Site icon Vistara News

CM Siddaramaiah: ಗುತ್ತಿಗೆದಾರರ ಕಾರ್ಯಾಧ್ಯಕ್ಷ ಮಂಜುನಾಥ್‌ಗೆ ಕಪಾಳಕ್ಕೆ ಹೊಡೆದ ಸಿಎಂ!

CM Siddaramaiah in contractor association programme

ಬೆಂಗಳೂರು: ಅರಮನೆ ಮೈದಾನದಲ್ಲಿ ನಡೆದ ಗುತ್ತಿಗೆದಾರರ ಸಮಾವೇಶದಲ್ಲಿ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್‌ಗೆ (contractors association working president Manjunath) ಸಿಎಂ ಸಿದ್ದರಾಮಯ್ಯ (CM Siddaramaiah) ಕಪಾಳಕ್ಕೆ ಹೊಡೆದಿದ್ದಾರೆ. ಭಾಷಣ ಮುಗಿಸಿ ವಾಪಸ್ ತಮ್ಮ ಆಸನಕ್ಕೆ ತೆರಳುವ ವೇಳೆ ಸಿಎಂಗೆ ಎದುರಾಗುವಾಗ ಈ ಘಟನೆ ನಡೆದಿದೆ. ಸಿಎಂ ಭಾಷಣಕ್ಕೂ ಮುನ್ನ ಬಾಕಿ ಇರುವ ಬಿಲ್ ಅನ್ನ ಒಂದೇ ಬಾರಿಗೆ ಬಿಡುಗಡೆ ಮಾಡುವಂತೆ ಸಿಎಂಗೆ ಮಂಜುನಾಥ್‌ ಮನವಿ ಮಾಡಿದ್ದರು. ಅವರು ವೇದಿಕೆಯಲ್ಲಿ ಎದುರಾಗುತ್ತಿದ್ದಂತೆ ಕಪಾಳಕ್ಕೆ ಸಿಎಂ ಹೊಡೆದಿದ್ದಾರೆ.

ಅಲ್ಲದೆ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ವೇಳೆ ಮಂಜುನಾಥ್‌ ಮನವಿಯನ್ನು ಉಲ್ಲೇಖಿಸುತ್ತಾ, ಒಂದೇ ಸಾರಿ ಅಷ್ಟೂ ಹಣವನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ನಾನೇನು ಹಣವನ್ನು ಪ್ರಿಂಟ್ ಮಾಡಲೇ ಎಂದು ಗರಂ ಆಗಿದ್ದರು.

ಭಾಷಣ ಮುಗಿಸಿ ವಾಪಸ್ ಬರುವಾಗ ಎದುರು ಬಂದ ಮಂಜುನಾಥ್‌ನನ್ನು ಕಂಡ ಸಿದ್ದರಾಮಯ್ಯ ಅವರು ನಗುತ್ತಲೇ ಕಪಾಳಕ್ಕೆ ತಟ್ಟಿದರು. ಆಗ ಮಂಜುನಾಥ್‌ ಸಹ ನಗು ನಗುತಲೇ ಅಲ್ಲಿಂದ ತೆರಳಿದರು.

ಗುತ್ತಿಗೆದಾರರಿಂದ 5 ಪೈಸೆ ಲಂಚ ಪಡೆದಿದ್ದರೂ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ ಸವಾಲು

ಸಣ್ಣ ಗುತ್ತಿಗೆದಾರರ ಅನುಕೂಲಕ್ಕಾಗಿ 4 ಸಾವಿರ ಕೋಟಿ ರೂಪಾಯಿಯ ಕಾಮಗಾರಿಯನ್ನು ಪ್ಯಾಕೇಜ್ ಇಲ್ಲದೆ ನೀಡಲು ಲೋಕೋಪಯೋಗಿ ಸಚಿವರಿಗೆ ಸೂಚಿಸಿದ್ದೇನೆ. ಇನ್ನು 2013-2018ರ ಅವಧಿಯಲ್ಲಾಗಲೀ, ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವ ಅವಧಿಯಲ್ಲಾಗಲೀ ಗುತ್ತಿಗೆದಾರರಿಂದ ನಿರಾಕ್ಷೇಪಣಾ ಪತ್ರಕ್ಕೆ (NOC) ಐದು ಪೈಸೆ ಲಂಚವನ್ನು ಪಡೆದಿದ್ದರೆ ರಾಜಕೀಯ ನಿವೃತ್ತಿ (Political retirement) ಪಡೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಗುತ್ತಿಗೆದಾರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಐದು ಪೈಸೆ ಲಂಚವನ್ನು ಯಾರಾದರೂ ನನಗೆ ಕೊಟ್ಟಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಬಿಜೆಪಿಗರ ಟೀಕೆಗಳಿಗೆ ಪ್ರತ್ಯುತ್ತರ ನೀಡಿದರು.

ಪ್ಯಾಕೇಜ್ ಪದ್ಧತಿ ರದ್ದುಗೊಳಿಸುವುದು, ಬಾಕಿ ಮೊತ್ತವನ್ನು ಪಾವತಿಸುವುದು ಸೇರಿದಂತೆ ಗುತ್ತಿಗೆದಾರರು ಮುಂದಿಟ್ಟ ಎಲ್ಲ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವೇಳೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

ಕೇಂದ್ರ ಸರ್ಕಾರದ ಅಸಹಕಾರ

ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಇಬ್ಬರೂ ಬಜೆಟ್‌ನಲ್ಲೇ ಘೋಷಿಸಿದರು. ಆದರೆ, ಇವತ್ತಿನವರೆಗೂ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಎಷ್ಟೇ ಅಸಹಕಾರ ಕೊಟ್ಟರೂ ಗುತ್ತಿಗೆದಾರರ ಅಷ್ಟೂ ಹಣವನ್ನು ನಾವೇ ಹಂತ ಹಂತವಾಗಿ ಪಾವತಿಸುತ್ತೇವೆ ಎಂದರು.

ಇದನ್ನೂ ಓದಿ: FSL Report : ಸರ್ಕಾರಿ FSL ವರದಿ ಬಂದಿಲ್ಲ, ಖಾಸಗಿ ವರದಿ ಒಪ್ಪಲ್ಲ; ಬಿಜೆಪಿಗೆ ಪರಮೇಶ್ವರ್‌ ತಿರುಗೇಟು

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಬೋಸ್ ರಾಜು, ಜಮೀರ್ ಅಹಮದ್ ಖಾನ್ ಸೇರಿ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

Exit mobile version