Site icon Vistara News

Trekking Restriction: ಚಾರಣಪ್ರಿಯರಿಗೆ ಶಾಕ್‌; ಆನ್‌ಲೈನ್‌ ಬುಕಿಂಗ್‌ ಇಲ್ಲದ ಜಾಗಗಳಿಗೆ ಪ್ರವೇಶವಿಲ್ಲ

trekking restriction Kumaraparvata

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಾರಾಂತ್ಯಗಳಲ್ಲಿ ಚಾರಣ ಪ್ರದೇಶಗಳು (Trekking Paths) ತುಂಬಿ ತುಳುಕುತ್ತಿರುತ್ತವೆ. ಈ ರೀತಿ ವಿಪರೀತ ದಟ್ಟಣೆಯನ್ನು ನಿವಾರಿಸುವುದಕ್ಕೆ ರಾಜ್ಯ ಸರ್ಕಾರ (Karnataka Government) ಶಾಕಿಂಗ್‌ ಕ್ರಮವೊಂದನ್ನು ಕೈಗೊಂಡಿದೆ. ಇನ್ನು ಮುಂದೆ ಆನ್‌ ಲೈನ್‌ ಬುಕ್ಕಿಂಗ್‌ (Online booking) ಅವಕಾಶವಿಲ್ಲದೆ, ನೇರವಾಗಿ ಯಾರು ಬೇಕಾದರೂ ಹೋಗಬಹುದಾದ ಪ್ರದೇಶಗಳಲ್ಲಿ ಚಾರಣಕ್ಕೆ ನಿರ್ಬಂಧ (Trekking Restriction) ವಿಧಿಸಿ ಆದೇಶ ಹೊರಡಿಸಲಾಗಿದೆ. ಅಂದರೆ, ಇನ್ನು ಮುಂದೆ ಎಲ್ಲಿಗೆ ಹೋಗಬೇಕಾದರೂ ಆನ್‌ಲೈನ್‌ ಬುಕಿಂಗ್‌ ಇರುವ ಜಾಗಕ್ಕೆ ಮಾತ್ರ ಹೋಗಬಹುದು. ಆನ್‌ಲೈನ್‌ ಬುಕಿಂಗ್‌ ಇರುವಲ್ಲಿಗೆ ಮಾತ್ರ ಹೋಗಬಹುದು.

ಪುಷ್ಪಗಿರಿ ಅರಣ್ಯ ವ್ಯಾಪ್ತಿಯ ಕುಮಾರಪರ್ವತಕ್ಕೆ ಜ.26ರಂದು ಒಂದೇ ದಿನ ಸಾವಿರಾರು ಚಾರಣಿಗರು ಭೇಟಿ ಕೊಟ್ಟ ಹಿನ್ನೆಲೆಯಲ್ಲಿ ಅಲ್ಲಿ ಭಾರಿ ಅವ್ಯವಸ್ಥೆ ಕಂಡುಬಂದಿತ್ತು. ಇದನ್ನು ಪರಿಗಣಿಸಿ ಅರಣ್ಯದೊಳಗೆ ಜನಜಂಗುಳಿ ತಪ್ಪಿಸಲು ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ಪಥಗಳಿಗೆ ಸರ್ಕಾರ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.

ಈ ಸಂಬಂಧ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಕಾರ್ಯಪಡೆ ಮುಖ್ಯಸ್ಥರಿಗೆ ಸ್ಪಷ್ಟ ಸೂಚನೆ ನೀಡಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು, ಸಾವಿರಾರು ಸಂಖ್ಯೆಯಲ್ಲಿ ಚಾರಣಿಗರು ದಟ್ಟ ಅರಣ್ಯದ ಗಿರಿ ಪ್ರದೇಶಗಳಿಗೆ ಅದರಲ್ಲೂ ಅಮೂಲ್ಯ ಜೀವವೈವಿಧ್ಯದಿಂದ ಕೂಡಿದ ಪಶ್ಚಿಮ ಘಟ್ಟಕ್ಕೆ ಪ್ರತಿವಾರವೂ ಆಗಮಿಸಿದರೆ ಪರಿಸರಕ್ಕೂ ಹಾನಿಯಾಗುತ್ತದೆ ಮತ್ತು ಜಲ ಮೂಲಗಳೂ ಕಲುಷಿತಗೊಳ್ಳುತ್ತವೆ ಹೀಗಾಗಿ ಇಂತಹ ಚಾರಣ ಪಥಕ್ಕೆ ಕಡಿವಾಣ ಹಾಕಿ ಎಂದು ಸೂಚಿಸಿದ್ದಾರೆ.

ಇದನ್ನೂ ಓದಿ : Trekking Guide: ಚಾರಣಿಗರಿಗೆ ಶುಭಸುದ್ದಿ, ನಂದಾದೇವಿ, ತ್ರಿಶೂಲ್‌ಗಳಿಗೂ ಈಗ ಉಚಿತ ಪ್ರವೇಶ!

ಅರಣ್ಯ ಕಾರ್ಯಪಡೆ ಮುಖ್ಯಸ್ಥರಿಗೆ ಕಳುಹಿಸಿರುವ ಟಿಪ್ಪಣಿಯಲ್ಲಿ, ರಾಜ್ಯದ ಯುವಜನರಲ್ಲಿ ಇತ್ತೀಚೆಗೆ ಅರಣ್ಯವ್ಯಾಪ್ತಿಯ ಗಿರಿ ಶಿಖಿರಗಳಲ್ಲಿ ಚಾರಣ ಮಾಡುವ ಹವ್ಯಾಸ ಹೆಚ್ಚಾಗುತ್ತಿದ್ದು, ಇದು ವಾರಾಂತ್ಯದಲ್ಲಿ ಜನದಟ್ಟಣೆಗೆ ಕಾರಣವಾಗಿದೆ. ಹೀಗೆ ಬರುವವರು ಅರಣ್ಯದ ಅಂಚಿನ ಗ್ರಾಮಗಳಲ್ಲಿ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮನಸೋಇಚ್ಛೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಬಾಟಲಿ, ತಟ್ಟೆ, ಉಳಿದ ಆಹಾರ ಪದಾರ್ಥ ಇತ್ಯಾದಿಗಳನ್ನು ಎಸೆಯುತ್ತಿದ್ದು, ಇದು ವನ್ಯಜೀವಿಗಳಿಗೆ ಅಪಾಯ ತರುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಏಕಾಏಕಿ ಹರಿದು ಬರುವ ಇಷ್ಟೊಂದು ಜನರನ್ನು ನಿಯಂತ್ರಿಸುವುದು ಮತ್ತು ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಬಿಡುವುದು ಅರಣ್ಯ ಇಲಾಖೆಯ ಸಿಬ್ಬಂದಿಗೂ ದೊಡ್ಡ ಸವಾಲಾಗುತ್ತದೆ ಹೀಗಾಗಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಇಲ್ಲದ ಚಾರಣ ತಾಣಗಳು ಅಂದರೆ ಕುಮಾರ ಪರ್ವತ, ಮೂರುಕಣ್ಣಿನಗುಡ್ಡ ಸೇರಿದಂತೆ ಎಲ್ಲ ಚಾರಣ ತಾಣಗಳಲ್ಲಿ ಪ್ರಮಾಣಿತ ಕಾರ್ಯ ವಿಧಾನ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ರೂಪಿಸುವವರೆಗೆ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ತರುವವರೆಗೆ ತಾತ್ಕಾಲಿಕವಾಗಿ ಚಾರಣ ನಿರ್ಬಂಧಿಸುವಂತೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ಯಾವ ಯಾವ ಪ್ರದೇಶಗಳಿಗೆ ಆನ್‌ಲೈನ್‌ ಬುಕಿಂಗ್‌ ಅವಕಾಶವಿದೆ?

ಪ್ರಸ್ತುತ ಅರಣ್ಯ ಇಲಾಖೆಯ ಪರಿಸರ ಪ್ರವಾಸೋದ್ಯಮ ವಿಭಾಗದ ವತಿಯಿಂದ ನಿರ್ವಹಿಸುತ್ತಿರುವ ಚಾರಣ ಪಥಗಳಲ್ಲಿ 150 ಚಾರಣಿಗರಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು https://www.karnatakaecotourism.com/ ನಲ್ಲಿ ಬುಕ್ಕಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ.

ಈ ಜಾಗಗಳಿಗೆ ಮಾತ್ರ ಟೆಕ್ಕಿಂಗ್‌ಗೆ ಹೋಗಲು ಅವಕಾಶ ಸಿಗಲಿದೆ.. ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್‌ ಮಾಡಿ

Exit mobile version