Site icon Vistara News

Election Results 2024: ಚಂದ್ರಬಾಬು ನಾಯ್ಡುಗೆ ಕರೆ ಮಾಡಿದ ಮೋದಿ, ಅಮಿತ್‌ ಶಾ‌; ಕೈ ಮುಖಂಡರಿಂದಲೂ‌ ಕಾಲ್; ನಾಯ್ಡು ಮನಸ್ಸು ಯಾರ ಕಡೆ?

election results 2024 naidu

ಹೊಸದಿಲ್ಲಿ: ಆಂಧ್ರಪ್ರದೇಶ ವಿಧಾನಸಭೆ (Andhrapradesh Assembly) ಚುನಾವಣೆಯಲ್ಲಿ ಜಯಭೇರಿ (Election Results 2024) ಬಾರಿಸಿರುವ ತೆಲುಗುದೇಶಂ ಪಾರ್ಟಿಯ (Telugu Desham Party- TDP) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು (N Chandrababu Naidu) ಅವರಿಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಾಗೂ ಗೃಹ ಸಚಿವ ಅಮಿತ್‌ ಶಾ (Amit Shah) ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ.

ಇದೇ ವೇಳೆಗೆ, ಕೇಂದ್ರದಲ್ಲಿ ಎನ್‌ಡಿಎ (NDA) ರಚಿಸಲಿರುವ ಸರ್ಕಾರಕ್ಕೆ ಬೆಂಬಲ ನೀಡುವಂತೆಯೂ ಕೋರಿದ್ದಾರೆ ಎನ್ನಲಾಗಿದೆ. ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಮರಳುವ ಹಂತದಲ್ಲಿರುವ ಬಿಜೆಪಿ ಮುಖಂಡರಿಗೂ ಚಂದ್ರಬಾಬು ನಾಯ್ಡು ಶುಭಾಶಯ ಹೇಳಿದ್ದಾರೆ. ಅತ್ತ ಕಾಂಗ್ರೆಸ್‌ ಮುಖಂಡರೂ ನಾಯ್ಡು ಅವರನ್ನು ಸಮೀಪಿಸಿದ್ದಾರೆ.

ಚಂದ್ರಬಾಬು ನಾಯ್ಡು ಅವರು ನಾಲ್ಕನೇ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ. ರಾಜ್ಯದ 175 ವಿಧಾನಸಭಾ ಸ್ಥಾನಗಳ ಪೈಕಿ ಟಿಡಿಪಿ 130ರಲ್ಲಿ ಮುನ್ನಡೆ ಸಾಧಿಸಿದೆ. ಜಗನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಕೇವಲ 15 ಸ್ಥಾನಗಳೊಂದಿಗೆ ಸೋಲೊಪ್ಪಿಕೊಂಡಿದೆ. ನಾಯ್ಡು ಮತ್ತೆ ಮುಖ್ಯಮಂತ್ರಿಯಾಗಿ ಜೂನ್‌ 9ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯದ 25 ಲೋಕಸಭೆ ಸ್ಥಾನಗಳಲ್ಲಿ, 16 ಸೀಟುಗಳಲ್ಲಿ ತೆಲುಗುದೇಶಂ ಪಕ್ಷ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ ಅದರ ಮಿತ್ರ ಪಕ್ಷ ಜನಸೇನೆ 2 ಹಾಗೂ ಬಿಜೆಪಿ 3 ಸ್ಥಾನಗಳಲ್ಲಿ ಮುಂದಿವೆ.

ಚಂದ್ರಬಾಬು ನಾಯ್ಡು ಅವರು 2014 ಮತ್ತು 2019ರ ನಡುವೆ ಎನ್‌ಡಿಎ ಸರ್ಕಾರದ ಭಾಗವಾಗಿದ್ದರು. 2019ರ ಲೋಕಸಭೆ ಚುನಾವಣೆಗೆ ಮೊದಲು ಎನ್‌ಡಿಎ ತೊರೆದರು. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ ಸೇರಿದರು. ರಾಷ್ಟ್ರೀಯ ಚುನಾವಣೆಗಳು ಘೋಷಣೆಯಾಗುವ ಕೆಲವೇ ದಿನಗಳ ಮೊದಲು, ಮಾರ್ಚ್ 2024ರಲ್ಲಿ ಮತ್ತೆ NDAಯ ಭಾಗವಾದರು. ಕಳೆದ ವರ್ಷ ನಾಯ್ಡು ಅವರನ್ನು ಜೈಲಿಗೆ ಕಳಿಸಲಾಗಿತ್ತು. ಅವರ ಬಂಧನ ನಾಯ್ಡು ಪರ ಸಹಾನುಭೂತಿ ಸೃಷ್ಟಿಸಿದೆ. YSRCP ಶಾಸಕರ ವಿರುದ್ಧ ದುರಾಡಳಿತ, ಭ್ರಷ್ಟಾಚಾರದ ಆರೋಪವೂ ಟಿಡಿಪಿ ಪರವಾಗಿ ಕೆಲಸ ಮಾಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರೊಂದಿಗೆ ಮುಂದಿನ ಸರಕಾರ ರಚನೆಯ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಟಿಡಿಪಿಯು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಜೊತೆ ಮೈತ್ರಿ ಮಾಡಿಕೊಂಡಿದೆ. 543 ಲೋಕಸಭಾ ಸ್ಥಾನಗಳ ಪೈಕಿ 238ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಪ್ರತಿಪಕ್ಷ ಬೆಂಬಲಿತ ಭಾರತ ಮೈತ್ರಿಕೂಟ 225 ಸ್ಥಾನಗಳಲ್ಲಿ ಮುಂದಿದೆ. ಹೀಗಾಗಿ, ಬಹುಮತದ 272ರ ಸ್ಥಾನವನ್ನು ಎಟುಕಿಸಿಕೊಳ್ಳಲು ಬಿಜೆಪಿಗೆ ಸಂಸತ್‌ನಲ್ಲಿ ಟಿಡಿಪಿಯ ಬೆಂಬಲ ಅಗತ್ಯವಾಗಿದೆ.

ಈ ನಡುವೆ, ಕಾಂಗ್ರೆಸ್‌ ಮೂಲಗಳು ಕೂಡ ಟಿಡಿಪಿ ನಾಯಕರನ್ನು ಸಂಪರ್ಕಿಸಿವೆ. ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಖುದ್ದಾಗಿ ನಾಯ್ಡು ಅವರಿಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ ಎನ್ನಲಾಗಿದೆ. ನಾಯ್ಡು ಅವರ ಜೊತೆ ಮೈತ್ರಿ ಮಾಡಿಕೊಂಡು ಕೇಂದ್ರ ಸರ್ಕಾರ ರಚಿಸುವ ಪ್ರಯತ್ನವನ್ನು ಮಾಡಲು ಇಂಡಿಯಾ ಒಕ್ಕೂಟ ಮುಂದಾಗಿದೆ. ಆದರೆ, ತಾವು ಎನ್‌ಡಿಎಯಲ್ಲಿಯೇ ಇರುವುದಾಗಿ ಟಿಡಿಪಿ ಮೂಲಗಳು ಹೇಳಿವೆ.

ಚಂದ್ರಬಾಬು, ನಿತೀಶ್‌ ಕಿಂಗ್‌ ಮೇಕರ್‌ಗಳು

2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು (Election Results 2024) ಪ್ರಕಟವಾಗುತ್ತಿದ್ದು, ಬಿಜೆಪಿ (BJP) ಸ್ವತಂತ್ರವಾಗಿ ಕೇಂದ್ರದಲ್ಲಿ ಸರ್ಕಾರ ರಚಿಸುವ ಕನಸು ಮಂಕಾಗಿದೆ. ಈಗ ಬಿಜೆಪಿ ತನ್ನ ಮಿತ್ರಪಕ್ಷಗಳನ್ನೇ ನೆಚ್ಚಿಕೊಳ್ಳಬೇಕಿದ್ದು, ಎನ್‌ಡಿಎ (NDA) ಮಿತ್ರಪಕ್ಷಗಳು ಕೂಡ ಆಟವಾಡುವ ಸಾಧ್ಯತೆ ಕಾಣಿಸಿದೆ. ಮುಖ್ಯವಾಗಿ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ತೆಲುಗುದೇಶಂ ಪಾರ್ಟಿ (TDP) ಹಾಗೂ ಬಿಹಾರದ ನಿತೀಶ ಕುಮಾರ್‌ (Nitish Kumar) ಕಿಂಗ್‌ ಮೇಕರ್‌ಗಳಾಗಲಿದ್ದಾರೆ. ಫಲಿತಾಂಶ ಗಮನಿಸಿ ಇಂಡಿಯಾ ಮೈತ್ರಿಕೂಟ (INDIA Bloc) ಕೂಡ ಚುರುಕಾಗಿದ್ದು, ಇವರಿಬ್ಬರನ್ನು ಸೆಳೆದು ಸರ್ಕಾರ ರಚಿಸಲು ಪ್ಲಾನ್‌ ರೂಪಿಸುತ್ತಿದೆ.

ಸದ್ಯ 527 ಸ್ಥಾನಗಳ ಟ್ರೆಂಡ್‌ ಗೊತ್ತಾಗಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 283 ಸ್ಥಾನಗಳಲ್ಲಿ ಮುಂದಿದ್ದರೆ, ಇಂಡಿಯಾ ಒಕ್ಕೂಟ 221 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 23 ಸ್ಥಾನಗಳಲ್ಲಿ ಮುಂದಿದ್ದಾರೆ. ಟ್ರೆಂಡ್‌ಗಳ ಆಧಾರದ ಮೇಲೆ ಎನ್‌ಡಿಎ 300 ಸೀಟುಗಳಿಗಿಂತ ಕೆಳಗಿಳಿಯಬಹುದು. ಬಿಜೆಪಿ ಒಂದು ಕ್ಷೇತ್ರದಲ್ಲಿ ಈಗಾಗಲೇ ಗೆಲುವು ಸಾಧಿಸಿದ್ದು, 238 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಆದರೆ 543 ಸದಸ್ಯರ ಲೋಕಸಭೆಯಲ್ಲಿ ಬಹುಮತ ಗಳಿಸಲು 272 ಸೀಟು ಬೇಕು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 303 ಸ್ಥಾನಗಳನ್ನು ಗೆದ್ದಿದ್ದರೆ, ಎನ್‌ಡಿಎ 353 ಸ್ಥಾನಗಳನ್ನು ಪಡೆದಿತ್ತು.

ಈ ಪರಿಸ್ಥಿತಿಯಲ್ಲಿ ಜನತಾ ದಳ ಯುನೈಟೆಡ್ (ಜೆಡಿಯು) ಮುಖ್ಯಸ್ಥ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಪ್ರಮುಖರಾಗುತ್ತಾರೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಈ ಇಬ್ಬರು ನಾಯಕರ ಕೃಪೆಯಿಂದ ನಡೆಯಬೇಕಿದ್ದು, ನಿತೀಶ್‌ ಮತ್ತು ನಾಯ್ಡು ಕಿಂಗ್‌ಮೇಕರ್‌ ಆಗಲಿದ್ದಾರೆ. ಏಕೆಂದರೆ ಅವರಿಬ್ಬರೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಯಾವಾಗ ಬೇಕಾದರೂ ಮೈತ್ರಿ ಬದಲಾಯಿಸುವ ಇತಿಹಾಸವನ್ನು ಹೊಂದಿದ್ದಾರೆ.

ಬಿಹಾರದ 40 ಸ್ಥಾನಗಳ ಪೈಕಿ ಜೆಡಿಯು 15ರಲ್ಲಿ ಮುನ್ನಡೆ ಸಾಧಿಸಿದ್ದರೆ, ಆಂಧ್ರಪ್ರದೇಶದ 25 ಲೋಕಸಭಾ ಸ್ಥಾನಗಳಲ್ಲಿ 16ರಲ್ಲಿ ಟಿಡಿಪಿ ಮುನ್ನಡೆ ಸಾಧಿಸಿದೆ. ಎರಡೂ ಪಕ್ಷಗಳು ಪ್ರಸ್ತುತ NDAಯಲ್ಲಿವೆ. ಆದರೆ ಇವರಿಬ್ಬರೂ ಹಿಂದೆ ಮಾಡಿದಂತೆ ಮೈತ್ರಿ ಬದಲಾಯಿಸಿದರೆ ಸನ್ನಿವೇಶ ಉಲ್ಟಾ ಹೊಡೆಯುತ್ತದೆ.

ಇಂಡಿಯಾ ಮೈತ್ರಿಕೂಟದ ಮುಖಂಡರು ಈಗಾಗಲೇ ಈ ಇಬ್ಬರೂ ನಾಯಕರನ್ನು ಸಂಪರ್ಕಿಸುವ ಕಾರ್ಯವನ್ನು ಶುರು ಮಾಡಿದ್ದಾರೆ. ಇಂಡಿ ನಾಯಕರೊಂದಿಗೂ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿರುವ ಈ ಇಬ್ಬರೂ ನಾಯಕರು, ಅಧಿಕಾರ ಹಂಚಿಕೆಯ ವಿಚಾರದಲ್ಲಿ ಉತ್ತಮ ಆಫರ್‌ ಬಂದರೆ ಅತ್ತ ಕಡೆ ಜಿಗಿಯುವ ಸಾಧ್ಯತೆ ಸ್ಪಷ್ಟವಾಗಿದೆ.

ಇದನ್ನೂ ಓದಿ: Election Results 2024: ಪ್ರಿಯಾಂಕಾ ಜಾರಕಿಹೊಳಿ ಗೆಲುವು; ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದ ಕಿಡಿಗೇಡಿ!

Exit mobile version