Site icon Vistara News

Ravi Bishnoi : ರವಿ ಬಿಷ್ಣೋಯಿಯನ್ನು ಕೊಂಡಾಡಿದ ಲೆಜೆಂಡರಿ ಸ್ಪಿನ್ನರ್​

Ravi Bishnoi

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ (ಡಿಸೆಂಬರ್ 03) ನಡೆದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ 6 ರನ್​ಗಳ ರೋಚಕ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತ್ತು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್​ಗೆ 8 ವಿಕೆಟ್ ಕಳೆದುಕೊಂಡು 154 ರನ್ ಗಳಿಸಲಷ್ಟೇ ಶಕ್ತಗೊಂಡು ಸೋಲೊಪ್ಪಿಕೊಂಡಿತು. ಇದರೊಂದಿಗೆ ಸರಣಿ 4-1 ಅಂತರದಿಂದ ಭಾರತದ ಪಾಲಾಯಿತು. ವಿಶ್ವ ಕಪ್​ನಲ್ಲಿ ಭಾರತ ತಂಡ ಸೋತಿದ್ದ ಹಿನ್ನೆಲೆಯಲ್ಲಿ ಈ ಸರಣಿ ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನವನ್ನು ಉಂಟು ಮಾಡಿತು.

ಭಾರತದ ಪರ ಸರಣಿಯಲ್ಲಿ ಹಲವರು ಮಿಂಚಿದ್ದಾರೆ. ಅವರಲ್ಲಿ ಪ್ರಮುಖರು ಮಣಿಕಟ್ಟು ಸ್ಪಿನ್ನರ್ ರವಿ ಬಿಷ್ಣೋಯ್. ಐದು ಪಂದ್ಯಗಳಿಂದ 9 ವಿಕೆಟ್ ಪಡೆಯುವ ಮೂಲಕ ಸರಣಿಯ ಪ್ರಮುಖ ವಿಕೆಟ್ ಟೇಕರ್ ಎನಿಸಿಕೊಂಡರು. ಐದನೇ ಟಿ 20 ಐನಲ್ಲಿ ಬಿಷ್ಣೋಯ್ ಮತ್ತೊಮ್ಮೆ ನಾಲ್ಕು ಓವರ್​ಗಳ ಸ್ಪೆಲ್​ನಲ್ಲಿ 29 ರನ್​ಗೆ 2 ವಿಕೆಟ್​ ಪಡೆದರು. ಸರಣಿಯಲ್ಲಿ ಅವರ ಅದ್ಭುತ ಪ್ರದರ್ಶನದ ಬಗ್ಗೆ ಶ್ರೀಲಂಕಾದ ಲೆಜೆಂಡರಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಿಷ್ಣೋಯ್​ ಇತರರಿಗಿಂತ ವೇಗವಾಗಿ ಬೌಲಿಂಗ್ ಮಾಡುವ ಅವರ ವಿಶಿಷ್ಟ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಹೊಸ ಪೀಳಿಗೆಯ ಬೌಲರ್​

“ಭಾರತವು ಯಾವಾಗಲೂ ಆಯಾಯ ಪೀಳಿಗೆಯಲ್ಲಿ ಉತ್ತಮ ಸ್ಪಿನ್ ಬೌಲರ್​ಗಳನ್ನು ಸೃಷ್ಟಿಸುತ್ತದೆ. ಅನಿಲ್ ಕುಂಬ್ಳೆಯಿಂದ ಹಿಡಿದು ರವಿ ಅಶ್ವಿನ್ ವರೆಗೆ ಈಗ ಬಂದಿರುವ ಯುವ ಆಟಗಾರರೆಲ್ಲರೂ ಇದಕ್ಕೆ ಸಾಕ್ಷಿ. ಆದರೆ ಬಿಷ್ಣೋಯ್ ಇತರ ಲೆಗ್ ಸ್ಪಿನ್ನರ್​​ಗಳಿಗಿಂತ ಭಿನ್ನರಾಗಿದ್ದಾರೆ. ಅವರು ವೇಗವಾಗಿ ಬೌಲಿಂಗ್ ಮಾಡುತ್ತಾರೆ ಮತ್ತು ಅವರು ಚೆಂಡನ್ನು ಸಾಕಷ್ಟು ಸ್ಲೈಡ್ ಮಾಡುತ್ತಾರೆ. ಅಕ್ಷರ್ ಪಟೇಲ್​ ಕೂಡ ತುಂಬಾ ವೇಗ ಹಾಗೂ ನಿಖರ ಬೌಲಿಂಗ್ ಮಾಡುತ್ತಾರೆ. ಅವರು ಚೆಂಡನ್ನು ಹೆಚ್ಚು ತಿರುಗಿಸುವುದಿಲ್ಲ. ಅದೇ ರೀತಿ ವಾಷಿಂಗ್ಟನ್​ ಕೂಡ ಒಂದೇ ರೀತಿ ಇದ್ದಾರೆ ನಿಖರ ಮತ್ತು ವೇಗವಾಗಿ ಬೌಲಿಂಗ್ ಮಾಡುತ್ತಾರೆ ಎಂದು ಮುರಳೀಧರನ್ ಜಿಯೋ ಸಿನೆಮಾ ಮಾತುಕತೆಯಲ್ಲಿ ಹೇಳಿದರು.

ಇದನ್ನೂ ಓದಿ : Amazon Prime : ಅಮೆಜಾನ್ ಪ್ರೈಮ್​ನಲ್ಲಿ ನೋಡಬಹುದು ಟಿ20 ವಿಶ್ವ ಕಪ್

ಟಿ20 ಕ್ರಿಕೆಟ್​ನಲ್ಲಿ 34 ವಿಕೆಟ್ ಪಡೆದ ಬಿಷ್ಣೋಯ್​

2022ರ ಫೆಬ್ರವರಿಯಲ್ಲಿ ಈಡನ್ ಗಾರ್ಡನ್ಸ್​​ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ್ದ 23ರ ಹರೆಯದ ಬಿಷ್ಣೋಯ್​​ 21 ಪಂದ್ಯಗಳಿಂದ 17.38ರ ಸರಾಸರಿಯಲ್ಲಿ 34 ವಿಕೆಟ್​​ಗಳನ್ನು ಕಬಳಿಸಿದ್ದಾರೆ. ರಾಜಸ್ಥಾನ ಮೂಲದ ಸ್ಪಿನ್ನರ್ 2022 ರ ಟಿ 20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಸ್ಪರ್ಧೆಯಲ್ಲಿದ್ದರು. ಆದಾಗ್ಯೂ, ಮತ್ತೊಬ್ಬ ಮಣಿಕಟ್ಟು ಸ್ಪಿನ್ನರ್ ಯಜುವೇಂದ್ರ ಚಹಲ್ ಈಗಾಗಲೇ ತಂಡದಲ್ಲಿ ಇರುವುದರಿಂದ ಆಯ್ಕೆದಾರರು ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಮುಂದುವರಿಯಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ ಟಿ 20 ಐ ಸರಣಿಗೆ ಚಹಲ್ ತಂಡದಲ್ಲಿ ಇಲ್ಲದಿರುವುದರಿಂದ, ಬಿಷ್ಣೋಯ್ ತಮ್ಮ ಗಮನಾರ್ಹ ಫಾರ್ಮ್ ಅನ್ನು ಮುಂದುವರಿಸುವ ಅವಕಾಶ ಹೊಂದಿದ್ದಾರೆ. ಆ ಮೂಲಕ ಮುಂದಿನ ವರ್ಷದ ಟಿ 20 ವಿಶ್ವಕಪ್​​ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಉತ್ತಮ ಅವಕಾಶ ಪಡೆಯಲಿದ್ದಾರೆ.

Exit mobile version