Site icon Vistara News

Kumar Bangarappa: ಶಿವರಾಜ್ ಕುಮಾರ್ ನಮ್ಮೂರಿನ ಜಾತ್ರೆಯಲ್ಲಿ ಕುಣಿಯಲು ಅರ್ಜಿ ಹಾಕಲಿ! ಗೀತಾ ಸೋತ ಹಿನ್ನೆಲೆಯಲ್ಲಿ ಕುಮಾರ್ ಬಂಗಾರಪ್ಪ ಗೇಲಿ

Kumar Bangarappa

ಶಿವಮೊಗ್ಗ: ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ (Karnataka election results 2024) ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಿ ಸೋತ ಸಹೋದರಿ ಗೀತಾ ಶಿವರಾಜ್‌ಕುಮಾರ್‌ಗೆ ಮಾಜಿ ಶಾಸಕ ಕುಮಾರ್ ಬಂಗಾರಪ್ಪ (Kumar Bangarappa) ಟಕ್ಕರ್ ಕೊಟ್ಟಿದ್ದಾರೆ. ಬಂಗಾರಪ್ಪ ಹಾಗೂ ರಾಜ್ ಕುಮಾರ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದೆ ಸೋಲಿಗೆ ಕಾರಣ. ನಟ ಶಿವರಾಜ್ ಕುಮಾರ್ ನಿರುದ್ಯೋಗಿ ಆಗಬೇಕಿಲ್ಲ, ನಮ್ಮ ಊರಿನ ಜಾತ್ರೆಯಲ್ಲಿ ಕುಣಿಯೋಕೆ ಅರ್ಜಿ ಹಾಕಲಿ ಎಂದು ಕುಮಾರ್ ಬಂಗಾರಪ್ಪ ಗೇಲಿ ಮಾಡಿದ್ದಾರೆ.

ಶಿವಮೊಗ್ಗ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರ ಪಡುವುದು ಬೇಕಿಲ್ಲ. ದೊಡ್ಮನೆ ವ್ಯವಹಾರ ಸಾಕಷ್ಟಿದೆ, ಅದು ಬೇರೆಯವರಿಗೆ ಅವಕಾಶ ಸಿಗಲ್ಲ. ಹೆದರಿಸುವ, ಬೆದರಿಸುವ, ಹುಷಾರ್ ಎನ್ನುವ ಮಾತುಗಳು ಏನಿದ್ದರೂ ತಮ್ಮ ಪಟಾಲಂ ಮುಂದೆ ಮಾತ್ರ ಇರಲಿ. ದಿಕ್ಕು ಗೆಟ್ಟು ದಿಕ್ಕಾ ಪಾಲಾಗಿ ಬೆಂಗಳೂರು ಸೇರಿದವರಿಗೆ ಇದು ಕೊನೆಯ ಎಚ್ಚರಿಕೆ. ನೀವು ಹಿಂತುಗಿರುಗಿ ಬರುವುದು ನಿಮ್ಮ ಕನಸಿನ ಮಾತು. ಹೋಗಿ ಬನ್ನಿ ಟಾಟಾ ಬೈ ಬೈ ಎಂದು ತಿರುಗೇಟು ನೀಡಿದ್ದಾರೆ.

ಬಂಗಾರಪ್ಪನವರನ್ನು ಪ್ರಚಾರ ಸಾಮಗ್ರಿಯಾಗಿ ಬಳಸಿಕೊಂಡವರಿಗೆ ತಕ್ಕ ಶಾಸ್ತಿ

ಬಂಗಾರಪ್ಪನವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ ಬಳಸಿಕೊಂಡವರಿಗೆ ತಕ್ಕ ಶಾಸ್ತಿಯಾಗಿದೆ ಎಂದು ಗೀತಾ ಶಿವರಾಜ್‌ಕುಮಾರ್‌, ಬಾವ ಶಿವರಾಜ್‌ ಕುಮಾರ್‌ ಹಾಗೂ ಸಹೋದರ ಮಧು ಬಂಗಾರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಶಾಸಕ ಕುಮಾರ್‌ ಬಂಗಾರಪ್ಪ, ಕರ್ನಾಟಕ ಕಂಡ ಧೀಮಂತ ರಾಜಕಾರಣಿ, ಬಡವರ ಬಂಧು ಎಂಬ ಸಾರ್ಥಕ ಬಿರುದಾವಳಿಯನ್ನು ತಮ್ಮ ಹೆಸರಿನೊಡನೆ ನಡೆಸಿಕೊಂಡು ಬದುಕಿದವರು ಸಾರೆಕೊಪ್ಪ ಬಂಗಾರಪ್ಪ. ಹಿಂದುಳಿದ ವರ್ಗಗಳಿಗೆ ಆಶಾಕಿರಣವಾಗಿದ್ದ, ರೈತಬಂದುವೂ, ಗೇಣಿದಾರರ ಜೀವಜಲವೆನಿಸಿದ್ದ ಹೋರಾಟಗಾರ, ನಾಡು ನುಡಿ ಸಂಸ್ಕೃತಿಗಳ ರಕ್ಷಾ ದೀಕ್ಷೆಯನ್ನು ತೊಟ್ಟಿದ್ದ ವೀರಯೋಧನೆನಿಸಿದ್ದ ಕರ್ನಾಟಕದ ಈ ಮಾಜಿ ಮುಖ್ಯಮಂತ್ರಿ, ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗರೆಲ್ಲರಲ್ಲಿಯೂ ಸಮ ಭಾವ, ಸಮಚಿತ್ತದಿಂದ ಬೆರೆತಿದ್ದವರು. ಇವರ ಆಡಳಿತ ವೈಖರಿಯು ಅನುಕರಣೀಯ ಮಾತ್ರವಲ್ಲದೆ ಆದರ್ಶರೂಪದ್ದಾಗಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ | Shivamogga Election Result 2024: ಶಿವಮೊಗ್ಗದಲ್ಲಿ ಬಿಜೆಪಿಯ ಬಿ.ವೈ.ರಾಘವೇಂದ್ರಗೆ ವಿಜಯಮಾಲೆ

ಇವರು ಜಾರಿಗೆ ತಂದಿದ್ದ ಪಂಚಮುಖಿ ಕಾರ್ಯಕ್ರಮಗಳಾದ ವಿಶ್ವ, ಸುಶ್ರತ, ಆರಾಧನ, ಆಶ್ರಯ, ಅಕ್ಷಯ ಮುಂತಾದವನ್ನು ಇಡೀ ರಾಜ್ಯ ನೆನೆಯುತ್ತಾ ಆರಾಧಿಸುತ್ತಿದೆ, ಬೇರೆ ರಾಜ್ಯಗಳೂ ಅನುಕರಿಸುತ್ತಿವೆ. ಇಂತಹ ಒಬ್ಬ ಧಿರೋದ್ಧಾತ ನಾಯಕನನ್ನು ನನ್ನ ತಮ್ಮ ಹಾಗೂ ತಂಗಿ ತಮ್ಮ ಸ್ವಾರ್ಥಸಾಧನೆಗಾಗಿ, ಕೇವಲ ಒಂದು ಲೋಕಸಭಾ ಕ್ಷೇತ್ರಕ್ಕೆ ಅಂದರೆ ಶಿವಮೊಗ್ಗ ಕ್ಷೇತ್ರಕ್ಕೆ ಸೀಮಿತಗೊಳಿಸಿದ್ದು ಇವರ ಸಂಕುಚಿತ ಸ್ವಭಾವದಿಂದ ಬಂಗಾರಪ್ಪನವರನ್ನು ಕೇವಲ ಪ್ರಚಾರ ಸಾಮಗ್ರಿಯನ್ನಾಗಿ ಬಳಸಿಕೊಂಡ ಇವರಿಗೆ ತಕ್ಕ ಶಾಸ್ತಿಯಾಯಿತು. ಈ ಮಹಾಪರಾಧಕ್ಕಾಗಿ ಜಿಲ್ಲೆಯ, ಕ್ಷೇತ್ರದ ಜನರ ಕ್ಷಮಾಪಣೆ ಕೇಳಿ ಹೋಗಿಬರಲಿ, ಟಾಟಾ! ಎಂದು ತಿಳಿಸಿದ್ದಾರೆ.

ಮೇಲಾಗಿ, ಕನ್ನಡದ ಕಣ್ಮಣಿ Dr. ರಾಜಕುಮಾರ್ ರವರ ಹೆಸರನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲದೆ ಅವರಿಗಿಲ್ಲದಿದ್ದ ಇಂಗಿತವನ್ನು ಇತ್ತೆಂದು ಪ್ರಚುರಪಡಿಸಿ ಲಾಭ ಮಾಡಿಕೊಳ್ಳಬಯಸಿದ ಇವರಿಗೆ ಮಾಡಿದ್ದುಣೋ ಮಹಾರಾಯ ಎಂಬಂತ ಸ್ಥಿತಿಯಾಗಿದೆ. ಉತ್ತಮ ಉದ್ದೇಶ ಇವರದ್ದಾಗಿದ್ದರೆ ಖಂಡಿತ ವಿಜಯಲಕ್ಷ್ಮಿ ಒಲಿಯುತ್ತಿದ್ದಳು, ಸ್ವಂತ ಸಹೋದರನ ಭವಿಷ್ಯಕ್ಕೆ ತೊಡರುಗಾಲು ಹಾಕಲೆಂದೇ ಬೆಂಗಳೂರಿನಿಂದ ಧಾವಿಸಿಬಂದು ತಿಳಿಯಾಗಿಸಬೇಕಿದ್ದ ವಾತಾವರಣವನ್ನು ಕಲುಷಿತಗೊಳಿಸಿ, ದಿಕ್ಕು ದೆಸೆ ಇಲ್ಲದಂತಾಗಿ ಹೋಗಿ ಗೂಡು ಸೇರಿಕೊಂಡಿದ್ದಾರೆ ಬೆಂಗಳೂರಿಗೆ, ಹಿಂತಿರುಗಿ ಬರುವುದು ಕನಸಿನ ಮಾತು. ಅವರ ಕ್ಷೇತ್ರ, ಸಿನಿಮಾ ಅದನ್ನು ನಿಭಾಯಿಸಿಕೊಂಡಿರುವುದು ಆರೋಗ್ಯಕರ ಎಂದು ಸಲಹೆ ನೀಡಿದ್ದಾರೆ.

ಈ ವಿಜಯೋತ್ಸವದ ಕೊಡುಗೆ ಜಿಲ್ಲೆಯ ಹಾಗೂ ಲೋಕ ಸಭಾ ಕ್ಷೇತ್ರದ ಮತದಾರರಿಂದ ಲಭಿಸಿದ್ದು ಅವರಿಗೆ ನಾವು ಚಿರಋಣಿಗಳಾಗಿರುತ್ತೇವೆ ಅವರ ಆಶಯಗಳನ್ನು ಸಾಕಾರಗೊಳಿಸುತ್ತೇವೆ ಅವರ ನಂಬಿಕೆಗೆ ಚ್ಯುತಿಬಾರದಂತೆ ನಡೆದುಕೊಳ್ಳುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರು, ಹಿರಿಯ ಕಿರಿಯ ಪದಾಧಿಕಾರಿಗಳು, ಸಂಘಟನೆಯಲ್ಲಿ ತೊಡಗಿಸಿಕೊಂಡ ಬ್ರಿಗೇಡ್/ಶಿಸ್ತಿನ ಸಿಪಾಯಿಗಳು ಹಗಲಿರುಲೆನ್ನದೆ ದುಡಿದು, B Y ರಾಘವೇಂದ್ರರಿಗೆ ಅತ್ಯಧಿಕ ಬಹುಮತದಿಂದ ವಿಜಯಶಾಲಿಯನ್ನಾಗಿಸಿದ್ದಾರೆ ಅವರೆಲ್ಲರಿಗೂ ನನ್ನ ನಮನಗಳು. ರಾಜ್ಯಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ ಮಾರ್ಗದರ್ಶನ ನೀಡಿದ ನಾಯಕರೆಲ್ಲರಿಗೂ ಧನ್ಯವಾದಗಳು.

War is over but battle remains ZP, TP ಚುನಾವಣೆಗಳು, ಇದೇ ಓಟ ನಿರಂತರವಾಗಿ ನಡೆಯಬೇಕು, ಗೆಲುವನ್ನು ನಮ್ಮದಾಗಿಸಿಕೊಳ್ಳಬೇಕು ಪಣತೋಡೋಣ, ಗುರಿ ಮುಟ್ಟೋಣ. ಜೊತೆ ಜೊತೆಗೆ ಅಭಿವೃದ್ಧಿ ಕಾರ್ಯಗಳು ಶರವೇಗದಲ್ಲಿ ಚಾಲನೆಯಗಬೇಕು. ಪಶ್ಚಿಮ ಘಟ್ಟದ ಈ ತಪ್ಪಲು ಸರ್ವ ಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಬೇಕು. ಇನ್ನು ನನ್ನ ತಮ್ಮ ಮಧು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು, ಇಲ್ಲ CM ಅವನನ್ನು ಸಂಪುಟ ದಿಂದ ವಜಾ ಮಾಡಬೇಕು. ಕನ್ನಡಕ್ಕೆ, ಕನ್ನಡನಾಡಿಗೆ ಅವಮಾನಪಡಿಸಿದಾತ, ಟ್ರೊಲ್ ಮಾಡಿದವರಿಗೆ, ಮಾಧ್ಯಮದವರಿಗೆ ಶಾಪ ಹಾಕಿ ತಾನೇ ಶಾಪಗ್ರಸ್ತನಾದ. ಅವನ bAವ, ನನ್ನ ತಂಗಿಯ ಗಂಡ Dr. ಶಿವರಾಜಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ನಮ್ಮೂರ ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಿಕೊಳ್ಳಬಹುದು.

ನನ್ನ ತಂಗಿ ಸಿನಿಮಾ ಡಾನ್ ಆಗಿರುವುದರಿಂದ ಬೇಸರಕ್ಕೆ ಕಾರಣವಿಲ್ಲ ದೊಡ್ಡಮನೆಯ ವ್ಯವಹಾರ ಸಾಕಷ್ಟಿರುತ್ತದೆ, ಬೇರೆಯವರಿಗೆ ಅವಕಾಶ ಸಿಗಲಾರದು. ಹೆದರಿಸುವ, ಬೆದರಿಸುವ, ಹುಷಾ‌ರ್ ಅನ್ನುವ ಮಾತುಗಳೇನಿದ್ದರೂ ಗಂಟಲೋಳಗೇ, ನಾಲ್ಕು ಗೋಡೆಗಳೊಳಗೆ, ತಮ್ಮ ಪಟಾಲಂ ಮುಂದೆ ಮಾತ್ರ ಚಾಲ್ತಿಯಲ್ಲಿರಬೇಕು ಎಂದು ತಾಕೀತು ಮಾಡಿದ್ದಾರೆ.

ಇದನ್ನೂ ಓದಿ | Udupi Chikmagalur Election Result 2024 : ಉಡುಪಿಯಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ್​ ಪೂಜಾರಿಗೆ ವಿಜಯ

ದಿಕ್ಕು ಗೆಟ್ಟು ದಿಕ್ಕಾಪಾಲಾಗಿ ಹೋಗಿ ಬೆಂಗಳೂರು ಸೇರಿಕೊಂಡವರಿಗೆ ಕೊನೆಯ ಎಚ್ಚರಿಕೆ, ನೀವು ಹಿಂತಿರುಗಿ ಬರುವುದು ಕನಸಿನ ಮಾತು. ಜೈಹಿಂದ್, ಜೈ ಕರ್ನಾಟಕ! ಎಂದು ತಿಳಿಸಿದ್ದಾರೆ. ಇದೇ ವೇಳೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮತ್ತೊಮ್ಮೆ ಸಂಸದರಾಗಿ ವಿಜಯಶಾಲಿಯಾಗಿದ್ದಾರೆ ಎಂದು ಬಿ. ವೈ ರಾಘವೇಂದ್ರ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

Exit mobile version