Site icon Vistara News

ವಿಸ್ತಾರ ನ್ಯೂಸ್‌ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶುಭ ಹಾರೈಕೆ

prahlad joshi

ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವರಾದ ಪ್ರಲ್ಹಾದ ಜೋಶಿ ಅವರು ವಿಸ್ತಾರ ನ್ಯೂಸ್‌ಗೆ ಶುಭ ಕೋರಿದ್ದಾರೆ. ಮಾಧ್ಯಮ ಲೋಕದಲ್ಲಿ ವಿಸ್ತಾರ ನ್ಯೂಸ್ ಮಿನುಗು ತಾರೆಯಂತೆ ಬೆಳಗಲಿ ಎಂದು ಅವರು ಹಾರೈಸಿದ್ದಾರೆ. ಅವರ ಶುಭ ಸಂದೇಶ ಹೀಗಿದೆ…

ಆತ್ಮೀಯ ಹರಿಪ್ರಕಾಶ ಕೋಣೆಮನೆ ಅವರೇ,
ತಮ್ಮ ಮುಂದಾಳತ್ವದಲ್ಲಿ ವಿಸ್ತಾರ ಡಿಜಿಟಲ್ ಮೀಡಿಯಾ ಪ್ರಾರಂಭವಾಗಿರುವುದು ಸಂತೋಷಕರ ವಿಷಯ. ʻನಿಖರ-ಜನಪರʼ ಎಂಬ ಧ್ಯೇಯ ವಾಕ್ಯದೊಂದಿಗೆ ಡಿಜಿಟಲ್ ಮಾಧ್ಯಮದ ಸಾಹಸಕ್ಕೆ ನೀವು ಕೈ ಹಾಕಿರುವುದು ಶ್ಲಾಘನೀಯ. ಹಲವು ವರ್ಷಗಳ ಮುದ್ರಣ ಮಾಧ್ಯಮದ ಅನುಭವ ಇರುವ ತಾವು ಡಿಜಿಟಲ್ ಮಾಧ್ಯಮದ ಹೊಣೆಗಾರಿಕೆ ವಹಿಸಿಕೊಂಡಿದ್ದೀರಿ. ಉತ್ತಮ ನಿರ್ವಹಣಾ ಕೌಶಲ್ಯ ಹೊಂದಿರುವ ತಾವು ಈ ಕ್ಷೇತ್ರದಲ್ಲಿ ಯಶಸ್ಸನ್ನು ಕಾಣುವಂತಾಗಲಿ. ಭವಿಷ್ಯದ ಮಾಧ್ಯಮದ ದಿಕ್ಕನ್ನು ಕಂಡುಕೊಳ್ಳಲು ವಿಸ್ತಾರ ಮೀಡಿಯಾ ಮುಂದಾಗಲಿ.

ಮಾಧ್ಯಮ ಮತ್ತು ಪತ್ರಿಕೋದ್ಯಮದ ಸಂಗಮದಿಂದ ಉತ್ತಮ ಸುದ್ದಿ ವಾಹಿನಿ ರೂಪುಗೊಳ್ಳುತ್ತದೆ. ಮಾಧ್ಯಮವು ಉದ್ಯಮವಾಗಿ ಬೆಳೆಯುತ್ತಿದ್ದರೆ, ಪತ್ರಿಕೋದ್ಯಮವು ಜನಪರ ದನಿಯಾಗಿ ಬೆಳೆಯುತ್ತದೆ. ವಾಹಿನಿಗಳು ಬಿತ್ತರಿಸುವ ಸುದ್ದಿಗಳನ್ನು ಜನರು ವಿಶ್ಲೇಷಿಸುತ್ತಾರೆ. ಆದ್ದರಿಂದ ಸುದ್ದಿಗಳು ಪಾರದರ್ಶಕವಾಗಿ, ಸತ್ಯ ನಿಷ್ಠುರವಾಗಿ ಇರಬೇಕಾಗುತ್ತದೆ. ಭಾರತದಲ್ಲಿ ತುರ್ತು ಪರಿಸ್ಥಿತಿ ಇದ್ದಾಗ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದ್ದ ಸಂದರ್ಭದಲ್ಲಿ ಈ ಕ್ರಮದ ವಿರುದ್ಧ ದಿಟ್ಟತನದಿಂದ ಧ್ವನಿ ಎತ್ತಿದವರು ಇಂಡಿಯನ್ ಎಕ್ಸ್‌ಪ್ರೆಸ್ ಮುಖ್ಯಸ್ಥರಾದ ರಾಮನಾಥ ಗೊಯೆಂಕಾ ಅವರು. ಉದ್ಯಮಿಯಾಗಿದ್ದರೂ ಕೂಡ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅವರು ಹೆಚ್ಚಿನ ಮಹತ್ವ ನೀಡಿದರು.

ಪತ್ರಿಕೋದ್ಯಮದಲ್ಲಿ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸಿದವರೂ ಇದ್ದಾರೆ. ಆದ್ದರಿಂದ ಮಾಧ್ಯಮ ಮತ್ತು ಪತ್ರಿಕೋದ್ಯಮದ ಸಂಗಮ ಉತ್ತಮ ಸುದ್ದಿ ವಾಹಿನಿ ಅಥವಾ ಪತ್ರಿಕೆಯಾಗಿ ರೂಪುಗೊಳ್ಳುತ್ತದೆ. ಈ ದಿಸೆಯಲ್ಲಿ ವಿಸ್ತಾರ ನ್ಯೂಸ್ ಬೆಳೆಯಲಿ. ಪತ್ರಿಕೋದ್ಯಮ ಮೌಲ್ಯಗಳನ್ನು ಎತ್ತಿ ಹಿಡಿಯಲಿ.

ರಾಜಕಾರಣಿಗಳು ಮತ್ತು ಪತ್ರಕರ್ತರ ಸಂಬಂಧ ಅನ್ಯೋನ್ಯವಾದುದು. ಸರ್ಕಾರದ ಕಾರ್ಯಕ್ರಮಗಳು ಮಾಧ್ಯಮಗಳ ಮೂಲಕ ಜನರಿಗೆ ತಲುಪಬೇಕು. ರಾಜಕಾರಣಿಗಳು ಮತ್ತು ಪತ್ರಕರ್ತರ ನಡುವಿನ ಸಂಬಂಧ ಪ್ರಾಮಾಣಿಕವಾಗಿದ್ದು, ಕ್ರೀಡಾ ಸ್ಫೂರ್ತಿಯಿಂದ ಕೂಡಿರಬೇಕು. ಮಾಧ್ಯಮಗಳ ಅನುಭವದ ಮಾತುಗಳು ನನಗೆ ಸದಾ ಮಾರ್ಗದರ್ಶನ ನೀಡುತ್ತವೆ. ಕನ್ನಡ ಮಾಧ್ಯಮ ಹೊಸ ಆಯಾಮಗಳನ್ನು ಕಂಡಿದೆ. ಮಾಧ್ಯಮ ಲೋಕದಲ್ಲಿ ಮಿನುಗು ತಾರೆಯಂತೆ ವಿಸ್ತಾರ ನ್ಯೂಸ್ ಬೆಳಗಲಿ ಎಂದು ಹಾರೈಸುತ್ತೇನೆ.
ಶುಭಾಶಯಗಳೊಂದಿಗೆ
ಪ್ರಲ್ಹಾದ ಜೋಶಿ

Exit mobile version