Site icon Vistara News

Viral Video: ಇನ್ನೆಂದೂ ಕಳವು ಮಾಡದಂತೆ ರೈಲು ಪ್ರಯಾಣಿಕರು ಖದೀಮನಿಗೆ ಪಾಠ ಕಲಿಸಿದ್ದು ಹೀಗೆ

viral video

viral video

ಪಾಟ್ನಾ: ʼಮಾಡಿದ್ದುಣ್ಣೋ ಮಹಾರಾಯʼ ಎನ್ನುವ ಮಾತಿದೆ. ನಾವು ಏನನ್ನು ಮಾಡುತ್ತೇವೆಯೋ ಅದಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತದೆ ಎನ್ನುವುದು ಈ ಮಾತಿನ ಅರ್ಥ. ಈ ಮಾತು ಮೊಬೈಲ್‌ ಕಳ್ಳನೊಬ್ಬನಿಗೆ ಸರಿಯಾಗಿ ಅರ್ಥವಾದಂತಿದೆ. ಅಷ್ಟಕ್ಕೂ ರೈಲು ಪ್ರಯಾಣಿಕರು ಕಳ್ಳನಿಗೆ ಹೇಗೆ ಪಾಠ ಕಲಿಸಿದ್ದಾರೆ ಎನ್ನುವುದನ್ನು ತಿಳಿಯಲು ಈ ವೈರಲ್‌ ವಿಡಿಯೊ (Viral Video) ನೋಡಿ.

ವಿಡಿಯೊದಲ್ಲೇನಿದೆ?

ಬಿಹಾರದ ನಡೆದ ಘಟನೆ ಇದು ಎನ್ನಲಾಗಿದೆ. ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ಹೇಗೆ ಅದರ ಪರಿಣಾಮ ಎದುರಿಸಿದ ಎನ್ನುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ. ರೈಲಿನೊಳಗಿದ್ದ ಪ್ರಯಾಣಿಕರೊಬ್ಬರು ಮೊಬೈಲಿನಲ್ಲಿ ಮಾತನಾಡುತ್ತಾ ಕುಳಿತಿದ್ದರು. ಇದು ಕಣ್ಣಿಗೆ ಬಿದ್ದಿದ್ದೇ ತಡ ಕಳ್ಳನೊಬ್ಬ ಇವತ್ತಿನ ಭರ್ಜರಿ ಬೇಟೆ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತ ನಿಧಾನವಾಗಿ ಆ ಪ್ರಯಾಣಿಕನ ಬಳಿ ಬಂದ. ಬೊಬೈಲ್‌ ಕಸಿದು ಇನ್ನೇನು ಪರಾರಿಯಾಗಬೇಕು ಎನ್ನುವಷ್ಟರಲ್ಲಿ ಆತನ ಅದೃಷ್ಟ ಕೈ ಕೊಟ್ಟಿದೆ. ಸಹ ಪ್ರಯಾಣಿಕರ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಕೆಲವರು ಕಿಟಕಿಯ ಮೂಲಕ ಆತನ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಹೀಗೆ ಆತ ಬರೋಬ್ಬರಿ ಒಂದು ಕಿಲೋ ಮೀಟರ್​​ ದೂರದವರೆಗೆ ರೈಲಿನ ಕಿಟಕಿಯ ಹೊರಗಿನಿಂದ ನೇತಾಡಿಕೊಂಡೇ ಪ್ರಾಣಿಸಿದ್ದಾನೆ. ಇದರ ಜತೆಗೆ ಧರ್ಮದೇಟನ್ನೂ ತಿಂದಿದ್ದಾನೆ. ಬಹುಶಃ ಆತ ಇನ್ನೆಂದೂ ಕಳ್ಳತನಕ್ಕೆ ಇಳಿಯಲಾರ. ಅ ಮಟ್ಟಿಗೆ ಆತನಿಗೆ ಇದು ಮರೆಯಲಾರದ ಅನುಭವ ನೀಡಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ‘ಬಿಹಾರದ ಭಾಗಲ್‌ಪುರದ ಬಳಿ ಕಳ್ಳನೊಬ್ಬ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ. ಆ ವೇಳೆಯಲ್ಲಿ ಸಿಕ್ಕಿಹಾಕಿಕೊಂಡ ಆತನನ್ನು ಪ್ರಯಾಣಿಕರೆಲ್ಲರೂ ಸೇರಿ ಒಂದು ಕಿಲೋ ಮೀಟರ್​​​ವರೆಗೂ ರೈಲಿನ ಹೊರಗಿನಿಂದ ನೇತಾಡಿಸಿಕೊಂಡು ಹೋಗಿದ್ದಾರೆʼ ಎಂಬ ವಿವರಣೆಯನ್ನು ನೀಡಲಾಗಿದೆ.

ಇದನ್ನೂ ಓದಿ: Viral video: ಸಿವಿಲ್ ಸರ್ವೀಸ್‌ ವಿದ್ಯಾರ್ಥಿ ಕೋಚಿಂಗ್ ಕ್ಲಾಸ್‌ನಲ್ಲಿಯೇ ಕುಸಿದು ಸಾವು

ನೆಟ್ಟಿಗರು ಏನಂದ್ರು?

ಈ ಪೋಸ್ಟ್‌ ಸಹಜವಾಗಿ ನೆಟ್ಟಿಗರ ಗಮನ ಸೆಳೆದಿದೆ. ಸದ್ಯ ಈ ವಿಡಿಯೊವನ್ನು 6 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಜತೆಗೆ ಕಮೆಂಟ್‌ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ”ಕೆಟ್ಟ ಕೆಲಸದ ಪರಿಣಾಮ ಯಾವತ್ತೂ ಕೆಟ್ಟದ್ದೇ ಆಗಿರುತ್ತದೆ” ಎಂದು ಒಬ್ಬರು ಹೇಳಿದ್ದಾರೆ. ”ಈ ವಿಡಿಯೊ ನೋಡಿದ ಬಳಿಕ ಖಂಡಿತವಾಗಿಯೂ ಹಲವರು ಬುದ್ಧಿ ಕಲಿಯಲಿದ್ದಾರೆ. ಅದರಲ್ಲೂ ಈ ಕಳ್ಳ ಬಿಡಿ, ಆತನ ಕುಟುಂಬದ ಯಾರೊಬ್ಬರೂ ಇನ್ನೆಂದೂ ಕಳವಿನ ಪ್ರಯತ್ನಕ್ಕೆ ಕೈ ಹಾಕಲಾರರುʼʼ ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ʼʼಖದೀಮರಿಗೆ ಬುದ್ಧಿ ಕಲಿಸಲು ಉತ್ತಮ ಮಾರ್ಗʼʼ ಎಂದು ಮಗದೊಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಈ ಘಟನೆ ಎಲ್ಲರಿಗೂ ಪಾಠವಾಗಬೇಕುʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ಈ ರೀತಿ ಚಲಿಸುತ್ತಿರುವ ರೈಲಿನಲ್ಲಿ ನೇತಾಡಿಸಿಕೊಂಡು ಹೋಗಿದ್ದು ಅಪಾಯಕಾರಿಯಾದರೂ ಕಳವಿನಂತಹ ದುಸ್ಸಾಹಸಕ್ಕೆ ಕೈ ಹಾಕದಿರಲು ಇಂತಹ ಕಠಿಣ ಕ್ರಮ ಅನಿವಾರ್ಯ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version