Site icon Vistara News

ICC World Cup 2023 : ವಿಶ್ವ ಕಪ್ ಫೈನಲ್​ ಇತಿಹಾಸದಲ್ಲಿ ಕನಿಷ್ಠ ಮೊತ್ತ ರಕ್ಷಿಸಿ ಗೆದ್ದಿತ್ತು ಭಾರತ

Australia cricket team

ಅಹಮದಾಬಾದ್​: ಆಸ್ಟ್ರೇಲಿಯಾ ತಂಡ ಭಾನುವಾರ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಭಾರತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್​ಔಟ್ ಆಗಿದೆ. ದೊಡ್ಡ ಮೊತ್ತ ಕೂಡಿಕೆಯಾಗುವ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಇದು ಕನಿಷ್ಠ ಮೊತ್ತವೆಂದು ಹೇಳಲಾಗುತ್ತಿದೆ. ಇದು ಭಾರತ ತಂಡದ ಗೆಲುವಿಗೆ ಸಾಕೇ ಎಂಬುದು ಪ್ರಶ್ನೆಯಾಗಿದೆ.

ಕಳೆದ ಕೆಲವು ವರ್ಷಗಳಲ್ಲಿ, ಮೊದಲು ಬ್ಯಾಟಿಂಗ್ ಮಾಡುವ ತಂಡಗಳು ಫೈನಲ್​​ನಲ್ಲಿ ಏಳು ಬಾರಿ ಗೆದ್ದಿದೆ. ಮೊದಲು ಬೌಲಿಂಗ್ ಮಾಡಿದ ಐದು ತಂಡಗಳು ಜಯ ಸಾಧಿಸಿದೆ. ಹೀಗಾಗಿ ಭಾರತ ತಂಡ ತಾನು ಪೇರಿಸಿದ 240 ರನ್​ಗಳನ್ನು ಕಾಪಾಡಿಕೊಳ್ಳುವುದೇ ಎಂದು ಕಾದು ನೋಡಬೇಕಾಗಿದೆ. ಆದರೆ, ಭಾರತ ತಂಡವೇ ಅತ್ಯಂತ ಕನಿಷ್ಠ ಮೊತ್ತವನ್ನು ರಕ್ಷಿಸಿಕೊಂಡು ಪ್ರಶಸ್ತಿ ಗೆದ್ದಿರುವ ಇತಿಹಾಸವಿದೆ.

ಏಕದಿನ ವಿಶ್ವಕಪ್ ಫೈನಲ್ ನಲ್ಲಿ ರಕ್ಷಿಸಲಾದ ಅತ್ಯಂತ ಕಡಿಮೆ ಸ್ಕೋರ್ ಯಾವುದು?

1983ರ ಫೈನಲ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 183 ರನ್ ಗಳಿಸಿತ್ತು. ಏಕದಿನ ವಿಶ್ವಕಪ್ ಫೈನಲ್ನಲ್ಲಿ ತಂಡವೊಂದು ಯಶಸ್ವಿಯಾಗಿ ರಕ್ಷಿಸಿದ ಅತ್ಯಂತ ಕಡಿಮೆ ಸ್ಕೋರ್ ಅದಾಗಿದೆ. ಮೊಹಿಂದರ್ ಅಮರ್​ನಾಥ್ ಮತ್ತು ಮದನ್ ಲಾಲ್ ತಲಾ 3 ವಿಕೆಟ್ ಪಡೆದಿದ್ದರು. ಈ ಮೂಲಕ ಭಾರತದ ಬೌಲರ್​ಗಳು ಬಲಿಷ್ಠ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಲೈನ್ಅಪ್ ಅನ್ನು 140 ರನ್​ಗಳಿಗೆ ಸೀಮಿತಗೊಳಿಸಿ ಟ್ರೋಫಿ ಗೆದ್ದಿತ್ತು. ಇದು ವಿಶ್ವ ಕಪ್ ಇತಿಹಾಸದಲ್ಲಿ ತಂಡವೊಂದು ಕನಿಷ್ಠ ಮೊತ್ತವನ್ನು ರಕ್ಷಿಸಿ ಗೆದ್ದ ಸಂದರ್ಭವಾಗಿದೆ. 1992ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 249 ರನ್ ಬಾರಿಸಿದ್ದು ವಿಶ್ವಕಪ್ ತಂಡವೊಂದು ಯಶಸ್ವಿಯಾಗಿ ರಕ್ಷಿಸಿದ ಎರಡನೇ ಕನಿಷ್ಠ ಮೊತ್ತವಾಗಿದೆ.

ಇದನ್ನೂ ಓದಿ : Virat Kohli: ಕೊಹ್ಲಿಗೆ ಸ್ಮರಣೀಯ ಉಡುಗೊರೆ ನೀಡಿದ ಸಚಿನ್​ ತೆಂಡೂಲ್ಕರ್​

ಏಕದಿನ ವಿಶ್ವಕಪ್ ಫೈನಲ್ ಚೇಸಿಂಗ್​ನಲ್ಲಿ ಆಸ್ಟ್ರೇಲಿಯಾದ ದಾಖಲೆ ಏನು?

ಏಕದಿನ ವಿಶ್ವಕಪ್ ಫೈನಲ್​​ನಲ್ಲಿ ಆಸ್ಟ್ರೇಲಿಯಾ ಒಟ್ಟು ಮೂರು ಬಾರಿ ಚೇಸ್ ಮಾಡಿ. ಎರಡು ಬಾರಿ ಗೆದ್ದಿದೆ ಮತ್ತು ಒಂದು ಬಾರಿ ಸೋತಿದೆ. 1975ರ ವಿಶ್ವಕಪ್ ಫೈನಲ್​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 17 ರನ್​ಗಳ ಸೋಲಿಗೆ ಒಳಗಾಗಿತ್ತು.

ಭಾರತ ತಂಡ ವಿಶ್ವ ಕಪ್ ಫೈನಲ್​ನಲ್ಲಿ 240 ರನ್ ಬಾರಿಸಿರುವ ಕಾರಣ ಭಾರತ ತಂಡ ಗೆಲ್ಲುವುದೇ ಎಂಬ ಸಂಶಯ ಭಾರತ ತಂಡದ ಅಭಿಮಾನಿಗಳದ್ದು. ಆದರೆ, ವಿಶ್ವ ಕಪ್​ನಲ್ಲಿ ಫೈನಲ್​ನಲ್ಲಿ ಕನಿಷ್ಠ ಮೊತ್ತವನ್ನು ಹಲವು ತಂಡಗಳು ರಕ್ಷಿಸಿ ಗೆದ್ದಿವೆ. ಹೀಗಾಗಿ ಭಾರತ ತಂಡಕ್ಕೆ ಮತ್ತೊಂದು ಅವಕಾಶ ಸೃಷ್ಟಿಯಾಗಲಿದೆ.

ಭಾರತದ ಬ್ಯಾಟಿಂಗ್ ವೈಫಲ್ಯ

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ದೊಡ್ಡ ಮೊತ್ತ ಪೇರಿಸಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಫೈನಲ್​ನಲ್ಲಿ ಭಾರತ ತಂಡದ ಬ್ಯಾಟರ್​ಗಳು ಪರದಾಟ ನಡೆಸಿದ್ದಾರೆ. ಟಾಸ್​ ಸೋತು ಮೊದಲು ಬ್ಯಾಟ್​ ಮಾಡಲು ಆಹ್ವಾನ ಪಡೆದ ಭಾರತ ತಂಡದ ಆರಂಭದಲ್ಲಿ ವೇಗದ ರನ್​ ಗಳಿಕೆಗೆ ಯತ್ನಿಸಿದರೂ ಬಳಿಕ ಸತತವಾಗಿ ವಿಕೆಟ್​ ಕಳೆದುಕೊಂಡಿತು. ಹೀಗಾಗಿ ದೊಡ್ಡ ಮೊತ್ತದ ಗುರಿಯೊಂದಿಗೆ ಆಡಿದ ಭಾರತ ತಂಡಕ್ಕೆ ಹಿನ್ನಡೆ ಉಂಟಾಯಿತು. ಭಾರತ ತಂಡದ ಬ್ಯಾಟರ್​ಗಳು ಕೇವಲ 13 ಫೋರ್​ ಹಾಗೂ 3 ಸಿಕ್ಸರ್​ಗಳನ್ನು ಮಾತ್ರ ಬಾರಿಸಿದ್ದಾರೆ. ಇದರಲ್ಲಿ 4 ಫೊರ್ ಹಾಗೂ 3 ಸಿಕ್ಸರ್​ ರೋಹಿತ್ ಶರ್ಮಾ ಬಾರಿಸಿದ್ದಾರೆ.

ಭಾರತ ತಂಡ ಮೊದಲ 39 ಎಸೆತಗಳಿಗೆ 50 ರನ್ ಬಾರಿಸಿತ್ತು. ಹೀಗಾಗಿ ದೊಡ್ಡ ಮೊತ್ತ ಗ್ಯಾರಂಟಿ ಎಂದು ನಂಬಲಾಗಿತ್ತು. ಆದರೆ ಅದಕ್ಕಿಂತ ಮೊದಲೇ ಶುಭ್​ಮನ್​ ಗಿಲ್​ 4 ರನ್ ಬಾರಿಸಿ ಔಟಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿಯೂ ರನ್​ ಗತಿ ಇಳಿಕೆಯಾಗದಂತೆ ನೋಡಿಕೊಂಡಿತು. ಆದರೆ, ನಂತರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಲು ಮುಂದಾದ ರೋಹಿತ್​ ಶರ್ಮಾ 47 ರನ್​ಗಳಿಗೆ ಔಟಾದರು. ಅವರು 31 ಎಸೆತಗಳಿಗೆ 47 ರನ್ ಬಾರಿಸಿದ್ದರು. ಆದರೆ, ಆ ಬಳಿಕ ಬ್ಯಾಟ್ ಮಾಡಲು ಬಂದ ಶ್ರೇಯಸ್​ ಅಯ್ಯರ್​​ 4 ರನ್​ ಗೆ ಔಟಾದರು. ಅವರು ಅದಕ್ಕಿಂತ ಮೊದಲು ಅವರು ಒಂದು ಫೋರ್ ಬಾರಿಸಿದ್ದರು.

ರಾಹುಲ್​- ಕೊಹ್ಲಿ ಮೇಲೆ ಒತ್ತಡ

ಮೊದಲ ಮೂರು ವಿಕೆಟ್​​ಗಳು 81 ರನ್​ಗೆ ಪತನಗೊಂಡ ಕಾರಣ ಭಾರತ ತಂಡದ ಮೇಲೆ ಒತ್ತಡ ಬಿತ್ತು. ಮಾಜಿ ನಾಯಕ ವಿರಾಟ್​ ಕೊಹ್ಲಿ ಹಾಗೂ ವಿಕೆಟ್​ ಕೀಪರ್​ ಕೆ. ಎಲ್ ರಾಹುಲ್ ಮೇಲೆ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಬಿತ್ತು. ಬಲಿಕ ಅವರಿಬ್ಬರು 67 ರನ್​ಗಳ ಜತೆಯಾಟವಾಡಿದರು. ಈ ವೇಳೆ ಭಾರತ ತಂಡದ ರನ್ ಗಳಿಕೆ ಕುಸಿತಗೊಂಡಿತ್ತು. 11 ಓವರ್​ಗಳ ಒಳಗೆ ಮೂರು ವಿಕೆಟ್​ ನಷ್ಟ ಮಾಡಿಕೊಂಡಿದ್ದರಿಂದ ವಿಕೆಟ್​ ಕಾಪಾಡುವುದು ಈ ಬ್ಯಾಟರ್​​ಗಳ ಪಾಲಿಗೆ ದೊಡ್ಡ ಸವಾಲಾಯಿತು. ಇವರಿಬ್ಬರ ಜತೆಯಾಟದ ವೇಳೆ ಸಿಂಗಲ್ ರನ್​ಗಳೇ ಹೆಚ್ಚು ಗಳಿಕೆಯಾಯಿತು.

ಏತನ್ಮಧ್ಯೆ ವಿರಾಟ್​ ಕೊಹ್ಲಿಯ ವಿಕೆಟ್ ದುರದೃಷ್ಟಕರವಾಗಿ ನಷ್ಟವಾಯಿತು. ಆಸೀಸ್​ ನಾಯಕ ಪ್ಯಾಟ್​ ಕಮಿನ್ಸ್ ಅವರ ಎಸೆತವನ್ನು ರಕ್ಷಿಸಲು ಮುಂದಾದ ಅವರು ಇನ್​ಸೈಡ್ ಎಜ್​ ಆಗಿ ಬೌಲ್ಡ್ ಆದರು. ಈ ವೇಳೆ ತಂಡಕ್ಕೆ ಮತ್ತೊಂದು ಆಘಾತ ಎದುರಾಯಿತು. ಯಾಕೆಂದರೆ ಮುಂದೆ ಆಡಲು ಬಂದ ರವೀಂದ್ರ ಜಡೇಜಾ 9 ರನ್​ಗಳಿಗೆ ಔಟ್ ಆದರು. ಅದಾದ ಬಳಿಕ ಆಡಲು ಬಂದ ಸೂರ್ಯಕುಮಾರ್​ ಯಾದವ್​ಗೆ ದೊಡ್ಡ ಮೊತ್ತ ಪೇರಿಸಲು ಸಾಧ್ಯವೇ ಆಗಲಿಲ್ಲ. ಅವರು 28 ಎಸೆತಗಳಿಗೆ ಕೇವಲ 18 ರನ್ ಬಾರಿಸಿದರು. ಏತನ್ಮಧ್ಯೆ, ಕೆ. ಎಲ್​ ರಾಹುಲ್ ಸ್ಟಾರ್ಕ್ ಎಸೆತಕ್ಕೆ ವಿಕೆಟ್​ ಕೀಪರ್​ಗೆ ಕ್ಯಾಚ್ ನೀಡಿ ಔಟಾದರು.

ರಾಹುಲ್ ಇರುವ ತನಕ ಭಾರತ ತಂಡ 270 ಪ್ಲಸ್​ ರನ್​ಗಳ ಸ್ಪರ್ಧಾತ್ಮ ಮೊತ್ತ ಗಳಿಸಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅವರ ವಿಕೆಟ್​ ಬಳಿಕ ಭಾರತೀಯ ಬ್ಯಾಟರ್​ಗಳಿಗೆ ಹೆಚ್ಚು ರನ್​ ಗಳಿಸಲು ಸಾಧ್ಯವಾಗಲಿಲ್ಲ.

ಈ ರನ್ ಸಾಕೇ?

ಎರಡನೇ ಇನಿಂಗ್ಸ್ ವೇಳೆ ಇಬ್ಬನಿ ಪರಿಣಾಮ ಇರುತ್ತದೆ. ಬೌಲಿಂಗ್ ಮಾಡಲು ಕಷ್ಟ ಎಂಬ ಕಾರಣಕ್ಕೆ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮೊದಲು ಫೀಲ್ಡಿಂಗ್ ಮಾಡಿದ್ದರು. ಹೀಗಾಗಿ 250 ರನ್​ಗಳಿಗಿಂತ ಕಡಿಮೆ ಮೊತ್ತ ಗೆಲುವಿಗೆ ಸಾಕಾಗಉತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಭಾರತ ತಂಡ 270ಕ್ಕಿಂತ ಹೆಚ್ಚು ರನ್ ಮಾಡಿದರೆ ಗೆಲುವು ಪಡೆಯು ಸಾಧ್ಯತೆಗಳು ಇವೆ. ಕ್ರಿಕೆಟ್​ ಪಂಡಿತರ ವಿಶ್ಲೇಷಣೆ ಪ್ರಕಾರ ಪಿಚ್​ ಸ್ವಲ್ಪ ನಿಧಾನಗತಿಯಲ್ಲಿದೆ. ನಿರೀಕ್ಷಿತ ಮಟ್ಟದಲ್ಲಿ ಬೌಂಡರಿ ಸಿಕ್ಸರ್​ಗಳನ್ನು ಹೊಡೆಯಲು ಸಾಧ್ಯವಿಲ್ಲ. ಹಾಗಾದರೆ 250ಕ್ಕಿಂತ ಹೆಚ್ಚಿನ ರನ್​ ದಾಟುವುದು ಆಸೀಸ್​ ಪಾಲಿಗೆ ಸವಾಲಾಗಬಹುದು. ಆದರೆ ಭಾರತ ತಂಡ ಅಷ್ಟೊಂದು ದೊಡ್ಡ ಮೊತ್ತ ಪೇರಿಸುವುದೇ ಎಂಬುದು ಅಭಿಮಾನಿಗಳ ಪಾಲಿಗೆ ಕೌತುಕದ ವಿಷಯ.

Exit mobile version