Site icon Vistara News

Pro Kabaddi: ಕೊನೆ ಕ್ಷಣದಲ್ಲಿ ಯೋಧಾಸ್​ ವಿರುದ್ಧ ವಿರೋಚಿತ ಸೋಲು ಕಂಡ ಬುಲ್ಸ್​

Bengaluru Bulls

ನೋಯ್ಡಾ: ಆರಂಭಿಕ ಹಂತದಲ್ಲಿ ಮುನ್ನಡೆ, ಬಳಿಕ ಕುಸಿತ, ಅಂತಿಮ ಹಂತದಲ್ಲಿ ಮತ್ತೆ ಬಿರುಸಿನ ಆಟವಾಡಿದ ಬೆಂಗಳೂರು ಬುಲ್ಸ್(Bengaluru Bulls)​ ತಂಡ ಕೊನೆಗೂ ಆತಿಥೇಯ ಯುಪಿ ಯೋಧಾಸ್(U.P. Yoddhas)​ ವಿರುದ್ಧ 1 ಅಂಕದ ವಿರೋಚಿತ ಸೋಲಿಗೆ ತುತ್ತಾಯಿತು. ಇದು ಬುಲ್ಸ್​ಗೆ ಎದುರಾದ 6ನೇ ಸೋಲು.

ಇಲ್ಲಿನ ನೋಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್-10ರ(Pro Kabaddi League) ಶುಕ್ರವಾರದ ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ ತಂಡ ​ಯುಪಿ ಯೋಧಾಸ್ ವಿರುದ್ಧ 34-33 ಅಂತರದಿಂದ ಸೋಲು ಕಂಡಿತು. ಕೊನೆಯ ಒಂದುವರೆ ನಿಮಿಷದ ಆಟದಲ್ಲಿ ಬೆಂಗಳೂರು ಬುಲ್ಸ್​ ತನ್ನಲೇ ಶಕ್ತಿಯನ್ನು ಪ್ರದರ್ಶಿಸಿತು. ಬುಲ್ಸ್​ ತಂಡದ ಯುವ ರೇಡರ್​ ಸುಶೀಲ್ ಸತತವಾಗಿ ಅಂಕ ಗಳಿಸಿ ಪಂದ್ಯವನ್ನು ಮತ್ತಷ್ಟು ರೋಚಕತೆಗೆ ತಂದು ನಿಲ್ಲಿಸಿದರು. ಆದರೂ ಒಂದು ಅಂಕದ ಸೋಲು ಎದುರಾಯಿತು.

​ಕೊನೆಯ ರೇಡಿಂಗ್​ ಅವಕಾಶ ಬುಲ್ಸ್​ ತಂಡಕ್ಕೆ ಲಭಿಸಿತ್ತಾದರೂ ಕೂಡ ಕೇವಲ 4 ಸೆಕೆಂಡ್​ಗಳ ಆಟ ಮಾತ್ರ ಬಾಕಿ ಇತ್ತು. ಎದುರಾಳಿ ಪಾಳಯಲ್ಲಿ ಇಬ್ಬರು ಆಟಗಾರರು ಮಾತ್ರ ಉಳಿದುಕೊಂಡಿದ್ದರು. ರೇಡಿಂಗ್​ ನಡೆಸಿದ ಸುಶೀಲ್ ಅವರಿಗೆ ಒಂದಂಕ ಮಾತ್ರ ಗಳಿಸಲು ಸಾಧ್ಯವಾಯಿತು. ಒಂದೊಮ್ಮ ಅವರು ಈ ರೇಡಿಂಗ್​ನಲ್ಲಿ ಇಬ್ಬರನ್ನು ಔಟ್​ ಮಾಡತ್ತಿದ್ದರೆ ಯುಪಿ ತಂಡ ಆಲೌಟ್​ ಆಗುವ ಮೂಲಕ ಬುಲ್ಸ್​ ಪಂದ್ಯವನ್ನು ಗೆಲ್ಲುತ್ತಿತ್ತು. ಅಥವಾ ಕನಿಷ್ಠ 15 ಸೆಕೆಂಡ್​ ಆಟ ಇರುತ್ತಿದ್ದರೂ ಕೂಡ ಬುಲ್ಸ್​ಗೆ ಗೆಲ್ಲುವ ಎಲ್ಲ ಅವಕಾಶವಿತ್ತು. ಆದರೆ ಅದೃಷ್ಟ ಯುಪಿ ತಂಡದ ಪರವಾಗಿತ್ತು.

​ಬುಲ್ಸ್​ ಪರ ಸ್ಟಾರ್​ ರೇಡರ್​ ವಿಕಾಸ್​ ಖಂಡೋಲಾ ಕೇವಲ ಒಂದಂಕಕ್ಕೆ ಸೀಮಿತರಾದದ್ದು ತಂಡದ ಹಿನ್ನೆಡೆಗೆ ಪ್ರಮುಖ ಕಾರಣ. ಭರತ್​ 8 ಅಂಕ ಗಳಿಸಿದರೂ ಅವರಿಂದ ನಿರೀಕ್ಷೆ ಮಾಡಿದ್ದ ಪ್ರದರ್ಶನ ಕಂಡುಬರಲಿಲ್ಲ. ಮಿಂಚಿದ್ದು ಸುಶೀಲ್​ ಮಾತ್ರ. 7 ರೇಡ್ ನಡೆಸಿ 8 ಅಂಕ ಕಲೆಹಾಕುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ Pro Kabaddi: ಹರ್ಯಾಣ ಸ್ಟೀಲರ್ಸ್ ಎದುರು ಗೆದ್ದು ಬೀಗಿದ ಪಾಟ್ನಾ ಪೈರೇಟ್ಸ್

ಯುಪಿ ಪರ ನಾಯಕ ಹಾಗೂ ಪ್ರೊ ಕಬಡ್ಡಿ ಇತಿಹಾಸದ ದಾಖಲೆಯ ಸರದಾರ ಪ್ರದೀಪ್ ನರ್ವಾಲ್​ 10 ಅಂಕ ಗಳಿಸಿದರು. ಅಬ್ಬರ ರೇಡಿಂಗ್​ ನಡುವೆ ಗ್ರೀನ್​ ಕಾರ್ಡ್​ ಕೂಡ ಪಡೆದರು. ಮತ್ತೊಬ್ಬ ರೇಡರ್​ ಸುರೇಂದರ್​ ಗಿಲ್​ 7, ಡಿಫೆಂಡರ್​ ಸುಮೀತ್​ 5 ಅಂಕ ಪಡೆದರು.

ಹರ್ಯಾಣ ಮಣಿಸಿದ ಪಾಟ್ನಾ

ದಿನದ ಮೊದಲ ಪಂದ್ಯದಲ್ಲಿ ರೇಡರ್​ಗಳ ಮತ್ತು ಡಿಫೆಂಡರ್​ಗಳ ಸಂಘಟಿತ ಆಟದ ಫಲವಾಗಿ ಪಾಟ್ನಾ ಪೈರೇಟ್ಸ್(Patna Pirates)​ ತಂಡ ಹರ್ಯಾಣ ಸ್ಟೀಲರ್ಸ್(Haryana Steelers)​ ತಂಡವನ್ನು 46-33 ಅಂಕಗಳ ಅಂತರದಿಂದ ಮಣಿಸಿತು.

ಪಾಟ್ನಾ ಪೈರೇಟ್ಸ್​ ತಂಡ ರೇಡರ್​ ಮಂಜಿತ್​ ಈ ಪಂದ್ಯದಲ್ಲಿ ಅತ್ಯಾಕರ್ಷಕ ರೇಡಿಂಗ್​ ನಡೆಸಿ ಗಮನ ಸೆಳೆದರು. ಒಟ್ಟು 17 ಬಾರಿ ಎದುರಾಳಿ ಕೋಟೆಗೆ ನುಗ್ಗಿ 13 ಅಂಕ ದೋಚಿದರು. ಇದರಲ್ಲಿ 10 ಟಚ್ ಮತ್ತು ​3 ಬೋನಸ್​ ಅಂಕ ಒಳಗೊಂಡಿತು. ಅವರ ರೇಡಿಂಗ್​ ಆರ್ಭಟವನ್ನು ಹಿಡಿದು ನಿಲ್ಲಿಸುವಲ್ಲಿ ಹರ್ಯಾಣ ಡಿಫೆಂಡರ್​ಗಳು ಸಂಪೂರ್ಣ ಮಂಕಾದರು. ಡಿಫೆಂಡಿಂಗ್​ನಲ್ಲಿ ಕೃಷ್ಣ ಹಾಗೂ ಅಂಕಿತ್​ ಅಮೋಘ ಆಟ ಪ್ರದರ್ಶಿಸಿದರು. ಜಿದ್ದಿಗೆ ಬಿದ್ದವಂತೆ ಎದುರಾಳಿ ರೇಡರ್​ಗಳನ್ನು ಹಿಡಿದು ನಿಲ್ಲಿಸುವಲ್ಲಿ ಯಶಸ್ಸಿ ಕಂಡರು. ಕೃಷ್ಣ 5 ಅಂಕ ಗಳಿಸಿದರೆ, ಅಂಕಿತ್​ 4 ಅಂಕ ಪಡೆದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್​ ನೀಡಿದ ನಾಯಕ ನೀರಜ್​ ಕುಮಾರ್​ 3 ಅಂಕ ಕಲೆಹಾಕಿದರು. ರೇಡರ್​ ಸುಧಾಕರ್​ 5 ಅಂಕ ಸಂಪಾದಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.

ಹರ್ಯಾಣ ಪರ ರೇಡರ್​ ವಿನಯ್​ 12, ರೈಟ್​ ಕಾರ್ನರ್​ ಡಿಫೆಂಡರ್​ ರಾಹುಲ್(6), ಲೆಫ್ಟ್​ ಕಾರ್ನರ್​ ಡಿಫೆಂಡರ್​ ಶಿವಂ(7) ಅಂಕ ಗಳಿಸಿದರು. ನಾಯಕ ಜೈದೀಪ್​ ಶೂನ್ಯ ಸುತ್ತಿದ್ದು ಹಾಗೂ ನಂಬುಗೆಯ ಆಟಗಾರ ಪ್ರಪಂಚನ್​ ರೇಡಿಂಗ್​ನಲ್ಲಿ ವಿಫಲವಾದದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಜೈದೀಪ್ ಗ್ರೀನ್​ ಕಾರ್ಡ್​ ಕೂಡ ಪಡೆದರು. ಕಳೆದ ಕೆಲ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದ ಬಾಹುಬಲಿ ಖ್ಯಾತಿಯ ರೇಡರ್​ ಸಿದ್ದಾರ್ಥ್​ ದೇಸಾಯಿ ಅವರನ್ನು ಈ ಪಂದ್ಯದಿಂದ ಹೊರಗಿಡಲಾಯಿತು.

Exit mobile version