Site icon Vistara News

Lok Sabha Election : ನಾಳೆ ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟ

Election Commission

ನವದೆಹಲಿ: ಮಾರ್ಚ್ 16 ರಂದು (ನಾಳೆ) ಲೋಕಸಭಾ ಚುನಾವಣೆ (Lok Sabha Election) ಮತ್ತು ಕೆಲವು ರಾಜ್ಯಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸುವುದಾಗಿ ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. ಪತ್ರಿಕಾಗೋಷ್ಠಿಯನ್ನು ಚುನಾವಣಾ ಆಯೋಗದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಎಂದು ಹೇಳಿದೆ.

ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಲಾಗುವುದು. ಘೋಷಣೆ ಮಾಡಿದ ಕೂಡಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ.

ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳು ಈಗಾಗಲೇ 543 ಲೋಕಸಭಾ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಲು ಪ್ರಾರಂಭಿಸಿವೆ. ಲೋಕಸಭಾ ಚುನಾವಣೆಗೆ ಬಿಜೆಪಿ ಇದುವರೆಗೆ 267 ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದರೆ, ಕಾಂಗ್ರೆಸ್ ಎರಡು ಪಟ್ಟಿಗಳಲ್ಲಿ 82 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ಏತನ್ಮಧ್ಯೆ, ಚುನಾವಣಾ ಆಯೋಗವು ಮಾರ್ಚ್ 14 ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಪಡೆದ ಚುನಾವಣಾ ಬಾಂಡ್ಗಳ ಡೇಟಾವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ. ಸುಪ್ರೀಂ ಕೋರ್ಟ್​ಗೆ ಹಸ್ತಾಂತರಿಸಿದ ಚುನಾವಣಾ ಬಾಂಡ್​ಗಳ ದಾಖಲೆಯನ್ನು ಮುಚ್ಚಿದ ಲಕೋಟೆ / ಸೀಲ್ ಮಾಡಿದ ಪೆಟ್ಟಿಗೆಗಳಲ್ಲಿ ಹಿಂದಿರುಗಿಸುವಂತೆ ಕೋರಿದೆ. ಆದಾಗ್ಯೂ ಕೋರ್ಟ್​​ ಆಯೋಗ ಮಾಹಿತಿಯನ್ನು ಪೂರ್ಣವಾಗಿ ಪ್ರಕಟಿಸಿಲ್ಲ ಎಂದು ಹೇಳಿದೆ.

ನೂತನ ಚುನಾವಣಾ ಆಯುಕ್ತರಾಗಿ ಸುಖಬೀರ್‌ ಸಂಧು, ಜ್ಞಾನೇಶ್‌ ಕುಮಾರ್‌ ನೇಮಕ
ಕೇಂದ್ರ ಸರ್ಕಾರವು (Central Government) ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡಿದೆ. ಪಂಜಾಬ್‌ನ ಬಿ. ಸುಖಬೀರ್‌ ಸಂಧು (Sukhbir Sandhu) ಹಾಗೂ ಕೇರಳದ ಜ್ಞಾನೇಶ್‌ ಕುಮಾರ್‌ (Gyanesh Kumar) ಅವರನ್ನು ಚುನಾವಣಾ ಆಯುಕ್ತರನ್ನಾಗಿ (Election Commissioners) ನೇಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರಿರುವ ಆಯ್ಕೆ ಸಮಿತಿ ಸಭೆಯಲ್ಲಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ : Lok Sabha Election : ಚುನಾವಣಾ ಬಾಂಡ್​; ಪೂರ್ಣ ಮಾಹಿತಿ ಕೊಡದ ಎಸ್​ಬಿಐಗೆ ಸುಪ್ರೀಂ ತಪರಾಕಿ

ಚುನಾವಣಾ ಆಯುಕ್ತರ ನೇಮಕದ ಕುರಿತು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಮಾಹಿತಿ ನೀಡಿದ್ದಾರೆ. ಆಯ್ಕೆ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಧೀರ್‌ ರಂಜನ್‌ ಚೌಧರಿ, “ಸುಖಬೀರ್‌ ಸಂಧು ಹಾಗೂ ಜ್ಞಾನೇಶ್‌ ಕುಮಾರ್‌ ಅವರು ಚುನಾವಣಾ ಆಯುಕ್ತರನ್ನಾಗಿ ಆಯ್ಕೆ ಮಾಡಲಾಗಿದೆ. ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಿಸಲು 212 ಅಧಿಕಾರಿಗಳ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಇವರಲ್ಲಿ ಇಬ್ಬರನ್ನು ಆಯುಕ್ತರನ್ನಾಗಿ ಆಯ್ಕೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಸುಖಬೀರ್‌ ಸಂಧು ಹಾಗೂ ಜ್ಞಾನೇಶ್‌ ಕುಮಾರ್‌ ಅವರು ಐಎಎಸ್‌ ನಿವೃತ್ತ ಅಧಿಕಾರಿಗಳಾಗಿದ್ದಾರೆ. ಸುಖಬೀರ್‌ ಸಂಧು ಅವರು ಪಂಜಾಬ್‌ನವರಾದರೆ, ಜ್ಞಾನೇಶ್‌ ಕುಮಾರ್‌ ಅವರು ಕೇರಳದವರು ಎಂದು ತಿಳಿದುಬಂದಿದೆ. ಖಾಲಿ ಇರುವ ಎರಡು ಹುದ್ದೆಗಳಿಗೆ ಈಗ ಆಯುಕ್ತರನ್ನು ನೇಮಕ ಮಾಡಿದ ಕಾರಣ ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ದಿನಾಂಕ ಪ್ರಕಟಿಸಲಾಗತ್ತದೆ ಎಂದು ಹೇಳಲಾಗುತ್ತಿದೆ.

ಆಯುಕ್ತರಾಗಿದ್ದ ಅರುಣ್ ಗೋಯೆಲ್ ಅವರ ಕೆಲ ದಿನಗಳ ಹಿಂದಷ್ಟೇ ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ್ದರು. ಕಳೆದ ತಿಂಗಳು ಅನೂಪ್‌ ಚಂದ್ರ ಪಾಂಡೆ ಅವರ ನಿವೃತ್ತಿಯ ನಂತರ ಎರಡು ಚುನಾವಣಾ ಆಯುಕ್ತರ ಹುದ್ದೆಗಳು ಖಾಲಿಯಾಗಿದ್ದವು. ಅದರಲ್ಲೂ, ಚುನಾವಣೆ ಆಯೋಗವು ಲೋಕಸಭೆ ಚುನಾವಣೆಗೆ ಸಿದ್ಧವಾಗುತ್ತಿದ್ದು, ಇಬ್ಬರು ಆಯುಕ್ತರ ನೇಮಕವು ಅನಿವಾರ್ಯವಾಗಿತ್ತು. ಹಾಗಾಗಿ, ನರೇಂದ್ರ ಮೋದಿ ಅವರಿರುವ ಆಯ್ಕೆ ಸಮಿತಿ ಸಭೆಯು ಇಬ್ಬರು ಆಯುಕ್ತರನ್ನು ನೇಮಕ ಮಾಡಿದೆ.

Exit mobile version