Site icon Vistara News

IPL 2023: ಕೊಹ್ಲಿ, ಡುಪ್ಲೆಸಿಸ್​ ಅಬ್ಬರ; ಮುಂಬೈ ವಿರುದ್ಧ ಭರ್ಜರಿ 8 ವಿಕೆಟ್​ ಗೆಲುವು ಸಾಧಿಸಿದ ಆರ್​ಸಿಬಿ

IPL 2023: RCB won by 8 wickets against Mumbai

IPL 2023: RCB won by 8 wickets against Mumbai

ಬೆಂಗಳೂರು: ಕೊರೊನಾದ ಮೂರು ವರ್ಷಗಳ ಬಳಿಕ ತವರಿನಲ್ಲಿ ನಡೆದ ಮೊದಲ ಐಪಿಎಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bangalore) ತಂಡ ಭರ್ಜರಿ ಗೆಲುವಿನ ಶುಭಾರಂಭ ಕಂಡಿದೆ. ಭಾನುವಾರ ನಡೆದ 16ನೇ ಆವೃತ್ತಿಯ ಐಪಿಎಲ್​ನ(IPL 2023) 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians)​ ವಿರುದ್ಧ 8 ವಿಕೆಟ್​ಗಳ ಗೆಲುವು ದಾಖಲಿಸಿದೆ. ಚೇಸಿಂಗ್​ ವೇಳೆ ವಿರಾಟ್​ ಕೊಹ್ಲಿ(ಅಜೇಯ 82) ಮತ್ತು ನಾಯಕ ಡು ಪ್ಲೆಸಿಸ್(73)​ ರನ್​ ಬಾರಿಸಿ ನೆರೆದಿದ್ದ ಅಭಿಮಾನಿಗಳಿಗೆ ಭರಪೂರ ರಂಜನೆ ನೀಡಿದರು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಮುಂಬೈ ತಂಡ ತಿಲಕ್​ ವರ್ಮ(ಅಜೇಯ 84) ಅವರ ಏಕಾಂಗಿಯಾಗಿ ಹೋರಾಟದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 171 ರನ್​ ಪೇರಿಸಿತು. ದೊಡ್ಡ ಮೊತ್ತವನ್ನು ಲೀಲಾಜಾಲವಾಗಿ ಬೆನ್ನಟ್ಟಿದ ಆರ್​ಸಿಬಿ 16.2 ಓವರ್​ಗಳಲ್ಲಿ 2 ವಿಕೆಟ್​ನಷ್ಟಕ್ಕೆ 172 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿದ ನಾಯಕ ಫಾಪ್​ ಡು ಪ್ಲೆಸಿಸ್​ ಮತ್ತು ಮಾಜಿ ನಾಯಕ ವಿರಾಟ್​ ಕೊಹ್ಲಿ ಮುಂಬೈ ಬೌಲರ್​ಗಳನ್ನು ಬೆಂಡೆತ್ತಿದ್ದರು. ಜೋಫ್ರಾ ಆರ್ಚರ್​ ಅವರ ಮೊದಲ ಓವರ್​ನ ಮೊದಲ ಎಸೆತಕ್ಕೆ ಜೀವದಾನ ಪಡೆದ ಕೊಹ್ಲಿ ಈ ಅವಕಾಶವನ್ನು ಎರಡೂ ಕೈಗಳಿಂದ ಬಾಚಿ ಅರ್ಧಶತಕ ಬಾರಿಸಿದರು. ಇವರ ಜತೆಗೆ ಡು ಪ್ಲೆಸಿಸ್ ಕೂಡ ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ಅವರೂ ಕೂಡ ಅರ್ಧಶತಕ ಪೂರ್ತಿಗೊಳಿಸಿದರು. ಉಭಯ ಆಟಗಾರರು ಮೈದಾನದ ಅಷ್ಟ ದಿಕ್ಕುಗಳಿಗು ಚೆಂಡನ್ನು ಬಾರಿಸಿ ತಮ್ಮ ಬ್ಯಾಟಿಂಗ್​ ಪ್ರತಾಪವನ್ನು ತೋರ್ಪಡಿಸಿದರು.

ಡು ಪ್ಲೆಸಿಸ್ 73 ರನ್​ ಗಳಿಸಿದ ವೇಳೆ ಅರ್ಶದ್​ ಖಾನ್​ಗೆ ವಿಕೆಟ್​ ಒಪ್ಪಿದರು. ಒಟ್ಟು 43 ಎಸೆತ ಎದುರಿಸಿದ ಅವರು ಈ ಇನಿಂಗ್ಸ್​ ವೇಳೆ 6 ಸಿಕ್ಸರ್​ ಮತ್ತು 5 ಬೌಂಡರಿ ಬಾರಿಸಿದರು. ಕೊಹ್ಲಿ ಮತ್ತು ಡು ಪ್ಲೆಸಿಸ್ ಮೊದಲ ವಿಕೆಟ್​ಗೆ 148 ರನ್​ ರಾಶಿ ಹಾಕಿತು. ಈ ವಿಕೆಟ್​ ಪತನದ ಬಳಿಕ ಕ್ರೀಸ್​ಗೆ ಬಂದ ದಿನೇಶ್​ ಕಾರ್ತಿಕ್​ ಖಾತೆ ತರೆಯುವ ಮುನ್ನವೇ ವಿಕೆಟ್​ ಕೈ ಚೆಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಪೆವಿಲಿಯನ್ ಕಡೆಗೆ ನಡೆದರು. ಆದರೆ ಆ ಬಳಿಕ ಬಂದ ಮ್ಯಾಕ್ಸ್​ವೆಲ್ ಸತತ ಸಿಕ್ಸರ್​ ಬಾರಿಸಿ ತಂಡಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು. ಗೆಲುವಿಗೆ ಆರು ರನ್​ ಅಗತ್ಯವಿದ್ದಾಗ ವಿರಾಟ್​ ಕೊಹ್ಲಿ ಸಿಕ್ಸರ್​ ಬಾರಿಸಿ ತಂಡದ ಗೆಲುವನ್ನು ಸಾರಿದರು. ಕೊಹ್ಲಿ 49 ಎಸೆತ ಎದುರಿಸಿ ಅಜೇಯ 82 ರನ್​ ಬಾರಿಸಿದರು. ಈ ಮನಮೋಹಕ ಇನಿಂಗ್ಸ್​ನಲ್ಲಿ 6 ಬೌಂಡರಿ ಮತ್ತು ​5 ಸಿಕ್ಸರ್​ ಒಳಗೊಂಡಿತು. ಮ್ಯಾಕ್ಸ್​ ವೆಲ್​ ಅಜೇಯ 12 ರನ್​ ಗಳಿಸಿದರು. ಮುಂಬೈ ಪರ ಆರ್ಶದ್​ ಖಾನ್​ ಮತ್ತು ಕ್ಯಾಮರೂನ್ ಗ್ರೀನ್​ ತಲಾ ಒಂದು ವಿಕೆಟ್​ ಪಡೆದರು.

ಅಜೇಯ ಅರ್ಧಶತಕ ಬಾರಿಸಿ ಮಿಂಚಿದ ತಿಲಕ್​ ವರ್ಮ

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ್ದ ಮುಂಬೈ ಪರ ಯುವ ಆಟಗಾರ ತಿಲಕ್​ ವರ್ಮ ಅವರು ರಾಯಲ್​​ ಚಾಲೆಂಜರ್ಸ್​ ಬೆಂಗಳೂರು(Royal Challengers Bangalore) ತಂಡದ ಘಾತಕ ಬೌಲಿಂಗ್​ ದಾಳಿಯನ್ನು ಏಕಾಂಗಿಯಾಗಿ ಎದುರಿಸಿ ಅರ್ಧಶತಕ ಬಾರಿಸಿ ಮಿಂಚಿದ್ದರು. ನಂಬುಗೆಯ ಬ್ಯಾಟರ್​ಗಳೆಲ್ಲ ಔಟಾದಾಗ ಟೊಂಕ ಕಟ್ಟಿ ನಿಂತ ತಿಲಕ್​ ವರ್ಮ ಮುಂಬೈ ತಂಡಕ್ಕೆ ಆಸರೆಯಾದರು. ಇವರಿಗೆ ಯುವ ಆಟಗಾರ ನಿಹಾಲ್​ ವಧೀರಾ ಕೆಳ ಕ್ರಮಾಂಕದಲ್ಲಿ ಉತ್ತಮ ಸಾಥ್​ ನೀಡಿದರು. ಬಿರುಸಿನ ಬ್ಯಾಟಿಂಗ್​ ನಡೆಸಿದ ವಧೀರಾ ಅವರು ಕರಣ್​ ಶರ್ಮ ಅವರಿಗೆ ಸತತ ಸಿಕ್ಸರ್​ ಸಿಡಿಸಿ ಮಿಂಚಿದರು. ಇದರಲ್ಲೊಂದು ಸಿಕ್ಸ್​ ಸ್ಟೇಡಿಯಂನಿಂದ ಹೊರಕ್ಕೆ ಚಿಮ್ಮಿತು. ಈ ವೇಳೆ ಅವರು ಅಪಾಯಕಾರಿಯಾಗುವ ಸೂಚನೆಯೊಂದು ಲಭಿಸಿತು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳದ ಕರಣ್​ ಶರ್ಮ ಮುಂದಿನ ಎಸೆತದಲ್ಲಿ ವಿಕೆಟ್​ ಉಡಾಯಿಸುವಲ್ಲಿ ಯಶಸ್ವಿಯಾದರು. ವಧೀರಾ 21 ರನ್​ ಗಳಿಸಿದರು. ಸ್ಟಾರ್​ ಬ್ಯಾಟರ್​ಗಳನ್ನು ಆರಂಭದಲ್ಲೇ ಪೆವಿಲಿಯನ್​ಗೆ ಕಳುಹಿಸಿದ್ದ ಆರ್​ಸಿಬಿಗೆ ತಿಲಕ್​ ವರ್ಮಾ ವಿಕೆಟ್​ ಕೀಳಲು ಸಾಧ್ಯವಾಗಲ್ಲೇ ಇಲ್ಲ.

ತಿಲಕ್​ ವರ್ಮ ಮತ್ತೊಂದು ಬದಿಯಲ್ಲಿ ಆರ್​ಸಿಬಿ ದಾಳಿಯನ್ನು ಸಮರ್ಥವಾಗಿ ಎದುರಿಸಿ ಅರ್ಧಶತಕ ಬಾರಿಸಿ ತಂಡದ ಪಾಲಿಗೆ ಆಪದ್ಬಾಂಧವರಾದರು. ಇವರ ಈ ಏಕಾಂಗಿ ಹೋರಾಟದಿಂದ ತಂಡ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಯಶಸ್ಸು ಕಂಡಿತು. 46 ಎಸೆತ ಎದುರಿಸಿದ ಅವರು ಬರೋಬ್ಬರಿ ನಾಲ್ಕು ಸಿಕ್ಸರ್​ ಮತ್ತು 9 ಬೌಂಡರಿ ನೆರವಿನಿಂದ ಅಜೇಯ 84 ರನ್​ ಬಾರಿಸಿದರು.

ಆರಂಭಿಕ ವೈಫಲ್ಯ ಕಂಡ ಮುಂಬೈ

ಬ್ಯಾಟಿಂಗ್​ ಆಹ್ವಾನ ಪಡೆದ ಮುಂಬೈ ಆರಂಭದಲ್ಲೇ ಸತತ ವಿಕೆಟ್​ ಕಳೆದುಕೊಂಡಿತು. ಮೊಹಮ್ಮದ್​ ಸಿರಾಜ್​ ಅವರು ಇಶಾನ್​ ಕಿಶನ್​ ವಿಕೆಟ್​ ಕಿತ್ತು ಆರ್​ಸಿಬಿಗೆ ಮೊದಲ ಮುನ್ನಡೆ ತಂದುಕೊಟ್ಟರು. ಮುಂದಿನ ಓವರ್​ನಲ್ಲಿ ರೇಸ್ ಟಾಪ್ಲಿ ಕ್ಯಾಮರೂನ್​ ಗ್ರೀನ್​ ವಿಕೆಟ್​ ಉರುಳಿಸಿದರು. ಗ್ರೀನ್​ 5 ರನ್​ ಗಳಿಸಿದರೆ ಇಶಾನ್​ ಕಿಶನ್​ 11 ರನ್​ ಬಾರಿಸಿದರು. ಸಿರಾಜ್​ ಓವರ್​ನಲ್ಲಿ ಜೀವದಾನ ಪಡೆದ ರೋಹಿತ್​ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಆಕಾಶ್​ ದೀಪ್​ ಅವರ ಮುಂದಿನ ಓವರ್​ನಲ್ಲಿ ವಿಕೆಟ್​ ಕೀಪರ್​ ದಿನೇಶ್​ ಕಾರ್ತಿಕ್​ ಅವರಿಗೆ ಕ್ಯಾಚ್​ ನೀಡಿ ಒಂದು ರನ್​ಗೆ ಸೀಮಿತರಾದರು. ತಂಡದ ಮೊತ್ತ 50 ಆಗುವ ಮುನ್ನವೇ ನಾಲ್ಕು ವಿಕೆಟ್​ ಕಳೆದುಕೊಂಡು ಮುಂಬೈ ಶೋಚನೀಯ ಸ್ಥಿತಿ ಕಂಡಿತು. ಟಿ20 ನಂ.1 ಬ್ಯಾಟರ್​ ಸೂರ್ಯಕುಮಾರ್​ ಯಾದವ್​ ಅವರ ಬ್ಯಾಟ್​ ಈ ಪಂದ್ಯದಲ್ಲಿ ಸದ್ದು ಮಾಡಲಿಲ್ಲ. ರನ್​ ಗಳಿಸಲು ಪರದಾಡಿದ ಅವರು 16 ಎಸೆತ ಎದುರಿಸಿ 15 ರನ್​ ಬಾರಿಸಲಷ್ಟೇ ಶಕ್ತರಾದರು.

ಟಾಪ್ಲಿಗೆ ಗಾಯ

ಉತ್ತಮ ಬೌಲಿಂಗ್​ ನಡೆಸುತ್ತಿದ್ದ ಟಾಪ್ಲಿ ಅವರು ಫೀಲ್ಡಿಂಗ್​ ನಡೆಸುತ್ತಿದ್ದ ವೇಳೆ ಭುಜದ ಗಾಯಕ್ಕೆ ತುತ್ತಾಗಿ ಮೈದಾನ ತೊರೆದರು. ಸದ್ಯ ಅವರ ಗಾಯವನ್ನು ಗಮನಿಸುವಾಗ ಅವರು ಮುಂದಿನ ಕೆಲ ಪಂದ್ಯಗಳಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಮೊದಲೇ ಗಾಯದ ಚಿಂತೆಯಲ್ಲಿದ್ದ ಆರ್​ಸಿಬಿಗೆ ಇದೀಗ ಗಾಯದ ಮೇಲೆ ಬರೆ ಎಳೆದಂತಾಗಿದೆ. ಟಾಪ್ಲಿ 2 ಓವರ್​ ನಡೆಸಿ 1 ವಿಕೆಟ್​ ಕಿತ್ತು ಪಂದ್ಯದಿಂದ ಹೊರಗುಳಿದರು.

ಸಲೀಂ ದುರಾನಿಗೆ ಗೌರವ

ಭಾರತದ ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಅವರ ನಿಧನದ ಹಿನ್ನೆಲೆ ಆರ್​ಸಿಬಿ ಮತ್ತು ಮುಂಬೈ ಆಟಗಾರರು ದಿವಂಗತ ಭಾರತೀಯ ಕ್ರಿಕೆಟಿಗನಿಗೆ ಗೌರವ ಸೂಚಕವಾಗಿ ತೋಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿ ಕಣಕ್ಕಿಳಿದರು.

ಸಂಕ್ಷಿಪ್ತ ಸ್ಕೋರ್​: ಮುಂಬೈ ಇಂಡಿಯನ್ಸ್​ 20 ಓವರ್​ಗಳಲ್ಲಿ 7 ವಿಕೆಟ್ ​ನಷ್ಟಕ್ಕೆ 171 (ತಿಲಕ್​ ವರ್ಮ ಅಜೇಯ 84, ನಿಹಾಲ್​ ವಧೀರಾ 21, ಕರಣ್​ ಶರ್ಮ 32ಕ್ಕೆ 2).

ರಾಯಲ್​ ಚಾಲೆಂಜರ್ಸ್​ ಬೆಂಗಳೂರು:16.2 ಓವರ್​ಗಳಲ್ಲಿ 2 ವಿಕೆಟ್​ನಷ್ಟಕ್ಕೆ 172( ವಿರಾಟ್​ ಕೊಹ್ಲಿ ಅಜೇಯ 82, ಫಾಪ್ ಡು ಪ್ಲೆಸಿಸ್​ 73, ಮ್ಯಾಕ್ಸ್​ವೆಲ್​ ಅಜೇಯ 12).

Exit mobile version