Site icon Vistara News

IPL 2023: ಸೂಪರ್​ ಗೆಲುವಿನೊಂದಿಗೆ ಫೈನಲ್​ಗೆ ಲಗ್ಗೆಯಿಟ್ಟ ಚೆನ್ನೈ ಸೂಪರ್​ ಕಿಂಗ್ಸ್​

MA Chidambaram Stadium, Chennai

#image_title

ಚೆನ್ನೈ: ತವರಿನ ‘ಎಲ್ಲೋ ಆರ್ಮಿ’ ಫ್ಯಾನ್ಸ್‌ ಸಮ್ಮುಖದಲ್ಲಿ ನಡೆದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್​ ತಂಡವನ್ನು ಮಣಿಸಿ, ನಾಲ್ಕು ಬಾರಿಯ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಫೈನಲ್​ಗೆ ಲಗ್ಗೆಯಿಟ್ಟಿದೆ. ಈ ಮೂಲಕ ಐಪಿಎಲ್​ ಇತಿಹಾಸದಲ್ಲಿ ಚೆನ್ನೈ 10ನೇ ಬಾರಿ ಫೈನಲ್ ಪ್ರವೇಶಿಸಿದಂತಾಗಿದೆ.

ಸೋತ ಗುಜರಾತ್​ ತಂಡ ಬುಧವಾರ ನಡೆಯುವ ಮುಂಬೈ ಮತ್ತು ಲಕ್ನೋ ವಿರುದ್ಧದ ಪಂದ್ಯದ ವಿಜೇತರನ್ನು ದ್ವಿತೀಯ ಕ್ವಾಲಿಫೈಯರ್‌ ಪಂದ್ಯದಲ್ಲಿ ಎದುರಿಸಲಿದೆ. ಈ ಪಂದ್ಯ ಅಹಮದಾಬಾದ್​ನಲ್ಲಿ ಶುಕ್ರವಾರ ನಡೆಯಲಿದೆ. ಗುಜರಾತ್​ ವಿರುದ್ಧ ಚೆನ್ನೈ ದಾಖಲಿಸಿದ ಮೊದಲ ಗೆಲುವು ಇದಾಗಿದೆ. ಈ ಹಿಂದೆ ಆಡಿದ್ದ ಮೂರು ಪಂದ್ಯಗಳಲ್ಲಿಯೂ ಧೋನಿ ಪಡೆ ಸೋಲು ಕಂಡಿತ್ತು.

ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮಂಗಳವಾರದ ಈ ಕ್ವಾಲಿಫೈಯರ್‌-1 ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್​ ಕಿಂಗ್ಸ್​ ಬೌಲಿಂಗ್ ಟ್ರ್ಯಾಕ್​ನಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 172 ರನ್​ ಗಳಿಸಿತು. ಜವಾಬಿತ್ತ ಗುಜರಾತ್​ ತಂಡ ತನ್ನ ಪಾಲಿನ ಆಟದಲ್ಲಿ 157 ರನ್​ಗಳಿಗೆ ಸರ್ವಪತನ ಕಂಡಿತು.​

ಬೌಲಿಂಗ್​ ಟ್ರ್ಯಾಕ್​ನಲ್ಲಿ ಬೃಹತ್​ ಮೊತ್ತದ ಗುರಿಯನ್ನು ಬೆನ್ನಟಿದ ಗುಜರಾತ್​ಗೆ ದೀಪಕ್​ ಚಹರ್​ ಅವರು ಆರಂಭದಲ್ಲೇ ಆಘಾವಿಕ್ಕಿದರು. ವೃದ್ಧಿಮಾನ್​ ಸಾಹ ಅವರ ವಿಕೆಟ್​ ಕಿತ್ತರು. 22 ರನ್​ಗೆ ಮೊದಲ ವಿಕೆಟ್​ ಕಳೆದುಕೊಂಡು ಗುಜರಾತ್​ ಆರಂಭಿಕ ಆಘಾತ ಎದುರಿಸಿತು. ಸಾಹಾ 15 ರನ್​ ಬಾರಿಸಿದರು. ಈ ವಿಕೆಟ್​ ಪತನದ ಬೆನ್ನಲೇ ತಂಡದ ನಾಯಕ ಹಾರ್ದಿಕ್​ ಪಾಂಡ್ಯ ಕೂಡ ವಿಕೆಟ್​ ಕೈಚೆಲ್ಲಿದರು. 7 ಎಸೆತಗಳಲ್ಲಿ 8 ರನ್​ ಗಳಿಸಿದರು. ಬಾರಿಸಿದ್ದು ಒಂದು ಬೌಂಡರಿ. ಇಲ್ಲಿಂದ ಗುಜರಾತ್​ ಕುಸಿತವು ಆರಂಭವಾಯಿತು. ಡೇವಿಡ್​ ಮಿಲ್ಲರ್​, ದಸುನ್​ ಶಣಕ, ರಾಹುಲ್ ತೆವಾಟಿಯಾ ಪೆವಿಲಿಯನ್​ ಪರೇಡ್​ ನಡೆಸಿದರು. ಇವರ ಗಳಿಕೆ ಕೇವಲ ಒಂದಂಕಿಗೆ ಸೀಮಿತವಾಯಿತು.

ಒಂದೆಡೆ ವಿಕೆಟ್​ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಚೆನ್ನೈ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತ ಶುಭಮನ್​ ಗಿಲ್​ ತಂಡದ ಗೆಲುವಿಗಾಗಿ ಶಕ್ತಿ ಮೀರಿ ಪ್ರದರ್ಶನ ತೋರಿದರು. ಆದರೆ ಇವರ ಆಟವೂ 42 ರನ್​ಗೆ ಅಂತ್ಯಕಂಡಿತು. ಈ ವಿಕೆಟ್​ ಪತನಗೊಂಡ ಕೂಡಲೇ ಗುಜರಾತ್​ ತಂಡದ ಸೋಲು ಕೂಡ ಖಚಿತವಾಯಿತು. ಅಂತಿಮ ಹಂತದಲ್ಲಿ ವಿಜಯ್​ ಶಂಕರ್​ ಮತ್ತು ರಶೀದ್​ ಖಾನ್​ ಅವರು ಸಿಡಿದು ನಿಂತ ವೇಳೆ ಗುಜರಾತ್​ ಗೆಲುವು ದಾಖಲಿಸುವ ಸೂಚನೆಯೊಂದು ಕಂಡುಬಂದಿತು. ಆದರೆ ಅಂತಿಮ ಎರಡು ಓವರ್​ನಲ್ಲಿ ಚೆನ್ನೈ ತಂಡದ ಬೌಲರ್​ಗಳು ಹಿಡಿತ ಸಾಧಿಸಿದ ಪರಿಣಾಮ ತಂಡ ಸೋಲು ಕಂಡಿತು. ರಶೀದ್​ ಖಾನ್​(30) ಗಳಿಸಿದರೆ, ವಿಜಯ್​ ಶಂಕರ್​ 14 ರನ್​ ಬಾರಿಸಿ ಔಟಾದರು. ಚೆನ್ನೈ ಪರ ರವೀಂದ್ರ ಜಡೇಜಾ(2), ಮಹೀಶ್‌ ತೀಕ್ಷಣ(2), ದೀಪಕ್​ ಚಹರ್​(2) ವಿಕೆಟ್​ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅರ್ಧಶತಕ ಬಾರಿಸಿ ಮಿಂಚಿದ ಗಾಯಕ್ವಾಡ್​

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆದಿದ ಚೆನ್ನೈ ಪರ ಆರಂಭಿಕ ಆಟಗಾರ ಋತುರಾಜ್​ ಗಾಯಕ್ವಾಡ್​ ಅವರು ಜೀವದಾನವೊಂದನ್ನು ಪಡೆದರು. ದರ್ಶನ್​ ನಾಲ್ಕಂಡೆ ಅವರ ಮೊದಲ ಓವರ್​ನ ದ್ವಿತೀಯ ಎಸೆತದಲ್ಲಿ ಗಾಯಕ್ವಾಡ್ ಅವರು ಗಿಲ್​ಗೆ ಕ್ಯಾಚ್​ ನೀಡಿ ನಿರಾಸೆಯಿಂದ ಪೆವಿಲಿಯನ್​ ಕಡೆಗೆ ಮುಖಮಾಡಿದ್ದರು. ಗುಜರಾತ್​ ಪಾಳಯದಲ್ಲಿ ಸಂಭ್ರಮ ಏರ್ಪಟಿತು. ಆದರೆ ಕ್ಷಣ ಮಾತ್ರದಲ್ಲೇ ಅಂಪೈರ್​ ಅವರು ನೋ ಬಾಲ್​ ಸಿಗ್ನಲ್​ ನೀಡಿದರು. ಗುಜರಾತ್​ ತಂಡದ ಸಂಭ್ರಮ ಮಾಸಿ ಹೋಯಿತು. ಅತ್ತ ಗಾಯಕ್ವಾಡ್​ ಮುಖದಲ್ಲಿ ಮಂದಹಾಸ ಮೂಡಿತು. ಈ ವೇಳೆ ಗಾಯಕ್ವಾಡ್​ ಕೇವಲ 2 ರನ್​ ಗಳಿಸಿದ್ದರು.

​ಸಿಕ್ಕ ಅದೃಷ್ಟವನ್ನು ಎರಡೂ ಕೈಗಳಿಂದ ಬಾಚಿದ ಗಾಯಕ್ವಾಡ್​ ಅವರು ಡೆವೋನ್​ ಕಾನ್ವೆ ಜತೆಗೂಡಿ ಉತ್ತಮ ಆಟ ಪ್ರದರ್ಶಿಸಿದರು. ಉಭಯ ಆಟಗಾರರು ಗುಜರಾತ್​ ಬೌಲರ್​ಗಳಿಗೆ ಸರಿಯಾಗಿಯೇ ದಂಡಿಸಿ ಪವರ್​ ಪ್ಲೇಯಲ್ಲಿ ವಿಕೆಟ್​ ನಷ್ಟವಿಲ್ಲದೆ 49 ರನ್​ ಒಟ್ಟುಗೂಡಿಸಿದರು. ಬಿರುಸಿನ ಆಟವಾಡಿದ ಗಾಯಕ್ವಾಡ್​ ಅರ್ಧಶತಕವನ್ನು ಪೂರೈಸಿದರು. ಇದೇ ವೇಳೆ ವಿಶೇಷ ದಾಖಲೆಯೊಂದನ್ನು ಅವರು ತಮ್ಮ ಹೆಸರಿಗೆ ಬರೆದರು. ಇದು ಗಾಯಕ್ವಾಡ್​ ಅವರು ಗುಜರಾತ್​ ವಿರುದ್ಧ ಬಾರಿಸಿದ ನಾಲ್ಕನೇ ಅರ್ಧಶತಕವಾಗಿದೆ.

ಬೌಂಡರಿ, ಸಿಕ್ಸರ್​ಗಳನ್ನು ಬಾರಿಸುತ್ತಾ ಶತಕದತ್ತ ಮುನ್ನುಗುತ್ತಿದ್ದ ಅವರ ಓಟಕ್ಕೆ ಅನುಭವಿ ಬೌಲರ್​ ಮೋಹಿತ್​ ಶರ್ಮ ಅವರು ಬ್ರೇಕ್​ ಹಾಕಿದರು. ಸ್ಲೋ ಬಾಲ್​ ಎಸೆದು ಲಾಂಗ್​ ಆನ್​ನಲ್ಲಿ ಕ್ಯಾಚ್​ ನೀಡುವಂತೆ ಮಾಡಿದರು. ಮಿಲ್ಲರ್​ ಅವರು ಈ ಕ್ಯಾಚ್​ ಪಡೆದರು. 44 ಎಸೆತ ಎದುರಿಸಿದ ಗಾಯಕ್ವಾಡ್​ ಭರ್ತಿ 60 ರನ್​ ಬಾರಿಸಿದರು. ಡೆವೋನ್​ ಕಾನ್ವೆ ಜತೆ ಮೊದಲ ವಿಕೆಟ್​ಗೆ 87 ರನ್​ಗಳ ಜತೆಯಾಟ ನಡೆಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.

ಕಳೆದ ಪಂದ್ಯದ ಹೀರೊ, ಡೇಂಜಸರ್​ ಬ್ಯಾಟರ್​ ಶಿವಂ ದುಬೆ ಅವರು ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ತೋರಿಸುವಲ್ಲಿ ಎಡವಿದರು. ನೂರ್​ ಅಹ್ಮದ್​ ಅವರ ಸ್ನಿನ್​ ಮೋಡಿಯನ್ನು ಅರ್ಥೈಸಿಕೊಳ್ಳುವಲ್ಲಿ ವಿಫಲವಾದ ಅವರು ಕ್ಲೀನ್​ ಬೌಲ್ಡ್​ ಆದರು. ಗಾಯಕ್ವಾಡ್​ ವಿಕೆಟ್​ ಪತನದ ಮೂರು ರನ್​ ಅಂತರದಲ್ಲಿ ಈ ವಿಕೆಟ್​ ಪತನಗೊಂಡಿತು. ದುಬೆ ಒಂದಂಕಿ ಮೊತ್ತಕ್ಕೆ ಸೀಮಿತರಾದರು.

ಇದನ್ನೂ ಓದಿ IPL 2023: ಮುಂದಿನ ಆವೃತ್ತಿಯಲ್ಲಿ ಈ ಆಟಗಾರರಿಗೆ ಆರ್​ಸಿಬಿಯಲ್ಲಿ ಬಾಗಿಲು ಬಂದ್; ಪಟ್ಟಿ ಹೇಗಿದೆ?​

90 ರನ್​ಗೆ 2 ವಿಕೆಟ್​ ಕಳೆದುಕೊಂಡು ಆತಂಕಕ್ಕೆ ಒಳಗಾದ ಸಂದರ್ಭದಲ್ಲಿ ಎದೆಗುಂದದೆ ಬ್ಯಾಟಿಂಗ್‌ ನಡೆಸಿದ ಕಾನ್ವೆ 40 ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಈ ವಿಕೆಟ್​ ಶಮಿ ಪಾಲಾಯಿತು. ಈ ಮೂಲಕ ಶಮಿ ಅವರು ಕಾನ್ವೆ ಅವರನ್ನು ಐಪಿಎಲ್​ನಲ್ಲಿ ಮೂರು ಬಾರಿ ಔಟ್​ ಮಾಡಿದ ಸಾಧನೆ ಮಾಡಿದರು. ಈ ವಿಕೆಟ್​ ಪತನದ ಬೆನ್ನಲ್ಲೇ ರಹಾನೆ ಕೂಡ ಆಟ ಮುಗಿಸಿದರು. ರಹಾನೆ ಗಳಿಕೆ 12 ರನ್​.

ಇದನ್ನೂ ಓದಿ IPL 2023: ಲಕ್ನೋ-ಮುಂಬೈ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡಗಳ ಮಾಹಿತಿ

ಅಂತಿಮ ಹಂತದಲ್ಲಿ ಜಡೇಜಾ(22) ಸಿಡಿದು ನಿಂತ ಪರಿಣಾಮ ತಂಡ ದೊಡ್ಡ ಮೊತ್ತದ ರನ್​ ಕಲೆಹಾಕಿತು. ಧೋನಿ ಅವರು ಮೊಯಿನ್​ ಅಲಿಗಿಂತ ಮುನ್ನವೇ ಕ್ರೀಸ್​ಗೆ ಇಳಿದರೂ ಅವರಿಂದ ದೊಡ್ಡ ಮೊತ್ತ ದಾಖಲಿಸಲು ಸಾದ್ಯವಾಗಲಿಲ್ಲ. ಮೋಹಿತ್​ ಶರ್ಮ ಅವರ ಎಸೆತದಲ್ಲಿ ಹಾರ್ದಿಕ್​ ಪಾಂಡ್ಯಗೆ ಕ್ಯಾಚ್​ ನೀಡಿ ನಿರ್ಗಮಿಸಿದರು. ಧೋನಿ ಎರಡು ಎಸೆತಗಳಿಂದ ಒಂದು ರನ್​ ಗಳಿಸಿದರು. ಅಂತಿಮ ಓವರ್​ನಲ್ಲಿ ಆಡಲು ಬಂದ ಮೊಯಿನ್​ ಅಲಿ ಒಂದು ಸಿಕ್ಸರ್​ ಬಾರಿಸಿ ಅಜೇಯರಾಗಿ ಉಳಿದರು. ಒಂದೊಮ್ಮೆ ಅವರು ಮೇಲಿನ ಕ್ರಮಾಂಕದಲ್ಲಿ ಆಡುತ್ತಿದ್ದರೆ ತಂಡ ಇನ್ನೂ ದೊಡ್ಡ ಮೊತ್ತ ದಾಖಲಿಸುವ ಸಾಧ್ಯತೆ ಇತ್ತು. ಗುಜರಾತ್​ ಪರ ಬೌಲಿಂಗ್​ನಲ್ಲಿ ಮೋಹಿತ್​ ಶರ್ಮ ಮತ್ತು ಮೊಹಮ್ಮದ್​ ಶಮಿ ತಲಾ 2 ವಿಕೆಟ್​ ಕಿತ್ತರು.

Exit mobile version