Site icon Vistara News

Election Result 2024: ಇಂಡಿ ಒಕ್ಕೂಟ ಸಭೆ ಸೇರಿದ್ದ ಸ್ಥಳದಲ್ಲೇ ವಾಸ್ತುದೋಷ, ಅಂದು ಅಮವಾಸ್ಯೆ ಬೇರೆ; ಹಾಗಾಗಿ…

Election Result 2024
– ಗಜೇಂದ್ರ ಬಾಬು, ಜ್ಯೋತಿಷ್ಯರು ಹಾಗೂ ವಾಸ್ತು ತಜ್ಞರು- ಆದಿತ್ಯ ಜ್ಯೋತಿರ್ ವಿಜ್ಞಾನ ಶಾಲೆ

ಪ್ರಪಂಚದಲ್ಲೆ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮ ಭಾರತ. ನಮ್ಮಂತಹ ಮಹಾನ್ ದೇಶದಲ್ಲಿ ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆಯನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಡೆಸುವುದೇ ಒಂದು ದೊಡ್ಡ ಸವಾಲು. ಚುನಾವಣೆ ನೀತಿ-ಸಂಹಿತೆಯನ್ನು ಹಾಗೂ ಈ ನೆಲದ ಕಾನೂನುಗಳನ್ನು ಪಾಲಿಸುವುದು ಕೇಂದ್ರ-ರಾಜ್ಯ ಸರ್ಕಾರ ಹಾಗೂ ಚುನಾವಣೆ ಆಯೋಗದ ಬಹು ದೊಡ್ಡ ಜವಾಬ್ದಾರಿ. ಇಂತಹ ಚುನಾವಣೆಗಳನ್ನು ನಡೆಸುವಾಗ ರಾಜಕಾರಣಿಗಳ-ಅಧಿಕಾರಿಗಳ ಹಾಗೂ ಮತದಾರರ ಜವಾಬ್ದಾರಿಯನ್ನು ಕಡೆಗಣಿಸುವಂತಿಲ್ಲಾ. ವೇದಾಂಗ ಜ್ಯೊತಿಷ್ಯ-ವಾಸ್ತು ಶಾಸ್ತ್ರ , ಪ್ರಾಪಂಚಿಕ ಜ್ಯೋತಿಷ ಇದನ್ನು ರಾಜಕಿಯ ಜ್ಯೋತಿಷ ಎಂದು ಕರೆಯುತ್ತಾರೆ. ಇದು ರಾಜಕೀಯ ಸರ್ಕಾರ ಮತ್ತು ನಿರ್ಧಿಷ್ಟ ರಾಷ್ಟ್ರ, ರಾಜ್ಯ ಅಥವಾ ನಗರವನ್ನು ನಿಯಂತ್ರಿಸುವ ಕಾನೂನುಗಳೊಂದಿಗೆ ವ್ಯವಹರಿಸುವ ಜ್ಯೋತಿಷದ ಶಾಖೆಯಾಗಿದೆ. ಈ ಹೆಸರು ಲ್ಯಾಟಿನ್ ಪದ ಮುಂಡಸ, ‘ವರ್ಲ್ಡ್’ ನಿಂದ (ಮಂಡೇನ್) ಹೆಸರನ್ನು ಪಡೆದುಕೊಂಡಿದೆ.

ಪ್ರಾಪಂಚಿಕ ಜ್ಯೋತಿಷವು ಜ್ಯೋತಿಷ ಶಾಸ್ತ್ರದ ಅತ್ಯಂತ ಪ್ರಾಚೀನ ಶಾಖೆ ಎಂದು ಜ್ಯೋತಿಷ ಇತಿಹಾಸಕಾರರಿಂದ ವ್ಯಾಪಕವಾಗಿ ನಂಬಲಾಗಿದೆ. ಆರಂಭಿಕ ಬ್ಯಾಬಿಲೋನಿಯನ್ ಜ್ಯೋತಿಷವು ಪ್ರಾಪಂಚಿಕ ಜ್ಯೋತಿಷದೊಂದಿಗೆ ಪ್ರತ್ಯೇಕ ಕಾಳಜಿ ಹೊಂದಿತ್ತು. ಇದು ಬೌಗೋಳಿಕ ಆಧಾರಿತವಾಗಿದೆ. ನಿರ್ಧಿಷ್ಟವಾಗಿ ದೇಶಗಳು ಮತ್ತು ರಾಷ್ಟ್ರಗಳಿಗೆ ಅನ್ವಯಿಸುತ್ತದೆ. ರಾಷ್ಟ್ರದ ಆಡಳಿತ ಮುಖ್ಯಸ್ಥರಿಗೆ ರಾಜ್ಯ ಮತ್ತು ರಾಜನ ಯೋಗಕ್ಷೇಮದ ಬಗ್ಗೆ ಸಂಪೂರ್ಣವಾಗಿ ಕಾಳಜಿವಹಿಸುತ್ತದೆ. ಜ್ಯೋತಿಷ ಶಾಸ್ತ್ರದ ಅಭ್ಯಾಸಗಳು ಮತ್ತು ಗ್ರಹಗಳ ವ್ಯಾಖ್ಯಾನವನ್ನು ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸಲು ಸಹಸ್ರಮಾನಗಳಿಂದ ಬಳಸಲಾಗಿದೆ.

ಭಾರತ ದೇಶದಲ್ಲಿ ಚುನಾವಣೆ ಆಯೋಗದ ಅಂಕಿ ಅಂಶಗಳ ಪ್ರಕಾರ 98 ಕೋಟಿ ಮತದಾರರ ನೊಂದಣಿಯಾಗಿದೆ. ಪ್ರಪಂಚದಲ್ಲೆ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಪ್ರಜಾಪ್ರಭುತ್ವ ದೇಶ ನಮ್ಮ ಭಾರತ ದೇಶ.

ಒಂದು ದೇಶದ ಚುನಾವಣೆ ಫಲಿತಾಂಶ ಹೇಗೆ ಹೊರ ಹೊಮ್ಮುವ ಸಾಧ್ಯತೆಗಳ ಬಗ್ಗೆ ಜ್ಯೋತಿಷ ಹಾಗೂ ವಾಸ್ತು ಶಾಸ್ತ್ರ ರೀತಿಯ ಮತ್ತು ಇನ್ನಿತರ ಶಾಸ್ತ್ರಗಳ ಬಗ್ಗೆ ಅಧ್ಯಯನ ಮಾಡಬೇಕಾದರೆ, ಆ ದೇಶ ಸ್ವಾತಂತ್ರ ಪಡೆದ ದಿನಾಂಕ, ವೇಳೆ, ಚುನಾವಣೆ ಪೋಷಿಸಿದ ದಿನಾಂಕ, ವೇಳೆ, ಚುನಾವಣೆ ನಡೆಯುವ ದಿನಾಂಕಗಳು, ವೇಳೆ, ರಾಜಕೀಯ ಪಕ್ಷಗಳು ಉದಯವಾದ ಜನ್ಮ ಕುಂಡಲಿ ಹೀಗೆ ಅನೇಕ ನಿಯತಾಂಕಗಳನ್ನು ಅನುಸರಿಸಿ ಒಂದು ನಿರ್ದಿಷ್ಟ ಅಂಶಕ್ಕೆ ಫಲಿತಾಂಶಗಳು ಊಹಿಸಬಹುದು.

ಚುನಾವಣೆಯನ್ನು ಘೋಷಿಸಿದ ದಿನ ಹೇಗಿತ್ತು?

ಚುನಾವಣೆಯನ್ನು ಆಯೋಗವು ಪೋಷಿಸಿದ ದಿನಾಂಕ 16ನೇ ಮಾರ್ಚ್ 2024, ಮಧ್ಯಾಹ್ನ 3 ಗಂಟೆಗೆ, ಶ್ರೀ ಶೋಭಕೃತ್‌ನಾಮ ಸಂವತ್ಸರ, ಉತ್ತರಾಯಣ, ಪಾಲ್ಗುಣ ಮಾಸ, ಸಪ್ತಮಿ ತಿಥಿ, ಶನಿವಾರ, ರೋಹಿಣಿ ನಕ್ಷತ್ರ, ಅಮೃತಸಿದ್ದಿಯೋಗ, ಕಟಕಲಗ್ನದಲ್ಲಿ ಲಗ್ನಾಧಿಪತಿಯಾದ ಚಂದ್ರನು 11 ರಲ್ಲಿ ಅಂದರೆ ಲಾಭದಲ್ಲಿ ರೋಹಿಣಿ ನಕ್ಷತ್ರದಲ್ಲಿ ಸ್ಥಿತನಾಗಿದ್ದು, ಚುನಾವಣೆಗಳನ್ನು ಈ ಕೆಳಕಂಡಂತೆ 7 ಹಂತಗಳಲ್ಲಿ ನಡೆಸಲಾಗಿದೆ ಹಾಗೂ ಅದರ ವಿವರಗಳು ಈ ಕೆಳಕಂಡಂತಿವೆ.

ಚುನಾವಣೆ ಪೋಷಿಸಿದ ಸಂವತ್ಸರ ಶ್ರೀ ಶೋಭಕೃತ್ ನಾಮ ಸಂವತ್ಸರ, ಆ ವರ್ಷದ ರಾಜ ಬುಧ. ಆದರೆ ಚುನಾವಣೆಗಳು ನಡೆದದ್ದು ಶ್ರೀ ಕ್ರೋಧಿನಾಮ ಸಂವತ್ಸರ ಹಾಗೂ ಈ ಸಂವತ್ಸರದ ಅಧಿಪತಿ ಕುಜ. ನೂತನ ಸಂವತ್ಸರದ ಯುಗಾದಿಯು ದಿನಾಂಕ: 19.04.2025ನೇ ಮಂಗಳವಾರ, ರೇವತಿ ನಕ್ಷತ್ರದೊಂದಿಗೆ ಪ್ರಾರಂಭಗೊಂಡಿರುತ್ತದೆ. ಈ ದಿನದ ಕುಂಡಲಿಯೇ ಈ ಸಂವತ್ಸರದ ಪ್ರಧಾನ ಪಾತ್ರವಹಿಸುತ್ತದೆ.

ನೂತನ ಸಂವತ್ಸರದಲ್ಲಿ ಸಂಭವಿಸುವ ನಾಲ್ಕು ಗ್ರಹಣಗಳು ಅಂದರೆ 2 ಸೂರ್ಯ ಗ್ರಹಣಗಳು ಮತ್ತು 2 ಚಂದ್ರ ಗ್ರಹಣಗಳು ಭಾರತಕ್ಕೆ ಕಾಣುವುದಿಲ್ಲವಾದ್ದರಿಂದ ಭಾರತದಲ್ಲಿ ನಡೆದ ಚುನಾವಣೆಗಳಲ್ಲಿ ಹೆಚ್ಚಿನ ಕೆಟ್ಟ ಪರಿಣಾಮಗಳನ್ನು ಬೀರಲು ಸಾಧ್ಯವಾಗಿಲ್ಲ. ಶಾಂತಿಯುತ ಚುನಾವಣೆ ನಡೆದಿರುತ್ತದೆ.

ಚಂದ್ರನ ನಡೆಗೆಯಿಂದ ಮತದಾರರ ಮನಸ್ಸನ್ನು ಅಳಿಯುವ ಸಾಧ್ಯತೆಗಳು ಅಂದರೆ ದಿನಾಂಕ: 19.04.2024 ರಿಂದ ಪ್ರಾರಂಭಗೊಂಡ ಚುನಾವಣೆ ಪ್ರಕ್ರಿಯೆಗಳು ದಿನಾಂಕ: 01.06.2024ನೇ ಶನಿವಾರ ಕೊನೆಗೊಳ್ಳುವ ತನಕ ಚಂದ್ರನು ಸುಮಾರು 42 ದಿನಗಳ ಕಾಲ ಪ್ರಯಾಣಿಸಿ 2 ಪೂರ್ಣಿಮಾ ಹಾಗೂ 1 ಅಮಾವಾಸ್ಯೆಯನ್ನು ಸಂದಿಸಿ ಚುನಾವಣೆ ಫಲಿತಾಂಶವನ್ನು ಪೋಷಿಸುವ ದಿನಾಂಕ: 04.06.2024 ರಲ್ಲಿ ಪ್ರಯಾಣ ಬೆಳೆಸಿ ದಿನಾಂಕ: 06.06.2024 ರಂದು ಸಂಭವಿಸುವ ಅಮಾವಾಸ್ಯೆಯ ದಿನದಂದು ವೃಷಭ ರಾಶಿಯಲ್ಲಿ ಪಂಚ-ಗ್ರಹಗಳ ಕೂಟದಲ್ಲಿ ಮುಳುಗಿ ಮುಂದೆ ಸಾಗುತ್ತಾನೆ.

ಈ ಎಲ್ಲಾ ಮೇಲಿನ ಅಂಶಗಳನ್ನೊಳಗೊಂಡು ಭಾರತ ದೇಶದಲ್ಲಿ ನಡೆದ ಚುನಾವಣೆಗಳನ್ನು ಗ್ರಹಗತಿಗಳ ಆಧಾರದ ಮೇಲೆ ರಾಷ್ಟಿçಯ ಪಕ್ಷಗಳ ಕುಂಡಲಿಗಳನ್ನು ಪರಿಶೀಲಿಸಿ ಚುನಾವಣೆಯಲ್ಲಿ ಪಕ್ಷಗಳು ಗಳಿಸುವ ಅಂಕಿ-ಅಂಶಗಳು ಸೂಚಕಗಳನ್ನು ನೀಡಲಾಗಿದೆ.

ಸ್ವತಂತ್ರ ಭಾರತದ ಕುಂಡಲಿಯನ್ನು ಪರಿಶೀಲಿಸುವಾಗ, ಪುಷ್ಯ ನಕ್ಷತ್ರದ ಕಟಕ ರಾಶಿಯಲ್ಲಿ ಸ್ವಾತಂತ್ರ ಪಡೆದಿರುತ್ತೇವೆ (15.08.1947) ಪ್ರಸ್ತುತ ದೇಶಕ್ಕೆ ಅಷ್ಠಮ ಶನಿಯು ನಡೆಯುತ್ತಿದ್ದು ಚಂದ್ರದಶಾ 14.08.2015-13.08.2025, ಚಂದ್ರದಶಾ-ಶನಿ-ಭುಕ್ತಿಯು 13.06.2023 ರಿಂದ 12.02.2025.

ಸಭೆ ಸೇರಿದ್ದ ಸ್ಥಳದಲ್ಲೇ ವಾಸ್ತುದೋಷ:

ಪಕ್ಷಗಳ ಕುಂಡಲಿಯಾನುಸಾರ ಇಂಡೀ ಒಕ್ಕೂಟದ ರಚನಾತ್ಮಕ ಕಾರ್ಯವು ದಿನಾಂಕ: 17.07.2023 ರಂದು ಬೆಂಗಳೂರಿನ ವೆಸ್ಟ್-ಎಂಡ್ ಹೋಟೆಲ್‌ನಲ್ಲಿ 26 ಪಕ್ಷಗಳು ಒಟ್ಟುಗೂಡಿ ಕೇಂದ್ರದಲ್ಲಿರುವ ಬಿ.ಜೆ.ಪಿ ಸರ್ಕಾರವನ್ನು ಮಣಿಸಲು ಬೆಂಗಳೂರಿನ ವೆಸ್ಟ್-ಎಂಡ್ ಹೋಟೆಲ್‌ನಲ್ಲಿ ಉದಯವಾಯಿತು. ಆ ದಿನ ಸೋಮವಾರ, ಪುನರ್ವಸು ನಕ್ಷತ್ರ ಕಟಕರಾಶಿಯಾಗಿ, ಅಮಾವಾಸ್ಯೆ ದಿನವಾಗಿತ್ತು. ವೆಸ್ಟ್-ಎಂಡ್ ಹೋಟೆಲ್ ವಾಸ್ತುಶಾಸ್ತ್ರ ದೋಷಗೊಂಡಿರುವ ಸ್ಥಳ, ಈ ಹೋಟೆಲ್‌ನಲ್ಲಿ ಹಿಂದಿನ ಮುಖ್ಯ ಮಂತ್ರಿಗಳು ಆಡಳಿತ ನಡೆಸಿ ಅಧಿಕಾರ ಕಳೆದುಕೊಂಡು ಇಂದಿಗೂ ಈ ಹೋಟೆಲ್‌ನ ಹೆಸರು ರಾಜಕೀಯದಲ್ಲಿ ಆಗಿಂದಾಗ್ಗೆ ಪ್ರಸ್ತಾಪದಲ್ಲಿರುತ್ತದೆ.

ಇಂಡೀ ಒಕ್ಕೂಟವು ಆಶಾಢ ಅಮಾವಾಸ್ಯೆ ದಿನದಂದು ಸ್ಥಾಪನೆಗೊಂಡು ಈವರೆಗೆ ಅನೇಕ ಏಳು-ಬೀಳುಗಳನ್ನು ಕಂಡಿರುತ್ತದೆ. ಒಗ್ಗಟ್ಟಿನ ಬಲ ಪ್ರದರ್ಶನದಲ್ಲಿ ಪಕ್ಷಗಳು ವಿಫಲವಾಗಿದೆ. ಪಕ್ಷಗಳ ನಾಯಕರುಗಳಲ್ಲಿ ಭಿನ್ನಾಭಿಪ್ರಾಯದ ಬಿರುಕು ಕಂಡು ಮತದಾರರ ಮನದಾಳದಲ್ಲಿ ನಕಾರಾತ್ಮಕ ತರಂಗಗಳು ಪ್ರಸರಿಸುವಂತಾಗಿ ಮತದಾನದಲ್ಲಿ ಇದು ಪ್ರಮುಖ ಪಾತ್ರ ವಹಿಸಿತು. ಮತ್ತೊಂದು ಮಹತ್ವವಾದ ವಿಷಯ ಇಂಡೀ ಒಕ್ಕೂಟವನ್ನು ನಾಯಕನಾರು? ಎಂಬ ಪ್ರಶ್ನೆಯು ಸಹಾ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿತು. ಇದಕ್ಕೆ ಕಾರಣ ಮನೋಕಾರಕನಾದ ಚಂದ್ರನು ಅಮಾವಾಸ್ಯೆಯಲ್ಲಿ ವಾಸವಾಗಿದ್ದು (ಒಕ್ಕೂಟದ ಪ್ರಾರಂಭದ ದಿನ).

ಪರಿಸ್ಥಿತಿ ಬಿಜೆಪಿಗೆ ಅನುಕೂಕರವೇ?:

ಭಾರತೀಯ ಜನತಾ ಪಕ್ಷವು ದಿನಾಂಕ: 06.04.1950 ಬೆಳಿಗ್ಗೆ 11-40ಕ್ಕೆ ಚೈತ್ರ ಮಾಸದ ಕೃಷ್ಣ ಪಕ್ಷದ ಚತುರ್ತಿ ತಿಥಿಯ ಅನುರಾಧ ನಕ್ಷತ್ರದಂದು ಗುರುವಾರ ಪ್ರಾರಂಭವಾಯಿತು. (ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರ ಜನ್ಮ ನಕ್ಷತ್ರವೂ ಕೂಡಾ ಅನುರಾಧ ನಕ್ಷತ್ರ ವೃಶ್ಚಿಕ ರಾಶಿ)

ಪ್ರಸ್ತುತ ಗೋಚಾರದಲ್ಲಿ ಈ ಪಕ್ಷಕ್ಕೆ ಗುರುಬಲವಿದ್ದು ವೃಶ್ಚಿಕ ರಾಶಿಗೆ ಗುರು-ಬುಧ-ಶುಕ್ರ-ರವಿ ದೃಷ್ಟಿಯಿಂದ ಅತಿವೇಗದ ಚಲನೆಯಿದ್ದರೂ, ಶನಿ ದೃಷ್ಠಿಯಿಂದ ಈ ಅತೀ ವೇಗವನ್ನು ತಡೆದು ಮಧ್ಯಮ ವೇಗ ಅಂದರೆ, ಮಂದ ವೇಗವಾಗಿ ಮುನ್ನಡೆಯಲಿದೆ. ಪ್ರಸ್ತುತ ಕುಜದಶಾ ಶುಕ್ರ ಭುಕ್ತಿ ನಡೆಯುತ್ತಿದ್ದು, ಕುಜನು ಈ ಸಂವತ್ಸರದ ರಾಜನಾದುದರಿಂದ ಅನೇಕ ಅಡೆ-ತಡೆಗಳಿಂದ ಪಕ್ಷವು ಮುನ್ನುಗ್ಗುವ ಸಾಧ್ಯತೆಯು ಕಂಡು ಬರುತ್ತದೆ.

ಶ್ರೀ ನರೇಂದ್ರ ಮೋದಿಯವರ ಜನ್ಮ ಜಾತಕ ಹೇಗಿದೆ?

ಶ್ರೀ ನರೇಂದ್ರ ಮೋದಿಯವರು 17-09-1950 ಬೆಳಿಗ್ಗೆ 9-53 ಗುಜರಾತಿನ ವದಾನಗರದಲ್ಲಿ ಜನಿಸಿರುತ್ತಾರೆ. ಅಂದು ಭಾದ್ರಪದ ಮಾಸ ಶುಕ್ಲಪಕ್ಷ ಷಷ್ಠಿ ತಿಥಿ ಇದ್ದು, ಭಾನುವಾರ ಅನುರಾಧಾ ನಕ್ಷತ್ರದ ವೃಶ್ಚಿಕ ರಾಶಿಯಲ್ಲಿ ಜನನ. ಪ್ರಸ್ತುತ ಗೋಚಾರದಲ್ಲಿ ವೃಶ್ಚಿಕ ರಾಶಿಯವರಿಗೆ ಗುರುಬಲವಿದ್ದು, ನಾಲ್ಕು ಗ್ರಹಗಳು ವೃಶಭ ರಾಶಿಯಲ್ಲಿ ಸಂಯೋಗವಿದ್ದು ವೃಶ್ಚಿಕ ರಾಶಿಯಲ್ಲಿದ್ದ ದೃಷ್ಟಿ ಹಾಗೂ ಕುಂಭ ರಾಶಿಯಿಂದ ಶನಿಭಗವಾನರ ದೃಷ್ಟಿ ಸಹಾ ವೃಶ್ಚಿಕ ರಾಶಿಯಲ್ಲಿ ಇದ್ದು, ಇವರಿಗೆ ಪ್ರಸ್ತುತ ಕುಜ ದಶಾ ಗುರು ಭುಕ್ತಿ ಸಹಾ ಲಭ್ಯವಿರುತ್ತದೆ. ಜನ್ಮ ಕುಂಡಲಿಯಲ್ಲಿ ಶಶಿ ಮಂಗಳ ಯೋಗ ಹಾಗೂ ಬುಧ ಆದಿತ್ಯ ಯೋಗವಿದ್ದು, ರಾಜಯೋಗ ನಡೆಯುತ್ತಿದ್ದು, ಈ ರಾಜಯೋಗ ನೀಡುವ ಗ್ರಹಗಳು ಪ್ರಸ್ತುತ ಗೋಚಾರದಲ್ಲಿ ಶ್ರೀ ಮೋದಿಯವರ ರಾಶಿಯಾದ ವೃಶ್ಚಿಕವನ್ನು ವೀಕ್ಷಿಸುತ್ತಿರುವುದರಿಂದ ಈ ರಾಶಿಯವರಿಗೆ ರಾಜಬಲವಿರುತ್ತದೆ.

ಶ್ರೀ ನರೇಂದ್ರ ಮೋದಿಯವರು ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ದಿನಾಂಕ 14ನೇ ಮೇ 2024 ಮಂಗಳವಾರ ಪುಷ್ಯಾ ನಕ್ಷತ್ರ ಕಟಕ ರಾಶಿ ಅಭಿಜಿತ್ ಲಗ್ನದಲ್ಲಿ ಅಂದರೆ ನಮ್ಮ ಭಾರತ ದೇಶಕ್ಕೆ ಸ್ವತಂತ್ರ ಬಂದ ನಕ್ಷತ್ರದಲ್ಲಿ ನಾಮಪತ್ರ ಸಲ್ಲಿಕೆ. ನಾಡೀ ಗ್ರಂಥಗಳ ಅನುಸಾರ ಯಾವ ರಾಜನು ಪುಷ್ಯಾ ನಕ್ಷತ್ರದ ದಿನ ಶಿವನ ಆರಾಧನೆಯನ್ನು ಮಾಡಿ ತನ್ನ ರಾಜ್ಯಕ್ಕಾಗಿ ಹಾಗೂ ದೇಶದ ಜನತೆಗಾಗಿ ಅಭಿವೃದ್ಧಿಯನ್ನು ಬಯಸಿ ಸಂಕಲ್ಪ ಮಾಡುತ್ತಾನೋ ಆ ರಾಜನು ತನ್ನ ರಾಜ್ಯವನ್ನು ಸುಭಿಕ್ಷೆಯಾಗಿ ಆಳುತ್ತಾನೆ ಎಂಬ ಉಲ್ಲೇಖ ದೊರೆಯುತ್ತದೆ. ಮೋದಿಯವರು ಈ ಮುಹೂರ್ತದಲ್ಲಿ ತಮ್ಮ ನಾಮಪತ್ರ ಸಲ್ಲಿಸಿರುವುದರಿಂದ ಅವರ ಸಂಕಲ್ಪ ಈಡೇರುವ ಸಾಧ್ಯತೆಗಳಿವೆ. ಈ ಎಲ್ಲಾ ಮೇಲಿನ ವಿಶ್ಲೇಷಗಳನುಸಾರ ಎನ್.ಡಿ.ಎ ಒಕ್ಕೂಟವು ಸುಮಾರು 330 ಲೋಕಸಭಾ ಸ್ಥಾನಗಳನ್ನು ಪಡೆದು ಮುಂದಿನ ಸರ್ಕಾರವನ್ನು ರಚನೆ ಮಾಡುವ ಸಾಧ್ಯತೆಗಳಿವೆ.

Exit mobile version