Site icon Vistara News

Murder Case : ದಲಿತನಿಗೆ ಕ್ಷೌರ ಮಾಡಲು ನಿರಾಕರಣೆ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ

Murder case

ಕೊಪ್ಪಳ: ಕ್ಷೌರ ಮಾಡುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ದಲಿತರೊಬ್ಬರನ್ನು ಕೊಲೆ ಮಾಡಿರುವ (Murder Case) ಘಟನೆ ಯಲಬುರ್ಗಾದ ಸಂಗನಾಳದಲ್ಲಿ ನಡೆದಿದೆ. ಕ್ಷೌರಿಕ ಮುದುಕಪ್ಪ ಹಡಪದ ಕೊಲೆ ಆರೋಪಿಯಾಗಿದ್ದು, ಯಮನೂರಸ್ವಾಮಿ ಬಂಡಿಹಾಳ ಕೊಲೆಯಾದ ವ್ಯಕ್ತಿಯಾಗಿದ್ದಾರೆ. ತನ್ನ ಕ್ಷೌರ ಮಾಡಲು ಹೇಳಿದ ವ್ಯಕ್ತಿಯನ್ನು ಕೊಲೆ ಮಾಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಯಾದ ಯಮನೂರಸ್ವಾಮಿ ತಮ್ಮ ಕ್ಷೌರ ಮಾಡಲು ಮುದುಕಪ್ಪ ಅವರಿಗೆ ಹೇಳಿದ್ದ. ಆದರೆ ಜಾತಿ ಕಾರಣಕ್ಕೆ ಆ ಕೆಲಸ ಮಾಡಲು ನಿರಾಕರಿಸಿದ್ದ. ಈ ವಿಚಾರದಲ್ಲಿ ಪರಸ್ಪರ ವಾಗ್ವಾದ ನಡೆದಿತ್ತು. ಜಗಳ ತಾರಕಕ್ಕೇರಿ ಮುದುಕಪ್ಪ ಕೊಲೆ ಮಾಡಿದ್ದಾನೆ.

ಜಾತಿ ನಿಂದನೆ, ಕೊಲೆ

ಯಮನೂರ ಕ್ಷೌರ ಮಾಡಿಸಿಕೊಳ್ಳುವುದಕ್ಕೆ ಹೋಗಿದ್ದಾಗ ಮುದುಕಪ್ಪ ಮೊದಲು ಹಣ ಕೊಡುವಂತೆ ಕೇಳಿದ್ದಾನೆ. ಆದರೆ ಯಮನೂರ ಸ್ವಲ್ಪ ಹೊತ್ತು ಬಿಟ್ಟು ದುಡ್ಡು ಕೊಡುವುದಾಗಿ ಹೇಳಿದ್ದರು. ಮಾದಿಗರಿಗೆ ಕ್ಷೌರ ಮಾಡುವುದು ಕಷ್ಟ. ಅಂಥದ್ದರಲ್ಲಿ ಹಣ ಕೊಡದೇ ಕ್ಷೌರ ಮಾಡುವುದು ಹೇಗೆ ಎಂದು ಮುದುಕಪ್ಪ ಪ್ರಶ್ನಿಸಿದ್ದಾರೆ. ಈ ಮಾತಿಗೆ ಯಮನೂರ ಆಕ್ಷೇಪ ವ್ಯಕ್ತಪಡಿಸಿದ್ದು ಜಾತಿ ನಿಂದನೆ ಮಾಡಬಾರದಾಗಿ ಎಚ್ಚರಿಕೆ ಕೊಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ಮುದುಕಪ್ಪ ಯಮನೂರ ಅವರ ಶರ್ಟ್​ ಹಿಡಿದು ಎಳೆದಾಡಿದ್ದ. ಈ ವೇಳೆ ಗಲಾಟೆ ನಡೆದಿದ್ದು ಆರೋಪಿ ತನ್ನ ಕೆಲಸ ಮಾಡುವ ಕತ್ತರಿಯಿಂದಲೇ ಹೊಕ್ಕಳ ಕೆಳಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಎಫ್​ಐಆರ್​ನಲ್ಲಿ ದಾಖಲಾಗಿದೆ.

ಇದನ್ನೂ ಓದಿ: Accident News : ನರಗುಂದಲ್ಲಿ ಭೀಕರ ಅಫಘಾತ; ಸಾರಿಗೆ ಬಸ್​ ಗುದ್ದಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರ ದುರ್ಮರಣ

ಡಾಬಾದಿಂದ ಲೋಕಲ್ ಬ್ರಾಂಡ್​ ಎಣ್ಣೆ ಕದಿಯುತ್ತಿದ್ದವನ ಮುಖ ಸಿಸಿಟಿವಿಯಲ್ಲಿ ಸೆರೆ

ರಾಯಚೂರು : ಡಾಬಾವೊಂದಕ್ಕೆ ನುಗ್ಗಿ ಪ್ರತಿನಿತ್ಯ ಲೋಕಲ್ ಎಣ್ಣೆ ಕದಿಯುತ್ತಿದ್ದ ವ್ಯಕ್ತಿಯೊಬ್ಬನ ಮುಖ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಯ ಕುರಿತು ಡಾಬಾ ಮಾಲೀಕರು ಮುದ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎಣ್ಣೆ ಆಸೆಗೆ ಬಂದಿದ್ದ ಆತ ಮುಖಕ್ಕೆ ಮುಸುಕು ಧರಿಸಿರಲಿಲ್ಲ. ಹೀಗಾಗಿ ಕ್ಯಾಮೆರಾದಲ್ಲಿ ಆತನ ಚಹರೆ ಸಂಪೂರ್ಣವಾಗಿ ಸೆರೆಯಾಗಿದೆ. ಹೀಗಾಗಿ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸುವ ಸಾಧ್ಯತೆಗಳಿವೆ.

ಆರೋಪಿಗೆ ಡಾಬಾಕ್ಕೆ ನುಗ್ಗಿ ಲೋಕಲ್ ಬ್ರ್ಯಾಂಡ್ ಎಣ್ಣೆ ಕದಿಯುವ ಚಾಳಿ ಶುರುವಾಗಿತ್ತು. ಅಲ್ಲಿ ಹಣ ಇದ್ದರೂ ಅದನ್ನು ಮುಟ್ಟೇ ಕೇವಲ ಒಟಿ, ಚಾಯ್ಸ್ ಸೇರಿದಂತೆ ಲೋಕಲ್ ಬ್ರಾಂಡ್​ನ ಮದ್ಯ ಎತ್ತಿಕೊಂಡು ಪರಾರಿಯಾಗುತ್ತಿದ್ದ. ಲಿಂಗಸಗೂರು ತಾಲೂಕಿನ ಮಾಕಾಪೂರ ಗ್ರಾಮದಲ್ಲಿರುವ ಡಾಬಾದ ಮಾಲೀಕರು ಇದರಿಂದ ಬೇಸತ್ತಿದ್ದರು. ಮಾಲೀಕ ಬಸವರಾಜ್ ಅವರು ಆರೋಪಿಯನ್ನು ಹಿಡಿಯುವ ಉದ್ದೇಶದಿಂದ ಸಿಸಿ ಟಿವಿ ಕ್ಯಾಮೆರಾವನ್ನು ಅಳವಡಿಸಿದ್ದರು. ಆರೋಪಿ ಈ ಬಗ್ಗೆ ಅರಿಯದೇ ಒಳಗೆ ನುಗ್ಗಿ ಮತ್ತೆ ಎಣ್ಣೆಗಾಗಿ ತಡಕಾಡಿದಾಗ ಆತನ ಮುಖ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Exit mobile version