Site icon Vistara News

Viral News: ಒಂದು ತಿಂಗಳಲ್ಲಿ ಐದು ಬಾರಿ ಹಾವು ಕಡಿತ; ಪವಾಡ ರೀತಿಯಲ್ಲಿ ವ್ಯಕ್ತಿ ಬಜಾವ್‌!

Snake Bites

ಉತ್ತರಪ್ರದೇಶ: ವ್ಯಕ್ತಿಯೊಬ್ಬನಿಗೆ ಒಂದು ತಿಂಗಳಲ್ಲಿ ಐದು ಬಾರಿ ಹಾವು ಕಚ್ಚಿದ್ದು(Snake Bite), ಪವಾಡವೆನ್ನುವಂತೆ ಆತ ಅಪಾಯದಿಂದ ಪಾರಾಗಿರುವ ಘಟನೆ(Viral News) ಉತ್ತರಪ್ರದೇಶದಲ್ಲಿ ನಡೆದಿದೆ. ಫತ್ಹೇಪುರ ನಿವಾಸಿ ವಿಕಾಸ್ ದುಬೆ ಎಂಬವರಿಗೆ 45 ದಿನದಲ್ಲಿ 5 ಬಾರಿ ಹಾವು ಕಚ್ಚಿದೆ. ಹಾವು ಕಚ್ಚಿದ ಬಳಿಕ ಶೀಘ್ರದಲ್ಲಿಯೇ ಚಿಕಿತ್ಸೆ ಪಡೆದುಕೊಂಡ ಪರಿಣಾಮ ವಿಕಾಸ್ ದುಬೆ ಜೀವ ಉಳಿದಿದೆ. ಇನ್ನು ಈ ರೀತಿಯಾಗಿ ಒಬ್ಬನ್ನೇ ವ್ಯಕ್ತಿ ಪದೇ ಪದೆ ಹಾವು ಕಡಿತಕ್ಕೆ ಒಳಗಾಗುತ್ತಿರುವ ಸಂಗತಿ ಕೇಳಿ ವೈದ್ಯರು ಮಾತ್ರವಲ್ಲದೇ ಸ್ಥಳೀಯರು ಶಾಕ್‌ ಆಗಿದ್ದಾರೆ.

ಜೂನ್ 2ರಂದು ಮೊದಲ ಬಾರಿ ಮನೆಯಲ್ಲಿ ಮಲಗಿದ್ದಾಗ ವಿಕಾಸ್ ದುಬೆ ಅವರಿಗೆ ಹಾವು ಕಚ್ಚಿತ್ತು. ಹಾವು ಕಚ್ಚಿದ ತಕ್ಷಣ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ವಿಕಾಸ್ ದುಬೆ ಮನೆಗೆ ಹಿಂದಿರುಗಿದ್ದರು. ನಂತರ ಜೂನ್ 10ರಂದು ಎರಡನೇ ಬಾರಿ ಹಾವು ಕಚ್ಚಿದೆ. ಕೂಡಲೇ ಪೋಷಕರು ಅದೇ ಆಸ್ಪತ್ರೆಗೆ ದಾಖಲಿಸಿದ್ದರು. ಗುಣಮುಖರಾಗಿ ಬಂದ ಬಳಿಕ ಮನೆಗೆ ಬಂದ ವಿಕಾಸ್ ದುಬೆ ಬಹಳ ಭಯಭೀತರಾಗಿದ್ದರು. ಅದೂ ಅಲ್ಲದೇ ಒಬ್ಬರೇ ಇರುವುದಕ್ಕೆ ಭಯ ಬಿದ್ದು ವಿಕಾಸ್ ಸ್ವಂತ ಮನೆ ತೊರೆದು ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡಿದ್ದರು. ಆದರೆ ಅಲ್ಲಿಯೂ ವಿಷಕಾರಿ ಹಾವು ಕಚ್ಚಿದೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ವಿಕಾಸ್ ದುಬೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹಾವು ಕಚ್ಚುವ ಭಯದಿಂದ ಸದಾ ಜನರೊಂದಿಗೆ ವಿಕಾಸ್ ಇರಿಸಲು ಆರಂಭಿಸಿದರು. ರಾತ್ರಿ ಮಲಗುವ ಸ್ಥಳದಲ್ಲಿ ಹಾವು ಬರದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ಇಷ್ಟೆಲ್ಲಾ ವ್ಯವಸ್ಥೆ ಮಾಡಿಕೊಂಡರೂ ಜೂನ್ 17ರಂದು ಮನೆಯಲ್ಲಿಯೇ ಮೂರನೇ ಬಾರಿ ಹಾವು ಕಚ್ಚಿದೆ. ನಂತರ ಚಿಕಿತ್ಸೆ ಪಡೆದು ಹಿಂದಿರುಗಿ ಬರುತ್ತಿದ್ದಂತೆ ನಾಲ್ಕನೇ ಬಾರಿ ಹಾವು ಕಚ್ಚಿದೆ. ಮತ್ತೆ ಚಿಕಿತ್ಸೆ ವಿಕಾಸ್ ದುಬೆ ಅವರಿಗೆ ಚಿಕಿತ್ಸೆ ಕೊಡಿಸಲಾಯ್ತು. ನಂತರ ಗ್ರಾಮದ ಹಿರಿಯರು ಸಲಹೆ ಮೇರೆಗೆ ವಿಕಾಸ್ ದುಬೆ ಅವರನ್ನು ರಾಧಾ ನಗರದಲ್ಲಿರುವ ಅವರ ಚಿಕ್ಕಮ್ಮನ ಮನೆಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿಯೂ ವಿಕಾಸ್‌ ದುಬೆಗೆ ಐದನೇ ಬಾರಿ ಹಾವು ಕಚ್ಚಿದೆ.

ಇನ್ನು ಘಟನೆ ಬಗ್ಗೆ ವೈದ್ಯರು ಪ್ರತಿಕ್ರಿಯಿಸಿದ್ದು, ಇದೊಂದು ವಿಚಿತ್ರ ಘಟನೆಯಾಗಿದೆ. ಮೂರನೇ ಬಾರಿ ಹಾವು ಕಚ್ಚಿದಾಗ ಊರು ತೊರೆಯುವಂತೆ ಸಲಹೆ ನೀಡಿದ್ದೆ. ಆದರೂ ಮತ್ತೆ ಹಾವು ಕಚ್ಚಿದೆ. ಸದ್ಯ ವಿಕಾಸ್ ದುಬೆ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

ಕೆಲವು ತಿಂಗಳ ಹಿಂದೆ ಇಂತಹದ್ದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿತ್ತು. ಹಾವಿನ ಬಳಿ ಕಚ್ಚಿಸಿಕೊಂಡು ಹಾಗೋ-ಹೀಗೋ ಬದುಕಿ ಉಳಿದಿದ್ದವನ ಜೀವ ಹಾವಿನಿಂದಲೇ ಹೋಗಿದೆ. ಹೀಗೊಂದು ವಿಚಿತ್ರ ಘಟನೆ ರಾಜಸ್ಥಾನದ ಜೋಧ್​ಪುರದ (Rajasthan News) ಮೆಹ್ರಾನ್ ಗಢ್​​ನಲ್ಲಿ ನಡೆದಿತ್ತು. 44 ವರ್ಷದ ಜಸಬ್​ ಖಾನ್​ ಎಂಬುವರಿಗೆ ಒಂದು ಹಾವು ಕಚ್ಚಿತ್ತು. ಕಚ್ಚಿದ್ದು ವಿಷಕಾರಿ ವೈಪರ್ ಹಾವು. ಹೀಗಾಗಿ ಜಸಬ್​ ಖಾನ್​ ಕೂಡಲೇ ಪೋಖ್ರಾನ್​ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.

ಆದರೆ ಅದಾಗಿ ಒಂದೇ ವಾರದಲ್ಲಿ ಜಸಬ್ ಖಾನ್ ಪ್ರಾಣ ಹಾವಿನಿಂದಲೇ ಹೋಗಿದೆ. ಜೂ.26ರಂದು ಮತ್ತೆ ಅವರಿಗೆ ಮನೆ ಬಳಿಯೇ ಹಾವು ಕಡಿದಿದೆ. ಜೂ.20ರಂದು ಕಚ್ಚಿದ ಹಾವೇ ಕಚ್ಚಿತಾ? ಅಥವಾ ಬೇರೆ ಹಾವು ಕಚ್ಚಿದ್ದಾ? ಎಂಬುದು ಗೊತ್ತಿಲ್ಲ. ಆದರೆ ಎರಡನೇ ಸಲವೂ ಕೂಡ ಕಡಿದಿದ್ದು ವಿಷಕಾರಿ ವೈಪರ್​. ಮೊದಲ ಸಲ ಹಾವಿನ ಬಳಿ ಕಚ್ಚಿಸಿಕೊಂಡು ಬದುಕುಳಿದಿದ್ದ ಜಸಬ್ ಈ ಸಲ ಬದುಕಲಿಲ್ಲ. ಜೋಧಪುರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಜಸಬ್​ ಮೃತಪಟ್ಟಿದ್ದಾರೆ.

ಇದನ್ನೂ ಓದಿ:Uttar Pradesh stampede : ಉತ್ತರ ಪ್ರದೇಶದ ಹತ್ರಾಸ್​​ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ; 27 ಕ್ಕೂ ಹೆಚ್ಚು ಸಾವು

Exit mobile version