್ಲಗಳೆಯದೆ, ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದಾರೆ. ಎಲ್ಲಾ ಪ್ರಶ್ನೆಗಳಿಗೂ ಹೈಕಮಾಂಡ್ ಶೀಘ್ರದಲ್ಲೇ ಉತ್ತರ ನೀಡಲಿದೆ ಎನ್ನುವ ಮೂಲಕ ಅವರು ಸಸ್ಪೆನ್ಸ್ ಕಾಯ್ದಿರಿಸಿದ್ದಾರೆ.
ಇನ್ನು ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸುವ ಅಥವಾ ‘ಬರ್ತ್ ಡೇ ಗಿಫ್ಟ್’ ನೀಡುವ ವಿಚಾರದ ಕುರಿತು ಮಾತನಾಡಿದ ಪರಮೇಶ್ವರ್, ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಪ್ರತಿಯೊಬ್ಬ ನಾಯಕ ಮತ್ತು ಕಾರ್ಯಕರ್ತ ಬದ್ಧವಾಗಿರಬೇಕು ಎಂದು ತಿಳಿಸಿದ್ದಾರೆ. ಒಬ್ಬಿಬ್ಬರು ಹೇಳಿಕೆ ನೀಡುವುದರಿಂದ ಗೊಂದಲ ಸೃಷ್ಟಿಯಾಗುವುದಿಲ್ಲ ಎಂದು ಅವರು ಸಮರ್ಥಿಸಿಕೊಂಡರೂ, ಸಿದ್ದರಾಮಯ್ಯನವರ ಪೂರ್ಣಾವಧಿ ಅಧಿಕಾರದ ಬಗ್ಗೆ ಕೇಳಿದಾಗ ಅವರು ಮೌನ ತಾಳಿದ್ದು, ಕಾಂಗ್ರೆಸ್ ಒಳಬರಹದಲ್ಲಿ ಏನೋ ಮಹತ್ತರ ಬದಲಾವಣೆ ನಡೆಯುತ್ತಿದೆಯೇ ಎಂಬ ಅನುಮಾನಕ್ಕೆ ಪುಷ್ಟಿ ನೀಡುವಂತಿದೆ.

