Site icon Vistara News

Kar TET 2024: ಜೂನ್‌ನಲ್ಲಿ ಟಿಇಟಿ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದ ಶಿಕ್ಷಣ ಇಲಾಖೆ

exam writing

exam writing

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ’(ಟಿಇಟಿ) (Kar TET 2024)ಯನ್ನು ಈ ಬಾರಿ ಜೂನ್‌ 30 ರಂದು ನಡೆಸಲು ತೀರ್ಮಾನಿಸಿದೆ. ಇದಕ್ಕಾಗಿ ಇಲಾಖೆಯು ಪರೀಕ್ಷಾ ಕೇಂದ್ರಗಳನ್ನು ಗುರುತಿಸುವ ಕೆಲಸ ಆರಂಭಿಸಿದ್ದು, ಸದ್ಯವೇ ಪ್ರಕಟಣೆ ಹೊರಡಿಸಲಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಕಳೆದ ವರ್ಷಕ್ಕಿಂತ ಹೆಚ್ಚು ಅಭ್ಯರ್ಥಿಗಳು ಈ ಪರೀಕ್ಷೆ ಬರೆಯುವ ನಿರೀಕ್ಷೆ ಇರುವುದರಿಂದ ಶೇ. 5ರಷ್ಟು ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲು ಶಿಕ್ಷಣ ಇಲಾಖೆಯು ತೀರ್ಮಾನಿಸಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಯು ಕಡ್ಡಾಯವಾಗಿ ಇರುವಂತೆ ಇಲಾಖೆಯು ಮುನ್ನೆಚ್ಚರಿಕೆಯನ್ನು ವಹಿಸುತ್ತಿದೆ.

ಈ ವರ್ಷವೂ ಮತ್ತೆ ಶಿಕ್ಷಕರ ನೇಮಕಾತಿ ನಡೆಯಲಿರುವುದರಿಂದ ಆದಷ್ಟು ಬೇಗ ಈ ಅರ್ಹತಾ ಪರೀಕ್ಷೆಯನ್ನು ಪೂರ್ಣಗೊಳಿಸಲು ಶಿಕ್ಷಣ ಇಲಾಖೆಯು ತೀರ್ಮಾನಿಸಿದೆ. ಕಳೆದ ವರ್ಷ ಈ ಪರೀಕ್ಷೆಗೆ ಜುಲೈನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು, ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ ಜೂನ್‌ನಲ್ಲಿಯೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದ್ದು, ಏಪ್ರಿಲ್‌ನಲ್ಲಿಯೇ ಅರ್ಜಿ ಆಹ್ವಾನಿಸುವ ನಿರೀಕ್ಷೆ ಇದೆ.

ರಾಜ್ಯ ಸರ್ಕಾರ ನಡೆಸುವ ಶಿಕ್ಷಕರ ನೇಮಕಾತಿಯಲ್ಲಿ ಭಾಗವಹಿಸಲು ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ಈ ಅರ್ಹತಾ ಪರೀಕ್ಷೆ ಬರೆಯಬಹುದಾಗಿದೆ. ಹೆಚ್ಚಿನ ಅಂಕ ಪಡೆಯಲು ಬಯಸುವವರು ಮರು ಪರೀಕ್ಷೆಯನ್ನು ಸಹ ತೆಗೆದುಕೊಳ್ಳಬಹುದು. ಈ ಪರೀಕ್ಷೆಯ ಅಂಕಗಳನ್ನು ಶಿಕ್ಷಕರ ನೇಮಕಾತಿಗೆ ಮಾನದಂಡವನ್ನಾಗಿ ಪರಿಗಣಿಸಲಾಗುತ್ತದೆ.

ಅರ್ಹತೆಗಳೇನು?

1 ರಿಂದ 5ನೇ ತರಗತಿಗಳಿಗೆ ಶಿಕ್ಷಕರಾಗಲು ಸೀನಿಯರ್ ಸೆಕೆಂಡರಿ/ಪಿಯುಸಿ/ತತ್ಸಮಾನ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ.50 (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ.45) ಅಂಕಗಳನ್ನು ಪಡೆದಿರಬೇಕು ಮತ್ತು ಶಿಕ್ಷಣದಲ್ಲಿ (D.El.Ed) ಎರಡು ವರ್ಷಗಳ ಡಿಪ್ಲೊಮಾ ಪಡೆದಿರಬೇಕು ಅಥವಾ ವಿಶೇಷ ಶಿಕ್ಷಣದಲ್ಲಿ ಎರಡು ವರ್ಷದ ಡಿಪ್ಲೊಮಾ ಮಾಡಿರಬೇಕು. ಬಿಇಡಿ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು. ಇವರೆಲ್ಲರೂ ಟಿಇಟಿ ಪರೀಕ್ಷೆಯಲ್ಲಿ ಪತ್ರಿಕೆ-1 ಅನ್ನು ಬರೆಯಲು ಅರ್ಹರಾಗಿರುತ್ತಾರೆ.

6 ರಿಂದ 8ನೇ ತರಗತಿಗೆ ಶಿಕ್ಷಕರಾಗಲು ಪದವಿಯಲ್ಲಿ ಕನಿಷ್ಠ ಶೇ. 50 (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ.45) ಅಂಕಗಳನ್ನು ಪಡೆದಿರಬೇಕು ಮತ್ತು ಎರಡು ವರ್ಷಗಳ D.El.Ed ಕೋರ್ಸಿನ ತೇರ್ಗಡೆಯಾಗಿರಬೇಕು ಅಥವಾ ಬಿ.ಇಡಿಯಲ್ಲಿ ಅಥವಾ ನಾಲ್ಕು ವರ್ಷಗಳ B.El.Ed ಯಲ್ಲಿ ಅಥವಾ ಅಥವಾ ನಾಲ್ಕು ವರ್ಷಗಳ ಎಲಿಮೆಂಟರಿ ಶಿಕ್ಷಣದ ಪದವಿಯನ್ನು ಪಡೆದಿರಬೇಕು. ಬಿಎ/ಬಿಎಸ್ಸಿ ಪದವಿ ಮತ್ತು ಶಿಕ್ಷಣದಲ್ಲಿ ಎರಡು ವರ್ಷಗಳ ಡಿಪ್ಲೊಮಾ ಪಡೆದವರು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

1 ರಿಂದ 8ನೇ ತರಗತಿಗಳಿಗೆ ಶಿಕ್ಷಕರಾಗಲು ಸೀನಿಯರ್ ಸೆಕೆಂಡರಿ/ಪಿಯುಸಿ/ತತ್ಸಮಾನ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇ.50(ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಶೇ.45) ಅಂಕಗಳನ್ನು ಗಳಿಸಿರಬೇಕು ಮತ್ತು ನಾಲ್ಕು ವರ್ಷಗಳ ಎಲಿಮೆಂಟರಿ ಶಿಕ್ಷಣ ಪದವಿಯನ್ನು ಹೊಂದಿರಬೇಕು. ಈ ಅಭ್ಯರ್ಥಿಗಳು ಟಿಇಟಿ ಪರೀಕ್ಷೆಯಲ್ಲಿ ಎರಡೂ ಪತ್ರಿಕೆಗಳನ್ನು ಬರೆಯಲು ಅರ್ಹರಾಗಿರುತ್ತಾರೆ.

ಅಂತಿಮ ವರ್ಷದಲ್ಲಿ /ಸೆಮಿಸ್ಟರ್‌ನಲ್ಲಿ ಓದುತ್ತಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದಾಗಿದೆ. ಈ ಪರೀಕ್ಷೆ ಬರೆಯಲು ವಯೋಮಿತಿ ಇರುವುದಿಲ್ಲ. ಎನ್‌ಸಿಟಿಇಯಿಂದ ಮಾನ್ಯತೆ ಪಡೆದಂತಹ ಡಿಪ್ಲೊಮಾ/ ಪದವಿ ಕೋರ್ಸುಗಳನ್ನು ಮಾತ್ರ ವಿದ್ಯಾರ್ಹತೆಯಲ್ಲಿ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Job Alert: ಗುಡ್‌ನ್ಯೂಸ್‌: 364 ಭೂಮಾಪಕರ ಹುದ್ದೆಗೆ ಮಾ. 11ರಿಂದ ಅರ್ಜಿ ಸಲ್ಲಿಕೆ ಆರಂಭ

ಜೀವಿತಾವಧಿಯ ಮಾನ್ಯತೆ

ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ನೀಡಲಾಗುವ ಪ್ರಮಾಣ ಪತ್ರವು ಜೀವಿತಾವಧಿಯವರೆಗೆ ಮಾನ್ಯತೆಯನ್ನು ಹೊಂದಿರುತ್ತದೆ. ಈ ಹಿಂದೆ ಏಳು ವರ್ಷಗಳ ಕಾಲ ಮಾನ್ಯತೆ ಇರಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಬದಲಾವಣೆ ಮಾಡಲಾಗಿದೆ. ಅರ್ಹತೆ ಪಡೆದವರು ಯಾವುದೇ ಸಂದರ್ಭದಲ್ಲಿ ನಡೆಯುವ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version