Site icon Vistara News

21 historical places in Karnataka : ಕರ್ನಾಟಕದಲ್ಲಿನ ಈ ಪ್ರಸಿದ್ಧ ತಾಣಗಳನ್ನು ನೀವು ನೋಡಲೇಬೇಕು!

karnataka historical places

ಕರ್ನಾಟಕ ಪ್ರಾಕೃತಿಕವಾಗಿ ಅದ್ಭುತವಾದ ರಾಜ್ಯ. ಕರಾವಳಿಯಿಂದ ಹಿಡಿದು ಸಹ್ಯಾದ್ರಿ ಬೆಟ್ಟಗಳ ಸಾಲಗಳವರೆಗೆ ಎಲ್ಲ ರೀತಿಯ ತಾಣಗಳೂ ನಮ್ಮ ರಾಜ್ಯದಲ್ಲಿವೆ. ಶ್ರೀಮಂತ ರಾಜವಂಶಗಳಿಗೆ ನೆಲೆಯಾದ ನಮ್ಮ ನಾಡಿನಲ್ಲಿ ಅಸಂಖ್ಯಾತ ಐತಿಹಾಸಿಕ ಸ್ಥಳಗಳಿವೆ. ಅತ್ಯದ್ಭುತವಾದ ಪುರಾತತ್ತ್ವ ಶಾಸ್ತ್ರದ ಸಂಪತ್ತಿದೆ. ನಂದ ಸಾಮ್ರಾಜ್ಯ, ಮೌರ್ಯ ಸಾಮ್ರಾಜ್ಯ, ಶಾತವಾಹನರು, ಕದಂಬರು, ಪಶ್ಚಿಮ ಗಂಗರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟ ಸಾಮ್ರಾಜ್ಯ, ಚಾಲುಕ್ಯ ಸಾಮ್ರಾಜ್ಯ ಮತ್ತು ಚೋಳರು ಆಳಿದ ಕುರುಹುಗಳು ನಮ್ಮಲ್ಲಿವೆ. ಅಂತಹ ದಂತ ಕತೆಗಳನ್ನು ಸಾರುವ 21 ಐತಿಹಾಸಿಕ ತಾಣಗಳ ಬಗ್ಗೆ ಇಲ್ಲಿದೆ ಸಂಪೂರ್ಣ (21 historical places in Karnataka) ಮಾಹಿತಿ.

ಹಂಪಿ

ಹಂಪಿಯ ಕಲ್ಲಿನ ರಥ.


ಯುನೆಸ್ಕೋ ಹೆಸರಿಸಿರುವ ಐತಿಹಾಸಿಕ ತಾಣಗಳಲ್ಲಿ ಹಂಪಿಯೂ ಒಂದು. ಸುಮಾರು 500 ಪ್ರಾಚೀನ ದೇವಾಲಯಗಳನ್ನು ಹೊಂದಿರುವ ಈ ನಗರದಲ್ಲಿ ಪುರಾತತ್ತ್ವ ಶಾಸ್ತ್ರದ ಹಲವಾರು ಸ್ಮಾರಕಗಳನ್ನು ನೋಡಬಹುದು. ವಿರೂಪಾಕ್ಷ ದೇವಾಲಯ, ವಿಠಲ ದೇವಾಲಯ ಹಂಪಿಯ ಪ್ರಸಿದ್ಧ ಐತಿಹಾಸಿಕ ತಾಣಗಳು ಇಲ್ಲಿವೆ. ಇಲ್ಲಿನ ಹನುಮಾನ್‌ ದೇವಸ್ಥಾನ, ಹೇಮಕೂಟ ಬೆಟ್ಟದ ದೇವಸ್ಥಾನ ಸಂಕೀರ್ಣವನ್ನು ನೀವು ನೋಡಲೇಬೇಕು. ಇಲ್ಲಿ ನಿಮಗೆ ಟ್ರೆಕ್ಕಿಂಗ್‌ ಮಾಡುವುದುಕ್ಕೆ, ಕ್ಯಾಂಪಿಂಗ್‌ ಮಾಡುವುದಕ್ಕೂ ಅವಕಾಶವಿದೆ. ಇಲ್ಲಿನ ಸಂಪೂರ್ಣ ಐತಿಹಾಸಿಕ ತಾಣಗಳನ್ನು ನೋಡಲು ಒಂದು ದಿನ ಸಾಲದಾದ್ದರಿಂದ ಕನಿಷ್ಠ ಎರಡು ದಿನಗಳ ಮಟ್ಟಿಗೆ ಇಲ್ಲಿನ ಟ್ರಿಪ್‌ ಪ್ಲ್ಯಾನ್‌ ಮಾಡಿಕೊಳ್ಳಿ. ಬೇಸಿಗೆಯಲ್ಲಿ ಇಲ್ಲಿ ಹೆಚ್ಚಾದ ಬಿಸಿಲಿರುತ್ತದೆಯಾದ್ದರಿಂದ ಚಳಿಗಾಲದ ಸಮಯವಾದ ಅಕ್ಟೋಬರ್‌ನಿಂದ ಫೆಬ್ರವರಿಯವರೆಗೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಹಂಪಿ ಹೊಸಪೇಟೆಯಿಂದ 13 ಕಿ.ಮೀ ದೂರದಲ್ಲಿರುವುದರಿಂದ ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ತಲುಪಿ, ಅಲ್ಲಿಂದ ಹಂಪಿಗೆ ಪ್ರಯಾಣ ಬೆಳೆಸಬಹುದು.

ಮೈಸೂರು

ಮೈಸೂರು ಅರಮನೆಯ ನೋಟ.


ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು. ಏಳು ಶತಮಾನಗಳ ಕಾಲ ಮೈಸೂರಿನ ರಾಜವಂಶ ಆಡಳಿತ ನಡೆಸಿದ ನಾಡಿದು. ಇದು ಕರ್ನಾಟಕದ ಅತಿ ಪ್ರಸಿದ್ಧ ಪ್ರವಾಸಿ ನಗರವಾಗಿದ್ದು, ಇಲ್ಲಿಗೆ ಪ್ರತಿ ವರ್ಷ 25 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಲಲಿತ ಮಹಲ್‌, ಜಗಮೋಹನ್‌ ಅರಮನೆ, ಬೃಂದಾವನ ಉದ್ಯಾನವನ, ಮೈಸೂರು ಗ್ರಂಥಾಲಯದ ಕರ್ನಾಟಕದಲ್ಲಿ ಪ್ರತಿವರ್ಷ ಅತಿಹೆಚ್ಚು ಪ್ರವಾಸಿಗರನ್ನು ಕಾಣುತ್ತದೆ. ಹಾಗೆಯೇ ಇಲ್ಲಿನ ಪ್ರಸಿದ್ಧ ಸಿಹಿಯಾದ ಮೈಸೂರು ಪಾಕ್‌ ಅನ್ನು ಸವಿದು ಹೋಗುತ್ತಾರೆ. ಇಲ್ಲಿನ ಅರಮನೆಯಲ್ಲಿ ನೀವು ರಾಜಮನೆತನದ ಅದ್ಧೂರಿತನವನ್ನು ಕಾಣಬಹುದು. ಪ್ರತಿವರ್ಷ ದಸರಾ ಸಮಯದಲ್ಲಿ ಇಲ್ಲಿ ಅದ್ಧೂರಿಯಾಗಿ ಉತ್ಸವ ನಡೆಸಲಾಗುತ್ತದೆ. ಆನೆ ಮೇಲಿನ ಬಂಗಾರದ ಅಂಬಾರಿಯಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಿಯನ್ನು ಮೆರವಣಿಗೆ ಮಾಡಿಸಲಾಗುತ್ತದೆ.

ಬಿಜಾಪುರ

ಬಿಜಾಪುರದ ಗೋಲ್‌ ಗುಂಬಜ್‌.


ವಿಶ್ವಪ್ರಸಿದ್ಧ ಗೋಲ್‌ಗುಂಬಜ್‌ ಇರುವುದು ಬಿಜಾಪುರದಲ್ಲಿ. ಇದು ಉತ್ತರ ಕರ್ನಾಟಕದಲ್ಲಿ ಭೇಟಿ ನೀಡಲೇಬೇಕಾದ ಐತಿಹಾಸಿಕ ಸ್ಥಳವಾಗಿದೆ. ಇದು ಮೊಹಮ್ಮದ್‌ ಆದಿಲ್‌ ಷಾ ಅವರ ಸಮಾಧಿಯಾಗಿದೆ. ಭಾರತದಲ್ಲಿನ ಅತಿ ದೊಡ್ಡ ಗುಮ್ಮಟ ಈ ಗೋಲ್‌ಗುಂಬಜ್‌ನ ಗುಮ್ಮಟವಾಗಿದೆ. ಗೋಲ್‌ಗುಂಬಜ್‌ ಮಾತ್ರವಲ್ಲದೆ ನಗರದಲ್ಲಿ ಶಿವಗಿರಿ, ಜಾಮಾ ಮಸೀದಿ ಮತ್ತು ಬಾರಾ ಕಮಾನ್‌ನಂತಹ ಹಲವು ಐತಿಹಾಸಿಕ ತಾಣಗಳಿವೆ. ಈ ನಗರದಲ್ಲಿ ನೀವು ಉತ್ತರ ಕರ್ನಾಟಕದ ಜೀವನ ಶೈಲಿಯ ಪರಿಚಯವನ್ನೂ ಮಾಡಿಕೊಳ್ಳಬಹುದು. ಇಲ್ಲಿ ಸ್ಥಳೀಯವಾಗಿ ಅನೇಕ ಹೋಟೆಲ್‌ಗಳು, ರೆಸಾರ್ಟ್‌ಗಳಿದ್ದು, ನೀವು ಅವುಗಳಲ್ಲಿ ವಾಸ ಹೂಡಬಹುದು.

ಶಿವಮೊಗ್ಗ


ಶಿವಮೊಗ್ಗ ಅನೇಕ ರಾಜವಂಶಗಳಿಗೆ ಪ್ರಮುಖ ಸ್ಥಾನವಾಗಿದ್ದ ಜಿಲ್ಲೆ. ಇಲ್ಲಿ ವಿಶ್ವ ವಿಖ್ಯಾತ ಜೋಗ ಜಲಪಾತವೂ ಇದೆ. ಇಲ್ಲಿನ ಶಿವಪ್ಪ ನಾಯಕ ಅರಮನೆ, ಇಕ್ಕೇರಿ ದೇಗುಲ ಹಾಗೂ ಇನ್ನೂ ಹಲವು ದೇಗುಲಗಳು ಐತಿಹಾಸಿಕ ಪ್ರಾಮುಖ್ಯತೆ ಹೊಂದಿವೆ. ಸಾಗರ ತಾಲೂಕಿನ ಕೆಳದಿಯ ಶಿವಪ್ಪ ನಾಯಕ ಅರಮನೆಯ ಮುಂಭಾಗದಲ್ಲೇ ಅದರ ವಸ್ತು ಸಂಗ್ರಹಾಲಯವಿದ್ದು, ಅಲ್ಲಿ ನೀವು ಶಿವಪ್ಪ ನಾಯಕನ ಆಡಳಿತದ ಕಾಲದ ಹಲವು ವಸ್ತುಳನ್ನು ಕಾಣಬಹುದಾಗಿದೆ. ಇತಿಹಾಸ ಮಾತ್ರವಲ್ಲದೆ ನಿಸರ್ಗ ಸೌಂದರ್ಯದಲ್ಲೂ ಶಿವಮೊಗ್ಗ ಜಿಲ್ಲೆ ಸಂಪತ್‌ ಭರಿತ ಜಿಲ್ಲೆಯಾಗಿದೆ. ಇಲ್ಲಿ ನೀವು ಹಲವಾರು ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಬಹುದು. ಹಾಗೆಯೇ ಧಾರ್ಮಿಕ ವಿಶೇಷತೆ ಹೊಂದಿರುವ ಸಿಗಂದೂರು, ವರದಳ್ಳಿಯಂತಹ ಹಲವು ಸ್ಥಾನಗಳಿಗೆ ಭೇಟಿ ನೀಡಬಹುದು.

ಬೆಂಗಳೂರು

ಬೆಂಗಳೂರಿನ ಟಿಪ್ಪು ಅರಮನೆ.


ಬೆಂಗಳೂರು ಭಾರತದ ಸಿಲಿಕಾನ್‌ ವ್ಯಾಲಿ ಆಗುವುದಕ್ಕೂ ಮೊದಲು ಕರ್ನಾಟಕದ ರಾಜಕೀಯ, ವಾಣಿಜ್ಯ ಮತ್ತು ವ್ಯಾಪಾರದ ಕೇಂದ್ರಬಿಂದು. ಇದು ನೋಡುವುದಕ್ಕೆ ಕಾಂಕ್ರಿಟ್‌ ಕಾಡಿನಂತೆ ಕಾಣುತ್ತದೆಯಾದರೂ ಇಲ್ಲಿ ಕೂಡ ಹಲವು ಐತಿಹಾಸಿಕ ಅರಮನೆಗಳು, ಕೋಟೆಗಳು ಇವೆ. ಇದೀಗ ಈ ಬೆಂಗಳೂರು ಆಸಕ್ತಿದಾಯಕ ಇತಿಹಾಸದ ಜತೆಯಲ್ಲಿ ಆಧುನಿಕತೆಯನ್ನೂ ಹೊತ್ತು ಮೆರೆಯುತ್ತಿರುವ ರಾಜ್ಯವಾಗಿದೆ. ಇಲ್ಲಿ ಐತಿಹಾಸಿಕ ಉಲ್ಲೇಖವನ್ನು ಹೊಂದಿರುವ ಬೆಂಗಳೂರು ಅರಮನೆ, ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ, ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ ಅನ್ನು ನೋಡಬಹುದು. ಹಾಗೆಯೇ ಈಗಿನ ಸರ್ಕಾರದ ಕೇಂದ್ರಬಿಂದುವಾಗಿರುವ ವಿಧಾನಸೌಧವನ್ನೂ ಕಾಣಬಹುದು.

ಬಾದಾಮಿ

ಬಾದಾಮಿಯ ಗುಹಾಂತರ ದೇವಾಲಯ.


ಭಾರತದ ಐತಿಹಾಸಿಕ ಸ್ಥಳಗಳಲ್ಲಿ ಒಂದು ಬಾದಾಮಿ. ಬಾದಾಮಿಯಲ್ಲಿ ನೀವು ಅತಿ ಸೊಗಸಾದ ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳನ್ನು ನೋಡಬಹುದಾಗಿದೆ. ಇಲ್ಲಿನ ಕಲ್ಲಿನ ದೇವಾಲಯ ಎಂಥವರನ್ನೂ ಕಣ್ಮನ ಸೆಳೆಯುತ್ತದೆ. ಇಲ್ಲಿನ ಕೆಂಪು ಮರಳುಗಲ್ಲಿನ ಬಂಡೆಗಳು, ಬಾದಾಮಿ ಕೋಟೆ, ಅಗಸ್ತ್ಯ ಸರೋವರವನ್ನು ನೀವು ನೋಡಿ ಬಂದು ವರ್ಷಗಳಾದರೂ ಮರೆಯುವುದಿಲ್ಲ. ರಾಕ್‌ ಕ್ಲೈಂಬಿಂಗ್‌ ಮಾಡಬೇಕು ಎನ್ನುವ ಆಸೆಯಿರುವವರು ಇಲ್ಲಿ ಆ ಆಸೆಯನ್ನು ನೆರವೇರಿಸಿಕೊಳ್ಳಬಹುದು. ಇಲ್ಲಿನ ಬಾದಾಮಿ ಗುಹೆ ದೇವಾಲಯ, ಭೂತನಾಥ ದೇವಾಲಯಗಳ ಸಂಕೀರ್ಣ, ಮಲ್ಲಿಕಾರ್ಜುನ ದೇವಾಲಯವನ್ನು ನೋಡಲು ಮರೆಯದಿರಿ.

ಹಳೇಬೀಡು

ಹಳೆಬೀಡಿನಲ್ಲಿ ನೋಡಲೇಬೇಕಾದ ದೇವಾಲಯ.


ಹಾಸನ ಜಿಲ್ಲೆಯಲ್ಲಿರುವ ಹಳೇಬೀಡು ಕರ್ನಾಟಕದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. ಈ ನಗರವು 12ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇಲ್ಲಿ ನೀವು ಅತ್ಯದ್ಭುತ ವಾಸ್ತುಶಿಲ್ಪ ಹೊಂದಿರುವ ದೇವಸ್ಥಾನಗಳನ್ನು ಕಾಣಬಹುದು. ಹೊಯ್ಸಳೇಶ್ವರ ಮತ್ತು ಕೇದಾರೇಶ್ವರ ದೇವಾಲಯ ಹಳೇಬೀಡಿನ ಅತ್ಯಂತ ಪ್ರಸಿದ್ಧ ದೇಗುಲಗಳಾಗಿವೆ. ಇದಲ್ಲದೆ ಇದಕ್ಕೆ ಕೆಲವು ಕಿ.ಮೀ ದೂರದಲ್ಲಿ ಬೇಲೂರು ಇದ್ದು, ಅಲ್ಲಿ ಕೂಡ ಹೊಯ್ಸಳರ ವಾಸ್ತುಶಿಲ್ಪದ ಉತ್ತಮ ಉದಾಹರಣೆ ಎನಿಸುವಂತಹ ದೇವಸ್ಥಾನವಿದೆ.

ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣದ ಪ್ರಸಿದ್ಧ ದೇವಾಲಯ.


ಶ್ರೀರಂಗಪಟ್ಟಣವು ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿಯ ತಟದಲ್ಲಿರುವ ಊರಾಗಿದೆ. ವಿಶ್ವ ಪ್ರಸಿದ್ಧ ಮೈಸೂರಿನಿಂದ 15 ಕಿ.ಮೀ ದೂರದಲ್ಲಿ ಈ ಊರಿದೆ. ಶ್ರೀರಂಗಪಟ್ಟಣವು ವಿಜಯನಗರ ಮತ್ತು ಹೊಯ್ಸಳ ಸಾಮ್ರಾಜ್ಯದ ಕೆಲವು ಭವ್ಯವಾದ ವಾಸ್ತುಶಿಲ್ಪದ ಮೇರುಕೃತಿಗಳಿಗೆ ನೆಲೆಯಾಗಿದೆ. ಇಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರಿಂದ ತುಂಬಿರುತ್ತದೆ. ಇದು ವೈಷ್ಣವರ ಪ್ರಮುಖ ದೇವಾಲಯವಾಗಿದೆ. ಇಲ್ಲಿ ಸಮೀಪದಲ್ಲಿ ಕೆಲವು ಜಲಪಾತಗಳು, ಉದ್ಯಾನಗಳಿದ್ದು, ನೀವು ಅಲ್ಲಿಗೂ ಕೂಡ ಪ್ರಯಾಣ ಬೆಳೆಸಬಹುದು.

ಐಹೊಳೆ

ಐಹೊಳೆಯ ಐತಿಹಾಸಿಕ ಸ್ಥಳ.


ಐಹೊಳೆ ಕರ್ನಾಟಕದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳವು ಚಾಲುಕ್ಯ ಸಾಮ್ರಾಜ್ಯದ 100 ಕ್ಕೂ ಹೆಚ್ಚು ಕೆತ್ತಿದ ದೇವಾಲಯಗಳನ್ನು ಹೊಂದಿದೆ. ಇದರ ಪ್ರಾಮುಖ್ಯತೆಯಿಂದಾಗಿ ಯುನೆಸ್ಕೋ ಇದನ್ನು ಐತಿಹಾಸಿಕ ತಾಣ ಎಂದು ಗುರುತಿಸಿದೆ. ಇಲ್ಲಿನ ದೇವಾಲಯಗಳನ್ನು ನಿಮಗೆ ಒಂದು ದಿನ ಸಾಲದು. ಬಾಗಲಕೋಟೆ ರೈಲು ನಿಲ್ದಾಣದಿಂದ ಈ ಐಹೊಳೆ ಕೇವಲ 34 ಕಿ.ಮೀ. ದೂರದಲ್ಲಿದೆ. ಹಾಗಾಗಿ ನೀವು ಅರಾಮವಾಗಿ ಇಲ್ಲಿಗೆ ರೈಲು ಮೂಲಕ ಅಥವಾ ಬಸ್ಸಿನ ಮೂಲಕ ಪ್ರಯಾಣ ಮಾಡಬಹುದಾಗಿದೆ.

ದಾಂಡೇಲಿ

ದಾಂಡೇಲಿಯ ಪ್ರವಾಸಿ ತಾಣ.


ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ದಾಂಡೇಲಿಯು ಐತಿಹಾಸಿಕವಾಗಿಯೂ ಸಾಕಷ್ಟು ಮಹತ್ವದ ಸ್ಥಳವಾಗಿದೆ. ಇಲ್ಲಿ ಜ್ವಾಲಾಮುಖಿಯಿಂದಾಗಿ ರೂಪುಗೊಂಡ ಹಲವು ಗುಹೆಗಳನ್ನು ನೀವು ಕಾಣಬಹುದು. ಇಲ್ಲಿನ ಕವಾಲಾ ಗುಹೆ ತುಂಬಾ ದೊಡ್ಡದಾದ ಸುರಂಗವನ್ನು ಹೊಂದಿದೆ. ಈ ಗುಹೆಯಲ್ಲಿ 375 ಮೆಟ್ಟಿಲುಗಳಿದ್ದು, ಈ ಗುಹೆಯನ್ನು ನೋಡಲೆಂದೇ ಪ್ರತಿವರ್ಷ ಇಲ್ಲಿಗೆ ಸಾವಿರಾರು ಪ್ರವಾಸಿಗರು ಪ್ರವಾಸಕ್ಕೆ ಬರುತ್ತಾರೆ. ಅದಷ್ಟೇ ಅಲ್ಲದೆ ಕಾಳಿ ನದಿಯ ದಡದಲ್ಲಿರುವ ಈ ಊರು ನಿಸರ್ಗದ ವಿಚಾರದಲ್ಲೂ ಅತ್ಯಂತ ಪ್ರಸಿದ್ಧವಾಗಿದೆ. ಇಲ್ಲಿನ ಕಾಳಿ ನದಿಯಲ್ಲಿ ಹಲವಾರು ರೀತಿಯ ವಾಟರ್‌ ಗೇಮ್ಸ್‌ಗಳನ್ನು ನೀವು ಆಡಬಹುದು. ಹಾಗೆಯೇ ದಾಂಡೇಲಿ ವನ್ಯಜೀವಿ ಅಭಯಾರಣ್ಯಕ್ಕೂ ಭೇಟಿ ನೀಡಬಹುದು. ಇಲ್ಲಿ ಅನೇಕ ರೆಸಾರ್ಟ್‌ಗಳಿದ್ದು, ಅವುಗಳೇ ನಿಮಗೆ ಪ್ಯಾಕೇಜ್‌ ನೀಡಿ ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅವಕಾಶ ಮಾಡಿಕೊಡುತ್ತವೆ.

ರಾಮನಗರ

ರಾಮನಗರ ಬೆಟ್ಟ.


ಕರ್ನಾಟಕದ ಮತ್ತೊಂದು ಪ್ರಸಿದ್ಧ ಐತಿಹಾಸಿಕ ಸ್ಥಳವೆಂದರೆ ರಾಮನಗರ. ದೊಡ್ಡ ದೊಡ್ಡ ಕಲ್ಲಿನ ಬೆಟ್ಟಗಳ ನಡುವೆ ಇರುವ ಹಚ್ಚ ಹಸಿರಿನ ನಗರವಿದು. ಇದು ಬೆಂಗಳೂರಿಗರಿಗೆ ವಾರಾಂತ್ಯದ ಪ್ರವಾಸಕ್ಕೆ ಸೂಕ್ತವಾದ ಸ್ಥಳವಾಗಿದೆ. ಇದು ಗ್ರ್ಯಾನೈಟ್‌ ಬೆಟ್ಟಗಳಿಗೆ ಹೆಸರುವಾಸಿಯಾದ ನಗರ. ರೇಷ್ಮೆ ಉತ್ಪಾದನೆಗೆ ಪ್ರಸಿದ್ಧವಾದ ಈ ನಗರವನ್ನು ಭಾರತದ ರೇಷ್ಮೆ ನಗರ ಎಂದೂ ಕರೆಯಲಾಗುತ್ತದೆ. ಇಲ್ಲಿ ಉತ್ಪಾದನೆಯಾಗುವ ರೇಷ್ಮೆಯನ್ನು ಪ್ರಸಿದ್ಧ ಮೈಸೂರು ಸಿಲ್ಕ್‌ ಸೀರೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.

ಹಾಸನ

ಹಾಸನಾಂಬಾ ದೇವಾಲಯ.


ಬೆಂಗಳೂರಿನಿಂದ 187 ಕಿ.ಮೀ ದೂರದಲ್ಲಿರುವ ಹಾಸನ ಕರ್ನಾಟಕದ ವಾಸ್ತುಶಿಲ್ಪದ ರಾಜಧಾನಿ ಎಂದೇ ಕರೆಸಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಹಾಸನಾಂಬ ದೇವಿ ದೇವಾಲಯ. ಹಾಸನಾಂಬ ಎಂದರೆ ನಗುತ್ತಿರುವ ತಾಯಿ ಎಂದರ್ಥ. ಹಾಸನಾಂಬ ದೇವಾಲಯ ಮಾತ್ರವಲ್ಲದೆ ಇತಿಹಾಸ ಪ್ರಸಿದ್ಧ ಶೆಟ್ಟಿಹಳ್ಳಿ ಚರ್ಚ್‌ ಹಾಗೂ ಜೈನ ದೇವಾಲಯಗಳನ್ನು ಈ ಜಿಲ್ಲೆಯಲ್ಲಿ ಕಾಣಬಹುದು. ಇಲ್ಲಿರುವ ಗೊರೂರು ಅಣೆಕಟ್ಟು ಕೂಡ ಪ್ರವಾಸಿಗರ ಗಮನ ಸೆಳೆಯುತ್ತದೆ. ಶ್ರವಣಬೆಳಗೊಳ ಕೂಡ ಜಿಲ್ಲೆಯ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ.

ಬೀದರ್‌

ಬೀದರ್‌ನ ಐತಿಹಾಸಿಕ ತಾಣ.


ಬೀದರ್‌ ಜಿಲ್ಲೆಯಾದ್ಯಂತ ಹಲವಾರು ಐತಿಹಾಸಿಕ ತಾಣಗಳನ್ನು ಹೊತ್ತಿರುವ ನಗರವಾಗಿದೆ. ಈ ನಗರ ಮೋಡಿ ಮಾಡುವ ವಾಸ್ತುಶಿಲ್ಪ, ಆಸಕ್ತಿದಾಯಕ ಇತಿಹಾಸ ಮತ್ತು ಪ್ರಾಚೀನ ಕಲಾಕೃತಿಗಳಿಗೆ ಹೆಸರುವಾಸಿಯಾಗಿದೆ. ಬೀದರ್ ಒಂದು ಕಾಲದಲ್ಲಿ ಚಾಲುಕ್ಯರು, ಅಲ್ಲಾವುದ್ದೀನ್ ಖಿಲ್ಜಿ ಮತ್ತು ಮುಹಮ್ಮದ್ ಬಿನ್ ತುಘಲಕ್ ಅವರಂತಹ ಅನೇಕರು ಆಳಿದ ಮಹಾನ್ ಸಾಮ್ರಾಜ್ಯಗಳಿಗೆ ಅಧಿಕಾರದ ಕೇಂದ್ರವಾಗಿತ್ತು. ಅವರೆಲ್ಲರೂ ಶ್ರೀಮಂತ ವಾಸ್ತುಶಿಲ್ಪದ ಪರಂಪರೆಯೊಂದಿಗೆ ಈ ನಗರಕ್ಕೆ ಶ್ರೇಷ್ಠ ಇತಿಹಾಸ ಮತ್ತು ಪರಂಪರೆಯನ್ನು ಬಿಟ್ಟಿದ್ದಾರೆ. ಇಲ್ಲಿ ಹಲವಾರು ದೇವಾಲಯಗಳು, ಮಸೀದಿಗಳು ಮತ್ತು ಸಮಾಧಿಗಳನ್ನು ನೀವು ನೋಡಬಹುದಾಗಿದೆ.

ತಲಕಾಡು

ತಲಕಾಡಿನ ದೇವಾಲಯ.


ಕರ್ನಾಟಕದ ಪ್ರಸಿದ್ಧ ಕಾವೇರಿ ನದಿಯ ದಡದಲ್ಲಿರುವ ಸ್ಥಳ ತಲಕಾಡು. ತಲಕಾಡು ಪಟ್ಟಣವು ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. ಇಲ್ಲಿ ಪ್ರಮುಖವಾಗಿ ಶಿವನಿಗೆ ಅರ್ಪಿತವಾದ ವೈದ್ಯನಾಥೇಶ್ವರ ದೇಗುಲವನ್ನು ಕಾಣಬಹುದು. ಶಿವನ ಭಕ್ತರು ಹೆಚ್ಚಾಗಿ ಇಲ್ಲಿಗೆ ಭೇಟಿ ನೀಡುತ್ತಾರೆ. ದೇಶದ ಮೂಲೆಮೂಲೆಗಳಿಂದ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಇಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಪಂಚಲಿಂಗ ದರ್ಶನಕ್ಕಾಗಿ ಉತ್ಖನನ ಕಾರ್ಯ ಮಾಡಲಾಗುತ್ತದೆ. ಆ ರೀತಿ ಮಾಡಿದಾಗ ಇಲ್ಲಿ ಮರಳಿನ ಅಡಿಯಲ್ಲಿದ್ದ ಸಾಕಷ್ಟು ದೇವಾಲಯಗಳು ಹೊರಬಂದಿವೆ. ಮೈಸೂರಿನಿಂದ ಇಲ್ಲಿಗೆ 45 ಕಿ.ಮೀ ದೂರವಾಗುತ್ತದೆ.

ಮೇಲುಕೋಟೆ

ಮೇಲುಕೋಟೆಯ ಭವ್ಯ ಕಟ್ಟಡ.


ಮೇಲುಕೋಟೆ ದಕ್ಷಿಣ ಭಾರತದಲ್ಲಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಸ್ಥಳಗಳಲ್ಲಿ ಒಂದು. ಮಂಡ್ಯ ಜಿಲ್ಲೆಯಲ್ಲಿರುವ ಈ ಸ್ಥಳದಲ್ಲಿ ಅನೇಕ ದೇವಾಲಯಗಳಿವೆ. ಇಲ್ಲಿ ನಡೆಸಲಾಗುವ ವೈರಮುಡಿ ಉತ್ಸವಕ್ಕೆ ರಾಜ್ಯ ಮಾತ್ರವಲ್ಲದೆ ದೇಶದ ಹಲವು ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿನ ಬೆಟ್ಟದ ತುದಿಯಲ್ಲಿರುವ ಶ್ರೀ ಯೋಗನರಸಿಂಹ ಸ್ವಾಮಿ ದೇವಸ್ಥಾನ ಮತ್ತು ಚೆಲುವನಾರಾಯಣ ಸ್ವಾಮಿ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಸೋಮನಾಥಪುರ

ಸೋಮನಾಥಪುರ ದೇಗುಲದ ದೃಶ್ಯ.


ಕಾವೇರಿ ನದಿಯ ದಡದಲ್ಲಿ ಸೋಮನಾಥಪುರ ದೇವಾಲಯವನ್ನು ಕಾಣಬಹುದು. ಈ ದೇವಾಲಯ ಹೊಯ್ಸಳರ ಅದ್ಭುತವ ವಾಸ್ತುಶಿಲ್ಪದ ಉದಾಹರಣೆಗಳಲ್ಲಿ ಒಂದಾಗಿದೆ. ಇದನ್ನು ಚೆನ್ನಕೇಶವ ದೇವಾಲಯ ಅಥವಾ ಕೇಶವ ದೇವಾಲಯ ಎಂದೂ ಕರೆಯಲಾಗುತ್ತದೆ. ಈ ದೇವಾಲಯವನ್ನು 1258 CE ವರ್ಷದಲ್ಲಿ ನಿರ್ಮಿಸಲಾಗಿದೆ. ಹೊಯ್ಸಳ ಸಾಮ್ರಾಜ್ಯದ ರಾಜರು ನಿರ್ಮಿಸಿದ 1500 ದೇವಾಲಯಗಳಲ್ಲಿ ಈ ದೇವಾಲಯವೂ ಒಂದಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ನಾಮನಿರ್ದೇಶನಗೊಂಡಿರುವ ಈ ಸ್ಥಳವು ಕರ್ನಾಟಕದ ಪ್ರಸಿದ್ಧ ಸ್ಮಾರಕಗಳಲ್ಲಿ ಒಂದಾಗಿದೆ.

ಮಿರ್ಜಾನ್‌ ಕೋಟೆ

ಮಿರ್ಜಾನ್‌ ಕೋಟೆ.


ಅಘನಾಶಿನಿ ನದಿ ದಡದಲ್ಲಿ ಮಿರ್ಜಾನ್‌ ಕೋಟೆಯಿದೆ. ಕುಮಟಾ ಪಟ್ಟಣದಿಂದ 11 ಕಿ.ಮೀ ದೂರದಲ್ಲಿರುವ ಈ ಸ್ಥಳ 4.1 ಹೆಕ್ಟೇರ್‌ ಪ್ರದೇಶಕ್ಕೆ ಹಬ್ಬಿಕೊಂಡಿದೆ. ರಾಜಮನೆತನಗಳ ಇತಿಹಾಸ ಹೊಂದಿರುವ ಈ ಕೋಟೆ 16 ಮತ್ತು 17ನೇ ಶತಮಾನದಲ್ಲಿ ನಡೆದ ಯುದ್ಧಗಳಿಗೆ ಸಾಕ್ಷಿಯಾಗಿದೆ. ಹುಲ್ಲಿನಿಂದ ಆವರಿಸಿಕೊಂಡಿರುವ ಈ ಕೋಟೆ ನೋಡುವುದಕ್ಕೆ ಭವ್ಯವಾಗಿ ಕಾಣುತ್ತದೆ.

ಮಡಿಕೇರಿ ಕೋಟೆ


ಕರ್ನಾಟಕದ ಕೊಡಗು ಭಾಗದಲ್ಲಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಸ್ಥಳಗಳಲ್ಲಿ ಒಂದು ಮಡಿಕೇರಿ ಕೋಟೆ. ಇದು ಮಡಿಕೇರಿ ಪಟ್ಟಣದಲ್ಲಿಯೇ ಇದೆ. 17ನೇ ಶತಮಾನದಲ್ಲಿ ರಾಜ ಮುದ್ದುರಾಜ ಈ ಕೋಟೆಯನ್ನು ನಿರ್ಮಿಸಿದರು. ಈ ಕೋಟೆಯನ್ನು ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ನೀವು ಇದನ್ನು ನೋಡಲೆಂದು ಕೊಡಗಿಗೆ ತೆರಳಿದರೆ ಅಲ್ಲಿ ನಿಮಗೆ ರಾಜಾ ಸೀಟ್‌, ಓಂಕಾರೇಶ್ವರ ದೇವಸ್ಥಾನ ಸೇರಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿದ್ದು, ಅವೆಲ್ಲಕ್ಕೂ ಭೇಟಿ ನೀಡಿ ಬರಬಹುದು. ಮಳೆಗಾಲದ ಸಮಯದಲ್ಲಿ ಕೊಡಗು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುತ್ತದೆಯಾದ್ದರಿಂದ ನಿಮ್ಮ ಮನಸ್ಸಿಗೂ ಉಲ್ಲಾಸವಾಗುತ್ತದೆ.

ಶೃಂಗೇರಿ

ಶೃಂಗೇರಿ ದೇಗುಲ.


ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಸಣ್ಣ ಗುಡ್ಡಗಾಡು ಪಟ್ಟಣ ಶೃಂಗೇರಿ. ಇಲ್ಲಿನ ದೇವಾಲಯವನ್ನು 9ನೇ ಶತಮಾನದಲ್ಲಿ ಆದಿ ಶಂಕರರು ನಿರ್ಮಿಸಿದರು. ಅವರು ಅದನ್ನು ಒಂದು ಯಾತ್ರಾ ಕೇಂದ್ರವಾಗಿ ಸ್ಥಾಪಿಸಿದರು. ದಾಖಲೆಗಳ ಪ್ರಕಾರ, ಆದಿ ಶಂಕರಾಚಾರ್ಯರು 12 ವರ್ಷಗಳ ಕಾಲ ಇಲ್ಲಿಯೇ ಇದ್ದು, ತಮ್ಮ ಶಿಷ್ಯರಿಗೆ ಬೋಧಿಸಿದರು ಎಂದು ಹೇಳಲಾಗುತ್ತದೆ. ಇಲ್ಲಿಂದ ನೀವು ಹತ್ತಿರದಲ್ಲೇ ಇರುವ ಬೇರೆ ಬೇರೆ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡಬಹುದಾಗಿದೆ.

ಪಟ್ಟದಕಲ್

ಪಟ್ಟದಲ್ಲಿನ ಭವ್ಯ ನೋಟ.


ದಕ್ಷಿಣ ಭಾರತದ ಹಿಂದೂ ಮತ್ತು ಜೈನ ದೇವಾಲಯಗಳ ನಿಧಿ ಎಂದು ಪಟ್ಟದಕಲ್ಲನ್ನು ಕರೆಯಲಾಗುತ್ತದೆ. ಇದನ್ನು ಯುನೆಸ್ಕೋ ಪರಂಪರೆಯ ತಾಣವೆಂದು ಹೆಸರಿಸಲಾಗಿದೆ. ಮಲಪ್ರಭಾ ನದಿಯ ದಡದಲ್ಲಿರುವ ಈ ಸ್ಥಳವು 4ನೇ ಶತಮಾನದಷ್ಟು ಹಿಂದಿನ ಪರಂಪರೆಯನ್ನು ಹೊಂದಿದೆ. ಶಿವನಿಗೆ ಸಮರ್ಪಿತವಾಗಿರುವ ಈ ದೇವಾಲಯವು ಉತ್ತರ ಮತ್ತು ದಕ್ಷಿಣ ಭಾರತದ ವಾಸ್ತುಶಿಲ್ಪದ ಸುಂದರ ಮಿಶ್ರಣವನ್ನು ಪ್ರದರ್ಶಿಸುತ್ತದೆ.

ಕಾರ್ಕಳ

ಗೊಮ್ಮಟೇಶ್ವರ ಮೂರ್ತಿಯ ನೋಟ.


ಇದು ಐತಿಹಾಸಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾದ ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಸ್ಥಳವಾಗಿದೆ. ಪುರಾತನ ದೇವಾಲಯಗಳು ಮತ್ತು ಜೈನ ಬಸದಿಗಳಿಗೆ ಹೆಸರುವಾಸಿಯಾಗಿರುವ ಈ ಸ್ಥಳಕ್ಕೆ ಹೆಸರು ಇಲ್ಲಿ ಅಪಾರ ಪ್ರಮಾಣದಲ್ಲಿರುವ ಕಪ್ಪು ಗ್ರಾನೈಟ್‌ನಿಂದಾಗಿ ಬಂದಿದೆ. ಕರ್ನಾಟಕದ ಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಒಂದಾದ ಇದು ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣವಾಗಿ ನಾಮನಿರ್ದೇಶನಗೊಂಡಿದೆ.

Exit mobile version