Site icon Vistara News

Prajwal Revanna : ಸೆಕ್ಸ್​​ ಸ್ಕ್ಯಾಂಡಲ್​ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ 6 ದಿನ ಎಸ್​ಐಟಿ ಕಸ್ಟಡಿಗೆ

Prajwal Revanna

ಬೆಂಗಳೂರು : ಸಾವಿರಾರು ಮಹಿಳೆಯರನ್ನು ಲೈಂಗಿಕವಾಗಿ ದೌರ್ಜನ್ಯ ಮಾಡಿ ಅದರ ವಿಡಿಯೊಗಳನ್ನು ಮಾಡಿಟ್ಟುಕೊಂಡು ಮಾನ ಹರಣ ಮಾಡಿದ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್​ ರೇವಣ್ಣ (Prajwal Revanna back in India ) ಅವರನ್ನು 6 ದಿನಗಳ ಕಾಲ ಎಸ್​ಐಟಿ ಪೊಲೀಸರ ಕಸ್ಟಡಿಗೆ ನೀಡಲಾಗಿದೆ. ಎಸಿಎಮ್​ಎಮ್​​ ನ್ಯಾಯಾಲಯದ ನ್ಯಾಯಧೀಶ ಎನ್​. ಶಿವಕುಮಾರ್​​ ಈ ಆದೇಶ ಹೊರಡಿಸಿದ್ದಾರೆ. ಗುರುವಾರ ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್​ ರೇವಣ್ಣ ಅವರನ್ನು ಬಂಧಿಸಿದ್ದ ಎಸ್​ಐಟಿ ಪೊಲೀಸರು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಗಂಭೀರ ಆರೋಪಗಳನ್ನು ಹೊತ್ತಿರುವ ಅವರ ತನಿಖೆಗಾಗಿ ಎಸ್​ಐಟಿ ತನ್ನ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಅದನ್ನು ನ್ಯಾಯಾಧೀಶರು ಪುರಸ್ಕರಿಸಿದ್ದಾರೆ.

ಬೆಂಗಳೂರಿನ 42ನೇ ಎಸಿಎಮ್​ಸಿ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು ಪ್ರಜ್ವಲ್ ಅವರಿಗೆ ಯಾವುದೇ ಕಿರಕುಗಳ ನೀಡಬಾರದು ಎಂದು ಎಸ್​ಐಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ವೈದ್ಯಕೀಯ ಪರೀಕ್ಷೆ ಸೇರಿದಂತೆ ತನಿಖೆಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುವಂತೆ ಪ್ರಜ್ವಲ್ ರೇವಣ್ಣ ಅವರಿಗೂ ಸೂಚನೆ ನೀಡಿದ್ದಾರೆ. ಎಸ್ಐಟಿ ಅಧಿಕಾರಿಗಳು ಶುಕ್ರವಾರ ಸೇರಿದಂತೆ ಒಟ್ಟು 15 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಆದರೆ, ಪ್ರಜ್ವಲ್ ಪರ ವಕೀಲರು 1 ದಿನ ಸಾಕು ಎಂದು ವಾದಿಸಿದ್ದರು. ಆದರೆ, ನ್ಯಾಯಾಧೀಶರು 6 ದಿನಗಳನ್ನು ಮಾನ್ಯ ಮಾಡಿದ್ದಾರೆ.

ಗುರುವಾರ ರಾತ್ರಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ್ದ ಪೊಲೀಸರು ಬೆಳಗ್ಗೆ ತನಕ ಎಸ್​ಐಟಿ ಕಚೇರಿಯಲ್ಲೇ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದರು. ಬೆಳಗ್ಗೆ ಅವರ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ಅವರಿಂದ ಅಗತ್ಯ ದಾಖಲೆಗಳಿಗೆ ಸಹಿ ಮಾಡಿಕೊಂಡರು. ಆ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಜಡ್ಜ್‌ ಎದುರು ಕೈಕಟ್ಟಿ ನಿಂತ ಪ್ರಜ್ವಲ್‌ ರೇವಣ್ಣ; ಎಂಥ ಸ್ಥಿತಿ!

ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಸುಮಾರು 35 ದಿನ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ (Prajwal Revanna Case) ಭಾರತಕ್ಕೆ ಬಂದಿದ್ದು, ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನು, ಶುಕ್ರವಾರ (ಮೇ 31) ಮಧ್ಯಾಹ್ನ ಪ್ರಜ್ವಲ್‌ ರೇವಣ್ಣ ಅವರನ್ನು ಬೆಂಗಳೂರಿನ (Bengaluru) 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬರೀ ಅನ್ನ-ಸಾಂಬಾರ್‌ ಸೇವಿಸಿ ನ್ಯಾಯಾಧೀಶರ ಎದುರು ಕೈಕಟ್ಟಿ ನಿಂತರು.

ಎಸ್‌ಐಟಿ ಪರ ಹಿರಿಯ ವಕೀಲ, ಎಸ್‌ಪಿಪಿ ಅಶೋಕ್‌ ನಾಯ್ಕ್‌ ವಾದ ಮಂಡಿಸಿದರು. ಬಟ್ಟೆ ಬಿಚ್ಚಿಸುವುದಕ್ಕೂ, ಬಲವಂತ ಮಾಡುವುದಕ್ಕೂ ವ್ಯತ್ಯಾಸ ಇರುತ್ತದೆ. ವಿಡಿಯೊ ರೆಕಾರ್ಡ್‌ ಮಾಡುವಾಗ ಮುಖ ಮರೆಮಾಚಲಾಗಿದೆ. ಆದರೆ, ಇದು ಅವರೇ ಅಂತ ಕೆಲ ಸಾಕ್ಷ್ಯಗಳಿವೆ. ವಿದೇಶದಲ್ಲಿ ಅರೆಸ್ಟ್‌ ಆಗುತ್ತೇನೆ ಅಂತ ಈಗ ದೇಶಕ್ಕೆ ಬಂದಿದ್ದಾರೆ. ಸಂತ್ರಸ್ತೆಯರ ಮೇಲೆ ಬಲ ಪ್ರಯೋಗವಾಗಿದೆ. ಹೆದರಿಸಿ ಕಿರುಕುಳ ನೀಡಿದ್ದಾರೆ. ಹಾಗಾಗಿ, ಪ್ರಜ್ವಲ್‌ ರೇವಣ್ಣ ಅವರನ್ನು 15 ದಿನ ಎಸ್‌ಐಟಿ ಕಸ್ಟಡಿಗೆ ನೀಡಬೇಕು ಎಂಬುದಾಗಿ ತಿಳಿಸಿದರು.

ಒಂದೇ ದಿನ ಕಸ್ಟಡಿ ಸಾಕು ಎಂದ ಎಂಪಿ ಪರ ವಕೀಲ

ಅಶೋಕ್‌ ನಾಯ್ಕ್‌ ವಾದಕ್ಕೆ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್‌ ಪ್ರತಿವಾದ ಮಂಡಿಸಿದರು. ಪೊಲೀಸರು ತಮಗೆ ಇಷ್ಟ ಬಂದ ಹಾಗೆ ಪ್ರಕರಣಗಳನ್ನು ದಾಖಲಿಸಿ ಎಫ್‌ಐಆರ್‌ ದಾಖಲಿಸಿದ್ದಾರೆ. ಪ್ರಜ್ವಲ್‌ ವಿರುದ್ಧ ದಾಖಲಾಗಿರುವ ಕೇಸ್‌ ಅಡಿಯಲ್ಲಿ ಅವರಿಗೆ ಜಾಮೀನು ನೀಡಬಹುದು.‌ ಜಾಮೀನು ಸಿಗುವ ಪ್ರಕರಣದಲ್ಲಿ ಜಾಮೀನುರಹಿತ ಕೇಸ್‌ ದಾಖಲಿಸಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಅತ್ಯಾಚಾರ ಎಂಬ ಕೇಸ್‌ ದಾಖಲಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳು ವಿನಾಕಾರಣ 15 ದಿನ ಕಸ್ಟಡಿಗೆ ಕೇಳುತ್ತಿದ್ದಾರೆ. ಒಂದು ದಿನ ಕಸ್ಟಡಿಗೆ ನೀಡಿದರೆ ಸಾಕು. ಏಪ್ರಿಲ್‌ 28ರಿಂದ ಮೇ 2ರವರೆಗೆ ಅತ್ಯಾಚಾರ ಆರೋಪ ಇರಲಿಲ್ಲ. ಸಂತ್ರಸ್ತೆಯ ಬೆಂಗಳೂರಿನಲ್ಲಿ ದೂರು ರೆಡಿ ಮಾಡಿಕೊಂಡು ಹೊಳೆನರಸೀಪುರದಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಎಸ್‌ಐಟಿ ತನಿಖೆಗೆ ಪ್ರಜ್ವಲ್‌ ರೇವಣ್ಣ ಸಹಕಾರ ನೀಡಲಿದ್ದಾರೆ.

ಇದಕ್ಕೆ ಅಶೋಕ್‌ ನಾಯ್ಕ್‌ ಆಕ್ಷೇಪ ವ್ಯಕ್ತಪಡಿಸಿದರು. “ಅತ್ಯಾಚಾರ ಆರೋಪಿಯು ಸಾಮಾನ್ಯ ವ್ಯಕ್ತಿಯಲ್ಲ, ಅವರೊಬ್ಬ ಸಂಸದ. ಆರೋಪಿಯು ಜೀವನಪೂರ್ತಿ ಜೈಲು ವಾಸ ಅನುಭವಿಸಬೇಕಾದ ಕೇಸ್‌ ಇದು” ಎಂದರು. ಆಗ ಅರುಣ್‌, “ಆರೋಪಿಯು ಪೊಲೀಸರಿಗೆ ಬಂದು ಶರಣಾಗಿದ್ದಾರೆ. ಹಾಗಾಗಿ, 15 ದಿನ ಕಸ್ಟಡಿಗೆ ವಹಿಸುವ ಅವಶ್ಯಕತೆ ಇಲ್ಲ” ಎಂದು ಹೇಳಿದರು.

33 ದಿನಗಳ ಬಳಿಕ ಬೆಂಗಳೂರಿಗೆ ಬಂದಿದ್ದ ಪ್ರಜ್ವಲ್​ ರೇವಣ್ಣ

ಜರ್ಮನಿಯ ಮ್ಯೂನಿಕ್‌ನಿಂದ ಲುಫ್ತಾನ್ಸಾ ವಿಮಾನದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಇಮಿಗ್ರೇಷನ್‌ ಪ್ರಜ್ವಲ್‌ ರೇವಣ್ಣನನ್ನು ವಿಚಾರಣೆ ನಡೆಸಿದರು. ಇದಾದ ಬಳಿಕ ವಿಮಾನ ನಿಲ್ದಾಣದ ಸಿಬ್ಬಂದಿಯು ಎಸ್‌ಐಟಿ ಅಧಿಕಾರಿಗಳ ವಶಕ್ಕೆ ನೀಡಲಾಯಿತು. ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಈಗಾಗಲೇ ಮಾಜಿ ಸಚಿವ, ಪ್ರಜ್ವಲ್‌ ರೇವಣ್ಣ ತಂದೆ ಎಚ್‌.ಡಿ.ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಪ್ರಜ್ವಲ್‌ ರೇವಣ್ಣ ಕಾಮಕೇಳಿಯ ಸಾವಿರಾರು ವಿಡಿಯೊಗಳು ಪೆನ್‌ಡ್ರೈವ್‌ ಮೂಲಕ ಲಭ್ಯವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಅವರು ವಿದೇಶಕ್ಕೆ ಹಾರಿದ್ದರು. ಇದಾದ ಬಳಿಕ ಅವರ ಬಂಧನಕ್ಕಾಗಿ ಲುಕ್‌ಔಟ್‌ ನೋಟಿಸ್‌ ಹೊರಡಿಸಲಾಗಿತ್ತು. ಅಲ್ಲದೆ, ಎಸ್‌ಐಟಿ ನೋಟಿಸ್‌ಗೆ ಪ್ರತಿಕ್ರಿಯಿಸಿದ್ದ ರೇವಣ್ಣ, ವಿಚಾರಣೆಗೆ ಹಾಜರಾಗಲು ಒಂದು ವಾರ ಸಮಯ ಕೇಳಿದ್ದರು. ಆದರೆ, ಎಚ್‌.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಪೊಲೀಸರು ಬಂಧಿಸುತ್ತಲೇ ಪ್ರಜ್ವಲ್‌ ಕೂಡ ಬೆಂಗಳೂರಿಗೆ ಆಗಮಿಸಲು ತೀರ್ಮಾನಿಸಿದರು ಎನ್ನಲಾಗಿದೆ.

ಇದನ್ನೂ ಓದಿ: Prajwal Revanna Case : ಪೆನ್​ಡ್ರೈವ್ ಸಾರ್ವಜನಿಕ ಸ್ಥಳಗಳಲ್ಲಿ ಸಿಗುವುದರಿಂದ ಹಿಡಿದು ಪ್ರಜ್ವಲ್ ಬಂಧನದವರೆಗೆ; ಪ್ರಕರಣದ ಟೈಮ್​ಲೈನ್​ ಇಲ್ಲಿದೆ

ಪ್ರಜ್ವಲ್‌ ರೇವಣ್ಣ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿದ ಕಾರಣ ಪ್ರಜ್ವಲ್‌ ರೇವಣ್ಣ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಇಮಿಗ್ರೇಷನ್‌ ಅಧಿಕಾರಿಗಳು ಸಂಸದನ ಪಾಸ್‌ಪೋರ್ಟ್‌ಗೆ ಶೀಲ್‌ ಹಾಕಿದರು. ಪ್ರಜ್ವಲ್‌ ರೇವಣ್ಣನನ್ನು ಬಂಧಿಸಿರುವ ಎಸ್‌ಐಟಿ ಅಧಿಕಾರಿಗಳು ಮೊದಲು ಅವರನ್ನು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದರು.

Exit mobile version