Site icon Vistara News

Rahul Gandhi : ಮೋದಿಯನ್ನು ಟೀಕಿಸಲು ಐಶ್ವರ್ಯಾ, ಅಭಿಷೇಕ್ ಬಚ್ಚನ್​ ಎಳೆದು ತಂದ ರಾಹುಲ್ ಗಾಂಧಿ

Rahul Gandi

ನವದೆಹಲಿ: ಕಳೆದ ತಿಂಗಳು ನಡೆದ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (rahul gandhi) ಭಾನುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ಅವರ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರನ್ನು ಹೆಸರಿಸಿಕೊಂಡು ಟೀಕೆ ಮಾಡಿದ್ದಾರೆ.

ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ ತಲುಪುತ್ತಿದ್ದಂತೆ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶವನ್ನು ನಡೆಸುವ ಜನರನ್ನೇ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಿಂದ ದೂರವಿಡಲಾಗಿದೆ. ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಹಾಜರಿದ್ದರು ಎಂದು ಟೀಕಿಸಿದರು.

ಈ ಭವ್ಯ ಕಾರ್ಯಕ್ರಮಕ್ಕೆ ಯಾವುದೇ ಒಬಿಸಿ ಅಥವಾ ಎಸ್ಟಿ / ಎಸ್ಸಿ ಮುಖಗಳನ್ನು ಆಹ್ವಾನಿಸಲಾಗಿಲ್ಲ ಎಂಬುದಾಗಿ ಹೇಳಲು ಅವರು ಬಚ್ಚನ್​ ಕುಟುಬದ ಉದಾಹರಣೆ ತೆಗೆದುಕೊಂಡರು.

“ನೀವು ‘ರಾಮ ಮಂದಿರ ಪ್ರಾಣ ಪ್ರತಿಷ್ಠಾನ’ವನ್ನು ನೋಡಿದ್ದೀರಾ? ನೀವು ಯಾವುದೇ ಒಬಿಸಿ ಅಥವಾ ಎಸ್ಟಿ / ಎಸ್ಸಿ ಮುಖಗಳನ್ನು ನೋಡಿದ್ದೀರಾ? ಇದರಲ್ಲಿ ಅಮಿತಾಬ್ ಬಚ್ಚನ್, ಐಶ್ವರ್ಯಾ ಬಚ್ಚನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಆದರೆ ದೇಶವನ್ನು ನಿಜವಾಗಿಯೂ ನಡೆಸುವ ಜನರನ್ನು ನಾವು ನೋಡಲಿಲ್ಲ. ನಿಮಗೆ ಎಂದಿಗೂ ದೇಶವನ್ನು ನಿಯಂತ್ರಿಸಲು ಸಾಮರ್ಥ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ಜನರು ಬಯಸುತ್ತಾರೆ” ಎಂದು ಅವರು ಹೇಳಿದರು.

ಇದನ್ನೂ ಓದಿ : Kamal Nath : ಕಮಲ್​ ನಾಥ್ ಬಿಜೆಪಿ ಸೇರುವುದಿಲ್ಲ; ಕಾಂಗ್ರೆಸ್​ನಿಂದ ಸ್ಪಷ್ಟನೆ!

ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್​ಎಸ್​​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅವರು ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದರಲ್ಲಿ ಸಾವಿರಾರು ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಇತರ ಗಣ್ಯರು ಭಾಗವಹಿಸಿದ್ದರು. ಆದರೆ, ಪ್ರತಿಪಕ್ಷಗಳು ಈ ಕಾರ್ಯಕ್ರಮವನ್ನು ತಪ್ಪಿಸಿಕೊಂಡಿದ್ದವು.

ಅಮೇಠಿಗೆ ರಾಹುಲ್​

ರಾಹುಲ್ ಗಾಂಧಿ ಅವರ ಯಾತ್ರೆ ಇಂದು ಸಂಜೆ 4 ಗಂಟೆಗೆ ಐತಿಹಾಸಿಕ ನಗರವನ್ನು ತಲುಪಿದೆ. ರಾಹುಲ್ ಗಾಂಧಿ ಅವರೊಂದಿಗೆ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಮತ್ತು ಇತರ ಹಿರಿಯ ನಾಯಕರು ಇದ್ದರು. ರಾಹುಲ್ ಗಾಂಧಿ ಸೋಮವಾರ ತಮ್ಮ ಮಾಜಿ ಕ್ಷೇತ್ರ ಅಮೇಥಿಗೆ ತೆರಳಲಿದ್ದಾರೆ. ರಾಹುಲ್ ಗಾಂಧಿ, ಈ ಕ್ಷೇತ್ರದಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋತಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ರಾಹುಲ್ ಅವರೊಂದಿಗೆ ಅಮೇಠಿಯಲ್ಲಿ ಇರಲಿದ್ದಾರೆ ಎಂದು ಪಕ್ಷ ತಿಳಿಸಿದೆ.

“ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ರಾಹುಲ್ ಗಾಂಧಿ ಅವರನ್ನು ಮೊದಲು ಕಾಕ್ವಾದಲ್ಲಿ ಸ್ವಾಗತಿಸಲಾಗುವುದು. ಅವರ ನ್ಯಾಯ ಯಾತ್ರೆ ಪ್ರತಾಪ್​ಗಡ ಜಿಲ್ಲೆಯ ರಾಂಪುರ ಖಾಸ್ ವಿಧಾನಸಭಾ ಕ್ಷೇತ್ರದಿಂದ ಅಮೇಥಿ ಗಡಿಯನ್ನು ಪ್ರವೇಶಿಸಲಿದೆ ಎಂದು ಕಾಂಗ್ರೆಸ್​ನ ಅಮೇಠಿ ಜಿಲ್ಲಾ ಘಟಕದ ಮಾಧ್ಯಮ ಸಂಯೋಜಕ ಅನಿಲ್ ಸಿಂಗ್ ತಿಳಿಸಿದ್ದಾರೆ.

ಸೋಲೊಪ್ಪಿಕೊಂಡ ಕಾಂಗ್ರೆಸ್​, ಬಿಜೆಪಿ ಟೀಕೆ

ತಮ್ಮ ಯಾತ್ರೆಯ ಬಗ್ಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಸಚಿವ ದಯಾ ಶಂಕರ್ ಸಿಂಗ್, ಯುಪಿಯಲ್ಲಿ ಕಾಂಗ್ರೆಸ್ ಸೋಲನ್ನು ಒಪ್ಪಿಕೊಂಡಿದೆ ಎಂದು ಹೇಳಿದರು. “ರಾಹುಲ್ ಗಾಂಧಿಗೆ ಉತ್ತರ ಪ್ರದೇಶದಲ್ಲಿ ಏನೂ ಉಳಿದಿಲ್ಲ. ಸೋನಿಯಾ ಗಾಂಧಿ ರಾಯ್​ಬರೇಲಿ ಕ್ಷೇತ್ರವನ್ನು ಹೊಂದಿದ್ದರು, ಆದರೆ ಅವರು ಅದನ್ನು ತೊರೆದು ರಾಜ್ಯಸಭೆಗೆ ಸೇರಿಕೊಂಡಿದ್ದಾರೆ. ಆದ್ದರಿಂದ, ಅವರು (2024 ರ ಲೋಕಸಭಾ ಚುನಾವಣೆ) ಚುನಾವಣೆಗೆ ಮೊದಲೇ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂದು ತೋರುತ್ತದೆ” ಎಂದು ಅವರು ಹೇಳಿದರು.

Exit mobile version