Site icon Vistara News

Salary Hike: ಸರ್ಕಾರಿ ನೌಕರರ ವೇತನ ಏರಿಕೆ ಸದ್ಯಕ್ಕಿಲ್ಲ: ನೌಕರರ ಸಂಬಳ ನುಂಗಿದ ʼಗ್ಯಾರಂಟಿʼ!

salary hike cm siddaramaiah

ಬೆಂಗಳೂರು: ನಿನ್ನೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ (Cabinet meeting) ಸರಕಾರಿ ನೌಕರರ (Govt Employees) ವೇತನ ಹೆಚ್ಚಳದ (Salary Hike) ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಈ ಸಲವಾದರೂ ಏರಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಇದರಿಂದ ನಿರಾಸೆಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ (guarantee Schemes) ಹೆಚ್ಚಿನ ಹಣ ಹರಿದುಹೋಗುತ್ತಿರುವುದರಿಂದ ಹಾಗೂ ವಿವಿಧ ಮೂಲಗಳಿಂದ ನಿರೀಕ್ಷಣ ಪ್ರಮಾಣದ ಹಣಕಾಸು (Finance) ಬರುತ್ತಿಲ್ಲವಾದ್ದರಿಂದ ಸದ್ಯ ನೌಕರರ ವೇತನ ಪರಿಷ್ಕರಣೆ ಅಸಾಧ್ಯ ಎಂದು ಹಣಕಾಸು ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಾಗೂ ಸಚಿವ ಸಂಪುಟಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಜಿಎಸ್‌ಟಿ ಸೇರಿ, ವಿವಿಧ ಮೂಲಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಹರಿದುಹೋಗುತ್ತಿದೆ. ಹೀಗಾಗಿ ವೇತನ ಪರಿಷ್ಕರಣೆ ಸದ್ಯದ ಮಟ್ಟಿಗೆ ಸಾಧ್ಯವಾಗದು ಎಂದು ಅಧಿಕಾರಿಗಳು ಕಳೆದ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಪಿಪಿಟಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ವೇತನ ಪರಿಷ್ಕರಣೆ, ಹೊಸ ಪಿಂಚಣಿ ಯೋಜನೆಯಲ್ಲಿ ಇರುವವರನ್ನು ಹಳೇ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತರಬೇಕು ಎನ್ನುವ ಬೇಡಿಕೆ ಸಹ ಈಡೇರಿಸಲು ಸಾಧ್ಯವಾಗದು. ಈ ಬೇಡಿಕೆ ಈಡೇರಿಸಿದರೆ ಪ್ರತಿ ತಿಂಗಳು ವಿವಿಧ ಬಾಬುಗಳಿಗೆ ಹಣವನ್ನು ಹೊಂದಿಸಲು ಕಷ್ಟ ಆಗಬಹುದು ಎಂದು ಅಧಿಕಾರಿಗಳ ತಂಡ ಸಂಪುಟ ಸದಸ್ಯರಿಗೆ ವಿವರಿಸಿದೆ.

ಹಣದ ಕೊರತೆ ಇದೆ ಎಂದ ಮಾತ್ರಕ್ಕೆ ವೇತನ ಪರಿಷ್ಕರಣೆ ಮಾಡದೇ ಇರಲು ಸಾಧ್ಯವಿಲ್ಲ. ತಕ್ಷಣಕ್ಕೆ ಆಗದೇ ಇದ್ದರೂ ಮುಂದೆ ಮಾಡಲೇಬೇಕಾಗುತ್ತದೆ ಎಂದು ಆರ್ಥಿಕ ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಶೇ 27.50ರಷ್ಟು ಫಿಟ್‌ಮೆಂಟ್‌ಗೆ ಶಿಫಾರಸು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ರಚಿಸಲಾಗಿದ್ದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ. ಸುಧಾಕರ್ ರಾವ್ ನೇತೃತ್ವದ ಆಯೋಗ 244 ಪುಟಗಳ ವರದಿಯನ್ನು ಮಾರ್ಚ್ 16ರಂದು ಮುಖ್ಯಮಂತ್ರಿಗೆ ಸಲ್ಲಿಸಿತ್ತು. ಏಳನೇ ವೇತನ ಆಯೋಗವು ಶೇ. 31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಜತೆಗೆ, ಶೇ 27.50ರಷ್ಟು ಫಿಟ್‌ಮೆಂಟ್ ನೀಡುವಂತೆ ಶಿಫಾರಸು ಮಾಡಿತ್ತು. ಶಿಫಾರಸು ಮಾಡಿದ ದಿನದಿಂದಲೇ ಚುನಾವಣೆಯ ನೀತಿ ಸಂಹಿತೆ ಆರಂಭವಾದ ಕಾರಣ ಶಿಫಾರಸು ಜಾರಿ ಸಾಧ್ಯವಾಗಿರಲಿಲ್ಲ. ಈಗ ನೀತಿ ಸಂಹಿತೆ ಮುಗಿದು ತಿಂಗಳು ಕಳೆದರೂ ಕ್ರಮ ಕೈಗೊಂಡಿಲ್ಲ ಎನ್ನುವುದು ನೌಕರರ ಆರೋಪ.

29ರಿಂದ ಬೀದಿಗಿಳಿಯಲಿರುವ ಸರ್ಕಾರಿ ನೌಕರರು

7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡದ ಸರ್ಕಾರದ ಧೋರಣೆ ಖಂಡಿಸಿ ರಾಜ್ಯ ಸರ್ಕಾರಿ ನೌಕರರು ಇದೇ ಜುಲೈ 29ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲು ನಿರ್ಧರಿಸಿದ್ದಾರೆ. ಆಯೋಗ ವರದಿ ನೀಡಿ ನಾಲ್ಕು ತಿಂಗಳಾಗುತ್ತಾ ಬಂದರೂ ಆಯೋಗದ ಶಿಫಾರಸುಗಳ ಜಾರಿಗೆ ಸರ್ಕಾರ ಮೀನಮೇಷ ಎಣಿಸುತ್ತಾ ಬಂದಿದೆ. ರಾಜ್ಯದ ಎಲ್ಲ ಇಲಾಖೆಗಳ ನೌಕರರು ಹೋರಾಟ ಆರಂಭಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಜುಲೈ 7ರಂದು ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಣಿಯಲ್ಲಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಂಡು, ಮುಷ್ಕರದ ದಿನಾಂಕ ಘೋಷಣೆ ಮಾಡಲಾಗುತ್ತದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ತಿಳಿಸಿದ್ದಾರೆ.

ವೇತನ ಆಯೋಗದ ಶಿಫಾರಸುಗಳ ಜಾರಿ ಜೊತೆಗೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಹೊಸ ಪಿಂಚಣಿ ಯೋಜನೆ ರದ್ದು ಮಾಡಬೇಕು. ಹಳೇ ಪಿಂಚಣಿ ಯೋಜನೆ
ಮರು ಜಾರಿಗೊಳಿಸಬೇಕು. ನೌಕರರಿಗೆ ನಗದುರಹಿತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಇಟ್ಟುಕೊಂಡು ಮುಷ್ಕರ ಆರಂಭಿಸಲಾಗುತ್ತಿದೆ.

ಇದನ್ನೂ ಓದಿ: Govt Employees: ಸರ್ಕಾರಿ ನೌಕರರಿಗೆ ಅಲರ್ಟ್‌; ಬೆಳಗ್ಗೆ 9.15ಕ್ಕೆ ಆಫೀಸ್‌ ತಲುಪದಿದ್ರೆ ಅರ್ಧ ದಿನ ರಜೆ!

Exit mobile version