Site icon Vistara News

ವಿಸ್ತಾರ ಸಂಪಾದಕೀಯ: ತಂತ್ರಜ್ಞಾನ ಕಾಲದಲ್ಲೂ ಐಪಿಎಲ್​ ಅಂಪೈರ್ ಗಳ ಸೋಮಾರಿತನ ಆಕ್ಷೇಪಾರ್ಹ

IPL 2024

ಕೋಲ್ಕೊತಾ ನೈಟ್​ ರೈಡರ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಗಳ ನಡುವಿನ ಐಪಿಎಲ್​ ಪಂದ್ಯವು (IPL 2024) ಫಲಿತಾಂಶಕ್ಕಿಂತ ಹೆಚ್ಚಾಗಿ ಕಳಪೆ ಅಂಪೈರಿಂಗ್​ ಕಾರಣಕ್ಕೆ ಸುದ್ದಿಯಾಗಿದೆ. ಆರ್​ಸಿಬಿ ಈ ಪಂದ್ಯದಲ್ಲಿ ವೀರೋಚಿತ 1 ರನ್ ಸೋಲು ಕಂಡಿರುವುದು ಶ್ರೀಮಂತ ಕ್ರಿಕೆಟ್​ ಲೀಗ್​ನ ರೋಚಕತೆಗೆ ಸಾಕ್ಷಿ ಎಂದು ಹೇಳಲಾಗುತ್ತಿದ್ದರೂ ಅಂಪೈರ್​ಗಳು ಮಾಡಿರುವ ಎಡವಟ್ಟು ಈ ಫಲಿತಾಂಶವನ್ನೇ ಉಲ್ಟಾ ಮಾಡಿದೆ ಎಂಬ ಅಸಮಾಧಾನ ಹುಟ್ಟು ಹಾಕಿದೆ. ಕೆಕೆಆರ್ ಬೌಲರ್​ ನಿತೀಶ್ ರಾಣಾ ಎಸೆದ ಬೀಮರ್ ಎಸೆತ (ಬ್ಯಾಟರ್​​ನ ಸೊಂಟ ಮಟ್ಟಕ್ಕಿಂತ ಮೇಲೆ ಎಸೆಯುವ ಹೈ ಫುಲ್​ಟಾಸ್​​ ) ವಿರಾಟ್ ಕೊಹ್ಲಿಯ ಬ್ಯಾಟ್​ಗೆ ಬಡಿದು ರಿಟರ್ನ್​ ಕ್ಯಾಚ್ ಆಯಿತು. ರಾಣಾ ಚೆಂಡನ್ನು ಹಿಡಿದ ತಕ್ಷಣ ಅಂಪೈರ್​ ಬೆರಳೆತ್ತಿ ಔಟ್ ಎಂದರು. ವಿರಾಟ್ ಕೊಹ್ಲಿ ಡಿಆರ್​ಎಸ್​ ತೆಗೆದುಕೊಂಡರೆ, ಮೂರನೇ ಅಂಪೈರ್​ ಕೂಡ ಲೆಕ್ಕಾಚಾರ ಹಾಕಿ ಫೀಲ್ಡ್​ ನಿರ್ಧಾರವನ್ನು ಎತ್ತಿ ಹಿಡಿದರು. ಕೊಹ್ಲಿ ಕ್ರೀಸ್​ಗಿಂತ ಮುಂದಿದ್ದರು. ಹೀಗಾಗಿ ನಿಯಮ ಅನ್ವಯಿಸುವುದಿಲ್ಲ ಎಂಬುದೇ ಮೂರನೇ ಅಂಪೈರ್​ ಸಮರ್ಥನೆ. ಈ ವಿಚಾರಕ್ಕೆ ಕೊಹ್ಲಿ ಮತ್ತು ಅಂಪೈರ್​ಗಳ ನಡುವೆ ವಾಗ್ವಾದವೇ ಆಯಿತು. ಆಟದ ಅಧಿಕಾರಿಗಳ ಜತೆ ಮಾತು ಬೆಳೆಸಿದ ತಪ್ಪಿಗಾಗಿ ಬಿಸಿಸಿಐ ಕೊಹ್ಲಿಗೆ ಸಂಭಾವನೆಯ ಶೇಕಡಾ 50ರಷ್ಟು ಮೊತ್ತವನ್ನು ದಂಡ ವಿಧಿಸಲಾಗಿದೆ.

ಇದೇ ಪಂದ್ಯದ 17ನೇ ಓವರ್​ನಲ್ಲಿ ಆರ್​​ಸಿಬಿಯ ಇಂಪ್ಯಾಕ್ಟ್​​ ಪ್ಲೇಯರ್​ ಸುಯಾಶ್ ಪ್ರಭುದೇಸಾಯಿ, ಕೆಕೆಆರ್​ ಬೌಲರ್​ ವರುಣ್ ಚಕ್ರವರ್ತಿಯ ಎಸೆತಕ್ಕೆ ಸಿಕ್ಸರ್​ ಬಾರಿಸಿದ್ದರು. ಅದರು ಬೌಂಡರಿ ಗೆರೆಯ ಪಕ್ಕದಲ್ಲೇ ಬಿದ್ದಿತ್ತು. ಇಂಥ ಗೊಂದಲಕಾರಿ ಸಂದರ್ಭದಲ್ಲಿ ಅಂಪೈರ್​ಗಳು ಟಿವಿ ಅಂಪೈರ್​ಗಳ ನೆರವು ಪಡೆಬೇಕು. ಇಲ್ಲಿ ಹಾಗೆ ಮಾಡಲಿಲ್ಲ. ತಮಗೆ ಅನಿಸಿದ ಹಾಗೆ ಫೋರ್​ ಎಂದು ಕೈಬೀಸಿದರು. ಪಂದ್ಯದಲ್ಲಿ ಆರ್​​ಸಿಬಿ ಸೋತಿದ್ದು ಒಂದು ರನ್​ನಿಂದ. ಅಂಪೈರ್ ಫೋರ್​ ಬದಲು ಸಿಕ್ಸರ್ ಘೋಷಿಸಿದ್ದರೆ ಫಲಿತಾಂಶವೇ ಬದಲಾಗುತ್ತಿತ್ತು. ಇವೆರಡು ಹತ್ತಿರದ ಉದಾಹರಣೆಗಳಷ್ಟೇ. ಐಪಿಎಲ್​ 17ನೇ ಆವೃತ್ತಿಯಲ್ಲಿ ಇಂಥ ಹಲವಾರು ಯಡವಟ್ಟುಗಳುಗಳು ನಡೆಯುತ್ತಲೇ ಇವೆ.

ಅದಕ್ಕಿಂತ ಹಿಂದೆ ಪಂಜಾಬ್ ಮತ್ತು ಮುಂಬೈ ನಡುವಿನ ಪಂದ್ಯದ ವೇಳೆ ಡಗ್​ಔಟ್​ನಲ್ಲಿದ್ದ ಆಟಗಾರ ಟಿಮ್​ ಡೇವಿಡ್ ಹಾಗೂ ಕೋಚ್​ ಕೀರನ್​ ಪೊಲಾರ್ಡ್​ ಸೂಚನೆ ಮೇರೆಗೆ ಮುಂಬೈ ಬ್ಯಾಟರ್​ ಸೂರ್ಯಕುಮಾರ್​ ವೈಡ್​ ಪರಿಶೀಲಿಸಲು ಡಿಆರ್​ಎಸ್​ ತೆಗೆದುಕೊಂಡಿದ್ದರು. ಇದು ಅಕ್ರಮ. ಪಂಜಾಬ್ ತಂಡದ ನಾಯಕ ಸ್ಯಾಮ್ ಕರ್ರನ್​ ತಕ್ಷಣವೇ ಅಂಪೈರ್ ಗಮನಕ್ಕೆ ತಂದಿದ್ದರು. ಅಂಪೈರ್​ಗಳು ಸೂರ್ಯನ ಮನವಿ ತಿರಸ್ಕರಿಸಬಹುದಾಗಿತ್ತು. ಆದರೆ, ಹಾಗೆ ಮಾಡದೇ ಪರಿಶೀಲನೆ ನಡೆಸಿ ವೈಡ್​ ಎಂದರು. ಸಿಎಸ್​ಕೆ ಮಾಜಿ ನಾಯಕ ಧೋನಿ ಬ್ಯಾಟ್ ಮಾಡುವಾಗ ಬ್ಯಾಟ್ ಕೆಳಗಿನಿಂದ ಚೆಂಡು ಹೋದರೂ ವೈಡ್​ ಎಂದು ಡಿಆರ್​ಎಸ್​ ಪರಿಶೀಲನೆಯ ಬಳಿಕವೂ ಹೇಳಿದ್ದು, ಬುಮ್ರಾ ವೈಡ್ ಹಾಕಿದಾಗಲೂ ವೈಡ್ ಕೊಡದೇ ಇರುವುದು. ಮುಂಬೈ ತಂಡದ ಡಿಆರ್​ಎಸ್ ಆಯ್ಕೆ (ಒಟ್ಟು 2) ಮುಗಿದ ಬಳಿಕವೂ ಅಂಪೈರ್​ಗಳೇ ಸ್ವತಃ ಪರಿಶೀಲನೆ ನೆಪದಲ್ಲಿ ವೈಡ್​ ಸ್ಕೋರ್ ಕೊಟ್ಟಿರುವುದು. ಇವೆಲ್ಲವೂ ಅಂಪೈರಿಂಗ್​ ಎಡವಟ್ಟುಗಳಿಗೆ ಉದಾಹರಣೆಗಳು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಚೀನಾವನ್ನೂ ಹಿಂದಿಕ್ಕಿದ ಭಾರತದ ಆರ್ಥಿಕತೆಯ ಬೆಳವಣಿಗೆ ಐತಿಹಾಸಿಕ

ಕ್ರಿಕೆಟ್​ ಅಂಪೈರಿಂಗ್​ಗಾಗಿ ಹಲವಾರು ತಂತ್ರಜ್ಞಾನಗಳು ಚಾಲ್ತಿಯಲ್ಲಿವೆ. ಸ್ಮಾರ್ಟ್​ ರಿಪ್ಲೆ ಟಿವಿ ರಿಪ್ಲೈ ದೊಡ್ಡ ಕೊಡುಗೆ. ಉಳಿದಂತೆ ಹಾಟ್​ಸ್ಪಾಟ್​, ಲೈಟ್​ ಮೀಟರ್​, ಸ್ನಿಕ್​-ಒ ಮೀಟರ್​, ಐ ಸ್ಪೀಡ್​ ಹಾಕ್-ಐ ನಿಖರತೆಗೆ ನೆರವು ಕೊಡುತ್ತವೆ ಅಂಪೈರ್​ಗಳಿಗೆ, ಆಟಗಾರರಿಗೆ ಇದನ್ನು ಅಗತ್ಯ ಸಂದರ್ಭಗಳಲ್ಲಿ ಬಳಸುವ ಅನುಕೂಲವಿದೆ. ಇವೆಲ್ಲ ಇದ್ದ ಮೇಲೆಯೂ ಅಂಪೈರ್​ಗಳು ತಪ್ಪು ಮಾಡುವುದು ಯಾಕೆ ಎಂಬುದೇ ಕ್ರಿಕೆಟ್ ಪಂಡಿತರ ಪ್ರಶ್ನೆ.

ದಶಕಗಳ ಹಿಂದೆ ಕ್ರಿಕೆಟ್​ ಅಂಪೈರ್​ಗಳಿಗೆ ಯಾವುದೇ ಆಧುನಿಕ ತಂತ್ರಜ್ಞಾನಗಳ ನೆರವು ಇರಲಿಲ್ಲ. ಆದರೆ, ಅವರ ಅಂಪೈರಿಂಗ್​ ನಿರ್ಧಾರಗಳಲ್ಲಿ ಸ್ಪಷ್ಟತೆಯಿತ್ತು. ಹೀಗಾಗಿ ಪ್ರಸ್ತುತ ದಿನಗಳಲ್ಲಿ ಎಲ್ಲವೂ ಇದ್ದು ಅಂಪೈರ್​ಗಳು ತಪ್ಪು ಮಾಡುತ್ತಿರುವುದಕ್ಕೆ ಅಂಪೈರ್​ಗಳ ಸೋಂಬೇರಿತನ ಅಥವಾ ನಿರ್ಲಕ್ಷ್ಯ ಕಾರಣವಾಗಿರಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ. ಹೊಸ ಹೊಸ ತಾಂತ್ರಿಕತೆಗಳು ಸ್ಪರ್ಧೆಯ ಮೌಲ್ಯ ಹೆಚ್ಚಿಸುತ್ತದೆ ಎಂದು ಅಂದುಕೊಳ್ಳುವ ವೇಳೆಯಲ್ಲಿ ತಪ್ಪುಗಳೇ ಹೆಚ್ಚಾಗುತ್ತಿರುವುದು ವಿಪರ್ಯಾಸ.

ಕ್ರಿಕೆಟ್​ ನಿಯಮಗಳು ಕಾಲಕಾಲಕ್ಕೆ ಬದಲಾಗುತ್ತಿರುವುದು ಸಹಜ ಮತ್ತು ಅನಿವಾರ್ಯ. ಜತೆಗೆ ಕ್ರಿಕೆಟ್ ಬ್ಯಾಟ್ಸ್​​ಮನ್​​ಗಳ ಕ್ರೀಡೆಯಾಗುತ್ತಿರುವ ಕಾರಣಕ್ಕೆ ನಿಯಮಗಳ ನೆರವು ಬೇಕೇ ಬೇಕು. ಇದರ ಜತೆಗೆ ಅಂಪೈರ್​ಗಳಿಗೂ ಹೊಸ ನಿಯಮಗಳ ಬಗ್ಗೆ ಕಾಲಕಾಲಕ್ಕೆ ತರಬೇತಿ ಸಿಗುತ್ತಿವೆ. ಅವರಿಗೆ ಕೊಡಲಾಗುವ ಸೌಕರ್ಯಗಳು ಸಾಕಷ್ಟಿವೆ. ಅಂಪೈರ್​ಗಳ ವೇತನ ಗಣನೀಯವಾಗಿ ಹೆಚ್ಚಾಗಿದೆ. ಅವರ ತಲೆ ಮೇಲೆಯೇ ಕ್ಯಾಮೆರಾ ಅಳವಡಿಸುವುದರಿಂದ ಹಿಡಿದು ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಿ ಒತ್ತಡ ಕಡಿಮೆ ಮಾಡಲಾಗಿದೆ. ಆದಾಗ್ಯೂ ತಪ್ಪು ನಡೆಯುತ್ತಿರುವುದು ಪ್ರಶ್ನಾರ್ಹ ವಿಷಯ

ಅಂಪೈರ್​ಗಳ ತಪ್ಪುಗಳು ಕ್ರಿಕೆಟ್​​ ಫಲಿತಾಂಶವನ್ನು ಮಾತ್ರ ಬದಲಿಸುವುದಿಲ್ಲ. ಅಭಿಮಾನಿಗಳ ಮನಸ್ಸಿಗೂ ಘಾಸಿ ಮಾಡುತ್ತವೆ. ಅವರು ಕ್ರಿಕೆಟ್ ನ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನಕ್ಕೆ ಧಕ್ಕೆ ತರುತ್ತದೆ. ಐಪಿಎಲ್​ನಂಥ ನಗದು ಶ್ರೀಮಂತ ಟೂರ್ನಿಯ ವಿಶ್ವಾಸರ್ಹತೆಯೂ ಕುಂದುತ್ತದೆ. ತಾಂತ್ರಿಕತೆಯ ನೆರವಿನೊಂದಿಗೆ ಐಪಿಎಲ್​ನ ಅಂಪೈರಿಂಗ್​ನಲ್ಲಿ ನಿಖರತೆ ಹೆಚ್ಚಬೇಕು. ‘ಜಂಟಲ್​ಮ್ಯಾನ್ಸ್​ ಗೇಮ್​​ನ ಮರ್ಯಾದೆ ಹೆಚ್ಚಬೇಕು.

Exit mobile version