Site icon Vistara News

ವಿಸ್ತಾರ ಸಂಪಾದಕೀಯ: ಮೇಕೆದಾಟು ವಿಚಾರದಲ್ಲಿ ಮಿತ್ರಪಕ್ಷಕ್ಕಾಗಿ ನಾಡಿಗೆ ದ್ರೋಹ ಬಗೆಯದಿರಿ

Mekedatu Project

ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ (INDIA Bloc) ಅಧಿಕಾರಕ್ಕೇರಿದರೆ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ (Mekedatu Project) ತಡೆಯೊಡ್ಡುವುದಾಗಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ (DMK Party) ತನ್ನ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ (DMK Manifesto) ಘೋಷಣೆ ಮಾಡಿದೆ. ಇದು INDIA ಒಕ್ಕೂಟದಲ್ಲೇ ಇರುವ ರಾಜ್ಯದ ಕಾಂಗ್ರೆಸ್‌ಗೆ ಭಾರಿ ಮುಖಭಂಗ ಉಂಟುಮಾಡುವ ಸಂಗತಿ. ಆದರೆ ಕಾಂಗ್ರೆಸ್‌ಗೆ ಇದರಿಂದ ಅಚ್ಚರಿ ಅಥವಾ ಸಿಟ್ಟೇನೂ ಬಂದಂತಿಲ್ಲ. ಡಿಸಿಎಂ ಡಿಕೆ ಶಿವಕುಮಾರ್‌ ಹೊರತುಪಡಿಸಿದರೆ ಕಾಂಗ್ರೆಸ್‌ನ ಇನ್ಯಾವ ನಾಯಕರೂ ಇದಕ್ಕೆ ಸರಿಯಾದ ಪ್ರತಿಕ್ರಿಯೆಯನ್ನು ನೀಡಿಲ್ಲ. ಕಟುವಾಗಿ ಪ್ರತಿಕ್ರಿಯಿಸಿದರೆ ಮಿತ್ರಪಕ್ಷಕ್ಕೆ ಬೇಸರವಾಗಬಹುದು ಎಂದಿರಬಹುದು; ಅಥವಾ ಡಿಎಂಕೆಯ ನಿಲುವಿಗೆ ಕಾಂಗ್ರೆಸ್‌ನ ಸಮ್ಮತಿಯೂ ಇದೆಯೋ? ಇದು ಸ್ಪಷ್ಟವಾಗಬೇಕು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಈ ಹಿಂದೆ ಪಣ ತೊಟ್ಟಿತ್ತು. ಅದಕ್ಕಾಗಿ ದೊಡ್ಡ ಮಟ್ಟದ ಹೋರಾಟವನ್ನೇ ರೂಪಿಸಿತ್ತು. ಈಗ ಐಎನ್‌ಡಿಐಎ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ ಪ್ರಮುಖ ಪಕ್ಷವಾಗಿದ್ದು, ಡಿಎಂಕೆ ಪ್ರಣಾಳಿಕೆಯಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್‌ ನೇತೃತ್ವದಲ್ಲಿ ʻನಮ್ಮ ನೀರು ನಮ್ಮ ಹಕ್ಕುʼ ಹೆಸರಿನಲ್ಲಿ ದೊಡ್ಡ ಪಾದ ಯಾತ್ರೆ ನಡೆಸಿತ್ತು. ಆಗ ಅದು ಕೇಂದ್ರದ ಬಿಜೆಪಿ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ದೋಷಾರೋಪ ಮಾಡಿತ್ತು. ಇದೀಗ ಕಾಂಗ್ರೆಸ್‌ನ ಮಿತ್ರಪಕ್ಷವೇ ಮೇಕೆದಾಟು ಡ್ಯಾಂಗೆ ತಡೆ ತರುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಇದು ರಾಜ್ಯದಲ್ಲಿ ಬಿಜೆಪಿಗೆ ಒಂದು ಅಸ್ತ್ರವಾಗುವ ಸಾಧ್ಯತೆ ಇದೆಯೋ ಇಲ್ಲವೋ, ಕರ್ನಾಟಕದ ಜನತೆಯ ಕಳವಳಕ್ಕಂತೂ ಕಾರಣವಾಗುವ ಸಂಗತಿ. ಡಿಎಂಕೆಯ ನಿಲುವಿಗೆ ಕಾಂಗ್ರೆಸ್‌ನ ಒಪ್ಪಿಗೆ ಇದೆಯೋ? ಇಲ್ಲ ಎಂದಾದರೆ ಅದನ್ನು ಸ್ಪಷ್ಟವಾದ ಮಾತುಗಳಲ್ಲಿ ಹೇಳಬೇಕು; ಡಿಎಂಕೆ ಪ್ರಣಾಳಿಕೆಯನ್ನು ಕಟುವಾಗಿ ಖಂಡಿಸಬೇಕು; ಹಾಗೂ ಹಾಗೂ, ರಾಜ್ಯದ ಹಿತಾಸಕ್ತಿಯ ಮೇಲೆ ಕಾಂಗ್ರೆಸ್‌ಗೆ ನಿಜವಾದ ಕಾಳಜಿ ಇರುವುದೇ ಆದರೆ, ಪ್ರಣಾಳಿಕೆಯಿಂದ ಅದನ್ನು ತೆಗೆದುಹಾಕುವಂತೆ ಮಾಡಬೇಕು.

ಬೆಂಗಳೂರಿನಿಂದ 90 ಕಿ.ಮೀ. ದೂರದಲ್ಲಿರುವ ಮೇಕೆದಾಟುವಿನಲ್ಲಿ ಜಲಾಶಯ ನಿರ್ಮಿಸಿ ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ಸಂರಕ್ಷಿಸಿ ಕುಡಿಯುವ ನೀರಿಗೆ ಬಳಸುವ ಯೋಜನೆ ಮೇಕೆದಾಟು ಯೋಜನೆ. 9,000 ಕೋಟಿಯ ಈ ಯೋಜನೆಯಿಂದ ಬೆಂಗಳೂರು ಹಾಗೂ ರಾಜ್ಯದ ಕೆಲವೊಂದು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಬಹುದು. ಜತೆಗೆ ತಮಿಳುನಾಡಿಗೂ ಇಲ್ಲಿಂದ ಅಗತ್ಯವಿರುವ ನೀರು ಬಿಡುಗಡೆ ಮಾಡಬಹುದು ಎನ್ನುವುದು ಕರ್ನಾಟಕ ಸರ್ಕಾರದ ಲೆಕ್ಕಾಚಾರ. ಆದರೆ, ಇದು ತಮಿಳುನಾಡಿಗೆ ಹರಿದು ಹೋಗುತ್ತಿರುವ ನೀರನ್ನು ತಡೆ ಹಿಡಿಯುವ ಯೋಜನೆ ಎಂಬ ಕಾರಣಕ್ಕಾಗಿ ತಮಿಳುನಾಡು ವಿರೋಧಿಸುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಯೋಜನೆಗೆ ಅನುಮತಿ ಕೊಡುವ ವಿಚಾರದಲ್ಲಿ ವಿವಾದ ಜಾರಿಯಲ್ಲಿದೆ. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಡಿಎಂಕೆ ಪ್ರಣಾಳಿಕೆ ಇದಕ್ಕೆ ತಣ್ಣೀರು ಎರಚಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಅರುಣಾಚಲ ವಿಚಾರದಲ್ಲಿ ಅಮೆರಿಕದ ನಿಲುವು ಭಾರತಕ್ಕೆ ಆನೆಬಲ

ಕನ್ನಡ ನಾಡಿನ ಜೀವನದಿಯಾಗಿರುವ ಕಾವೇರಿ ನೀರಿನ ವಿಚಾರದಲ್ಲಿ ಸದಾ ತಗಾದೆ ತೆಗೆಯುವ, ಬೇಸಿಗೆಯಲ್ಲಿ ಕರ್ನಾಟಕದ ರೈತರ ಜೀವ ಹಿಂಡಿಯಾದರೂ ತಾನು ನೀರು ಪಡೆಯಬೇಕು ಎಂದು ಹಠ ಹಡಿಯುವ ತಮಿಳುನಾಡಿನ ಡಿಎಂಕೆಯ ಪ್ರಣಾಳಿಕೆ ತನ್ನ ರಾಜ್ಯಕ್ಕೆ ಸೀಮಿತವಾಗಿರುವುದನ್ನು ಬಿಟ್ಟು, ಕರ್ನಾಟಕದ ಮೇಕೆದಾಟುವಿಗೂ ವ್ಯಾಪಿಸಿರುವುದು ಹಾಸ್ಯಾಸ್ಪದ. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಕೂಡ ತನ್ನ ಮಾತೇ ನಡೆಯಲಿದೆ ಎಂಬುದು ಡಿಎಂಕೆ ಖಚಿತವಾದಂತಿದೆ. ಒಂದು ವೇಳೆ ಇಂಡಿಯಾ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರ ಹಿಡಿಯಿತೆಂದಿಟ್ಟುಕೊಳ್ಳೋಣ; ಆಗ ಕಾಂಗ್ರೆಸ್‌ ಮಿತ್ರಪಕ್ಷ ಡಿಎಂಕೆಯ ಭರವಸೆಯನ್ನು ನಡೆಸಿಕೊಡಲು ನೆರವಾಗಲಿದೆಯೋ? ಕರ್ನಾಟಕದ ಜನತೆಗೆ ಅನ್ಯಾಯವಾದರೂ ಪರವಾಗಿಲ್ಲ, ಡಿಎಂಕೆ ಮೈತ್ರಿ ಉಳಿಯಲಿ ಎಂದು ಕಾಂಗ್ರೆಸ್‌ ಭಾವಿಸುತ್ತದೋ? ಇದು ಇಲ್ಲಿರುವ ಮಹತ್ವದ ಪ್ರಶ್ನೆಯಾಗಿದೆ.

Exit mobile version