Site icon Vistara News

Karnataka Budget Session 2024: ಆಪರೇಷನ್‌ ಹಸ್ತಕ್ಕೆ ಒಳಗಾಗಿದ್ದ ಜ್ಯೋತಿ ಗಣೇಶ್‌! ಸದನದಲ್ಲಿ ಬಾಯಿಬಿಟ್ಟ ಡಿಕೆಶಿ

ವಿಧಾನಸಭೆ: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಆಪರೇಷನ್‌ ಹಸ್ತ ಪ್ರಸ್ತಾಪ ಆಗಿದೆ. ಈ ಬಗ್ಗೆ ಸ್ವತಃ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರೇ ಪ್ರಸ್ತಾಪ ಮಾಡಿದ್ದು, ತುಮಕೂರು ನಗರ ಕ್ಷೇತ್ರ ಶಾಸಕ ಜ್ಯೋತಿ ಗಣೇಶ್ ಅವರನ್ನು ಆಪರೇಷನ್‌ ಹಸ್ತಕ್ಕೆ ಒಳಪಡಿಸಲು ಮುಂದಾಗಿದ್ದರು ಎಂಬ ಸಂಗತಿ ಬಹಿರಂಗವಾಗಿದೆ. ವಿಧಾನಸಭೆಯಲ್ಲಿ ಕೊಬ್ಬರಿ ಬೆಂಬಲ ಬೆಲೆ ಬಗ್ಗೆ ಚರ್ಚೆ ನಡೆಯುವ ವೇಳೆ ಮಾತನಾಡಲು ಆರಂಭ ಮಾಡಿದ್ದ ಡಿ.ಕೆ. ಶಿವಕುಮಾರ್‌ ಅವರು ಬೇರೆಯವರ ಜತೆಗೆ ಮಾತನಾಡುತ್ತಿದ್ದ ಜ್ಯೋತಿ ಗಣೇಶ್ ಅವರನ್ನು ತಮ್ಮತ್ತ ನೋಡುವಂತೆ ಕರೆಯುತ್ತಾ ಈ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ಬಗ್ಗೆ ಚರ್ಚೆ ಶುರುವಾಗಿತ್ತು. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಮಾತನಾಡಲು ಎದ್ದು ನಿಂತರು. ಅದೇ ವೇಳೆಗೆ ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಅವರನ್ನು ಡಿಕೆಶಿ ಗಮನಿಸಿದ್ದಾರೆ. ಆಗ ಮಾತನಾಡಿದ ಡಿಕೆಶಿ, “ಏ ಗಣೇಶ್ ಏ ಗಣೇಶ್… ಇತ್ತ ನೋಡಪ್ಪ, ಏನೋ ನಮ್ಮ ಬಸವರಾಜ್ ಮಗ ನನ್ನ ಮಾತನ್ನು ಕೇಳ್ತೀಯ ಅಂತಿದ್ದೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಾ ಎಂದಿದ್ದೆ. ಬರುತ್ತೇನೆ ಎಂದು ಹೇಳುತ್ತಲೇ ಇದ್ದೆ. ಆದರೆ, ನೀನು ಬರಲಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಜ್ಯೋತಿ ಗಣೇಶ್‌, ನೀವು ಮುಖ್ಯಮಂತ್ರಿ ಆದ ಮೇಲೆ ಬರುತ್ತೇನೆ ಎಂದು ಹೇಳಿದರು.

ಹೀಗಾಗಿ ಜ್ಯೋತಿ‌ ಗಣೇಶ್ ಅವರನ್ನು ಆಪರೇಷನ್ ಹಸ್ತದ ಭಾಗವಾಗಿ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳಲು ಡಿ.ಕೆ. ಶಿವಕುಮಾರ್‌ ಮುಂದಾಗಿದ್ದರು ಎಂಬ ಸಂಗತಿ ಈಗ ಬಹಿರಂಗವಾಗಿದೆ.

ನೀರು ಕೊಡಿ ಎಂದರೆ ನೀರಿನ ದರ ಏರಿಸಿಲ್ಲ ಎಂದ ಡಿಕೆಶಿ! ಕೊನೆಗೆ ಸಮಸ್ಯೆ ಬಗೆಹರಿಯಿತಾ?

ವಿಧಾನಸಭೆ: ಜಯನಗರದ ಕೊಳಚೆ ಪ್ರದೇಶಗಳಿಗೆ ಕಾವೇರಿ ನೀರು ಸಿಗದ ಬಗ್ಗೆ ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದ್ದು, ಉತ್ತರ ಕೊಡುವಾಗ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ನೀರಿನ ದರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆಗ ಮಧ್ಯಪ್ರವೇಶ ಮಾಡಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (R Ashok), ದರ ಹೆಚ್ಚಳದ ಬಗ್ಗೆ ಬಿಡಿ, ಈಗ ನೀರಿನ ಸಮಸ್ಯೆ ಬಗ್ಗೆ ಹೇಳಿ. ಹೀಗೆ ಜಾಣ್ಮೆಯ ಉತ್ತರ ಕೊಟ್ಟರೆ ಹೇಗೆ? ಎಂದು ಹೇಳಿದರು. ಕೊನೆಗೆ ನೀರು ಕೊಡುವ ಬಗ್ಗೆ ಡಿಕೆಶಿ ಹೇಳಿದರು.

ವಿಧಾನ ಮಂಡಲ ಕಲಾಪದ ವೇಳೆ ವಿಧಾನಸಭೆಯಲ್ಲಿ ಜಯನಗರದ ಕೊಳಚೆ ಪ್ರದೇಶಗಳಿಗೆ ಕಾವೇರಿ ನೀರು ಕೊಡದ ಬಗ್ಗೆ ಶಾಸಕ ಸಿ.ಕೆ. ರಾಮಮೂರ್ತಿ ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಮೊದಲಿಗೆ ಜಲಮಂಡಳಿ ನೀರಿನ ದರ ಹೆಚ್ಚಳವಾಗದ ಬಗ್ಗೆ ಪ್ರಸ್ತಾಪ ಮಾಡಿದರು.

ಇದನ್ನೂ ಓದಿ: Mithun Chakraborty: ಮಿಥುನ್ ಚಕ್ರವರ್ತಿ ಮೇಲೆ ಪ್ರಧಾನಿ ಮೋದಿ ಗದರಿದ್ದು ಯಾಕೆ? ನಟ ಆಸ್ಪತ್ರೆಯಲ್ಲಿ ಹೇಳಿದ್ದೇನು?

ಅಭಿವೃದ್ಧಿ ಹಣ ಕೊಡುತ್ತೇನೆ, ನೀರಿಗೆ ಬಳಸಿಕೊಳ್ಳಿ: ಡಿಕೆಶಿ

“ಕಳೆದ 11 ವರ್ಷಗಳಿಂದ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡಲು ಆಗಿಲ್ಲ. ವಿದ್ಯುತ್ ದರ ಹೆಚ್ಚಾಗುತ್ತಲೇ ಇದೆ. ನೀರಿನ ದರ ಮಾತ್ರ ಇದುವರೆಗೆ ಹೆಚ್ಚಿಸಿಲ್ಲ. ಇದಕ್ಕೆ ರಾಜಕಾರಣವೂ ಕಾರಣವಾಗಿದೆ. ವಿವಿಧ ಕಾರಣಗಳಿಂದ ನೀರಿನ ದರವನ್ನು ಹೆಚ್ಚಳ ಮಾಡಿಲ್ಲ. ಈಗ ನೀರು ಸಿಗಬೇಕಾದರೆ ಸ್ಲಂ ಬೋರ್ಡ್‌ನವರು ಪ್ರೋರೇಟಾ ಶುಲ್ಕ ಕಟ್ಟಿದರೆ ಕೊಳಚೆ ಪ್ರದೇಶಗಳಿಗೆ ಕಾವೇರಿ ನೀರು ಸಿಗಲಿದೆ. ಜನಸಂಖ್ಯೆ ಹೆಚ್ಚಾಗುತ್ತಿದ್ದ, ನೀರಿಗೆ ತೀವ್ರ ಬೇಡಿಕೆ ಇದೆ. ಪರಿಹಾರವನ್ನು ಕಂಡುಕೊಳ್ಳುತ್ತೇವೆ. ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಡುತ್ತೇನೆ. ಅದನ್ನು ನೀರು ಪೂರೈಕೆಗೆ ಬಳಸಿಕೊಳ್ಳಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

ಜಾಣ್ಮೆ ಉತ್ತರ ಬೇಡ, ಸಮಸ್ಯೆ ಪರಿಹರಿಸಿ: ಆರ್‌. ಅಶೋಕ್

ಡಿ.ಕೆ. ಶಿವಕುಮಾರ್‌ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರ್. ಅಶೋಕ್, ಸಿ.ಕೆ. ರಾಮಮೂರ್ತಿ ಅವರು ಕೇಳಿದ ಪ್ರಶ್ನೆಗೆ ಇಷ್ಟು ಜಾಣ್ಮೆ ಉತ್ತರ ಕೊಟ್ಟರೆ ಹೇಗೆ? ನೀರಿನ ಸಮಸ್ಯೆಯನ್ನು ಬಗೆಹರಿಸಿ ಎಂದು ಹೇಳಿದರು.

ಇದನ್ನೂ ಓದಿ: Misbehaviour : ಚುಡಾಯಿಸಿದ್ದನ್ನು ಪ್ರಶ್ನಿಸಿದ ಮುಸ್ಲಿಂ ಯುವತಿಗೆ ಚಪ್ಪಲಿಯಿಂದ ಹೊಡೆದ ಧೂರ್ತ

ಅರವಿಂದ್‌ ಬೆಲ್ಲದ್‌ ಆಕ್ಷೇಪ

ಈ ವೇಳೆ ಡಿ.ಕೆ. ಶಿವಕುಮಾರ್‌ ಉತ್ತರಕ್ಕೆ ಶಾಸಕ ಅರವಿಂದ್ ಬೆಲ್ಲದ್ ಸಹ ಆಕ್ಷೇಪ ವ್ಯಕ್ತಪಡಿಸಿ, ಖಾಸಗಿ ಬೋರ್‌ವೆಲ್ ಅವರಿಗೆ ನೀರು ಹೇಗೆ ಸಿಗುತ್ತದೆ? ಅವರಿಗೆ ಕಾವೇರಿ ನೀರು ಹೇಗೆ ಸಿಗುತ್ತದೆ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯೆ ನೀಡಿ, ಅವರು ಖಾಸಗಿ ಬೋರ್‌ವೆಲ್ ಮೂಲಕ ನೀರು ಸರಬರಾಜು ಮಾಡುತ್ತಾರೆ ಎಂದು ಉತ್ತರಿಸಿದರು.

Exit mobile version