Site icon Vistara News

Rajyasabha Elections : ಶಾಸಕರಿಗೆ ಆಮಿಷ; ಅಭ್ಯರ್ಥಿ ಕುಪೇಂದ್ರ ರೆಡ್ಡಿಸಹಿತ ನಾಲ್ವರ ವಿರುದ್ಧ FIR

Rajyasabha Election Kupendra Reddy

ಬೆಂಗಳೂರು: ಫೆ. 27ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ (Rajyasabha Elections) ಅಡ್ಡ ಹಾದಿಯಲ್ಲಿ ಗೆಲುವು ಪಡೆಯಲು ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ (Horse trading attempt) ಎಂಬ ಆಪಾದನೆಯಡಿ ಜೆಡಿಎಸ್‌ ಅಭ್ಯರ್ಥಿ, ಉದ್ಯಮಿ ಕುಪೇಂದ್ರ ರೆಡ್ಡಿ (Kupendra Reddy) ಮತ್ತು ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮಂಡ್ಯ ಶಾಸಕ ರವಿ ಕುಮಾರ್‌ ಗಣಿಗ (Mandya MLA Ravi Ganiga) ಅವರು ಪೊಲೀಸ್‌ ಕಮೀಷನರ್‌ ಅವರಿಗೆ ಈ ಸಂಬಂಧ ನೀಡಿದ ದೂರಿನ ಆಧಾರದಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿರುವ ಉದ್ಯಮಿ ಕುಪೇಂದ್ರ ರೆಡ್ಡಿ, ಕ್ರೆಸೆಂಟ್ ಹೋಟೆಲ್ ಮಾಲೀಕ ರವಿ, ಡಾ.ಮಹಂತೇಶ್, ಹರಿಹರದ ಮಾಜಿ ಶಾಸಕ ಶಿವಶಂಕರ್ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಾಗಿದೆ. IPC ಸೆಕ್ಷನ್ 171E, 506,171Fರಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕುಪೇಂದ್ರ ರೆಡ್ಡಿ ಅವರು ರಾಜ್ಯಸಭೆ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದು, ಗೆಲುವು ಸಾಧಿಸುವುದಕ್ಕಾಗಿ ಕಾಂಗ್ರೆಸ್ ಮತ್ತು ಪಕ್ಷೇತರ ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಪ್ರಮುಖವಾಗಿ ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿರುವ ಹರಪನಹಳ್ಳಿಯ ಪಕ್ಷೇತರ ಶಾಸಕಿ ಎಂ.ಪಿ.ಲತಾ, ಗೌರಿಬಿದನೂರು ಪಕ್ಷೇತರ ಶಾಸಕ ಪುಟ್ಟಸ್ವಾಮಿ ಗೌಡ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೇರಿದಂತೆ ಹಲವರಿಗೆ ಆಮಿಷ ಒಡ್ಡಲಾಗುತ್ತಿದೆ. ಅಡ್ಡ ಮತದಾನ ಮಾಡಲು ಹಣದ ಆಮಿಷ ಮಾತ್ರವಲ್ಲ ಬೆದರಿಕೆಯನ್ನೂ ಹಾಕುತ್ತಿದ್ದಾರೆ ಎಂದು ಆಪಾದಿಸಿದ್ದರು.

ಇದನ್ನೂ ಓದಿ: Rajyasabha Election : ಕಣದಿಂದ ಹಿಂದೆ ಸರಿಯದ ಕುಪೇಂದ್ರ ರೆಡ್ಡಿ, 4 ಸ್ಥಾನಕ್ಕೆ ಐವರ ಫೈಟ್‌, ಗೆಲ್ಲೋರು ಯಾರು?

ಹೇಗಿದೆ ರಾಜ್ಯಸಭಾ ಚುನಾವಣಾ ಕಣ: ಯಾಕೆ ಆಮಿಷ?

ರಾಜ್ಯದಲ್ಲಿ ತೆರವಾಗಿರುವ ನಾಲ್ಕು ರಾಜ್ಯಸಭಾ ಸ್ಥಾನಕ್ಕೆ ಐವರು ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಹಿರಿಯ ನಾಯಕ ಅಜಯ್‌ ಮಾಕೆನ್‌, ಸಯ್ಯದ್‌ ನಾಸಿರ್‌ ಹುಸೇನ್‌, ಜಿ.ಸಿ. ಚಂದ್ರಶೇಖರ್‌, ಬಿಜೆಪಿಯಿಂದ ನಾರಾಯಣ ಸಾ ಭಾಂಡಗೆ ಹಾಗೂ ಜೆಡಿಎಸ್‌ನಿಂದ ಉದ್ಯಮಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ಇಲ್ಲಿ ಕಾಂಗ್ರೆಸ್‌ 135 ಶಾಸಕರನ್ನು ಹೊಂದಿದ್ದು ಸರಿಯಾಗಿ ಮೂರು ಸ್ಥಾನ ಗೆಲ್ಲುವಷ್ಟು ಮತ ಹೊಂದಿದೆ. ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದರಿಂದ ಈ ಕೂಟಕ್ಕೆ ಒಟ್ಟು 84 ಮತಗಳಿವೆ. ಅಂದರೆ ಬಿಜೆಪಿ ಒಂದು ಸ್ಥಾನವನ್ನು ಗೆಲ್ಲುವುದು ಖಚಿತವಾಗಿದೆ. ಆದರೆ, ಜೆಡಿಎಸ್‌ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿ ಸ್ಪರ್ಧೆಯ ಕಣವನ್ನು ಸಿದ್ಧಪಡಿಸಿದೆ.

ಕುಪೇಂದ್ರ ರೆಡ್ಡಿ ಅವರ ವಿರುದ್ಧ ದೂರು ನೀಡಿರುವುದು.

ರಾಜ್ಯ ವಿಧಾನಸಭೆಯ ಒಟ್ಟು ಬಲ 224. ಅದರಲ್ಲಿ ಕಾಂಗ್ರೆಸ್‌ನ 135 ಶಾಸಕರಿದ್ದಾರೆ. 66 ಬಿಜೆಪಿ, 19 ಜೆಡಿಎಸ್‌, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ, ಸರ್ವೋದಯ ಪಕ್ಷದ ದರ್ಶನ್‌ ಪುಟ್ಟಣ್ಣಯ್ಯ, ಪಕ್ಷೇತರರಾಗಿ ಲತಾ ಮಲ್ಲಿಕಾರ್ಜುನ್‌ ಹಾಗೂ ಪುಟ್ಟಸ್ವಾಮಿ ಗೌಡ ಇದ್ದಾರೆ. ಇತರರ ಪೈಕಿ ದರ್ಶನ್‌ ಪುಟ್ಟಣ್ಣಯ್ಯ, ಲತಾ ಮಲ್ಲಿಕಾರ್ಜುನ್‌, ಪುಟ್ಟಸ್ವಾಮಿ ಗೌಡ ಅವರು ಕಾಂಗ್ರೆಸ್‌ ಪರವಾಗಿದ್ದರೆ, ಜನಾರ್ದನ ರೆಡ್ಡಿ ಬಿಜೆಪಿ ಜತೆಗಿದ್ದಾರೆ.

ಬಲಾಬಲವನ್ನು ನೋಡಿದಾಗ ಕಾಂಗ್ರೆಸ್‌ 138 ಮತ್ತು ಬಿಜೆಪಿ-ಜೆಡಿಎಸ್‌ 86 ಮತಗಳನ್ನು ಹೊಂದಿದೆ. ಪ್ರತಿಯೊಬ್ಬ ಅಭ್ಯರ್ಥಿ ಗೆಲುವಿಗೆ 45 ಶಾಸಕರ ಬೆಂಬಲ ಬೇಕು. ಕಾಂಗ್ರೆಸ್‌ ಎರಡು ಸ್ಥಾನಗಳನ್ನು ನಿರಾಯಾಸವಾಗಿ ಗೆಲ್ಲಲಿದೆ. ಬಿಜೆಪಿ ಒಂದು ಸ್ಥಾನ ಗೆಲ್ಲುವುದು ಖಚಿತ. ಆದರೆ ಐದನೇ ಸ್ಥಾನಕ್ಕೆ ಪೈಪೋಟಿ ನಡೆಯಲಿದೆ.

ಐದನೇ ಸ್ಥಾನಕ್ಕೆ ಕಾಂಗ್ರೆಸ್‌ ಬಳಿ 48 ಮತಗಳಿದ್ದರೆ ಬಿಜೆಪಿ-ಜೆಡಿಎಸ್‌ ಕೂಟದಲ್ಲಿ 41 ಮತಗಳಿವೆ. ಒಂದು ವೇಳೆ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಜತೆಗಿರುವ ಮೂವರು ಶಾಸಕರನ್ನು ಸೆಳೆದರೆ ಅದರ ಬಲ 44 ಆಗುತ್ತದೆ. ಕಾಂಗ್ರೆಸ್‌ನಿಂದ ಇನ್ನೊಂದು ಶಾಸಕರನ್ನು ಸೆಳೆದುಕೊಳ್ಳಲು ಯಶಸ್ವಿಯಾದರೆ ಕಾಂಗ್ರೆಸ್‌ ಬಲ 44ಕ್ಕೆ ಕುಸಿದು ಮೈತ್ರಿ ಬಲ 45 ಆಗಿ ಗೆಲುವು ಸಿಗಲಿದೆ. ಹೀಗೆ ಆಮಿಷ ಒಡ್ಡಿ ಸೆಳೆದುಕೊಳ್ಳುವ ಪ್ರಯತ್ನವನ್ನು ಕುಪೇಂದ್ರ ರೆಡ್ಡಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಈ ಬಗೆಗಿನ ದೂರಿಗೆ ಸಂಬಂಧಿಸಿ ಈಗ ಎಫ್‌ಐಆರ್‌ ದಾಖಲಾಗಿದೆ.

Exit mobile version